Advertisement

Ayodhya Special: ಅಪರೂಪ ವ್ಯಕ್ತಿತ್ವದ ಶ್ರೀರಾಮಚಂದ್ರ

11:07 AM Jan 19, 2024 | Team Udayavani |

ವಿಷ್ಣು ಭಗವಂತನ ದಶಾವತಾರಗಳಲ್ಲಿ ರಾಮಾವತಾರವೂ ಕೂಡ ಒಂದು. ಇದು ತ್ರೇತಾಯುಗದಲ್ಲಿ ನಡೆದ ಘಟನೆ. ತಾನು ಸ್ವತಃ ಭಗವಂತನ ಅವತಾರವಾಗಿದ್ದರೂ ಮನುಷ್ಯ ರೂಪದಲ್ಲಿ ಅವತರಿಸಿ ಬಂದ ಕಾರಣ ಮನುಷ್ಯನ ಬದುಕಿಗೆ ಧಕ್ಕೆ ಬಾರದ ಹಾಗೆ ತನ್ನ ಜೀವನವನ್ನು ಸಾಗಿಸಿದ ಕಾರಣ ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನೆಂತಲೇ ಪ್ರಸಿದ್ಧಿಯನ್ನು ಪಡೆದುಕೊಂಡನು. ಒಬ್ಬ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಬರುವ ಅನೇಕ ದುಃಖದ ಘಟನೆಗಳು ಶ್ರೀರಾಮಚಂದ್ರನ ಜೀವನದಲ್ಲಿಯೂ ಬಂದದ್ದನ್ನು ರಾಮಾಯಣ ಕಥೆಗಳ ಮೂಲಕ ನಾವೆಲ್ಲ ತಿಳಿದುಕೊಂಡಿದ್ದೇವೆ. ಎಲ್ಲವನ್ನು ನಿಗ್ರಹಿಸುವ ಸಾಮರ್ಥಯವಿದ್ದರೂ ಸಹಿಸುವುದರ ಮೂಲಕ ಜಗತ್ತಿಗೆ ಸಹನತೆಯ ಪಾಠವನ್ನು ಕಲಿಸಿಕೊಟ್ಟಿದ್ದಾನೆ.

Advertisement

ತನಗೆ ಪಟ್ಟಾಭಿಷೇಕದ ಮುಹೂರ್ತ ನಿಶ್ಚಿತವಾದಾಗ ಕೇವಲ ಕೈಕೇಯಿಯ ಒಂದು ಮತ ತನಗೆ ಸಿಗದ ಕಾರಣ ರಾಜ್ಯವನ್ನು ತ್ಯಜಿಸಿ ಘೋರ ಕಾಡಿನತ್ತ ವನವಾಸಕ್ಕೆ ತೆರಳುವುದರ ಮೂಲಕ ರಾಮ ರಾಜ್ಯವೇನೆಂಬುದನ್ನು ತಿಳಿಸಿಕೊಟ್ಟಿದ್ದಾನೆ. ಒಂದು ಮತ ಹೆಚ್ಚಿಗೆ ದೊರೆತರೆ ರಾಜ್ಯವಾಳುವ ಈ ಪ್ರಜಾ ರಾಜ್ಯದಲ್ಲಿ ನೂರಕ್ಕೆ ನೂರು ಮತ ದೊರೆತಾಗ ಅದು ರಾಮ ರಾಜ್ಯವಾಗುವುದೆಂಬುದನ್ನು ತಿಳಿಸಿಕೊಟ್ಟವನು ಶ್ರೀರಾಮಚಂದ್ರನು. ಇಂದಿನ ಪ್ರಜಾರಾಜ್ಯಕ್ಕೆ ಇದನ್ನು ಹೋಲಿಸಿದಾಗ ರಾಮರಾಜ್ಯ ಮತ್ತು ಪ್ರಜಾರಾಜ್ಯಗಳ ವ್ಯತ್ಯಾಸ ತಿಳಿದು ಬರುತ್ತದೆ.

ಎಲ್ಲವನ್ನೂ ಮೋಸದಿಂದ ಪಡೆದುಕೊಳ್ಳುವ, ಎಲ್ಲವೂ ನನ್ನದೆಂದು ದುರಹಂಕಾರದಿಂದ ಬೀಗುತ್ತಿರುವ ಇಂದಿನ ಪ್ರಜಾರಾಜ್ಯದ ರಾಜಕಾರಣಿಗಳಿಗೆ ರಾಮನ ಜೀವನವು ಆದರ್ಶ ಪ್ರಾಯವಾದುದು. ರಾಮನ ಚರಿತ್ರೆಯಲ್ಲಿ ಯಾವುದೇ ಆಡಂಬರವಿಲ್ಲ. ರಾಮನ ಪಾತ್ರದಲ್ಲಿ ಬೆರಗುಗೊಳಿ ಸುವ ಪವಾಡಗಳಿಲ್ಲ. ಸಹೋದರ ಸಾಯುತ್ತಿದ್ದರೂ ಪವಾಡವನ್ನು ಮಾಡುವ ಮೂಲಕ ಅವನ ಜೀವವನ್ನು ಉಳಿಸುವುದಿಲ್ಲ. ಬದಲಾಗಿ ವೈದ್ಯರ ಸಲಹೆಗೆ ಮೊರೆ ಹೋಗುತ್ತಾನೆ. ಸೂಕ್ತ ವೈದ್ಯರ ಬಳಿ ಹೋಗಿ ಸಹೋದರನನ್ನು ಉಳಿಸಲು ಔಷ ಧವನ್ನು ತರುವಂತೆ ಹನುಮಂತನ ಮೇಲೆ ಅವಲಂಬಿತನಾಗುತ್ತಾನೆ. ಇದು ಭಗವಾನ್‌ ರಾಮನ ಅತ್ಯಂತ ಸರಳ ವ್ಯಕ್ತಿತ್ವ.

