Advertisement

ನಿಲ್ದಾಣ ನಿರ್ಮಾಣ ಒಡಂಬಡಿಕೆ

10:26 AM Jul 20, 2018 | |

ಬೆಂಗಳೂರು: ನಮ್ಮ ಮೆಟ್ರೋ ಯೋಜನೆ ಎರಡನೇ ಹಂತ ಮಹತ್ವದ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣ ಮತ್ತು ನಿರ್ವಹಣೆ ಸಂಬಂಧ ಬಿಎಂಆರ್‌ಸಿಎಲ್‌ ಮತ್ತು ಇನ್ಫೋಸಿಸ್‌ ಪ್ರತಿಷ್ಠಾನ ಒಡಂಬಡಿಕೆ ಮಾಡಿಕೊಂಡಿದೆ.

Advertisement

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಮತ್ತು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ಠ್ ಗುರುವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.
 
ಈ ಒಡಂಬಡಿಕೆಯಂತೆ ಮೆಟ್ರೋ 2ನೇ ಹಂತದ ಯೋಜನೆಯಡಿ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಇನ್ಫೋಸಿಸ್‌ ಪ್ರತಿಷ್ಠಾನ 200 ಕೋಟಿ ರೂ. ಒದಗಿಸಲಿದೆ. ಸುಮಾರು ಎರಡು ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ತಲೆಯೆತ್ತಲಿರುವ ಈ ನಿಲ್ದಾಣಕ್ಕೆ “ಇನ್ಫೋಸಿಸ್‌ ಪ್ರತಿಷ್ಠಾನ-ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್‌’ ಎಂದು ಹೆಸರಿಡಲಾಗುತ್ತದೆ. ಈಗಾಗಲೇ ಇನ್ಫೋಸಿಸ್‌ ಪ್ರತಿಷ್ಠಾನ ನಿಲ್ದಾಣದ ನಕ್ಷೆ, ರೂಪುರೇಷೆ ಸಿದ್ಧಪಡಿಸಿದ್ದು, ನಿರ್ಮಾಣದ ನಂತರ 30 ವರ್ಷಗಳ ಅವಧಿಗೆ ಅದರ ನಿರ್ವಹಣೆಯನ್ನೂ ಪ್ರತಿಷ್ಠಾನ ನೋಡಿಕೊಳ್ಳಲಿದೆ. ಇದಕ್ಕೆ ಪ್ರತಿಯಾಗಿ ನಿಲ್ದಾಣದ ಒಳಗೆ 3 ಸಾವಿರ ಚದರಡಿ ಪ್ರದೇಶವನ್ನು ಇನ್ಫೋಸಿಸ್‌ ಪ್ರತಿಷ್ಠಾನಕ್ಕೆ ಮೀಸಲಿಟ್ಟು, ಅಲ್ಲಿ ಸ್ಥಳೀಯ ಕಲಾವಿದರು, ಕರಕುಶಲಕರ್ಮಿಗಳು ಪ್ರತಿಭೆ ಅನಾವರಣಗೊಳಿಸಲು ಮತ್ತು ವಸ್ತು ಪ್ರದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸುವ ಉದ್ದೇಶವಿದೆ. ನಿಲ್ದಾಣದ ಸೂರಿಗೆ ಸೋಲಾರ್‌ ಪ್ಯಾನಲ್‌ ಅಳವಡಿಸಿ ಸೌರ ವಿದ್ಯುತ್‌ ಉತ್ಪಾದಿಸಿ, ಈ ವಿದ್ಯುತ್ತನ್ನು ರೈಲ್ವೆ ನಿಲ್ದಾಣದ ಬೆಳಕಿನ ವ್ಯವಸ್ಥೆಗೆ ಉಪಯೋಗಿಸಲಾಗುತ್ತದೆ. 2021ರ ವೇಳೆ ಮೆಟ್ರೋ ಸ್ಟೇಷನ್‌ ಉದ್ಘಾಟಿಸುವ ಗುರಿ ಹೊಂದಲಾಗಿದೆ.

