Advertisement

ಬಿ. ವೊಕೇಷನಲ್‌ ಕೋರ್ಸ್‌: ಶೈಕ್ಷಣಿಕ ಪಲ್ಲಟದ ಹೊಸ ಹಾದಿ

03:45 AM Sep 03, 2020 | Hari Prasad |

ಸಾಂಪ್ರದಾಯಿಕ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ ಶೈಕ್ಷಣಿಕ ವಲಯದಲ್ಲಿ ಆಮೂಲಾಗ್ರ ಸುಧಾರಣೆಯ ಅಗತ್ಯವನ್ನು ಪ್ರತಿಪಾದಿಸುವ ಚಿಂತನೆ ವ್ಯಕ್ತವಾಗುತ್ತಲೇ ಇರುತ್ತದೆ.

Advertisement

ನೂತನ ಶೈಕ್ಷಣಿಕ ನೀತಿ ಘೋಷಣೆಯೊಂದಿಗೆ ನಾವು ಇದೀಗ ಹೊಸ ಯುಗದ ಶೈಕ್ಷಣಿಕ ಜಗತ್ತನ್ನು ಪ್ರವೇಶಿಸುತ್ತಿದ್ದೇವೆ. ಈ ಹಂತದಲ್ಲಿ ಮಹತ್ವದ ಅಂಶವೊಂದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ.

ವೃತ್ತಿಪರ ನಿರ್ವಹಣೆಯ ಸಾಮರ್ಥ್ಯ ರೂಢಿಸಿಕೊಳ್ಳುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಣವನ್ನು ಸಮೀಕರಿಸಿದಾಗ ಮಾತ್ರ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವಾಗುತ್ತದೆ ಎಂಬುದನ್ನು ಅರಿಯಬೇಕಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡೇ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಸಾಮರ್ಥ್ಯ ರೂಢಿಸುವ ಉದ್ದೇಶದೊಂದಿಗೆ 2020ರ ನೂತನ ಶಿಕ್ಷಣ ನೀತಿ ರೂಪಿತವಾಗಿದೆ. ಅಂಕಗಳು ಮತ್ತು ಪದವಿ ಪ್ರಮಾಣ ಪತ್ರಗಳಷ್ಟೇ ವಿದ್ಯಾರ್ಥಿಯ ವೃತ್ತಿಪರತೆಯನ್ನು ರೂಪಿಸುವ ಅಂಶಗಳಲ್ಲ. ಇವುಗಳೊಂದಿಗೆ ವಿದ್ಯಾರ್ಥಿಗಳನ್ನು ವೃತ್ತಿಪರತೆಗೆ ಒಗ್ಗಿಸುವ ಪ್ರಯೋಗಗಳನ್ನು ಈ ನೀತಿ ಕೇಂದ್ರೀಕರಿಸಿಕೊಂಡಿದೆ.

ಸಮಾಜದ ಪ್ರಯೋಜನಕಾರಿ ಸಂಪನ್ಮೂಲಗಳನ್ನಾಗಿಸಲು…
ಸ್ವಸಾಮರ್ಥ್ಯ ರೂಢಿಸಿಕೊಳ್ಳುವಾಗ ಪ್ರತಿಯೊಬ್ಬ ವಿದ್ಯಾರ್ಥಿಯೂ ಥ್ರೀ E (Education, Employability Employment ನೆಲೆಗಳ ಶಿಕ್ಷಣ) ಪರಿಕಲ್ಪನೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರಬೇಕು. ಸ್ವಯಂಪರಿಪೂರ್ಣತೆ ಕಂಡುಕೊಳ್ಳಲು ಪೂರಕ ವಾಗುವ ಶಿಕ್ಷಣ (Education), ವೃತ್ತಿಪರ ಸಾಮರ್ಥ್ಯದೊಂದಿಗೆ ಗುರುತಿಸಿಕೊಳ್ಳುವ ವೃತ್ತಿಪರತೆ (Employibility) ಮತ್ತು ಬದುಕಿನ ಸ್ವರೂಪವನ್ನೇ ಬದಲಾಯಿಸುವ ಔದ್ಯೋಗಿಕ ಅವಕಾಶ (Employment) ಈ ಮೂರೂ ಅಂಶಗಳೊಂದಿಗೆ ಶಿಕ್ಷಣ ಸಮೀಕರಿಸಲ್ಪಡಬೇಕಿದೆ.

