Advertisement

ಹಿಂದಿ ಹೇರಿಕೆ ವಿರುದ್ಧ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

09:30 PM Sep 18, 2019 | Lakshmi GovindaRaju |

ಚಾಮರಾಜನಗರ: ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ತುಳಿಯುತ್ತಿದೆ. ಕನ್ನಡಿಗರ ಉದ್ಯೋಗಗಳು ಹಿಂದಿಯವರ ಪಾಲಾಗುತ್ತಿವೆ ಎಂದು ಆರೋಪಿಸಿ ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

Advertisement

ನಗರದ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌ ಅವರ ನೇತೃ ತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾತಡಳಿ ಭವನಕ್ಕೆ ತರಳಿ ಕೆಲಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ವ್ಯವಸ್ಥೆಗೆ ಧಕ್ಕೆ ತರಬಾರದು: ಸಂಘದ ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌ ಮಾತನಾಡಿ, ಭಾರತದೇಶವು ಬಹುಭಾಷಾ ಸಂಸ್ಕೃತಿಯನ್ನು ಹೊಂದಿದೆ. ಸಾಂಸ್ಕೃತಿಕ ಮತ್ತು ಭಾಷಿಕ ವೈವಿಧ್ಯತೆ ನಮ್ಮ ದೇಶದ ಹೆಮ್ಮೆ, ಸಾವಿರಾರು ಭಾಷೆಗಳು ಬಗೆಬಗೆಯ ಜನಜೀವನ ಆಹಾರ, ಉಡುಪು, ಹಬ್ಬ-ಹರಿದಿನಗಳನ್ನು ಒಂದೇ ನೆಲದಲ್ಲಿ ಕಾಣಬಹುದಾದ ಶ್ರೀಮಂತಭೂಮಿ. ಇಂತಹ ಶ್ರೀಮಂತ ಸಂಸ್ಕೃತಿಯ ಮಹತ್ವವನ್ನು ಅರಿತಿದ್ದ ನಮ್ಮ ರಾಷ್ಟ್ರನಾಯಕರು ಅದರ ರಕ್ಷಣೆಗಾಗಿ ಭಾಷವಾರು ಪ್ರಾಂತ್ಯದ ಆಧಾರದ ಮೇಲೆ ರಾಜ್ಯಗಳನ್ನು ಒಟ್ಟುಗೂಡಿಸಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ. ಇದಾವುದರ ಅರಿವೆ ಇಲ್ಲದ ಪ್ರಸ್ತುತ ಕೇಂದ್ರ ಸರ್ಕಾರ ಇಂದು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಅನೇಕ ನೀತಿಗಳನ್ನು ಜಾರಿಗೆ ತರಲು ಹೊರಟಿದೆ ಎಂದರು.

ಅಸಾಂವಿಧಾನಿಕ ನೀತಿ ಬೇಡ: ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆಯ ಹೇರಿಕೆಯೂ ಒಂದು. ಸಂವಿಧಾನ ಅನುಚ್ಛೇದ 8, 22 ಭಾಷೆಗಳನ್ನು ಮಾನ್ಯ ಮಾಡಿದ್ದು, 343 ಮತ್ತು 344 ನೇ ವಿಧಿಗಳಲ್ಲಿ ಹಿಂದಿಯನ್ನು ಆಡಳಿತಾತ್ಮಕ ಭಾಷೆಯೆಂದಷ್ಟೇ ಹೇಳಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ 2011ರಲ್ಲಿ ಪಿ.ಚಿದಂಬರಂ ನೇತೃತ್ವದ ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯ ಮುಖೇನ ಮಾಡಿಸಿತು. ಅದರ ಮುಂದುವರೆದ ಭಾಗವಾಗಿ ಪ್ರಸ್ತುತ ನರೇಂದ್ರಮೋದಿ ನಾಯಕತ್ವದ ಬಿಜೆಪಿ ಸರ್ಕಾರ ಒಂದು ದೇಶ- ಒಂದು ಭಾಷೆ ಎನ್ನುವ ಅಪಾಯಕಾರಿ ಮತ್ತು ಅಸಾಂವಿಧಾನಿಕ ನೀತಿಯ ಮುಖೇನ ಮಾಡ ಹೊರಟಿದೆ. ಯುಪಿಎಸ್‌ಪಿ ಮತ್ತು ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡುವುದರ ಮುಖೇನ ಕನ್ನಡಿಗರಿಗೆ ಇಲ್ಲಿಯವರಗೆ ಉದ್ಯೋಗಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಹಿಂದಿ ಕೇವಲ ಆಡಳಿತ ಭಾಷೆ: ಸಂವಿಧಾನವು ಮಾನ್ಯ ಮಾಡಿರುವ 22 ಭಾಷೆಗಳ ಮಾನ್ಯತೆಯನ್ನು ಎತ್ತಿಹಿಡಿಯುವುದು ಹಾಗೂ ಹಿಂದಿ ಕೇವಲ ಆಡಳಿತ ಭಾಷೆಯೇ ಹೊರತು ಕಡ್ಡಾಯ ಬೋಧನ ಕ್ರಮವಲ್ಲ ಎನ್ನುವ 1963 ಅಧಿಕೃತ ಭಾಷೆಗಳ ಕಾಯ್ದೆ ಮತ್ತು ಅಧಿಕೃತ ಭಾಷಾನಿಯಮ 1976 ಅನ್ನು ದೇಶಾದ್ಯಂತ ಮನವರಿಕೆ ಮಾಡಿಕೊಡಲು ಸರ್ಕಾರ ಪ್ರಯತ್ನಿಸಬೇಕು. ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ಆವೃತ್ತಿಯಾದ ಪೊ›.ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.

Advertisement

ತ್ರಿಭಾಷಾ ನೀತಿ ರದ್ದುಗೊಳಿಸಿ: ಸರ್ಕಾರದ ತ್ರಿಭಾಷಾ ನೀತಿಯನ್ನು ಕೂಡಲೇ ರದ್ದುಪಡಿಸಿ ಕಲಿಯುವ ಹಕ್ಕನ್ನು ಮಕ್ಕಳು ಮತ್ತು ಪೋಷಕರು ನಿರ್ಧರಿಸುವ ವ್ಯವಸ್ಥೆ ಜಾರಿಯಾಗಬೇಕು. ಒಂದು ದೇಶ- ಒಂದು ಭಾಷೆ ಎನ್ನುವ ಬದಲಾಗಿ ಒಂದುದೇಶ ಒಂದೇ ಶಿಕ್ಷಣ ಮಾದರಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ನೀತಿ ಜಾರಿಮಾಡಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರ ವಿರುದ್ಧ ದೇಶಾದ್ಯಂತ ಜನಾಭಿಪ್ರಾಯಗಳನ್ನು ಸಂಗ್ರಹಿಸಿ ದೊಡ್ಡಮಟ್ಟದ ಹೋರಾಟವನ್ನು ರೂಪಿಸಲಾಗುವುದೆಂದು ಪರ್ವತ್‌ರಾಜ್‌ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ, ಶ್ರೀನಿವಾಸ, ಕಾರ್ತಿಕ್‌, ರೇಚಣ್ಣ, ಚನ್ನರಾಜದಾನವ, ಮಧುಸೂದನ್‌, ಕೃಷ್ಣಮೂರ್ತಿ, ಶಕುಂತಲಾ, ಸುನಿತಾ, ಪುಷ್ಪಲತಾ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next