Advertisement

ಆರೋಗ್ಯ ಕ್ಷೇತ್ರಕ್ಕೆ ಶ್ರೀರಾಮುಲು ಸೇವೆ ಅನುಪಮ

03:09 AM Jul 02, 2020 | Hari Prasad |

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಂದಾಕ್ಷಣ ಥಟ್ಟನೆ ನೆನಪಾಗುವುದು 108 ಆಂಬ್ಯುಲೆನ್ಸ್‌.

Advertisement

ಹೌದು, ಒಂದು ಕಾಲದಲ್ಲಿ ಹಳ್ಳಿಗೆ ಆಂಬ್ಯುಲೆನ್ಸ್‌ ಬಂದರೆ ಆ ಊರಿನ ಶ್ರೀಮಂತರ ಮನೆಯಲ್ಲಿ ಅನಾರೋಗ್ಯವಿದೆ ಎಂದರ್ಥ.

ಬಡವರಿಗೆ ಕಾಯಿಲೆಯಾದರೆ ಆಸ್ಪತ್ರೆಗೆ ಹೋಗಲು ಎತ್ತಿನ ಗಾಡಿ ಕಟ್ಟಬೇಕಿತ್ತು. ಇನ್ನೂ ತುರ್ತು ಎಂದರೆ ಆ ಊರಿನಲ್ಲಿದ್ದ ಟ್ರ್ಯಾಕ್ಟರೇ ಆಂಬ್ಯುಲೆನ್ಸ್‌ ಆಗುತ್ತಿತ್ತು.

ಆದರೆ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮೊದಲ ಸಲ ಅಧಿಕಾರ ಹಿಡಿದಾಗ ಆರೋಗ್ಯ ಸಚಿವರಾಗಿ ಚುಕ್ಕಾಣಿ  ಹಿಡಿದಿದ್ದು ಬಿ. ಶ್ರೀರಾಮುಲು. ಈ ಅವಧಿಯಲ್ಲಿ 108 ಆಂಬ್ಯುಲೆನ್ಸ್‌ ಯೋಜನೆ ಜಾರಿಗೆ ತಂದಿದ್ದು, ಆರೋಗ್ಯ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆ ಎನ್ನಬಹುದು.

ಅಪಘಾತ, ಹೆರಿಗೆ ಸೇರಿದಂತೆ ಎಂಥದ್ದೇ ತುರ್ತು ಸಂದರ್ಭದಲ್ಲಿ 108 ಸಂಖ್ಯೆಗೆ ಡಯಲ್‌ ಮಾಡಿದರೆ 15 ರಿಂದ 30 ನಿಮಿಷಗಳಲ್ಲಿ ಆಂಬ್ಯುಲೆನ್ಸ್‌ ಬಂದು ನಿಲ್ಲುತ್ತದೆ. ಇದರಿಂದ  ಲಕ್ಷಾಂತರ ಪ್ರಾಣಗಳು ಉಳಿದಿವೆ ಎಂದರೆ ತಪ್ಪಾಗಲಾರದು.


ಜಿಲ್ಲಾಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡಿದ ಮೊದಲ ಸಚಿವ: ಈಗ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯೋಗಾಯೋಗ ಎಂಬಂತೆ ಅದೇ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾರೆ. ಜನರ ಸಂಕಟಗಳನ್ನು ಅರಿತಿರುವ ಹಿನ್ನೆಲೆಯಲ್ಲಿ ತನ್ನ ಇಲಾಖೆಯಿಂದ ಜನಸಾಮಾನ್ಯರಿಗೆ ಏನು ಮಾಡಬಹುದೆನ್ನುವುದರ ಸ್ಪಷ್ಟತೆ ಇದೆ. ಈ ಕಾರಣಕ್ಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲೇ ರಾಜ್ಯದ 10 ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

Advertisement

ವಾಸ್ತವ್ಯದ ಕಾರಣಕ್ಕೆ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಆರಂಭವಾಗಿವೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಜತೆಗೆ ಬರುವವರಿಗೆ ಉಳಿಯಲು ತಾವಿಲ್ಲದ ಕಾರಣ ಬಹುತೇಕರು ಆಸ್ಪತ್ರೆಯ ಆವರಣ, ಕಾರಿಡಾರ್‌ಗಳಲ್ಲಿ ಮಲಗುತ್ತಿದ್ದರು.

ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಸಲುವಾಗಿ ಅಧಿಕಾರಿಗಳ ಎತೆ ಸಮಾಲೋಚನೆ ನಡೆಸಿ, ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಆವರಣದಲ್ಲಿ ರೋಗಿಗಳ ಸಹಾಯಕರು ಉಳಿಯಲು ಡಾಮೆಂಟರಿ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ. ಡಾರ್ಮೆಂಟರಿ ನಿರ್ಮಿಸುವುದರಿಂದ ರಾತ್ರಿ ಸುರಕ್ಷಿತವಾಗಿ ಮಲಗಲು, ಶೌಚ, ಸ್ನಾನ, ಊಟೋಪಚಾರ ಕೂಡಾ ಆಗಲಿದೆ. ಇದೂ ಕೂಡಾ 108 ಆಂಬ್ಯುಲೆನ್ಸ್‌ ಯೋಜನೆಯಂತೆ ಜನೋಪಯೋಗಿ ಆಗುವುದರಲ್ಲಿ ಎರಡು ಮಾತಿಲ್ಲ.

ಮೂರು ತಿಂಗಳಲ್ಲಿ 12 ಸಾವಿರ ಕಿ.ಮೀ ಪ್ರವಾಸ


ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಬೇಕು ಎನ್ನುವ ಹೊತ್ತಿಗೆ ಇಡೀ ಜಗತ್ತಿಗೆ ಕೋವಿಡ್ 19 ಮಹಾಮಾರಿ ಬಂದಪ್ಪಳಿಸಿದೆ. ದೇಶದ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೋವಿಡ್ 19 ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ ಬಗ್ಗೆ ಖುದ್ದು ಪ್ರಧಾನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ 19 ವೈರಸ್‌ ಆತಂಕದ ಕಾರಣಕ್ಕೆ ಎಲ್ಲರೂ ಮನೆಯಲ್ಲೇ ಉಳಿದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು  ಮಾತ್ರ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡಿದರು. ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಪರಿಸ್ಥಿತಿ ನಿಭಾಯಿಸುವುದು ಹೇಗೆ? ಆಗಿರುವ ಸಿದ್ಧತೆಗಳೇನು? ಆಗಬೇಕಾದ್ದೇನು? ಹೀಗೆ ಎಲ್ಲವನ್ನೂ ಅವಲೋಕಿಸಿದರು.

ಈ ಮೂರು ತಿಂಗಳ ಅವಧಿಯಲ್ಲಿ ಅವರ ಓಡಾಟ ಬರೋಬ್ಬರಿ 12 ಸಾವಿರ ಕಿ.ಮೀ. ಕೋವಿಡ್ 19 ಸಂದರ್ಭ ಸಮರ್ಥವಾಗಿ ನಿಭಾಯಿಸುವ ಜತೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಯೋಗಾಲಯ ತೆರೆಯುವ ಮೂಲಕ ಫಲಿತಾಂಶ ವೇಗವಾಗಿ ಸಿಗುವಂತೆ ಮಾಡಿದ್ದಾರೆ. ಜತೆಗೆ ಸ್ಯಾನಿಟೈಸರ್‌, ಮಾಸ್ಕ್ ಆಹಾರದ ಕಿಟ್‌ಗಳ ವಿತರಣೆಯಲ್ಲೂ ಸಚಿವರ ಕಾರ್ಯವೈಖರಿ ಪ್ರಶಂಸನೀಯ.


ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ ಆರೋಗ್ಯ ಸಚಿವ ಶ್ರೀ ರಾಮುಲು.


ವೈದ್ಯಕೀಯ ಪರಿಕರ ವಿತರಿಸುತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು.

Advertisement

Udayavani is now on Telegram. Click here to join our channel and stay updated with the latest news.

Next