Advertisement

ಶಾಸಕರೇ, ಸದನದ ಗೌರವ ಕಾಪಾಡಿ

06:35 AM May 26, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್‌ ಪೀಠ ಅಲಂಕರಿಸಿದ ರಮೇಶ್‌ ಕುಮಾರ್‌, ಸದನದ ಎಲ್ಲಾ
ಶಾಸಕರಿಗೂ ಮೊದಲ ದಿನವೇ ನೀತಿ ಪಾಠ ಹೇಳಿ, ಸದನದ ಗೌರವ ಕಾಪಾಡುವಂತೆ ಮನವಿ ಮಾಡಿದರು.

Advertisement

ರಾಜಪ್ರಭುತ್ವವನ್ನು ಹೊಡೆದು ಹಾಕಿದ ಜನತೆ, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ
ಕಳುಹಿಸುತ್ತಾರೆ. ಶಾಸಕರು ಜನರ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಬೇಕು. ಬೇರಾವುದೇ ವಿಷಯಗಳಿಗೆ ಆದ್ಯತೆ
ನೀಡಬಾರದೆಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಸುಲಭವಾಗಿ ಬಂದಿಲ್ಲ. ಬ್ರಿಟನ್‌ ರಾಜವಂಶಸ್ಥರು ತಮ್ಮ ವಿಲಾಸಿ ಜೀವನಕ್ಕೆ ಜನರ ಮೇಲೆ
ಅನಗತ್ಯ ತೆರಿಗೆ ಹಾಕುವುದರ ವಿರುದ್ಧ ಅಲ್ಲಿನ ಪ್ರಜೆಗಳು ಪ್ರತಿನಿಧಿತ್ವ ಇಲ್ಲದೆ ತೆರಿಗೆ ಇಲ್ಲ ಎಂದು ಹೋರಾಟ ಮಾಡಿದ
ಫ‌ಲವಾಗಿ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು ಎಂದು ತಿಳಿಸಿದರು. ತಮ್ಮ ರಾಜಕೀಯ ಜೀವನದಲ್ಲಿ
ಮಾರ್ಗದರ್ಶಕರಾದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಎಚ್‌.ಡಿ.ದೇವೇಗೌಡ, ಹಿರಿಯ ಮುತ್ಸದ್ಧಿಗಳಾದ ಕೆ.ಎಚ್‌.ರಂಗನಾಥ್‌, ಬಸಲಿಂಗಪ್ಪ, ನಂಜೆಗೌಡರನ್ನು ನೆನೆದರು. ದೇವೇಗೌಡರು 1994ರಲ್ಲಿ ನಂಬಿಕಸ್ಥ ವ್ಯಕ್ತಿ ಬೇಕೆಂದು ಮೊದಲ ಬಾರಿಗೆ ಸ್ಪೀಕರ್‌ ಮಾಡಿದ್ದನ್ನು ನೆನೆದು, ಧನ್ಯತಾಭಾವ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರ ಒರಟುತನದ ಬಗ್ಗೆ, ಖರ್ಗೆಯವರ ಪಕ್ಷ ಹಾಗೂ ಕಾರ್ಯಕ್ಷಮತೆ ಬಗ್ಗೆ, ಸಿದ್ದರಾಮಯ್ಯ ಅವರ
ದೂರದೃಷ್ಠಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನೂತನ ಶಾಸಕರು ಆಯ್ಕೆ ಮಾಡಿದ ಜನರು ನೊಂದುಕೊಳ್ಳದಂತೆ ನಡೆದುಕೊಳ್ಳುವಂತೆ ಕಿವಿಮಾತು ಹೇಳಿದರು. ಇದೇ ವೇಳೆ ಸರ್ಕಾರಕ್ಕೂ ಕಿವಿ ಮಾತು ಹೇಳಿದ ಅವರು, ಆಡಳಿತ ಪಕ್ಷದ ದಾರಿ ಪಾರದರ್ಶಕವಾಗಿದ್ದರೆ, ಪ್ರತಿಪಕ್ಷದ ಮಾತು ಕಡಿಮೆಯಾಗುತ್ತದೆ. ಆಡಳಿತ ಪಕ್ಷ ಹೆಚ್ಚು ಜನಪರ ಯೋಜನೆಗಳನ್ನು ನಾಡಿನ ಜನರಿಗೆ ನೀಡಲಿ ಎಂದು ಆಶಿಸಿದರು.

ಸೋದರನ ನೆನೆದು ಭಾವುಕರಾದರು ತಾವು ತಮ್ಮ ದೊಡ್ಡಣ್ಣನ ಸಹಾಯದಿಂದ ಬೆಂಗಳೂರಿಗೆ ಬಂದು ಅವರ ಆಶ್ರಯದಲ್ಲಿ ಕಾಲೇಜು ಜೀವನ ನಡೆಸಿದ್ದನ್ನು, ತಮ್ಮ ಏಳಿಗೆಗೆ ಕುಟುಂಬದ ಪರಿಶ್ರಮ ನೆನೆದು ಸ್ಪೀಕರ್‌ 
ಭಾವುಕರಾದರು. ತಮ್ಮನ್ನು ಆರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಶ್ರೀನಿವಾಸಪುರ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

Advertisement

ಎರಡನೇ ಬಾರಿ ಸ್ಪೀಕರ್‌: ಬಿ.ವೈ.ವೈಕುಂಠ ಬಾಳಿಗಾ ಅವರ ನಂತರ ರಾಜ್ಯ ವಿಧಾನಸಭೆ ಸ್ಪೀಕರ್‌ ಆಗಿ 2ನೇ ಬಾರಿಗೆ ಆಯ್ಕೆಯಾದ ಹೆಗ್ಗಳಿಕೆ ರಮೇಶ್‌ಕುಮಾರ್‌ ಅವರದು.

