Advertisement

ನಿಸರ್ಗ ಸಿರಿಯ ಪಲಿಮಾರು ಮೂಲ ಮಠ

03:01 PM Jan 13, 2018 | |

ಉಡುಪಿ: ಶ್ರೀಕೃಷ್ಣ ಪೂಜಾ ಪರ್ಯಾಯದ ಸಂಭ್ರಮದಲ್ಲಿರುವ ಪಲಿಮಾರಿನ ಮೂಲ ಮಠವಿರುವುದು ಉಡುಪಿ ತಾಲೂಕಿನ ಪಲಿಮಾರಿನಲ್ಲಿ. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿಯಿಂದ ಕಾರ್ಕಳ ರಸ್ತೆಯಲ್ಲಿ 5 ಕಿ.ಮೀ. ಕ್ರಮಿಸಿದಾಗ ಸಿಗುವ ಅಡ್ವೆ ತಿರುವಿನಿಂದ ಬಲಕ್ಕೆ 3 ಕಿ.ಮೀ. ಸಾಗಿದರೆ ಪಲಿಮಾರು ಇದೆ. ಅಲ್ಲೇ ಇದೆ ಪಲಿಮಾರು ಮೂಲ ಮಠ. 

Advertisement

ರಸ್ತೆಯ ಇಕ್ಕೆಲಗಳಲ್ಲಿ ತೆಂಗಿನ ತೋಟಗಳು, ಅಡಿಕೆ, ಬಾಳೆ ತೋಟಗಳ ನಿಸರ್ಗದ ಒಂದು ಪಾರ್ಶ್ವದಲ್ಲಿ ಶಾಂಭವಿ ನದಿ ಹರಿಯುತ್ತದೆ. ಮಠದ ಮುಂಭಾಗದಲ್ಲಿ ಸುಂದರ ಉದ್ಯಾನ, ಮಠದ ಹೆಬ್ಟಾಗಿಲು, ಅತಿ ಪುರಾತನ ಹೆಂಚಿನ ಛಾವಣಿಯ ಮಠದ ಒಳಗೆಲ್ಲ ದಾರು ಶಿಲ್ಪದ ಕುಸುರಿ ಕೆತ್ತನೆಗಳು ನೋಡುಗರ ಗಮನ ಸೆಳೆಯುತ್ತವೆ. ಮಠಕ್ಕೆ ಪೂರ್ವ ಹಾಗೂ ಪಶ್ಚಿಮ ದ್ವಾರದ ಮೂಲಕ ಒಳ ಪ್ರವೇಶಿಸಬಹುದು. ಮಠದ ಹಳೆಯ ಕಂಬ, ತೊಲೆ, ದಾರಂದಗಳೆಲ್ಲ ಕಲಾಕಾರನ ಕಾವ್ಯಕೆತ್ತನೆಯ ಕೈಗನ್ನಡಿಯಂತಿದೆ.