ಶಿಕ್ಷಣವು ವ್ಯಕ್ತಿಯೊಳಗೆ ಮೊದಲೇ ಅಂತರ್ಗತವಾಗಿರುವ ಪರಿಪೂರ್ಣತೆಯ ಸಾಧ್ಯತೆಯನ್ನು ಮತ್ತಷ್ಟು ಅಧಿಕೃತಗೊಳಿಸುವಂಥದ್ದು ಎಂದು ಸ್ವಾಮಿ ವಿವೇಕಾನಂದ ಅವರು ವಿಶ್ಲೇಷಿಸಿದ್ದಾರೆ. ಪಡೆಯುವಂಥ ಶಿಕ್ಷಣವು ನಿರ್ದಿಷ್ಟ ವೃತ್ತಿಪರ ಸಾಮರ್ಥ್ಯ ತನ್ನದಾಗಿಸಿಕೊಂಡು ಉದ್ಯೋಗ ಕಂಡುಕೊಳ್ಳಲು ನೆರವಾಗುವಂತಿರಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳನ್ನು ಸಮಾಜದ ಪ್ರಯೋಜನಕಾರಿ ಸಂಪನ್ಮೂಲಗಳನ್ನಾಗಿಸಲು ಸಾಧ್ಯ.
ಭಾರತದಾದ್ಯಂತ ಈಗಾಗಲೇ ಮುಂಚಿನಿಂದಲೂ ಚಾಲ್ತಿಯಲ್ಲಿರುವ ಶೈಕ್ಷಣಿಕ ಕೋರ್ಸ್‌ಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈಗಲೂ ಈ ಪಾತ್ರ ನಿರ್ವಹಣೆ ಮುಂದುವರೆದಿದೆ. ಅವರ ಶೈಕ್ಷಣಿಕ ಮುನ್ನಡೆಗೂ ಇವು ಸಹಾಯಕವಾಗಿವೆ.

Advertisement

ಈ ಹಿನ್ನೆಲೆ ಇದ್ದಾಗ್ಯೂ ಪದವಿ ಹಂತದ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಶೇ.83ರಷ್ಟು ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ವಿಫ‌ಲರಾಗುತ್ತಿದ್ದಾರೆ ಎಂಬುದನ್ನು ಸಮೀಕ್ಷೆಯೊಂದು ದೃಢಪಡಿಸಿದೆ. ಔದ್ಯೋಗಿಕ ಅವಕಾಶಗಳನ್ನು ದಕ್ಕಿಸಿಕೊಡುವಲ್ಲಿ ವಿಫ‌ಲವಾಗುತ್ತಿರುವ ಎಲ್ಲ ಶೈಕ್ಷಣಿಕ ವಲಯಗಳ ಪಾಲಿಗೆ ಈ ಸಮೀಕ್ಷಾ ವರದಿ ಎಚ್ಚರಿಕೆಯ ಗಂಟೆಯಾಗಿದೆ. ಈ ದೃಷ್ಟಿಯಿಂದ ಶಿಕ್ಷಣಕ್ಕೆ ಔದ್ಯೋಗಿಕ ಆಯಾಮ ನೀಡುವ ಹೆಜ್ಜೆಗಳಿಗೆ ಹಿಂದೆಂದಿಗಿಂತಲೂ ಈಗ ಪ್ರಾಮುಖ್ಯತೆ ದೊರಕುತ್ತಿದೆ.

