Advertisement

ದೃಷ್ಟಿ ದೇವರು ನೀಡಿದ ಅಮೂಲ್ಯ ಕೊಡುಗೆ: ವಿನಯಕುಮಾರ

06:18 PM Jan 19, 2024 | Team Udayavani |

ಉದಯವಾಣಿ ಸಮಾಚಾರ
ಬ್ಯಾಡಗಿ: ದೃಷ್ಟಿ ದೇವರು ನೀಡಿದ ಅಮೂಲ್ಯ ಕೊಡುಗೆ, ಆದರೆ ಇಂದಿನ ಜೀವನ ಶೈಲಿ ನಮ್ಮ ಕಣ್ಣುಗಳನ್ನು ಅತೀ ಚಿಕ್ಕ ವಯಸ್ಸಿಗೆ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತಿವೆ. ಕೆಲಸದ ಒತ್ತಡ ಸೇರಿದಂತೆ ಮನೋರಂಜನೆಗೆ ಬಳಸಲಾಗುತ್ತಿರುವ ಟಿವಿ, ಮೊಬೈಲ್‌, ಕಂಪ್ಯೂಟರ್‌ಗಳಂತಹ ಆಧುನಿಕ  ಉಪಕರಣಗಳು ನಮ್ಮ ದೃಷ್ಟಿ ಕಸಿದುಕೊಳ್ಳುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಖೇದ ವ್ಯಕ್ತಪಡಿಸಿದರು.

Advertisement

ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಎಸ್‌ಜೆಜೆಎಂ ಸರ್ಕಾರಿ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದ ಸೌಂದರ್ಯ ಆನಂದಿಸಲು ದೇವರು ನಮಗೆ ಕಣ್ಣು ನೀಡಿದ್ದಾನೆ. ಕಣ್ಣುಗಳಿಗೂ ವ್ಯಾಯಾಮ ಮತ್ತು ಅದರ ಸರಿಯಾದ ಕಾರ್ಯ ನಿರ್ವಹಣೆಗೆ ವಿಶ್ರಾಂತಿಬೇಕು ಎಂಬುದನ್ನು ಮರೆಯುತ್ತಾರೆ. ಕಣ್ಣುಗಳ ಆರೋಗ್ಯ ಮತ್ತು ಯೋಗ ಕ್ಷೇಮದ ಕುರಿತು ನಾವು ನಿಷ್ಕಾಳಜಿ ತೋರುವಂತಿಲ್ಲ, ದೇಹದಲ್ಲೇ ಅತ್ಯಂತ ಸೂಕ್ಷ್ಮವಾದ ಅಂಗವಾಗಿರುವ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ತೋರುವಂತೆ ಕರೆ ನೀಡಿದರು.

ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯೆ ಕೃತಿಕಾ ಮಾತನಾಡಿ, ಮುದ್ರಣದಿಂದ ಬರುವಂತಹ ಸಣ್ಣ ಅಕ್ಷರಗಳನ್ನು ಕಷ್ಟಪಟ್ಟು ಓದುವುದನ್ನು ತಪ್ಪಿಸಬೇಕು. ಸ್ನಾನದ ಸಮಯದಲ್ಲಿ ತಲೆಯ ಮೇಲೆ ಬಿಸಿ ನೀರನ್ನು ಸುರಿದುಕೊಳ್ಳಬೇಡಿ. ಇದರಿಂದ ಕಣ್ಣಿನಲ್ಲಿರುವ ಶಕ್ತಿ ಕುಂಠಿತಗೊಳ್ಳಲಿದೆ. ಕನಿಷ್ಟ 10 ಅಡಿ ದೂರದಿಂದ ಟಿವಿ ವೀಕ್ಷಿಸಬೇಕು.

ದೀರ್ಘ‌ ಕಾಲದ ಕಂಪ್ಯೂಟರ್‌ ಬಳಕೆಯನ್ನು ನಿಲ್ಲಿಸಬೇಕು, ಕಡಿಮೆ ಬೆಳಕಿರುವ ಕಡೆಯಲ್ಲಿ ಕುಳಿತು ಓದುವುದು ಕಣ್ಣಿನ ಆರೋಗ್ಯಕ್ಕೆ ಸರಿಯಾದ ಕ್ರಮಗಳಲ್ಲ. ವಯೋ ಸಹಜವಾಗಿ ಬರುವಂತಹ ಕಣ್ಣಿನ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಅಥವಾ ಉಚಿತ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

Advertisement

ತಾಲೂಕು ಸಾರ್ವಜನಿಕ ಆಸ್ಪತ್ರೆ ನೇತ್ರ ತಜ್ಞರಾದ ಮಲ್ಲಿಕಾರ್ಜುನ ಮಾತನಾಡಿ, ವೈದ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆಗಳನ್ನು ನೀಡುತ್ತಿದ್ದಾರೆ ಇದೆಲ್ಲದರ ಉಪಯೋಗವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಶಿಬಿರದಲ್ಲಿ ಸುಮಾರು 172 ಜನರು ಉಚಿತ ಚಿಕಿತ್ಸೆ ಪಡೆದು, ಇದರಲ್ಲಿ 98 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.

ಉಪನ್ಯಾಸಕ ಡಿ.ಬಿ. ಕುಸಗೂರ, ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಸ್ನೇಹಸದನ ಸಂಸ್ಥೆಯ ವ್ಯವಸ್ಥಾಪಕಿ ರೂಪಾ, ನಿರ್ದೇಶಕಿ ಗ್ಲೋರಿಯಾ ತೆರೆಸಿಟಾ, ಸಂಯೊಜಕರಾದ ಸುವರ್ಣಾ, ಕಾವ್ಯ, ಸರಸ್ವತಿ, ಫಾತೀಮಾ, ಈರಣ್ಣ ಮಾಸಣಗಿ, ಅಚಲಾ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next