ವಿಶ್ವದಲ್ಲೇ ಮಾದರಿ ನಿಲ್ದಾಣ: ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ವ್ಯವಸ್ಥೆಯಡಿ ಇನ್ಫೋಸಿಸ್‌ ಪ್ರತಿಷ್ಠಾನ ಜತೆ ಮೆಟ್ರೋ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿಶ್ವದಲ್ಲೇ ಮಾದರಿಯಾದ ರೈಲು ನಿಲ್ದಾಣವನ್ನು ಇನ್ಫೋಸಿಸ್‌ ನಿರ್ಮಾಣ ಮಾಡಲಿದೆ. ಅಲ್ಲದೆ, ಈ ಯೋಜನೆ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಮಾದರಿಯಾಗಲಿದೆ ಎಂದರು.

ನವೀನ ಹಣಕಾಸು ವ್ಯವಸ್ಥೆಯಡಿ ಬೆಂಗಳೂರಿನ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೂ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಇಂಟೆಲ್‌, ಪ್ರಸ್ಟೀಜ್‌ ಮತ್ತು ಎಂಬೆಸಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಪೊರೇಟ್‌ ಸಂಸ್ಥೆಗಳು ಮುಂದೆ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
 
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಆರ್‌.ವಿ.ದೇಶಪಾಂಡೆ, ಎಚ್‌.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್‌, ಸಾ.ರಾ.ಮಹೇಶ್‌, ಜಮೀರ್‌ ಅಹಮದ್‌, ಡಾ.ಜಯಮಾಲಾ, ಮೇಯರ್‌ ಸಂಪತ್‌ರಾಜ್‌, ಉಪಮೇಯರ್‌ ಪದ್ಮಾವತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಇನ್ಫೋಸಿಸ್‌ ಪ್ರತಿಷ್ಠಾನ ಪದಾಧಿಕಾರಿಗಳು ಹಾಜರಿದ್ದರು

ಕರ್ನಾಟಕದ ಸೇವೆಯಲ್ಲಿ ತಾಯಿ ಸೇವೆಯಷ್ಟೇ ತೃಪ್ತಿಯಿದೆ “ಕನ್ನಡ ನನ್ನ ಹೃದಯದ ಭಾಷೆ. ಕರ್ನಾಟಕ ಪ್ರೀತಿಯ ರಾಜ್ಯ. ಹೀಗಾಗಿ ಕನ್ನಡ ಮತ್ತು ಕರ್ನಾಟಕಕ್ಕೆ ಮಾಡುವ ಸೇವೆ ನನಗೆ ತಾಯಿಯ ಸೇವೆ ಮಾಡಿದಷ್ಟೇ ತೃಪ್ತಿ ಕೊಡುತ್ತದೆ,’ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದರು. ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, “ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜದಿಂದ ಸಂಪಾದಿಸಿದ್ದನ್ನು ಜನಸೇವೆ ಮೂಲಕ ವೆಚ್ಚ ಮಾಡಬೇಕು. ಜನಸೇವೆಯಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ,’ ಎಂದು ತಿಳಿಸಿದರು. 

Advertisement

ಕನ್ನಡ ನಾಡು, ನುಡಿಯ ಬಗ್ಗೆ ಡಾ.ಸುಧಾ ಮೂರ್ತಿ ಅವರಿಗೆ ಇರುವ ಅಭಿಮಾನ ಇತರರಿಗೆ ಮಾರ್ಗದರ್ಶಿ. ಅಭಿವೃದ್ಧಿ ಮತ್ತು ಸಾಮಾಜಿಕ ಸೇವೆ ವಿಚಾರದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನ ಕೈಗೊಳ್ಳುವ ಎಲ್ಲ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡಲಿದೆ. ಇದು ನಾನು ನನ್ನ ಜೀವನದಲ್ಲಿ ಭಾಗವಹಿಸಿದ ಅತ್ಯುತ್ತಮ ಕಾರ್ಯಕ್ರಮ.
 ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಷ್ಟೇ ವೇಗವಾಗಿ ಮೂಲ ಸೌಕರ್ಯ ಒದಗಿಸಲು ಖಾಸಗಿ ಉದ್ಯಮಗಳ ನೆರವು
ಪಡೆಯಲಾಗುವುದು. ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಇನ್ಫೋಸಿಸ್‌ ಪ್ರತಿಷ್ಠಾನ ಜತೆಗಿನ ಒಡಂಬಡಿಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಇನ್ನೂ ಹೆಚ್ಚಿನ ಸಂಸ್ಥೆಗಳು ಕೈಜೋಡಿಸಿದರೆ ಬೆಂಗಳೂರನ್ನು ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ ನಗರವಾಗಿಸಬಹುದು.
 ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next