ಪದವಿ ಹಂತ ಪೂರ್ಣಗೊಂಡ ನಂತರ ಉದ್ಯೋಗ ಪಡೆಯಲಾಗದ ಅಸಹಾಯಕ ಸ್ಥಿತಿಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಸಮಾಧಾನವಿದೆ. ಪಠ್ಯಾಧಾರಿತ ಶಿಕ್ಷಣವನ್ನು ನೆಚ್ಚಿಕೊಂಡಿರುವ ಹಲವು ಕಾಲೇಜುಗಳು ಪದವಿ ಪ್ರಮಾಣ ಪತ್ರ ನೀಡುವುದಕ್ಕಷ್ಟೇ ಸೀಮಿತವಾಗಿವೆ ಎಂಬುದು ಬಹು ಮುಖ್ಯ ಆಕ್ಷೇಪ. ಪ್ರತಿವರ್ಷ ಹಲವು ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಆದಾಗ್ಯೂ, ಕಾರ್ಪೊರೇಟ್‌ ವಲಯಕ್ಕೆ ಬೇಕಾದ ಸಮರ್ಥ ವೃತ್ತಿಪರರು ಸಿಗುತ್ತಿಲ್ಲ. ಪದವಿ ಪಡೆದ ಅರ್ಹ ವಿದ್ಯಾರ್ಥಿಗಳಿದ್ದಾರೆ.

ಆದರೆ, ವೃತ್ತಿ ನಿರೀಕ್ಷಿಸುವ ಸಮರ್ಥರಿಲ್ಲ ಎನ್ನುವುದೇ ಸಮಸ್ಯೆ. ಈ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಶಿಕ್ಷಣ ಸಚಿವಾಲಯ ಮತ್ತು ನೀತಿ ನಿರೂಪಕ ವಲಯ ಇದೀಗ ಹೊಸದಾಗಿ ಆಲೋಚಿಸಿ ಹೊಸ ಬಗೆಯ ಕೋರ್ಸ್‌ಗಳನ್ನು ಸೇರ್ಪಡೆಗೊಳಿಸುತ್ತಿದೆ. ಅಂಥ ಪ್ರಯತ್ನದ ಭಾಗವಾಗಿ ಬಿ.ವೊಕೇಷನಲ್‌ ಕೋರ್ಸ್‌ ಪರಿಕಲ್ಪನೆ ಹುಟ್ಟಿದೆ. ಇದು ಶಿಕ್ಷಣ ವಲಯಕ್ಕೆ ಪುನರ್‌ಸ್ವರೂಪ ನೀಡುವ ಮಹತ್ವದ ಹೆಜ್ಜೆ ಎಂದೇ ಪರಿಗಣಿತವಾಗಿದೆ.

ವ್ಯಕ್ತಿತ್ವದ ಪ್ರಖರ ಸಾಮರ್ಥ್ಯ
ಶೈಕ್ಷಣಿಕ ಹಂತಗಳನ್ನು ದಾಟಿಕೊಳ್ಳುವಾಗಲೇ ವಿದ್ಯಾರ್ಥಿಗಳು ಔದ್ಯೋಗಿಕ ವಲಯ ನಿರೀಕ್ಷಿಸುವ ಸಮಗ್ರ ಸಾಮರ್ಥ್ಯ ಮತ್ತು ಪ್ರಖರ ವೃತ್ತಿಪರ ವ್ಯಕ್ತಿತ್ವವನ್ನು ತಮ್ಮದಾಗಿಸಿಕೊಳ್ಳಲು ಬಿ.ವೊಕೇಷನಲ್‌ ಕೋರ್ಸ್‌ ನೆರವಾಗುತ್ತದೆ. ವ್ಯಕ್ತಿತ್ವದ ಪ್ರಖರ ಸಾಮರ್ಥ್ಯ-ಹಾಗೆಂದರೇನು? ಈ ಕುರಿತು ಸ್ಪಷ್ಟವಾಗಿ ವ್ಯಾಖ್ಯಾನಿಸಿಕೊಂಡಾಗ ಮಾತ್ರ ಇಂಥದ್ದೊಂದು ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗುತ್ತದೆ.

