Advertisement

ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಸ್ಪೀಕರ್‌

09:53 PM Jun 14, 2019 | Team Udayavani |

ಸಕಲೇಶಪುರ: ತೀವ್ರ ಬರಪೀಡಿತ ಕೋಲಾರ ಜಿಲ್ಲೆಯ ಜನರಿಗೆ ಎತ್ತಿನಹೊಳೆ ಕಾಮಗಾರಿ ಬಗ್ಗೆ ಮನವರಿಕೆ ಮಾಡಿಸಲು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಖಾಸಗಿಯಾಗಿ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ ಎಂದು ವಿಧಾನಸಭೆ ಸ್ಪೀಕರ್‌ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಹೆಬ್ಬನಹಳ್ಳಿ, ಹೆಬ್ಬಸಾಲೆ, ಮತ್ತಿತರ ಕಡೆಗಳಿಗೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರು ಸುತ್ತಮುತ್ತಲಿನ ಬರಪೀಡಿತ ಜಿಲ್ಲೆಗಳ ಜನತೆಗೆ ನೀರು ಹರಿಸುವ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆ ಆರಂಭಿಸಲಾಗಿದೆ.

ಈ ನಿಟ್ಟಿನಲ್ಲಿ ತನ್ನ ಕ್ಷೇತ್ರವಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜನತೆಗೆ ಕಾಮಗಾರಿ ಬಗ್ಗೆ ಖುದ್ದಾಗಿ ಮನವರಿಕೆ ಮಾಡಿಸಲು ಕ್ಷೇತ್ರದ 3 ಹೋಬಳಿಗಳ ಪ್ರತಿ ಗ್ರಾಪಂಗೆ 8 ಜನರಂತೆ 3 ಬಸ್‌ಗಳಲ್ಲಿ ಒಟ್ಟು 150ಕ್ಕೂ ಹೆಚ್ಚು ಜನರನ್ನು ಕರೆ ತಂದು ಕಾಮಗಾರಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಜನರಲ್ಲಿ ನೀರು ದೊರಕುವ ಬಗ್ಗೆ ಒಂದು ಆಶಾಭಾವನೆ ಹುಟ್ಟಿದೆ.

ಯಾವುದೇ ರೀತಿಯ ರಾಜಕೀಯ ಗಿಮಿಕ್‌ ಮಾಡಲು ತಾನು ಜನರನ್ನು ಇಲ್ಲಿಗೆ ಕರೆತಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಕಷ್ಟದಲ್ಲಿರುವ ಜನರಿಗೆ ಕೂಡಲೇ ನೀರು ಹರಿಯಬೇಕಾಗಿದೆ. ಹಾಗೂ ಇಲ್ಲಿನ ಜನರಿಗೂ ಯಾವುದೇ ಅನ್ಯಾಯವಾಗಬಾರದು. ಮಲೆನಾಡಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

Advertisement

ಶ್ರೀನಿವಾಸಪುರದಿಂದ ಆಗಮಿಸಿದ್ದ ತಾಪಂ ಸದಸ್ಯ ಕೆ.ಕೆ.ಮಂಜು, ಕೋಲಾರ ಭಾಗದ ಜನ ಹನಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿಲ್ಲ. 10000 ಅಡಿಗಳಷ್ಟು ಆಳದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜನ ಪ್ರೇಕ್ಷಣಿಯ ಸ್ಥಳಗಳಿಗೆ ಸಂತೋಷಕ್ಕಾಗಿ ಹೋದರೆ ನಾವು ನೀರಿಗಾಗಿ ಇಲ್ಲಿಗೆ ಬಂದಿದ್ದೇವೆ.

ಇಲ್ಲಿನ ಕಾಮಗಾರಿ ನೋಡಿ ನಮಗೆ ಸಂತೋಷವಾಗಿದೆ. ರಮೇಶ್‌ ಕುಮಾರ್‌ರವರು ನಮ್ಮ ಭಾಗಕ್ಕೆ ನೀರು ಹರಿಸಲು ವ್ಯಾಪಕ ಶ್ರಮ ಪಡುತ್ತಿದ್ದಾರೆ. ಇಲ್ಲಿಂದ ನೀರು ನಮಗೆ ದೊರಕುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.

ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಅಧಿಕಾರಿ ಗಿರೀಶ್‌ ನಂದನ್‌, ಎತ್ತಿನಹೊಳೆ ಯೋಜನೆ ಅಧೀಕ್ಷಕ ಗುರುದತ್‌, ಕಾರ್ಯಪಾಲಕ ಅಭಿಯಂತರ ಜಯಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಧರ್‌, ಸತೀಶ್‌ ಮತ್ತಿತರರಿದ್ದರು.

ಪತ್ರಕರ್ತರು ಸೇರಿದಂತೆ ತಾಲೂಕು ಆಡಳಿತಕ್ಕೆ ಮಾಹಿತಿ ಇಲ್ಲ: ರಮೇಶ್‌ ಕುಮಾರ್‌ ಅವರು ಕ್ಷೇತ್ರದ ಜನರೊಡನೆ ಖಾಸಗಿಯಾಗಿ ಬಂದಿದ್ದರಿಂದ ಸ್ಥಳೀಯ ಆಡಳಿತಕ್ಕೆ ರಮೇಶ್‌ ಕುಮಾರ್‌ ಅವರು ಇಲ್ಲಿಗೆ ಬರುವ ಯಾವುದೇ ಮಾಹಿತಿ ಇರಲಿಲ್ಲ. ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಚಾಮರಾಜನಗರ ಗುಂಡ್ಲುಪೇಟೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಯುವಕನನ್ನು ಭೇಟಿ ಮಾಡಲು ಹೋಗಿದ್ದು ಖುದ್ದು ಶಾಸಕರಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲ.

