‘ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ, ಗೋಳಿನ ಕಡಲನ್ನು ಬತ್ತಿಸಲಿಲ್ಲ ಈ 47ರ ಸ್ವಾತಂತ್ರ್ಯ’ ಎನ್ನುತ್ತ ಸೋತ ರಟ್ಟಿಗಳ, ಹೂತ ಕಾಲುಗಳ ಬೆವರು ಹಸಿರು ಕವನ ನನ್ನ ಜನರ ನಾ ನೋಡಿದ ರೀತಿ ನನ್ನ ಒಡಲ ಕವನ’ ಎಂದು ತನ್ನ ಹಾಡು ಹಾಗೂ ಕವನಗಳ ಮೂಲಕ ಶೋಷಿತ ವರ್ಗದ ಜನರಲ್ಲಿ ಬಂಡಾಯ ಕಿಚ್ಚು ಹಚ್ಚಿಸುತ್ತಿದ್ದ ನಾಡೋಜ ಡಾ ಸಿದ್ಧಲಿಂಗಯ್ಯ ಅಸ್ತಂಗತವಾಗಿದ್ದಾರೆ.
‘ಇಕ್ರಲಾ ಒದಿರ್ಲಾ ಈ ನನ್ಮಕ್ಳನ್ನ’ ಎನ್ನುತ್ತಾ ಶೋಷಿತ ವರ್ಗಕ್ಕೆ ಧ್ವನಿಯಾಗಿದ್ದ, ಈ ನಾಡಿನ ಸಾಕ್ಷಿ ಪ್ರಜ್ಞೆ ಸಿದ್ದಲಿಂಗಯ್ಯನವರು ಮಹಾಮಾರಿ ಕೋವಿಡ್ ಸೋಂಕಿನಿಂದ ಇಂದು ‘ಊರು ಕೇರಿ’ ತೊರೆದು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
‘ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ನನ್ನ ಜನಗಳು’ ಸೇರಿದಂತೆ ಹಲವು ಕವನ ಸಂಕಲಗಳನ್ನು ಸಿದ್ದಲಿಂಗಯ್ಯ ಅವರು ಹೊರತಂದಿದ್ದಾರೆ. ‘ಊರು-ಕೇರಿ’ ಎಂಬ ಆತ್ಮಕಥನವನ್ನು ಅವರು ರಚಿಸಿದ್ದಾರೆ. ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ದೊರೆತಿವೆ.
‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದರು.
Related Articles
1954ರಲ್ಲಿ ಮಾಗಡಿ’ ತಾಲ್ಲೂಕಿನ ‘ಮಂಚನಬೆಲೆ’ ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ) ಅಧ್ಯಕ್ಷರು (ಕನ್ನಡ ಅಭಿವೃದ್ಧಿ ಪ್ರಾಧಿಕಾರ) Executive Board Members-ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲೂ ಕೂಡ ಕಾರ್ಯನಿರ್ವಹಿಸಿದ್ದರು.