ತಾನು ಗೆದ್ದ ರಾಜ್ಯದ ಮೇಲೆ ಸ್ವಾಭಾವಿಕವಾಗಿ ತನಗೆ ಅಧಿಕಾರವು ಪ್ರಾಪ್ತವಾಗಿದ್ದರೂ ತಾನು ಗೆದ್ದ ಸ್ವರ್ಣನಗರಿ ಲಂಕೆಯನ್ನು ವಿಭೀಷಣನಿಗೆ ಕೊಡುವುದರ ಮೂಲಕ ನನಗೆ ಚಿನ್ನದ ಕುರಿತು, ರಾಜ್ಯದ ಕುರಿತು ಯಾವುದೇ ವ್ಯಾಮೋಹವಿಲ್ಲ. ನನಗೆ ಅದರ ಅಗತ್ಯವೂ ಇಲ್ಲವೆಂದು ವಿಭೀಷಣನಿಗೆ ಲಂಕಾವನ್ನು ನೀಡುತ್ತಾನೆ. ಇಂದು ಅತ್ಯಾಸೆಯ ದುರಾಸೆಯಲ್ಲಿ ಮುಳುಗಿದ ಕಲಿಯುಗದ ಪ್ರತಿಯೊಬ್ಬ ಮನುಷ್ಯನಿಗೆ ರಾಮನ ಬದುಕು ಆದರ್ಶವಾಗಿದೆ.

ಶ್ರೀರಾಮನು ಶಬರಿ ನೀಡಿದ ಹಣ್ಣುಗಳನ್ನು ತಿನ್ನುತ್ತಾ ಆಕೆಯನ್ನು ಸಂತೈಸುವುದರ ಮೂಲಕ ಭಕ್ತಿಪರವಶರಾದವರಲ್ಲಿ ಕುಲಜಾತಿಗಳನ್ನು ನೋಡಬಾರದೆಂಬುದನ್ನು ಜಗತ್ತಿಗೆ ತಿಳಿಸಿ ಕೊಟ್ಟಿದ್ದಾನೆ. ರಾಮ ವನವಾಸಕ್ಕೆಂದು ಅರಣ್ಯಕ್ಕೆ ತೆರಳಿದಾಗ ಆತನ ಜತೆ ಯಾವುದೇ ಸೈನ್ಯವಿರಲಿಲ್ಲ. ಸಾಮಾನ್ಯ ಮಾನವ ನಂತೆ ಕಾಡಿಗೆ ಪ್ರವೇಶಿಸಿ, ಅಲ್ಲಿನ ಜೀವಿಗಳನ್ನೇ ಸೈನ್ಯವಾಗಿಸಿದನು. ವಾನರರನ್ನು ಅಂದರೆ ಮಂಗಗಳನ್ನು ಮತ್ತು ಕರಡಿಗಳನ್ನು ಒಟ್ಟುಗೂಡಿಸಿ ಅವುಗಳ ಸೈನ್ಯವನ್ನು ರಚಿಸುವುದರ ಮೂಲಕ ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ ಅಂದರೆ ಜಗತ್ತಿನಲ್ಲಿ ಅಯೋಗ್ಯರಾದವರು ಯಾರೂ ಇಲ್ಲ, ಯೋಗ್ಯತೆಯನ್ನು ಗುರುತಿಸಿ ಅವರನ್ನು ನಿಯೋಜಿಸುವ ವ್ಯಕ್ತಿತ್ವವು ಜಗತ್ತಿಗೆ ಆವಶ್ಯಕವೆಂಬುದನ್ನು ತೋರಿಸಿಕೊಟ್ಟಿದ್ದಾನೆ.

Advertisement

ರಾಮನು ತನನಗೆ ಮುಂದಿನ ದಿನಗಳಲ್ಲಿ ಬರಬಹುದಾದ ಎಲ್ಲಾ ನೋವು, ಸಂಕಟ, ದುಃಖಗಳ ಬಗ್ಗೆ ಮೊದಲೇ ತಿಳಿದುಕೊಂಡವನಾಗಿದ್ದರೂ ಅವುಗಳನ್ನು ಅನುಭವಿಸಲು ಹಿಂಜರಿದವನಲ್ಲ. ಇಂತಹ ಆದರ್ಶ ಪುರುಷರಾದ ರಾಮಮಂದಿರವು ಭಾರತೀಯ ಭಕ್ತರ ಸಹಯೋಗದಿಂದ ಭವ್ಯವಾಗಿ ನಿರ್ಮಾಣವಾಗುತ್ತಿದೆ. ಜ.22ರಂದು ಬಾಲರಾಮನ ಶುಭಾಗಮನ ಆಗುತ್ತಿರುವುದು ಒಂದು ಶುಭ ಸಂಕೇತ. ಈ ಗಳಿಗೆಯನ್ನು ವಾದ-ವಿವಾದಗಳಿಂದ ವ್ಯರ್ಥ ಮಾಡಿಕೊಳ್ಳದೆ ಆದರ್ಶ ವ್ಯಕ್ತಿತ್ವದ ರಾಮನನ್ನು ಸರ್ವಧರ್ಮದವರೂ ಆದರದಿಂದ ಸ್ವಾಗತಿಸಿ ಅವನ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲು ಇದು ಸೂಕ್ತ ಸಮಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next