Advertisement

ನವೀನ್‌ ಮೃತದೇಹ ವಾಪಸ್‌ ತರುವ ಬಗ್ಗೆ ಸದನದಲ್ಲಿ ಚರ್ಚೆ

12:05 AM Mar 15, 2022 | Team Udayavani |

ಬೆಂಗಳೂರು: ಉಕ್ರೇನ್‌ ಯುದ್ಧದಲ್ಲಿ ರಷ್ಯಾ ದಾಳಿಗೆ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್‌ ಮೃತದೇಹವನ್ನು ರಾಜ್ಯಕ್ಕೆ ತರುವ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಯತ್ನಗಳ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾವವಾಗಿ, ಅದರ ವಿಚಾರವಾಗಿ ವಸ್ತುಸ್ಥಿತಿ ಮಾಹಿತಿ ಸದನದ ಗಮನಕ್ಕೆ ತರುವಂತೆ ಸಭಾಪತಿ ಬಸವರಾಜ ಹೊರಟ್ಟಿ ಸರಕಾರಕ್ಕೆ ಸೂಚನೆ ನೀಡಿದ್ದಾರೆ.

Advertisement

ದಿಲ್ಲಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ವಿವರಗಳನ್ನು ವಿಧಾನ ಪರಿಷತ್‌ಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಖುದ್ದು ಈ ವಿಷಯ ಪ್ರಸ್ತಾವ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು ನವೀನ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೆ. ಅವರು ತುಂಬಾ ನೋವಿನಲ್ಲಿದ್ದಾರೆ. ಮಗನ ಮೃತದೇಹ ಬಂದಿಲ್ಲ. ಅಂತಿಮ ವಿಧಿ, ಅನಂತರದ ಕಾರ್ಯಕ್ರಮಗಳನ್ನು ಮಾಡಲು ಆಗುತ್ತಿಲ್ಲ ಎಂದು ಸಂಕಟ ತೋಡಿಕೊಂಡಿದ್ದಾರೆ. ಮೃತದೇಹ ವಾಪಸ್‌ ತರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಆದ್ದರಿಂದ ಈ ಬಗ್ಗೆ ಏನಾಗಿದೆ ಎನ್ನುವ ಬಗ್ಗೆ ದಿಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸದನಕ್ಕೆ ತಿಳಿಸುವಂತೆ ಹೊರಟ್ಟಿ ಸೂಚನೆ ನೀಡಿದರು.

ಸ್ಥಳೀಯರನ್ನು ಸಂಪರ್ಕಿಸಿ
ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಉಕ್ರೇನ್‌ನಲ್ಲಿ ಸಿಲುಕಿದ ಭಾರತದ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ತಾವಾಗಿಯೇ ಗಡಿ ಭಾಗಗಳಿಗೆ ಬಂದ ಮೇಲೆ ಅವರನ್ನು ಅಲ್ಲಿಂದ ಕರೆದುಕೊಂಡು ಬರಲಾಗುತ್ತಿದೆ. ಉಕ್ರೇನ್‌ ಒಳಗೆ ಯಾರೂ ಹೋಗಲು ಆಗುತ್ತಿಲ್ಲ. ಆದ್ದರಿಂದ, ಸ್ಥಳೀಯರನ್ನು ಸಂಪರ್ಕಿಸಿ ಮೃತದೇಹ ವಾಪಸ್‌ ತರಲು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಉಕ್ರೇನ್‌ನಲ್ಲಿದ್ದಾರೆ 22 ಸಾವಿರ ಭಾರತೀಯರು!
ಸರಕಾರದ ಪರ ಉತ್ತರಿಸಿದ ಆರೋಗ್ಯ ಸಚಿವ ಡಾ| ಸುಧಾಕರ್‌, ಯುದ್ಧ ಪ್ರದೇಶ ಹೇಗಿರುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. 22 ಸಾವಿರ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಒಬ್ಬ ಕನ್ನಡಿಗ ಮೃತಪಟ್ಟಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ಪ್ರಧಾನಿ ಮೋದಿಯವರ ಮಾರ್ಗದರ್ಶನಲ್ಲಿ ಕೇಂದ್ರ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ನವೀನ್‌ ಮೃತದೇಹ ವಾಪಸ್‌ ತರಲಾಗುವುದು. ಪ್ರಧಾನಿ ಮನವಿಯವಂತೆ ಕೆಲವು ಗಂಟೆ ಯುದ್ಧ ವಿರಾಮ ಘೋಷಿಸಿದ್ದರಿಂದ ಭಾರತೀಯರು ಸುರಕ್ಷಿವಾಗಿ ಅಲ್ಲಿಂದ ಹೊರಬರಲು ಸಾಧ್ಯವಾಯಿತು ಎಂದರು.

ಸರ್ವಪಕ್ಷದವರ ಸಾಥ್‌
ಕಾಂಗ್ರೆಸ್‌ ಸದಸ್ಯ ಸಲೀಂ ಅಹ್ಮದ್‌, ಬಿಜೆಪಿ ಸದಸ್ಯ ಪ್ರದೀಪ್‌ ಶೆಟ್ಟರ್‌, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಅನೇಕ ಸದಸ್ಯರು ನವೀನ್‌ ಮೃತದೇಹ ವಾಪಸ್‌ ತರುವ ಬಗ್ಗೆ ಧ್ವನಿಗೂಡಿಸಿದರು. ದಿಲ್ಲಿ ಅಧಿಕಾರಿಗಳಿಂದ ವಿವರ ಪಡೆದು ಸದನಕ್ಕೆ ಮಾಹಿತಿ ನೀಡುವಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದ ಸಭಾಪತಿಯವರು ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next