ಸ್ಥಳೀಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ ಈ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಎತ್ತಿನಹೊಳೆ ಯೋಜನೆ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲದೆ ಅಂತಿಮವಾಗಿ ತರಾತುರಿಯಲ್ಲಿ ಸಿದ್ಧತೆ ನಡೆಸಿದರು. ಎತ್ತಿನಹೊಳೆ ಕಾಮಗಾರಿ ವ್ಯಾಪ್ತಿಯ ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಟನಲ್‌ ವೀಕ್ಷಿಸಲು ಶ್ರೀನಿವಾಸಪುರದ ಜನತೆ ಶಿಸ್ತಿನ ಸಿಪಾಯಿಗಳಂತೆ ನಡೆದು ಸಾಗಿದರು.

ಬೈರಗೊಂಡ್ಲುವಿನಿಂದ ಅವಳಿ ಜಿಲ್ಲೆಗೆ ನೀರು: ಸುಮಾರು 140 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ. ಟನಲ್‌ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 260 ಮೀಟರ್‌ನಷ್ಟು ನೀರನ್ನು ಒಂದು ಸಮಯದಲ್ಲಿ ಪಂಪ್‌ ಮಾಡಿ ಟನಲ್‌ ಮೂಲಕ ಗುರುತ್ವಾಕರ್ಷಣ ಶಕ್ತಿಯಲ್ಲಿ ಬೈರಗುಂಡ್ಲು ಸಮೀಪ ಹರಿಸಿ ಅಲ್ಲಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರನ್ನು ನೀಡಲಾಗುವುದು.

ಎತ್ತಿನಹೊಳೆ ಕಾಮಗಾರಿಯನ್ನು 2 ಹಂತದಲ್ಲಿ ಕೈಗೊಳ್ಳಲಾಗಿದ್ದು ಮೊದಲ ಹಂತದ ಪೈಪ್‌ ಲೈನ್‌ ಕಾಮಗಾರಿ ಶೇ.80 ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಗುರುತ್ವಾಕರ್ಷಣ ಮೂಲಕ ನೀರು ಕೊಡುವ ಕಾಮಗಾರಿ ಶೇ.46 ಮುಗಿದಿದ್ದು ಅತಿ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶ್ರೀನಿವಾಸಪುರ ಕ್ಷೇತ್ರದಿಂದ ಆಗಮಿಸಿದ್ದ ಎತ್ತಿನಹೊಳೆ ಯೋಜನೆ ಅಧೀಕ್ಷಕ ಗುರುದತ್‌ ಮಾಹಿತಿ ನೀಡಿದರು.

ಪತ್ರಕರ್ತರ ಪ್ರಶ್ನೆಗೆ ಸ್ಪೀಕರ್‌ ಉತ್ತರ
1. ರಾಜಕೀಯ ಗಿಮಿಕ್‌ಗಾಗಿ ತಾವು ಕ್ಷೇತ್ರದ ಜನರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಾ?
ಯಾವುದೇ ರಾಜಕೀಯ ಗಿಮಿಕ್‌ ಇಲ್ಲ. ಮಲೆನಾಡಿನ ಜನ ಉದಾರಿಗಳು ಇಲ್ಲಿನ ಜನ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದೆ ಕಾಮಗಾರಿ ನಡೆಯಲು ಸಹಕರಿಸಿದ್ದಾರೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇವೆ ಹಾಗೂ ಸದಾ ಈ ಭಾಗದ ಜನತೆಗೆ ಚಿರಋಣಿಯಾಗಿರುತ್ತೇವೆ ಎಂದರು.

2. ಎತ್ತಿನಹೊಳೆ ಯೋಜನೆಯಿಂದ ಮಲೆನಾಡಿಗೆ ರಸ್ತೆ ಬಿಟ್ಟರೆ ಬೇರೆ ಏನು ಉಪಯೋಗವಾಗಿಲ್ಲ. ಕಾಡಾನೆ ಸಮಸ್ಯೆ, ಗ್ರಂಥಾಲಯ, ಕ್ರೀಡಾಂಗಣ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಉದ್ಯಾನವನ ಕೊರತೆ ಮುಂತಾದ ಸಮಸ್ಯೆ ಇದ್ದೇ ಇದೆ?
ಈ ಬಗ್ಗೆ ಇಲ್ಲಿನ ಶಾಸಕರು ಗಮನಹರಿಸಬೇಕು.

3. ಸ್ವಾಮಿ, ನಾನು ಎತ್ತಿನಹೊಳೆ ಯೋಜನೆ ಭೂ ಸಂತ್ರಸ್ಥ. ಜಾಗ ಕಳೆದುಕೊಂಡಿದ್ದೇನೆ, ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸಿ.
ಯಾರೂ ಬಡವರಲ್ಲ. ಪ್ರತಿ ಯೋಜನೆ ಜಾರಿಗೆ ತರುವಾಗ ಆ ಪ್ರದೇಶದ ಸಂತ್ರಸ್ಥರ ಕುಟುಂಬಕ್ಕೆ ಉದ್ಯೋಗ ನೀಡಲು ಮೀಸಲಾತಿ ನೀಡಬಹುದಾಗಿದೆ. ಇದನ್ನು ಅನುಷ್ಠಾನಗೊಳಿಸಲು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಆದೇಶಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next