Advertisement

ಕ್ರಮಬದ್ಧವಲ್ಲದ ಆಸ್ತಿ: ವಿನಾಯಿತಿ ಮೂಲಕ ಸಿಗಲಿದೆ 9/11

10:45 AM Nov 16, 2018 | |

ಮಂಗಳೂರು: ಗ್ರಾಮ ಪಂಚಾಯತ್‌ಗಳು ನೀಡಿರುವ ಲೈಸನ್ಸ್‌ ಪಡೆದು ಖಾಯಂ ಆಗಿ ಈಗಾಗಲೇ ಮನೆ ನಿರ್ಮಿಸಿಕೊಂಡಿರುವ ಆಸ್ತಿಗಳಿಗೆ ಒಂದು ಬಾರಿಗೆ ಏಕನಿವೇಶನ ನಕ್ಷೆ ಅನುಮೋದನೆಯಿಂದ ವಿನಾಯಿತಿ ನೀಡಿ ನಮೂನೆ 9 ಹಾಗೂ 11ಎ ವಿತರಿಸಲು ಸರಕಾರ ತೀರ್ಮಾನಿಸಿದೆ. ಇದರಿಂದಾಗಿ ಕರಾವಳಿ ಭಾಗದಲ್ಲಿ 9/11ಗಾಗಿ ಕಾದಿರುವ ಸಾವಿರಾರು ಜನರಿಗೆ ಲಾಭವಾಗುವ ನಿರೀಕ್ಷೆಯಿದೆ. 

Advertisement

2013ರ ಜೂ.14ಕ್ಕಿಂತ ಹಿಂದೆ ಸೃಷ್ಟಿಯಾಗಿರುವ ಮತ್ತು ಖಾಯಂ ಆಗಿ ಈಗಾಗಲೇ ಮನೆ ನಿರ್ಮಾಣ ಆಗಿರುವ ಆಸ್ತಿಗಳನ್ನು ಹೊಸ ಆಸ್ತಿಗಳ ವರ್ಗಿಕರಣದಡಿ ಗುರುತಿಸಲು, ಈ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ.ಗಳು ನೀಡಿರುವ ಲೈಸೆನ್ಸ್‌ ಪ್ರತಿ ಅಪ್‌ಲೋಡ್‌ ಮಾಡಲು ಹಾಗೂ ಇಂತಹ ಆಸ್ತಿಗಳಿಗೆ ಈಗಾಗಲೇ ನೀಡಿರುವ ನಮೂನೆ 11ಬಿಗಳನ್ನು ನಮೂನೆ-9 ಆಗಿ ಪರಿವರ್ತಿಸಿ ಹೊಸ ಆಸ್ತಿಗಳ ವರ್ಗಿàಕರಣದಡಿ ಸೇರಿಸಲು ಇ-ಸ್ವತ್ತು ತಂತ್ರಾಂಶದಲ್ಲಿ ತುರ್ತಾಗಿ ಬದಲಾವಣೆ ಮಾಡಬೇಕು ಎಂದು ಸರಕಾರ ತೀರ್ಮಾನಿಸಿತ್ತು. ಇದರಂತೆ ಗ್ರಾ.ಪಂ. ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿ ಇ-ಸ್ವತ್ತು ತಂತ್ರಾಂಶದ ಮೂಲಕ ಬದಲಾವಣೆ ಮಾಡಿ ನಮೂನೆ 9 ಹಾಗೂ 11ಎ ನೀಡುವಂತೆ ಈಗ ಆದೇಶಿಸಲಾಗಿದೆ. 