ಪಂಚಮಂ ಕಾರ್ಯಸಿದ್ಧಿ ಎನ್ನುವ ಐದು ನೆಲೆಗಳ ಆಲೋಚನಾಕ್ರಮಕ್ಕೆ ಸಮೀಕರಿಸಿ ಇದನ್ನು ನಾನು ವ್ಯಾಖ್ಯಾನಿಸಲಿಚ್ಛಿಸುತ್ತೇನೆ. ಇದನ್ನು ಕೆಎಎಸ್‌ಎಚ್‌ವಿ (KASHV) ಎಂಬ ಐದಕ್ಷರಗಳ ಪ್ರಧಾನ ಪರಿಕಲ್ಪನೆಯನ್ನಾಗಿ ಗ್ರಹಿಸಬಹುದು. ಕೆಎಎಸ್‌ಎಚ್‌ವಿ ಎಂಬ ಮೊದಲಕ್ಷರಗಳ ನೆಲೆಯಲ್ಲಿ ಹೊಳೆದ ಜ್ಞಾನ (Knowledge), ಪ್ರಜ್ಞಾಪೂರ್ವಕ ಮನಸ್ಥಿತಿ (Attitude), ಕೌಶಲ್ಯಗಳು (Skill), ಪ್ರವೃತ್ತಿ (Habit) ಮತ್ತು ಮೌಲ್ಯಗಳು (Value) ಎಂಬ ಐದು ಪದಗಳ ಸಂಯೋಜನೆಯ ಮೂಲಕ ವ್ಯಕ್ತಿಗತ ವ್ಯಕ್ತಿತ್ವದ ಪ್ರಖರ ಆಯಾಮಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಈ ಸಂಯೋಜನೆಯು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಔದ್ಯೋಗಿಕ ಅಥವಾ ವೃತಿಪರ ಸಾಮರ್ಥ್ಯದ ಅಗಾಧತೆಯನ್ನು ಪರಿಚಯಿಸುವ ವಿಶಾಲ ಅರ್ಥವನ್ನು ಧ್ವನಿಸುತ್ತದೆ. ಇಲ್ಲಿ ಜ್ಞಾನ ಎಂಬ ಪದವು ನಿರ್ದಿಷ್ಟ ವೃತ್ತಿಪರ ವಲಯ ಮತ್ತು ಅದಕ್ಕನುಗುಣವಾದ ಅನ್ವಯಿಕ ಪ್ರಾಯೋಗಿಕತೆಯನ್ನು ಕೇಂದ್ರೀಕರಿಸಿದೆ. ಸಮುದ್ರದ ದಂಡೆಯ ಮರಳು ಅಲ್ಲಿಯೇ ಇದ್ದರೆ ಪ್ರಯೋಜನವಿಲ್ಲ. ಅದು ಕಟ್ಟಡ ಕಟ್ಟಲ್ಪಡುವ ಸರಿಯಾದ ಜಾಗದಲ್ಲಿ ಕ್ರಮಬದ್ಧ ರೀತಿಯಲ್ಲಿ ಬಳಕೆಯಾದಾಗ ಮಾತ್ರ ಅದಕ್ಕೆ ಬೆಲೆ ಇರುತ್ತದೆ. ಜ್ಞಾನವೂ ಹಾಗೆಯೇ. ಜ್ಞಾನವನ್ನು ನಿರ್ದಿಷ್ಟ ಕ್ಷೇತ್ರದ ಅಗತ್ಯಕ್ಕನುಗುಣವಾಗಿ ಬಳಸಿ ಅದರ ಮೌಲ್ಯವರ್ಧನೆಯಾಗುವಂತೆ ನೋಡಿಕೊಳ್ಳುವುದರಲ್ಲಿಯೇ ಶಿಕ್ಷಣ ವಲಯದ ಹೆಗ್ಗಳಿಕೆ ಇದೆ.