ಮಠದಲ್ಲಿ ಅನಾದಿ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದ 12 ಎಸಳು ಪದ್ಮದ ಮೇಲೆ ಕುಳಿತ ಭಂಗಿಯ ಪಂಚಲೋಹದ ವೇದವ್ಯಾಸ ಮೂರ್ತಿ ಕೈಗಳಲ್ಲಿ ಶಂಖ, ಚಕ್ರ. ವಜ್ರ ಚಿಹ್ನೆ ಇದೆ. ವಕ್ಷಸ್ಥಳದಲ್ಲಿ ಲಕ್ಷ್ಮೀಯನ್ನೊಳಗೊಂಡ ಅಪರೂಪದ ಮೂರ್ತಿ ಒಂದೂವರೆ ಅಡಿ ಎತ್ತರವಿದೆ. ಮಠದ ಪೂರ್ವ ಭಾಗದಲ್ಲಿ ವೇದವ್ಯಾಸ ತೀರ್ಥ ಪುಷ್ಕರಿಣಿಯಿದೆ. ಪಕ್ಕದಲ್ಲೇ ಮುಖ್ಯಪ್ರಾಣ ದೇವರ ಗುಡಿಯಿದೆ. ಶ್ರೀ ವಿದ್ಯಾಮಾನ್ಯರ ಗುರುಗಳಾದ ಶ್ರೀ ರಘುಮಾನ್ಯತೀರ್ಥರು ಪಲಿಮಾರನ್ನು ಆದರ್ಶ ಗ್ರಾಮವನ್ನಾಗಿ ಪರಿವರ್ತಿಸಿದ ಸುಧಾರಕರು. ಶ್ರೀ ವಿದ್ಯಾಮಾನ್ಯತೀರ್ಥರ ಮಾರ್ಗದರ್ಶನ ದಲ್ಲಿ ಶ್ರೀ ವಿದ್ಯಾಧೀಶತೀರ್ಥರು ಮಠದ ಸರ್ವಾಂಗೀಣ ಅಭಿವೃದ್ಧಿಪಡಿಸಿ 1989ರಲ್ಲಿ ಯೋಗದೀಪಿಕಾ ಗುರುಕುಲ ಪ್ರಾರಂಭಿಸಿದರು. ಇಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತಾಧ್ಯಯನ, ಪೌರೋಹಿತ್ಯ, ಜ್ಯೋತಿಷ್ಯ, ವೇದಾಂತ, ತಂತ್ರಾಗಮ ಮತ್ತು ವೇದಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯುತ ಶಿಕ್ಷಣ ನೀಡಲಾಗುತ್ತಿದೆ. ಸದ್ಯ 55 ಮಕ್ಕಳು ಸಂಸ್ಕೃತ ವೇದಾಧ್ಯಯನ ಮಾಡುತ್ತಿದ್ದಾರೆ. 

ಇಲ್ಲಿನ ಮುಖ್ಯಪ್ರಾಣ ದೇವರು ಇಡೀ ಊರಿನ ಆರಾಧ್ಯದೈವ. ತಮ್ಮ ಬೇಡಿಕೆಯ ಅಪೇಕ್ಷೆ ತೀರಿಸಲು ಪ್ರಾಣದೇವರಿಗೆ ರಂಗಪೂಜೆ ವಿಶೇಷ ಸೇವೆ. ಪಲಿಮಾರು ಮಠ ಪರಂಪರೆಯ 24ನೆಯ ರಘುಪ್ರವೀರ ತೀರ್ಥರು ಹುಲಿಕೊಂದ ಸ್ವಾಮಿಯೆಂದೇ ಪ್ರಖ್ಯಾತರು. ಅವರು ಸನ್ಯಾಸ ಸ್ವೀಕರಿಸಿದ ಆರಂಭದಲ್ಲಿ ದಡ್ಡರಾಗಿ, ಮಾತು ಉಗ್ಗುತ್ತಿತ್ತಂತೆ. ಜನರ ಲಘು ಮಾತುಗಳಿಂದ ಬೇಸತ್ತ ಅವರು ಘಟಿಕಾಚಲಕ್ಕೆ ತೆರಳಿ 48 ದಿನಗಳ ಕಾಲ ತಪಸ್ಸನ್ನಾಚರಿಸಿದರು. 48ನೆಯ ದಿನ ಸ್ವಪ್ನದಲ್ಲಿ ಮಂಗವೊಂದು ಬಾಯಲ್ಲಿ ಉಗುಳಿದಂತಾಯ್ತು. ಎರಡು ಬೆಟ್ಟದಲ್ಲಿ ಒಂದರಲ್ಲಿ ನರಸಿಂಹ, ಇನ್ನೊಂದರಲ್ಲಿ ಪ್ರಾಣದೇವರು ಕಂಡು ಬಂದರು. ಸ್ವಪ್ನದಲ್ಲಿ ಕೋತಿಯೊಂದು ನನ್ನ ಪ್ರತೀಕ ಸರೋವರದಲ್ಲಿದೆ, ಅದನ್ನು ಪ್ರತಿಷ್ಠಾಪಿಸಲು ಮಾತನಾಡಿದಂತೆ. ಮರು ದಿನ ಸರೋವರದಲ್ಲಿ ಮುಳುಗಿದಾಗ ಪ್ರಾಣದೇವರ ಸುಂದರ ಮೂರ್ತಿ ಗೋಚ ರಿಸಿತು. ಶ್ರೀರಘುಪ್ರವೀರತೀರ್ಥರು ಪ್ರಾಣ ದೇವರನ್ನು ಪ್ರತಿಷ್ಠಾಪಿಸಿದರು. ಘಟಿಕಾ ಚಲದಲ್ಲಿದ್ದ ಪ್ರಾಣದೇವರ ಚತುಭುìಜ, ಪದ್ಮಾಸನಸ್ಥ ಪ್ರತಿಮೂರ್ತಿಯನ್ನು ಪಲಿ ಮಾರಿನಲ್ಲಿ ಪ್ರತಿಷ್ಠಾಪಿಸಲಾಯಿತು.