2013ಕ್ಕಿಂತ ಹಿಂದೆ ಕಟ್ಟಡವಿದ್ದ ಜಾಗಕ್ಕೆ 9/11 ನೀಡಲು ಆಗುತ್ತಿರಲಿಲ್ಲ. ಅದನ್ನು ಏಕ ನಿವೇಶನ ಮಂಜೂರಾತಿ ಮಾಡಲೂ ಆಗುತ್ತಿರಲಿಲ್ಲ. ಕಟ್ಟಡವಿರುವ ಕಾರಣ ನೀಡಿ ಮುಡಾ, ನಗರ ಹಾಗೂ ಗ್ರಾಮಾಂತರ ಇಲಾಖೆ ಇಂತಹವಕ್ಕೆ 9/11 ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡುತ್ತಿತ್ತು. ಹೀಗಾಗಿ ಅಂಥವರಿಗೆ 11ಬಿಯನ್ನೇ ನೀಡಲಾಗುತ್ತಿತ್ತು. ಆ ಭೂಮಿ ಬಗ್ಗೆ ಎಲ್ಲ ದಾಖಲೆ ಗಳು ಇದ್ದರೂ 9/11 ಸಿಗುತ್ತಿರಲಿಲ್ಲ. 11ಬಿ ಇದ್ದವರಿಗೆ ಹಿಂದೆ ಬ್ಯಾಂಕ್‌ ಸಾಲ ಸಿಗುತ್ತಿತ್ತಾದರೂ “ಕಾವೇರಿ’ ಸಾಫ್ಟ್ವೇರ್‌ನಲ್ಲಿ ಬದಲಾವಣೆ ತಂದ ಬಳಿಕ ಅದಕ್ಕೆ ಮಾನ್ಯತೆ ಇಲ್ಲವಾಗಿತ್ತು.

ಇದಕ್ಕಾಗಿ ಸಂಬಂಧಿತ ಭೂಮಿ/ಕಟ್ಟಡದ ವ್ಯಕ್ತಿಯ ಎಲ್ಲ ದಾಖಲೆಗಳನ್ನು ಗ್ರಾ.ಪಂ.ಗೆ ನೀಡಿ 9/11 ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ 11ಬಿ ಪಡೆದವರು ಏಕ ನಿವೇಶನ ಅನುಮೋದನೆಯಿಲ್ಲದೆ 9/11 ಪಡೆಯಲು ಅವಕಾಶವಿದೆ ಎನ್ನಲಾಗಿದೆ.

ದ.ಕ., ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ “ಇ-ಸ್ವತ್ತು’ ಹಾಗೂ “ಕಾವೇರಿ’ ತಂತ್ರಾಂಶಗಳು ಡಿಲಿಂಕ್‌ ಆದಾಗಿನಿಂದ ಲಿಂಕ್‌ ಆಗುವ ನಡುವೆ ನೋಂದಣಿಯಾದ ಆಸ್ತಿಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಸರಕಾರ ಆಗಿಂದಾಗ್ಗೆ ಸೂಚನೆ- ನಿರ್ದೇಶನ ನೀಡುತ್ತಲೇ ಬಂದಿದೆ. ಆದರೆ ಜನರ ಸಮಸ್ಯೆಗಳು ಪರಿಹಾರ ಕಾಣುತ್ತಲೇ ಇಲ್ಲ. ಸರಕಾರದಿಂದ ತಿಂಗಳಿಗೊಂದು ಆದೇಶ/ ಸುತ್ತೋಲೆ ಬಂದ ಮಾತ್ರಕ್ಕೆ ವ್ಯವಸ್ಥೆ ಸರಿಯಾಗು ವುದಿಲ್ಲ. ಗ್ರಾಮಾಂತರ ಜನರ ನೈಜ ಸಮಸ್ಯೆ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೆಳ್ತಂಗಡಿಯ ಕೃಷಿಕ ತಮ್ಮಣ್ಣ ಅಭಿಪ್ರಾಯಪಡುತ್ತಾರೆ.

Advertisement

ಪರಿಶೀಲಿಸಿ ಕ್ರಮ
ಗ್ರಾ.ಪಂ. ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದಲ್ಲಿ ಸರಕಾರ ಬದಲಾವಣೆ ಸೂಚಿಸಿದೆ. ದ.ಕ. ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿ ಪರಿಶೀಲಿಸಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು.
ಡಾ| ಸೆಲ್ವಮಣಿ ಆರ್‌.  ಜಿ.ಪಂ. ಸಿಇಒ, ದ.ಕ.
 
ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next