ಇದು ಯಾವಾಗ ಸಾಧ್ಯವಾಗುತ್ತದೆ ಎಂದರೆ ಓದುವ ಕಾಲಕ್ಕೇ ಜ್ಞಾನದ ಮೌಲ್ಯವರ್ಧನೆಯನ್ನು ಸಾಧ್ಯವಾಗಿಸುವಂಥ ವೃತ್ತಿಪರ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದಾಗ. ತಿಳಿದುಕೊಂಡದ್ದನ್ನು ಆ ಕ್ಷಣಕ್ಕೆ ಅನ್ವಯಿಸುವ ಶೈಕ್ಷಣಿಕ ವಾತಾವರಣ ರೂಪುಗೊಂಡಾಗ. ವಿದ್ಯಾರ್ಥಿಗಳ ಪುಸ್ತಕದ ಜ್ಞಾನ ಪ್ರಮಾಣ ಪತ್ರಗಳಿಂದ ದೃಢೀಕೃತವಾಗಬಹುದು.

ಹೀಗೆ ದೃಢೀಕೃತಗೊಂಡದ್ದು ಅಧಿಕೃತವಾಗಿ ಆಯಾ ಔದ್ಯೋಗಿಕ ಕ್ಷೇತ್ರಗಳಿಗೆ ಅನುಗುಣವಾಗಿ ಅನ್ವಯಿಸಲ್ಪಡಬೇಕು. ಜ್ಞಾನವು ಐದು ಪ್ರಶ್ನೆಗಳಾದ ಏನು, ಯಾವಾಗ, ಯಾರು, ಎಲ್ಲಿ, ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳನ್ನು ಆಧರಿಸಿರುತ್ತದೆ. ಹೇಗೆ ಎಂಬ ಪ್ರಶ್ನೆಯನ್ನು ದೃಷ್ಟಿಯಲ್ಲಿರಿಸಿಕೊಂಡ ಪಥದಲ್ಲಿ ಮುನ್ನಡೆದು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದಾಗ ಜ್ಞಾನವು ಪ್ರಯೋಜನಕಾರಿಯಾಗುತ್ತದೆ.
ಹೇಗೆ ಎಂಬ ಪ್ರಶ್ನೆ ಕೇಂದ್ರೀಕರಿಸಿಕೊಂಡು ಹೊಳೆಸಿಕೊಂಡ ಜ್ಞಾನವನ್ನು ಅನ್ವಯಿಕ ಕೌಶಲ್ಯವನ್ನಾಗಿಸಿ ಪೂರಕ ವೇದಿಕೆಗಳನ್ನು ಒದಗಿಸಿಕೊಡುವ ಮೂಲಗಳಾಗಿ ಶೈಕ್ಷಣಿಕ ಕೋರ್ಸ್‌ಗಳನ್ನು ಮಾರ್ಪಡಿಸುವ ಅಗತ್ಯವಿದೆ.

ಪ್ರಾಯೋಗಿಕ ಸ್ಪರ್ಶವಿಲ್ಲದ ಥಿಯರಿ ಮತ್ತು ಥಿಯರಿಯನ್ನು ಆಧರಿಸದ ಪ್ರಾಯೋಗಿಕತೆ ಎರಡೂ ಅಪ್ರಯೋಜಕ ಎಂಬುದನ್ನು ಈ ಹಂತದಲ್ಲಿ ಸ್ಪಷ್ಟಪಡಿಸಿಕೊಳ್ಳಬೇಕು. ಥಿಯರಿ ಮತ್ತು ಪ್ರಾಯೋಗಿಕತೆ ಎರಡನ್ನೂ ಸಂಯೋಜಿಸಿ ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯೆರೆಯುವ ಹೊಣೆಗಾರಿಕೆಯನ್ನು ಶ್ರದ್ಧೆಯಿಂದ ನಿಭಾಯಿಸಬೇಕಿದೆ.

ಮಾರುಕಟ್ಟೆಯ ಔದ್ಯೋಗಿಕ ನಿರೀಕ್ಷೆಗಳಿಗೆ ತಕ್ಕಂತೆ ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ನೆಲೆಗಟ್ಟಿನ ಶಿಕ್ಷಣ ಒದಗಿಸುವ ಪ್ರಯತ್ನ ವ್ಯಾಪಕವಾಗಬೇಕು. ಪದವಿ ಹಂತದಲ್ಲಿಯೇ ವೃತ್ತಿಪರತೆಯನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸುವಲ್ಲಿ ಈ ಮಾದರಿಯ ಶೈಕ್ಷಣಿಕ ಕೋರ್ಸ್‌ಗಳು ನೆರವಾಗುತ್ತವೆ. ತರಗತಿ ಕಲಿಕೆಗಿಂತ ಭಿನ್ನವಾದ ಪ್ರಯೋಜನಗಳನ್ನು ಒದಗಿಸಿಕೊಡುವ ಇಂಥ ಕೋರ್ಸ್‌ಗಳಿಗೆ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕು.

ಭಿನ್ನ ಹಾದಿ ತುಳಿದ SDM ಕಾಲೇಜು
ಇದೀಗ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಉಜಿರೆಯ ಎಸ್‌.ಡಿ.ಎಂ ಕಾಲೇಜು ಬದಲಾವಣೆಯನ್ನು ಸಾಧ್ಯವಾಗಿಸುವ ಪ್ರಯೋಗಗಳಲ್ಲಿ ನಿರತವಾದ ಕಾರಣದಿಂದಲೇ ಭಿನ್ನವಾದ ಮನ್ನಣೆ ಪಡೆದಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಈ ಕಾಲೇಜು ಇತ್ತೀಚೆಗೆ ಬಿ.ವೊಕೇಷನಲ್‌ ಕೋರ್ಸ್‌ಗಳನ್ನು ಆರಂಭಿಸಿ ಈ ಹಿಂದಿನ ಬಿ.ಎ, ಬಿ.ಕಾಮ್‌, ಬಿ.ಎಸ್‌.ಸಿ, ಬಿ.ಬಿ.ಎ ಮತ್ತು ಇತರ ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತ ಭಿನ್ನವಾದ ಹಾದಿ ತುಳಿದಿದೆ. ಈ ಹೊಸ ಕೋರ್ಸ್‌ಗಳು ಭಾರತದ ಎಲ್ಲೆಡೆಯಲ್ಲೂ ವ್ಯಾಪಕವಾಗಿ ಪರಿಚಯಿಸಲ್ಪಟ್ಟಿಲ್ಲ. ಕೌಶಲ್ಯಾಧಾರಿತ, ವೃತ್ತಿಪರ ಔದ್ಯೋಗಿಕ ವಲಯಕೇಂದ್ರಿತ ಶೈಕ್ಷಣಿಕ ಮಾದರಿಗಳಾಗಿ ಪರಿಚಯಿಸುವ ಪ್ರಯತ್ನ ಇದೀಗ ಆರಂಭವಾಗಿದೆ.
ಈ ಹೊಸ ಕೋರ್ಸ್‌ಗಳ ಸ್ವರೂಪವು ಶೇ.70ರಷ್ಟು ಪ್ರಾಯೋಗಿಕತೆ ಮತ್ತು ಶೇ.30ರಷ್ಟು ಥಿಯರಿಯೊಂದಿಗಿನ ಪಠ್ಯವನ್ನು ಆಧರಿಸಿದೆ. ಇಂಥ ಪಠ್ಯವು ವಿದ್ಯಾರ್ಥಿಗಳು ಔದ್ಯೋಗಿಕ ವಲಯವು ನಿರೀಕ್ಷಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

ಪ್ರವೇಶಾತಿ ಪಡೆಯುವ ಮತ್ತು ವ್ಯಾಸಂಗದಿಂದ ನಿರ್ಗಮಿಸುವ ಪ್ರಯೋಜನಕಾರಿ ಅವಕಾಶಗಳ ದೃಷ್ಟಿಯಿಂದ ಬಿ. ವೊಕೇಷನಲ್‌ ಕೋರ್ಸ್‌ ವಿಶಿಷ್ಠವಾಗಿದೆ. ವ್ಯಾಸಂಗ ನಿರತವಾಗಿರುವಾಗಲೇ ವಿದ್ಯಾರ್ಥಿಗೆ ವೃತ್ತಿಪರ ಅವಕಾಶ ಸಿಕ್ಕಾಗ ಕೋರ್ಸ್‌ನ್ನು ಅರ್ಧಕ್ಕೆ ನಿಲ್ಲಿಸಿ ವೃತ್ತಿರಂಗ ಪ್ರವೇಶಿಸಬಹುದು.

ಬಿ.ವೊಕೇಷನಲ್‌ ಕೋರ್ಸ್‌ ನಡಿ ಒಂದು ವರ್ಷ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗೆ ವಿಶ್ವವಿದ್ಯಾನಿಲಯವು ಡಿಪ್ಲೊಮಾ ಪ್ರಮಾಣ ಪತ್ರ ನೀಡುತ್ತದೆ. ಎರಡು ವರ್ಷಗಳ ಕಾಲ ವ್ಯಾಸಂಗ ಪೂರೈಸಿದ ವಿದ್ಯಾರ್ಥಿ ಅಡ್ವಾನ್ಸಡ್‌ ಡಿಪ್ಲೊಮಾ ಪ್ರಮಾಣ ಪತ್ರಕ್ಕೆ ಅರ್ಹನಾಗುತ್ತಾನೆ. ಮೂರೂ ವರ್ಷಗಳ ಅವಧಿಯ ಬಿ.ವೊಕೇಷನಲ್‌ ಕೋರ್ಸ್‌ ಅಧ್ಯಯನ ಪೂರ್ಣಗೊಳಿಸಿದರೆ ಪದವಿ ಪ್ರಮಾಣ ಪತ್ರ ಪಡೆಯುತ್ತಾನೆ.

ಮೂರು ಬಿ-ವೊಕೇಷನಲ್‌ ಕೋರ್ಸ್‌ಗಳು
ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಇದೀಗ ಶಿಕ್ಷಣ ಸಚಿವಾಲಯ)ವು ಬಿ.ವೊಕೇಷನಲ್‌ ಕೋರ್ಸ್‌ಗಳನ್ನು ಔದ್ಯೋಗಿಕತೆಯ ಪ್ರಮಾಣ ಹೆಚ್ಚಿಸುವ ಶೈಕ್ಷಣಿಕ ಕೋರ್ಸ್‌ಗಳನ್ನಾಗಿ ಗುರುತಿಸಿದೆ. ಉಜಿರೆಯ ಎಸ್‌.ಡಿ.ಎಂ ಕಾಲೇಜು ಸಾಫ್ಟ್ವೇರ್ ‌- ಆ್ಯಪ್‌ ಡೆವಲಪ್‌ಮೆಂಟ್‌, ಡಿಜಿಟಲ್‌ ಮೀಡಿಯಾ- ಫಿಲ್ಮ್ ಮೇಕಿಂಗ್‌ ಮತ್ತು ರಿಟೇಲ್‌-ಸಪ್ಲೈ ಚೇನ್‌ ಮ್ಯಾನೇಜ್‌ಮೆಂಟ್‌ ಶೀರ್ಷಿಕೆಯಡಿ ಮೂರು ಬಿ.ವೊಕೇಷನಲ್‌ ಕೋರ್ಸ್‌ಗಳನ್ನು ಆರಂಭಿಸಿದೆ. ಕಾಲಾತೀತ ಪ್ರಸ್ತುತತೆ, ತ್ವರಿತಗತಿಯ ಅಭಿವೃದ್ಧಿ ಮತ್ತು ವ್ಯಾಪಕ ಔದ್ಯೋಗಿಕತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕೋರ್ಸ್‌ಗಳಿಗೆ ಇಲ್ಲಿ ಆದ್ಯತೆ ನೀಡಲಾಗಿದೆ.

ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವ, ಆ ಮೂಲಕ ಬದ್ಧತೆಯೊಂದಿಗೆ ಕಾರ್ಯೋನ್ಮುಖವಾಗಿ ವೃತ್ತಿಪರ ಕೌಶಲ್ಯವನ್ನು ಸಾಬೀತುಪಡಿಸುವ ವಿದ್ಯಾರ್ಥಿಗಳ ವೃತ್ತಿಪರ ಸಮಗ್ರ ಸಾಮರ್ಥ್ಯದ ಸಾಧ್ಯತೆಗಳ ಆಧಾರದಲ್ಲಿ ಈ ಕೋರ್ಸ್‌ಗಳನ್ನು ರೂಪಿಸಲಾಗಿದೆ. ಇವುಗಳ ಸ್ವರೂಪವು ವಿದ್ಯಾರ್ಥಿಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಮತ್ತು ಅತ್ಯುತ್ತಮ ವೃತ್ತಿಪರತೆ ಮೆರೆಯುವ ಬದ್ಧತೆಯನ್ನು ರೂಢಿಸುವುದಕ್ಕೆ ಪೂರಕವಾದ ಹಲವು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.

ಸಾಂಪ್ರದಾಯಿಕ ಕೋರ್ಸ್ ಗಳಿಗಿಂತ ಭಿನ್ನ ವ್ಯಕ್ತಿಗತ ಕೌಶಲ್ಯಕ್ಕನುಗುಣವಾದ ಇಂಟರ್ನ್ಷಿಪ್‌ ಮತ್ತು ಔದ್ಯಮಿಕ ವಲಯದೊಂದಿಗಿನ ನಿರಂತರ ನಂಟಿನ ಮೂಲಕ ಈ ಸ್ವರೂಪವು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವುದಕ್ಕೆ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ. ಕಲಿತದ್ದನ್ನು ಅನ್ವಯಿಸಿಕೊಳ್ಳುವ, ನಿರ್ದಿಷ್ಟ ಔದ್ಯಮಿಕ ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡ ಈ ಬಿ. ವೊಕೇಷನಲ್‌ ಕೋರ್ಸ್‌ಗಳು ವಿದ್ಯಾರ್ಥಿಗಳನ್ನು ಸಮಗ್ರವಾಗಿ ಸನ್ನದ್ಧಗೊಳಿಸುತ್ತವೆ.

ಬಿ. ವೊಕೇಷನಲ್‌ ಕೋರ್ಸ್‌ಗಳನ್ನು ಪೂರೈಸಿದ ನಂತರ ಎಂ.ವೊಕೇಷನಲ್‌ ಕೋರ್ಸ್‌ಗಳನ್ನು ಆಯ್ದುಕೊಳ್ಳಬಹುದು. ಅಥವಾ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಲಭ್ಯ ಔದ್ಯೋಗಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ಪ್ರತಿಯೊಂದು ಬಿ.ವೊಕೇಷನಲ್‌ ಕೋರ್ಸ್‌ ಕೂಡಾ ಔದ್ಯೋಗಿಕ ಪಾತ್ರವನ್ನು ಆಧರಿಸಿದೆ. ಸದ್ಯದ ಅನಿವಾರ್ಯತೆಗಳನ್ನು ಗಮನದಲ್ಲಿರಿಸಿ ಕೊಂಡು ರೂಪಿತವಾಗಿರುವ ಈ ಬಿ. ವೊಕೇಷನಲ್‌ ಕೋರ್ಸ್‌ಗಳು ಹಿಂದಿನ ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತ ಭಿನ್ನವಾದ ಕಲಿಕಾ ಮಾದರಿಗಳೊಂದಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ.


– ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next