ಪ್ರಾಣದೇವರ ಗುಡಿಯ ಬಲ ಪಾರ್ಶ್ವದಲ್ಲಿ  ವಿದ್ಯಾಮಾನ್ಯತೀರ್ಥರ ಶಿಲಾಮಯ ವೃಂದಾವನವನ್ನು  ನಿರ್ಮಿಸಲಾಗಿದೆ. ವೃಂದಾವನದ ಸುತ್ತಲೂ 24 ಮೂರ್ತಿಗಳ ಕೆತ್ತನೆ, ತಿರುಪತಿ ತಿಮ್ಮಪ್ಪ, ಬದರಿನಾರಾಯಣ, ಶ್ರೀರಂಗ, ಉಡುಪಿ ಕೃಷ್ಣನ ಮೂರ್ತಿಗಳನ್ನು ಕೆತ್ತಲಾಗಿದೆ. ಪರಂಪರೆಯ ಯತಿಗಳ ವೃಂದಾವನವೂ ಇಲ್ಲಿದೆ. ಪ್ರತಿವರ್ಷ ಹನುಮ ಜಯಂತಿ, ಶ್ರೀ ವಿದ್ಯಾಮಾನ್ಯ ಆರಾಧನೆ, ಗುರುಕುಲ ವಾರ್ಷಿಕೋತ್ಸವ, ರಾಜರಾಜೇಶ್ವರ ಪ್ರಶಸ್ತಿ ಪ್ರದಾನ ನಡೆಯುತ್ತದೆ. ಮಠದ ಪರಿಸರದಲ್ಲಿ  ಶ್ರೀ ಸುಬ್ರಹ್ಮಣ್ಯ ದೇವರ ಗುಡಿಯಿದೆ. ಮಠದ ಆಡಳಿತದಲ್ಲಿ (ಧರ್ಮ) ಚಾವಡಿ ಮಹಾಲಿಂಗೇಶ್ವರ ಪಾರ್ವತಿ-ಗಣಪತಿ ದೇವಸ್ಥಾನ (ಮೂಡು ಪಲಿಮಾರು), ಪುರಾತನ ವಿಷ್ಣುಮೂರ್ತಿ ದೇವಸ್ಥಾನ ಇದೆ.  

Advertisement

ಗುರುಕುಲದ ಗ್ರಂಥಾಲಯದಲ್ಲಿ ಸಹಸ್ರಾರು ಸಂಸ್ಕೃತಾಧ್ಯಯನ ಉದ್ಗ›ಂಥಗಳ ಸಂಗ್ರಹವಿದೆ. ಉಡುಪಿ ಪಲಿಮಾರು ಮಠದ ತತ್ವಸಂಶೋಧನ ಸಂಸತ್‌ನಲ್ಲಿ 100ಕ್ಕೂ ಅಧಿಕ ಮಹಾಭಾರತ, ಹರಿವಂಶ ಕನ್ನಡ ಅರ್ಥದ ತಾಡಪತ್ರೆ ಕೃತಿಗಳಿವೆ. ಶ್ರೀವಿದ್ಯಾಧೀಶತೀರ್ಥ ಶ್ರೀಗಳವರು 2002ರಲ್ಲಿ ಸರ್ವಮೂಲ ಧಾರ್ಮಿಕ, ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದು ನಿರಂತರ ಪ್ರಕಟಗೊಳ್ಳುತ್ತಿದೆ. ಶ್ರೀಗಳವರು ಅದಮಾರು ಮಠದ ಕಿರಿಯ ಪಟ್ಟದ ಶ್ರೀ ಈಶಪ್ರಿಯತೀರ್ಥರಿಗೆ ವೇದಾಂತ ಶಾಸ್ತ್ರಗಳ ಪಾಠ ನಡೆಸುತ್ತಿದ್ದಾರೆ.  
ಸಾಂತೂರು ಶ್ರೀನಿವಾಸ ತಂತ್ರಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next