Advertisement

ಹಸಿರು ಮಾರ್ಗಕ್ಕೆ ಆರು ಬೋಗಿ ಭಾಗ್ಯ

06:44 AM Jan 29, 2019 | |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಈವರೆಗೆ ಮೂರು ಇದ್ದ ಆರು ಬೋಗಿಗಳ ರೈಲುಗಳ ಸಂಖ್ಯೆ, ಸೋಮವಾರದಿಂದ ದುಪ್ಪಟ್ಟಾಗಿದೆ. ಹಸಿರು ಮಾರ್ಗದ ಮಂತ್ರಿ ಸ್ಕ್ವೇರ್‌ ನಿಲ್ದಾಣದಲ್ಲಿ ಆರು ಬೋಗಿಗಳ ಮೂರು ರೈಲುಗಳ ಸೇವೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದರು.

Advertisement

ಕಳೆದ ಜೂನ್‌ನಿಂದ ಇದುವರೆಗೆ ವಿವಿಧ ಹಂತಗಳಲ್ಲಿ ಆರು ಬೋಗಿಗಳ ಮೂರು ರೈಲುಗಳು ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದವು. ಈಗ ಇದೇ ಮಾದರಿಯ ಮತ್ತೆ ಮೂರು ರೈಲುಗಳು ಸೇರ್ಪಡೆಗೊಂಡಿವೆ. ಈ ಪೈಕಿ ಆರು ಬೋಗಿಗಳ ನೇರಳೆ ಬಣ್ಣದ ಒಂದು ರೈಲನ್ನು ಹಸಿರು ಮಾರ್ಗಕ್ಕೆ ನಿಯೋಜಿಸಲಾಯಿತು. ಉಳಿದೆರಡು ರೈಲುಗಳು ನೇರಳಿ ಮಾರ್ಗಕ್ಕೆ ನಿಯೋಜನೆಗೊಂಡಿವೆ.

ಇದರಿಂದ ಆ ಮಾರ್ಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆಯಿತು. ಮೊದಲ ಬೋಗಿಯು ಮಹಿಳೆಯರಿಗೆ ಮೀಸಲಿರಲಿದೆ. ಹಸಿರು ಮಾರ್ಗಕ್ಕೂ ಈ ಹೆಚ್ಚುವರಿ ಬೋಗಿಗಳ ರೈಲು ಸೇವೆ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಇದಕ್ಕೆ ಪೂರಕವಾಗಿ ಡಿಸೆಂಬರ್‌ನಲ್ಲೇ ಈ ಹೆಚ್ಚುವರಿ ಬೋಗಿಗಳ ರೈಲು ಸೇವೆ ಆರಂಭಿಸುವ ಭರವಸೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ನೀಡಿತ್ತು. ಆದರೆ, ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ತಾಂತ್ರಿಕ ಕಾರಣಗಳಿಂದ ಸೇವೆ ಆರಂಭಿಸಲು ಒಂದು ತಿಂಗಳು ತಡವಾಯಿತು. ಮುಂದಿನ ದಿನಗಳಲ್ಲಿ ಉಳಿದ ಬೋಗಿಗಳು ಕೂಡ ತ್ವರಿತವಾಗಿ ಪೂರೈಕೆ ಆಗಲಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಶೇ.15ರಷ್ಟು ವಿದ್ಯುತ್‌ ಉಳಿತಾಯ: ಮೂರು ಬೋಗಿಗಳ ರೈಲು ಗರಿಷ್ಠ 800ರಿಂದ 900 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದೆ. ಆರು ಬೋಗಿಗಳ ರೈಲು ದುಪ್ಪಟ್ಟು ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಏಕಕಾಲದಲ್ಲಿ ಹೆಚ್ಚು ಜನರನ್ನು ಕೊಂಡೊಯ್ಯುವುದರಿಂದ ಶೇ.15ರಷ್ಟು ವಿದ್ಯುತ್‌ ಉಳಿತಾಯ ಆಗಲಿದೆ.

