Advertisement

Desi Swara@100: ನನ್ನ ಊರು ಅಲ್ಲಿದೆ…ಸಪ್ತ ಸಾಗರದಾಚೆ ಎಲ್ಲೋ…

03:21 PM Nov 27, 2023 | Team Udayavani |

ದೇಶದಿಂದ ದೂರ ವಿದೇಶದಲ್ಲಿ ಅನಿವಾಸಿಗಳಾಗಿ ಬದುಕುವಾ ನಿಮ್ಮ ದೇಶ ಯಾವುದು ಎಂದು ಕೇಳಿದರೆ ಭಾರತ ಎಂದು ಥಟ್ಟನೆ ಹೇಳಿಬಿಡಬಹುದು. ಅಲ್ಲಿ ದೇಶವೇ ನಮ್ಮ ಗುರುತಾಗಿ ಬಿಟ್ಟಿರುತ್ತದೆ. ಕೆಲವೊಮ್ಮೆ ಹುಟ್ಟಿದ್ದು ಒಂದೂರಾದರೆ, ವಿದ್ಯೆ ದಕ್ಕುವುದು ಇನ್ನೊಂದು ಊರಿನಲ್ಲಿ. ಶಿಕ್ಷಣದ ಅನಂತರ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ನಮ್ಮನ್ನು ಬೇರೆ ಇನ್ನೊಂದ್ಯಾವುದೋ ಊರಿಗೆ ಕರೆಸಿಕೊಂಡು ಹೋಗಿ ಬಿಡುತ್ತದೆ. ಪ್ರತೀ ಊರುಗಳು ನಮ್ಮ ಜೀವನದ ಭಾಗವಾಗಿ ಬಿಡುತ್ತವೆ. ಆದರೆ ಹುಟ್ಟಿದ ಊರೇ ನಮಗೆ ಎಂದಿಗೂ ಆಪ್ತತತೆಯ ಭಾವವನ್ನು, ನಮ್ಮೂರು ಎಂಬ ಪ್ರೇಮವನ್ನು ನೀಡುವುದು. ಸಪ್ತ ಸಾಗರವನ್ನು ದಾಟಿದರೂ ನಿಮ್ಮೂರು ಯಾವುದೆಂದು ಕೇಳಿದಾಗ ತತ್‌ಕ್ಷಣ ನೆನಪಾಗುವುದು ನಾವು ಹುಟ್ಟಿದ ಊರೇ….

Advertisement

ಪ್ರತೀ ಬಾರಿ ಯಾರಾದರೂ ನಿಮ್ಮ ಊರು ಯಾವುದು? ನಿಮ್ಮ ಹೆಸರಿನಲ್ಲಿರುವ ಊರು ಎಲ್ಲಿದೆ? ಎಂದು ಕೇಳುವ ಪ್ರಶ್ನೆ ಒಂದು ಸಣ್ಣ ಕಥೆಯೊಂದನ್ನು ಬಿಚ್ಚಿಡುತ್ತದೆ. ಸರಿ ಸುಮಾರು ಅರವತ್ತು ವರುಷಗಳ ಹಿಂದೆ ಹರದೂರು ಎಂಬ ಪುಟ್ಟ ಹಳ್ಳಿಯೊಂದು ಶರಾವತಿ ನದಿಯಲ್ಲಿ ಮುಳುಗಡೆಯಾದಾಗ, ಆ ಊರುಬಿಟ್ಟು ಹೊಸ ಬದುಕೊಂದು ಕಟ್ಟಿಕೊಳ್ಳಲು ಸಾಗರಕ್ಕೆ ಕಾಲಿಟ್ಟ ಅಪ್ಪನಿಗೆ ಆಗ ವಯಸ್ಸು ಹದಿನಾಲ್ಕು. ಆ ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿ ಹೊತ್ತ ಅಪ್ಪ ಬದುಕು ಕಟ್ಟಿಕೊಂಡ ರೀತಿ ಇಂದಿಗೂ ನನ್ನ ಬದುಕಿಗೆ ಸ್ಫೂರ್ತಿ.

