ಬೆಂಗಳೂರು: ಪಿತ್ತನಾಳ ಹಾಗೂ ಮೇದೋಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಬಿಜಿಎಸ್ ಗ್ಲೆàನಿಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಭಾನುವಾರ ಯಶಸ್ವಿಯಾಗಿ ಆರನೇ ಬಾರಿ ಎರಡು ಸ್ಟಂಟ್ ಅಳವಡಿಸಿದ್ದು, ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಚಳಿ ಜ್ವರದಿಂದ ಬಳಲುತ್ತಿರುವ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಕೆಂಗೇರಿ ಬಳಿಯ ಬಿಜಿಎಸ್ ಗ್ಲೆàನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ ತಜ್ಞ ವೈದ್ಯರ ತಂಡ ಅಗತ್ಯ ಪರೀಕ್ಷೆಗಳನ್ನು ನಡೆಸಿ ಬಳಿಕ ಎಂಡೋಸ್ಕೋಪಿ ಮೂಲಕ ಸ್ವಾಮೀಜಿಗಳ ಪಿತ್ತನಾಳಕ್ಕೆ ಎರಡು ಸ್ಟಂಟ್ ಅಳವಡಿಸಿತು.
ಆಸ್ಪತ್ರೆಯ ಚೀಫ್ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಡಾ.ಬಿ.ಎಸ್.ರವೀಂದ್ರ ಮಾತನಾಡಿ, “ಸ್ವಾಮೀಜಿಗಳ ರಕ್ತ ಪರೀಕ್ಷೆ ಮಾಡಿದಾಗ ಪಿತ್ತಕೋಶ ಹಾಗೂ ಪಿತ್ತನಾಳದಲ್ಲಿ ಸೋಂಕು ಕಾಣಿಸಿಕೊಂಡಿರುವುದು ಕಂಡು ಬಂದಿತು. ಹೀಗಾಗಿ ಶಸ್ತ್ರಚಿಕಿತ್ಸೆ ಬದಲಿಗೆ ಎಂಡೋಸ್ಕೋಪಿ ಮೂಲಕ ಪಿತ್ತನಾಳಕ್ಕೆ ಎರಡು ಸ್ಟಂಟ್ ಅಳವಡಿಸಲಾಗಿದೆ. ನಂತರ ಪಿತ್ತರಸವು ಉತ್ತಮವಾಗಿ ಉತ್ಪತ್ತಿಯಾಯಿತು. ಚಿಕಿತ್ಸೆ ಸಂದರ್ಭದಲ್ಲಿ ನೀಡಿದ್ದ ಅರವಳಿಕೆಯನ್ನು ಸ್ವಾಮೀಜಿಯವರು ನಿರಾಯಾಸವಾಗಿ ಅರಗಿಸಿಕೊಂಡಿದ್ದು, ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂದರೆ ತಪ್ಪಾಗಲಾರದು. ಹೀಗಾಗಿ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸದೆ ವಿಶೇಷ ಕೊಠಡಿಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದರು.
ಇಂದು ಮಠಕ್ಕೆ ಹಿಂತಿರುಗುವ ಸಾಧ್ಯತೆ: ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಸ್ವಾಮೀಜಿ ಸಂಜೆ ವೇಳೆಗೆ ಮಠಕ್ಕೆ ತೆರಳಲು ಸಿದ್ಧವಾಗಿದ್ದರು, ಆದರೆ, ರಕ್ತದಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇರುವುದರಿಂದ ಭಾನುವಾರ ರಾತ್ರಿಯಿಡೀ ನಿಗಾವಹಿಸಿ, ಸೋಮವಾರ ಬೆಳಗ್ಗೆ ಒಂದಿಷ್ಟು ಪರೀಕ್ಷೆ ನಡೆಸಿ ವರದಿ ಪಡೆದು ಖಾತರಿಯಾದ ಬಳಿಕವಷ್ಟೇ ತುಮಕೂರಿಗೆ ಕಳುಹಿಸಿಕೊಡಲಿದ್ದೇವೆ. ಸ್ವಾಮೀಜಿ ಅವರು ಸಂಜೆ ಪೂಜೆ ನೆರವೇರಿಸಿದ್ದು, ಪ್ರಸಾದ ಸ್ವೀಕರಿಸಿದ್ದಾರೆ. ಭಾನುವಾರ ಮಧ್ಯಾಹ್ನ, ಸಂಜೆ ವೇಳೆಗೆ ಭಕ್ತಾದಿಗಳಿಗೆ ದರ್ಶನ ನೀಡಿದ್ದಾರೆಂದು ಹೇಳಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಗಳ ಪಿತ್ತನಾಳಕ್ಕೆ ಆರನೇ ಬಾರಿ ಸ್ಟಂಟ್ ಅಳವಡಿಸಿದ್ದು, ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ನಗುನಗುತ್ತಲೇ ಮಾತನಾಡಿಸಿದರು. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.