Advertisement

ತುರ್ತು ಸಂದರ್ಭಗಳಲ್ಲಿ ಹೊಸದಾಗಿ ಜೋಡಣೆ ಮಾಡಿದ ಹೆಚ್ಚುವರಿ ಬೋಗಿಗಳ (ಮೂರು) ಯೂನಿಟ್‌ ಅನ್ನು ಪ್ರತ್ಯೇಕಗೊಳಿಸಿ ಚಾಲನೆ ಮಾಡುವ ಸೌಲಭ್ಯವೂ ಇದರಲ್ಲಿದ್ದು, ಇದಕ್ಕಾಗಿ ಸ್ವಯಂಚಾಲಿತ ಪೆಂಡಂಟ್‌ ಕಂಟ್ರೋಲ್‌ ಆಪರೇಷನ್‌ ವ್ಯವಸ್ಥೆ ಅಳವಡಿಸಲಾಗಿದೆ. ಮಂತ್ರಿ ಸ್ಕ್ವೇರ್‌ ನಿಲ್ದಾಣದಲ್ಲಿ ಆರು ಬೋಗಿಗಳ ರೈಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ,

“ಈಗಾಗಲೇ ಇರುವ ಆರು ಬೋಗಿಗಳ ಮೂರು ಮೆಟ್ರೋ ರೈಲುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ಅವುಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಸಂಚಾರದಟ್ಟಣೆ ತಗ್ಗಿಸುವಲ್ಲಿ ಹಾಗೂ ಸಕಾಲಿಕವಾಗಿ ಸೇವೆ ನೀಡುವಲ್ಲಿ ಮೆಟ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ನಗರದ ಹೆಚ್ಚು ಜನ ಇದರ ಉಪಯೋಗ ಪಡೆಯಬೇಕು’ ಎಂದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಮತ್ತಿತರರು ಉಪಸ್ಥಿತರಿದ್ದರು. 

ಬಿಎಂಆರ್‌ಸಿಎಲ್‌ನಿಂದ ಆದ ಲೋಪವಲ್ಲ: ಎಸ್ಕಲೇಟರ್‌ನಿಂದ ಬಾಲಕಿ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರು ಮೆಟ್ರೋ ನಿಗಮದಿಂದ ಆದ ಲೋಪವಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಭಾನುವಾರ ನಡೆದದ್ದು ಒಂದು ಆಕಸ್ಮಿಕ ಘಟನೆ. ಅದೇ ರೀತಿ, ಈ ಹಿಂದೆ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯಲ್ಲೂ ನಿಗಮದ ಲೋಪವಿಲ್ಲ.

ಆದಾಗ್ಯೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜತೆಗೆ ಪ್ರಯಾಣಿಕರು ಕೂಡ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮಕ್ಕಳನ್ನು ಕರೆದೊಯ್ಯುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದೂ ಸಿಎಂ ಮನವಿ ಮಾಡಿದರು.  

ಭಾರತ್‌ ಅರ್ಥ್ ಮೂವರ್ ಲಿ., (ಬಿಇಎಂಎಲ್‌), ಆರು ಬೋಗಿಗಳ ಮೊದಲ ಮೆಟ್ರೋ ರೈಲನ್ನು ಬಿಎಂಆರ್‌ಸಿಗೆ ಹಸ್ತಾಂತರಿಸಿ ಬರುವ ಫೆಬ್ರವರಿಗೆ ಒಂದು ವರ್ಷ ತುಂಬುತ್ತದೆ. ಈ ಅವಧಿಯಲ್ಲಿ ಇದುವರೆಗೆ ಒಟ್ಟಾರೆ 11 ಯೂನಿಟ್‌ (3 ಬೋಗಿಗೆ 1 ಯೂನಿಟ್‌)ಗಳನ್ನು ಪೂರೈಸಿದ್ದು, ಆ ಪೈಕಿ ಆರು ಕಾರ್ಯಾಚರಣೆ ಮಾಡುತ್ತಿವೆ. 

ಉಳಿದ 49 ಯೂನಿಟ್‌ ಅಂದರೆ 147 ಬೋಗಿಗಳನ್ನು 2019ರ ಜೂನ್‌ ಅಂತ್ಯದೊಳಗೆ ಪೂರೈಸುವುದಾಗಿ ಭರವಸೆ ನೀಡಿದೆ. ಅದರಲ್ಲಿ ಈಗ 33 ಬೋಗಿಗಳನ್ನು ಹಸ್ತಾಂತರಿಸಲಾಗಿದೆ. ಉಳಿದವುಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ.

6 ಬೋಗಿ ರೈಲು ಲೋಕಾರ್ಪಣೆಗೊಂಡ ದಿನಗಳು
-ಮೊದಲ ರೈಲು    2018ರ ಜೂ.2
-ಎರಡನೇ ರೈಲು    2018ರ ಅ.4
-ಮೂರನೇ ರೈಲು    2018ರ ನ.22
-ಒಟ್ಟಿಗೆ ಮೂರು ರೈಲು    2019ರ ಜ. 28

Advertisement

Udayavani is now on Telegram. Click here to join our channel and stay updated with the latest news.

Next