ವೈಕುಂಠ ಬಾಳಿಗಾ ಅವರು 1962 ರಿಂದ 67 ಹಾಗೂ 1967 ರಿಂದ 68 ಅವಧಿಯಲ್ಲಿ ಎರಡು ಬಾರಿ ಸ್ಪೀಕರ್‌ ಆಗಿದ್ದರು. ರಮೇಶ್‌ ಕುಮಾರ್‌ ಅವರು 1994 ರಿಂದ 99 ರವರೆಗೆ ಜನತಾದಳ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದರು.
ಇದೀಗ, ಎರಡನೇ ಬಾರಿಗೆ ಸ್ಪೀಕರ್‌ ಆಗಿದ್ದಾರೆ.

ವಿಧಾನಸಭೆಯಲ್ಲಿ ಹಂಗಾಮಿ ಸ್ಪೀಕರ್‌ ಕೆ.ಜೆ.ಬೋಪಯ್ಯ ಅವರು ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದಾಗ ಸುರೇಶ್‌ ಕುಮಾರ್‌ ಅವರ ನಾಮಪತ್ರಕ್ಕೆ ಸೂಚಕರಾಗಿದ್ದ ಸುನಿಲ್‌ ಕುಮಾರ್‌, ಸದನದಲ್ಲಿ ಸ್ಪೀಕರ್‌ ಹುದ್ದೆಗೆ ಸುರೇಶ್‌ಕುಮಾರ್‌ ಹೆಸರನ್ನು ಸೂಚಿಸುವುದಿಲ್ಲ ಎಂದು ಹೇಳಿದರು.

ಸುರೇಶ್‌ಕುಮಾರ್‌ ಅದಕ್ಕೆ ಸಹಮತ ವ್ಯಕ್ತಪಡಿಸಿದರು. ನಂತರ ಕೆ.ಜಿ.ಬೋಪಯ್ಯ ಅವರು, ರಮೇಶ್‌ ಕುಮಾರ್‌ ಅವರ ಹೆಸರನ್ನು ಸ್ಪೀಕರ್‌ ಹುದ್ದೆಗೆ ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರು ರಮೇಶ್‌ ಕುಮಾರ್‌ ಅವರ ಹೆಸರನ್ನು
ಸೂಚಿಸಿದರು. ಪರಮೇಶ್ವರ್‌ ಅನುಮೋದಿಸಿದರು. ನಂತರ, ಅವರ ಹೆಸರನ್ನು ಮತಕ್ಕೆ ಹಾಕುವ ಮೊದಲೇ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಅವಿರೋಧ ಆಯ್ಕೆ ಎಂದು ಘೋಷಿಸುವಂತೆ ಮನವಿ ಮಾಡಿದರು.

ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಅವರು ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಸಮ್ಮಿಶ್ರ ಸರ್ಕಾರ ನಡೆಸುವುದು ನನಗೇನೂ ಕಷ್ಟವಲ್ಲ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ. ನಾನು ಮಂತ್ರಿಸ್ಥಾನದ ಆಕಾಂಕ್ಷಿಯಾಗಿರಲಿಲ್ಲ.
– ರಮೇಶ್‌ಕುಮಾರ್‌, ಸ್ಪೀಕರ್‌

ಅಭಿನಂದನಾ ನುಡಿ
ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ನೀವು ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದೀರಿ. ಈಗ ನಾನು
ಮುಖ್ಯಮಂತ್ರಿಯಾಗಿದ್ದಾಗಲೂ ನೀವೇ ಸಭಾಧ್ಯಕ್ಷರಾಗಿರುವುದು ನನ್ನ ಸುದೈವ. ಸದನದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ತಾವು ಕಾರ್ಯ ನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಗೌರವಾನ್ವಿತ ಸ್ಪೀಕರ್‌ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದೆವು. ನೀವು ಸರಳ ಸಜ್ಜನಿಕೆಯ ನಿಷ್ಠುರವಾದಿ ವ್ಯಕ್ತಿ. ಹೊಸ ಶಾಸಕರಿಗೆ ಹಾಗೂ ಪ್ರತಿಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೀರಿ ಎಂಬ ವಿಶ್ವಾಸ ಇದೆ.
– ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ

ಸಭಾಧ್ಯಕ್ಷರ ಸ್ಥಾನ ರಾಜಕೀಯೇತರ ಹುದ್ದೆ. ಸಭಾಧ್ಯಕ್ಷರು ಇನ್ನು ಮುಂದೆ ಯಾವುದೇ ಪಕ್ಷದ ಸದಸ್ಯರಲ್ಲ. ಕರ್ನಾಟಕ ವಿಧಾನಸಭೆ ದೇಶಕ್ಕೆ ಮಾದರಿಯಾಗಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮಂತಹ ಸಭಾಧ್ಯಕ್ಷರ ಅಗತ್ಯವಿದೆ.
– ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಇತ್ತೀಚಿನ ದಿನಗಳಲ್ಲಿ ಚರ್ಚೆಯ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಭಾವನೆ ಇದೆ.ಅದನ್ನು ಹೋಗಲಾಡಿಸಿ ಮತ್ತೆ ಹಳೆಯ ದಿನಗಳ ವೈಭವ ಮರುಕಳಿಸುವ ವಿಶ್ವಾಸ ಇದೆ.
– ಸಿದ್ದರಾಮಯ್ಯ,
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next