Advertisement

ಕೊಡಗು ಮಳೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ : ಪಲಿಮಾರು ಶ್ರೀ

09:32 AM Sep 02, 2018 | |

ಉಡುಪಿ: ವಿಜೃಂಭಣೆಗಿಂತ ಕಷ್ಟದಲ್ಲಿರುವವರಿಗೆ ಸ್ಪಂದನೆ ಮುಖ್ಯ. ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಕೊಡಗಿನ ಮಳೆ ಹಾನಿ ಸಂತ್ರಸ್ತರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಅವರಿಗೆ ಶ್ರೀಕೃಷ್ಣನ ಪ್ರಸಾದದ ಜತೆಗೆ ಬಟ್ಟೆ ಮೊದಲಾದ ಅವಶ್ಯ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕೊಡಗಿನ ಮಳೆ ಸಂತ್ರಸ್ತರ ಏಳಿಗೆಗಾಗಿ ಶ್ರೀಕೃಷ್ಣ ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಕೃಷ್ಣಾಷ್ಟಮಿ ಸಂದರ್ಭದ ಪ್ರಸಾದ ನೀಡುವ ಜತೆ ಕೊಡಗಿನ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಈ ಬಾರಿ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಜತೆಯಾಗಿ ಬಂದಿದೆ. ಹಾಗಾಗಿ ಶ್ರೀಕೃಷ್ಣ ಜಯಂತಿ ಎನ್ನಲಾಗುತ್ತದೆ. ಸೆ. 2ರಂದು ಬೆಳಗ್ಗೆ 6ಕ್ಕೆ ಲಕ್ಷಾರ್ಚನೆ, 9ಕ್ಕೆ ಮಹಾಪೂಜೆ, 10ಕ್ಕೆ ಲಡ್ಡಿಗೆ ಮುಹೂರ್ತ, 7ಕ್ಕೆ ಪ್ರವೀಣ್‌ ಗೊಡ್ಕಿಂಡಿ ಸಂಗೀತ, ರಾತ್ರಿ 10ಕ್ಕೆ ಕೃಷ್ಣಾಷ್ಟಮಿ ವಿಶೇಷ ಮಹಾಪೂಜೆ, ರಾತ್ರಿ 11.48ಕ್ಕೆ ಶ್ರೀಕೃಷ್ಣ ಮಠದ ತುಳಸೀಕಟ್ಟೆಯಲ್ಲಿ ಶ್ರೀಕೃಷ್ಣಾರ್ಘ್ಯ ಪ್ರದಾನ ನಡೆಯಲಿದೆ’ ಎಂದು ಹೇಳಿದರು.

ಸೆ. 3ರಂದು ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 6ಕ್ಕೆ ಮಹಾಮಂಗಳಾರತಿ, 10.30ಕ್ಕೆ ದಹಿಹಂಡಿ (ಮುಂಬಯಿ ಆಲಾರೆ ಗೋವಿಂದ ತಂಡದ ಮೊಸರುಕುಡಿಕೆ) ಉದ್ಘಾಟನೆ, 11ಕ್ಕೆ ರಾಜಾಂಗಣದಲ್ಲಿ ಹಾಲು ಪಾಯಸ ಮತ್ತು ಗುಂಡಿಟ್ಟು ಲಡ್ಡಿಗೆ ವಿಶೇಷದೊಂದಿಗೆ ಶ್ರೀ ಕೃಷ್ಣಪ್ರಸಾದ ವಿತರಣೆ, ಅಪರಾಹ್ನ 3ರಿಂದ ವಿಟ್ಲಪಿಂಡಿ ಉತ್ಸವ-ಮೊಸರುಕುಡಿಕೆ, ಸಂಜೆ 5ಕ್ಕೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, 7ಕ್ಕೆ ರಾತ್ರಿ ಪೂಜೆ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದರು.

ಸೆ. 9: ಕೋಟಿ ತುಳಸಿ ಅರ್ಚನೆ 
ಸೆ. 4ರಂದು ಚಿಣ್ಣರ ಸಂತರ್ಪಣೆ ಶಾಲೆಯ ಮಕ್ಕಳಿಗೆ ಚಕ್ಕುಲಿ, ಉಂಡೆ ಪ್ರಸಾದ ವಿತರಿಸಲಾಗುವುದು. ಸೆ. 8ರಂದು ಸಾಯಂಕಾಲ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸೆ. 9ರಂದು ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ತಿಳಿಸಿದರು.

ವಿಟ್ಲಪಿಂಡಿಗೆ ಸಂಚಾರ ನಿರ್ಬಂಧ
ಉಡುಪಿ:
ವಿಟ್ಲಪಿಂಡಿ ಹಿನ್ನೆಲೆಯಲ್ಲಿ ಸೆ. 3ರಂದು ರಥಬೀದಿ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಐಡಿಯಲ್‌ ಜಂಕ್ಷನ್‌, ವುಡ್‌ಲ್ಯಾಂಡ್‌ ರಸ್ತೆ, ಚಿತ್ತರಂಜನ್‌ ವೃತ್ತ, ಸಂಸ್ಕೃತ ಕಾಲೇಜು ವೃತ್ತ, ನಾರ್ತ್‌ ಸ್ಕೂಲ್‌ ವೃತ್ತ, ಆರ್‌ಸಿಸಿ ಸಿಮೆಂಟ್‌ ಜಂಕ್ಷನ್‌, ಭಾರತ್‌ ಬೀಡಿ ವೃತ್ತ, ಸಾಯಿರಾಮ್‌ ವೃತ್ತ, ವೃಂದಾವನ ಹೊಟೇಲ್‌ ಬಳಿ, ಬಡಗಬೆಟ್ಟು ರಸ್ತೆ, ವಿದ್ಯೋದಯ ಮತ್ತು ಭುವನೇಂದ್ರ ಕಲ್ಯಾಣ ಮಂಟಪ ಬಳಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಪಾರ್ಕಿಂಗ್‌ಗಾಗಿ ರಾಜಾಂಗಣ ಪಾರ್ಕಿಂಗ್‌ ಮತ್ತು ನಾರ್ತ್‌ ಸ್ಕೂಲ್‌ ಬಳಿ ಅವಕಾಶ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next