ನನ್ನ ಬಾಲ್ಯ, ನಾನು ಕಳೆದ ಪ್ರಾಥಮಿಕ ಹಂತದ ಶಾಲಾ ದಿನಗಳು, ಸಾಗರದೊಂದಿಗೆ ಅವಿನಾಭಾವ ಸಂಬಂಧದ ಜತೆಗೆ ಒಂದು ಸುಂದರ ಜಗತ್ತನ್ನೇ ನನ್ನಲ್ಲಿ ಸೃಷ್ಟಿಸಿಕೊಂಡಿದ್ದೆ. ನನ್ನ ಆಲೋಚನೆಗಳು, ಕನಸುಗಳು ಆ ಊರಿನ ಗಡಿ ದಾಟಿ ಹೋಗುತ್ತಿರಲಿಲ್ಲ. ಪ್ರಾಥಮಿಕ ಹಂತದ ಶಾಲೆ ಮುಗಿಯುವ ವೇಳೆಗೆ ಆ ಜಗತ್ತನ್ನು ಬಿಟ್ಟು, ಬಾಲ್ಯದ ಗೆಳೆಯರಿಂದ ದೂರವಾಗಿ ಇದ್ದಕ್ಕಿದ್ದಂತೆ ತೀರ್ಥಹಳ್ಳಿ ಎಂಬ ಮತ್ತೊಂದು ಜಗತ್ತಿಗೆ ಕಾಲಿಟ್ಟಾಗ ಪ್ರತಿಯೊಂದು ವಿಷಯಕ್ಕೂ ಸಾಗರಕ್ಕೆ ಹೋಲಿಕೆ ಮಾಡುತ್ತಾ ಕಾಲ ಕಳೆಯುತ್ತಿದ್ದ ನೆನಪುಗಳು ಇಂದಿಗೂ ನನಗೆ ಹಸಿ ಹಸಿಯಾಗಿ ಇದೆ.

ಸಾಗರದಲ್ಲಿ ಕಳೆದ ಬಾಲ್ಯದ ದಿನಗಳು, ಮಾರಿಕಾಂಬೆ ಜಾತ್ರೆ, ಗಣಪತಿ ಜಾತ್ರಿ, ವರದಾ ನದಿ, ಇಕ್ಕೇರಿ, ಕೆಳದಿ ..ಹೀಗೆ ಸಾಲು ಸಾಲು ಬಾಲ್ಯದ ನೆನೆಪುಗಳು ಸಾಗರ ಊರಿನ ಜತೆಗೆ ಇರುವ ಸಂಬಂಧವನ್ನು ಯಾವಾಗಲು ತಾಜಾ ಗೊಳಿಸುತ್ತಿತ್ತು. ತೀರ್ಥಹಳ್ಳಿ ಎಂಬ ಹೊಸ ಊರಿನಲ್ಲಿ ನೆಲೆಯೂರಿದ ಅನಂತರ ಸಿಕ್ಕ ಹೊಸ ಗೆಳೆಯರು, ಹೊಸ ಅನುಭವಗಳಿಗೆ ಹೊಂದುಕೊಳ್ಳುವಷ್ಟರಲ್ಲಿ ನನಗೆ ಗೊತ್ತಿಲ್ಲದಂತೆ ತೀರ್ಥಹಳ್ಳಿ ನನ್ನೂರಾಗಿ ಬದಲಾಗಿತ್ತು. ಆದರೆ ತೀರ್ಥಹಳ್ಳಿಯವರಿಗೆ ಮಾತ್ರ ನಾನು ಸಾಗರದವನಾಗಿದ್ದೆ.

Advertisement

ತೀರ್ಥಹಳ್ಳಿಯಲ್ಲಿ ನನ್ನ ಕಾಲೇಜಿನ ಓದು ಮುಗಿಯುವಷ್ಟರಲ್ಲಿ ಸಾಗರವೆಂಬ ಹೆಸರು ನಿಧಾನವಾಗಿ ಮನಃಪಟಲದಿಂದ ಮರೆಯಾಗತೊಡಗಿ, ಯಾರಾದರೂ ನಿಮ್ಮೂರು ಯಾವುದೆಂದು ಕೇಳಿದರೆ ತೀರ್ಥಹಳ್ಳಿ ಅನ್ನುವ ಮಟ್ಟಿಗೆ ತೀರ್ಥಹಳ್ಳಿ ನನ್ನನ್ನು ಆವರಿಸಿತ್ತು. ನನ್ನ ಬದುಕಿಕೊಂಡು ಹೊಸ ಆಯಾಮವನ್ನೇ ತಂದುಕೊಟ್ಟ ಊರು, ಆತ್ಮೀಯ ಸ್ನೇಹ, ಪ್ರೀತಿಯನ್ನು ಗಳಿಸಿಕೊಟ್ಟ ಊರು ತೀರ್ಥಹಳ್ಳಿ ಎಂದರೆ ತಪ್ಪಾಗಲಾರದು.

ಬದುಕು ಕಟ್ಟಿಕೊಳ್ಳುವ ಹಂತಕ್ಕೆ ನಾವು ಬಂದಾಗ ಮತ್ತೆ ಊರುಗಳು ಬದಲಾಗುತ್ತದೆ. ಹಾಗೆಯೇ ಕೆಲಸದ ಬೇಟೆಗೆ, ಕಂಡ ಕನಸನ್ನು ನನಸು ಮಾಡಿಕೊಳ್ಳಲು ನಾನು ಕಾಲಿಟ್ಟ ಊರು ಬೆಂಗಳೂರು. ಕನಸುಗಳನ್ನು ಕಟ್ಟಿಕೊಂಡು ಏನನ್ನೋ ಸಾಧಿಸುವ ಉಮೇದಿನೊಂದಿಗೆ ಬರುವ ಎಲ್ಲರನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಸಲಹುವ ಊರು ಬೆಂಗಳೂರು. ಬದುಕಿನ ಪ್ರತಿಯೊಂದು ಹಂತದಲ್ಲೂ ಪುಟ್ಟ ಮಗುವಿನಂತೆ ಹೊಸ ಹೊಸ ಪಾಠ ಕಲಿಯುತ್ತ , ತೆವಳುತ್ತ, ಕುಂಟುತ್ತಾ, ಬೀಳುತ್ತಾ, ಎದ್ದು ನಡೆಯುತ್ತಾ , ಓಡುವ ಹಂತಕ್ಕೆ ಬರುವ ಬರುವಷ್ಟರಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಏಳುವ ದೂಳಿನಂತೆ ಬೆಂಗಳೂರೆಂಬ ಮಹಾನಗರದಲ್ಲಿ ಬೆರೆತು ಹೋಗಿಬಿಟ್ಟಿರುತ್ತಿವೆ. ಆ ರೀತಿ ಬದಲಾಯಿಸುವ ಶಕ್ತಿ ಬೆಂಗಳೂರಿಗಿದೆ.

ನಮ್ಮೂರಿಂದ ಬರುವವರಿಗೆ ನಾನು ಬೆಂಗಳೂರಿನಲ್ಲಿದ್ದೇನೆ ಅಂದರೆ ಸಾಕೆ? ಇಲ್ಲ, ಬೆಂಗಳೂರಲ್ಲಿ ಯಾವ ಏರಿಯಾ? ಎಂಬ ಪ್ರಶ್ನೆ ಸಹಜ. ಬೆಂಗಳೂರಿನ ಒಂದು ಪ್ರದೇಶದಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ಕೇವಲ ನಮ್ಮ ವಿಳಾಸದ ಕೊನೆಯಲ್ಲಿ ಬರುವ ಪಿನ್‌ ಕೋಡಿನಂತೆ ತಣ್ಣಗೆ ಇದ್ದರೂ ಇರದ ಹಾಗೆ ಇರಲು ಆರಂಭ ಮಾಡುತ್ತದೆ ಅಷ್ಟೇ. ಏಕೆಂದರೆ ನಾವು ಜಯನಗರ, ಜೆ.ಪಿ. ನಗರ, ಮಲ್ಲೇಶ್ವರಂ, ವಿದ್ಯಾರಣ್ಯಪುರ ಹೀಗೆ ಯಾವುದೋ ಪ್ರದೇಶವನ್ನು ನಮ್ಮೂರನ್ನಾಗಿ ಮಾಡಿಕೊಂಡುಬಿಟ್ಟಿರುತ್ತೇವೆ. ಇಪ್ಪತ್ತು ವರುಷಗಳ ಕಾಲ ಬೆಂಗಳೂರಿನಲ್ಲಿದ್ದರೂ ಬೆಂಗಳೂರಿನವರಿಗೆ ನಾನು ತೀರ್ಥಹಳ್ಳಿಯವನಾಗಿದ್ದೆ.

ಬದುಕಿನ ಮತ್ತೊಂದು ಮಜಲು ನನ್ನನ್ನು ಕರೆದುಕೊಂಡು ಹೋಗಿದ್ದು ಬೇರೆ ಊರಿಗಲ್ಲ ಬೇರೊಂದು ದೇಶಕ್ಕೆ. ಆ ದೇಶದ ಹೆಸರು ಮಲೇಷಿಯಾ. ನನ್ನ ಊರು, ಭಾಷೆ ಅಷ್ಟೇ ಏಕೆ ದೇಶದ ಗಡಿಯನ್ನು ಮೀರಿ, ಸಾಗರಗಳನ್ನು ದಾಟಿ ನನ್ನದಲ್ಲದ ಮತ್ತೂಂದು ದೇಶಕ್ಕೆ ಕಾಲಿಟ್ಟಿದ್ದೆ. ಬೇರೊಂದು ದೇಶಕ್ಕೆ ಹೋಗಿ ