ನಂಜನಗೂಡು: ತಾಲೂಕಿನ ಕೌಲಂದೆ ಹೋಬಳಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾಗಿದ್ದ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯ ಕೊಳವೆಗಳನ್ನು ಬದಲಾಯಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಮಹದೇವ ನಗರದ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ದೋಷಪೂರಿತ ಕೊಳವೆ ಬದಲಾಯಿಸಿ ಪೂರ್ವ ಯೋಜನೆಯಂತೆ ಡಿಎ ಕೊಳವೆಗಳನ್ನು ಅಳವಡಿಸಲು ಯೋಜನೆ ಸಿದ್ಧಪಡಿಸಿ ಜುಲೈ 15ರೊಳಗೆ ತಮಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಏನಿದು ಯೋಜನೆ: 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ 18 ಕೋಟಿ ರೂ. ವೆಚ್ಚದಲ್ಲಿ ಕೌಲಂದೆ ಹೋಬಳಿಯ 55 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಕೆಲವು ವೈಫಲ್ಯಗಳಿಂದ ಕೂಡ್ಲಾಪುರ, ಬಾಗೂರು, ತರದಲೆ ಗ್ರಾಮಗಳಿಗೆ ಈ ಯೋಜನೆ ತಲುಪಿರಲಿಲ್ಲ. ಸಮೀಪದ ಗ್ರಾಮಗಳಿಗೂ ವಾರದಲ್ಲಿ ಒಂದು ದಿನ ನೀರು ಮಾತ್ರ ನೀರು ಸರಬರಾಜಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಹತ್ತು ವರ್ಷಗಳಾದರೂ ಸೂಸೂತ್ರವಾಗಿ ಕಾರ್ಯನಿರ್ವಹಿಸದ ಈ ಯೋಜನೆಯ ವೈಫಲ್ಯವನ್ನು ಶಾಸಕ ಹರ್ಷವರ್ಧನ್ ಸಚಿವರ ಗಮನಕ್ಕೆ ತಂದಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ಜಿಪಂ ಸಿಇಒ ಪ್ರಶಾಂತ್ ಮಿಶ್ರಾ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅತೀಕ್, ತಾಪಂ ಇಒ ಶ್ರೀಕಂಠರಾಜ ಅರಸು, ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿ ಚರಿತಾ ಮತ್ತು ಕೊಳ್ಳೇಗಾಲ ಶಾಸಕ ಮಹೇಶ್ ಇತರರಿದ್ದರು.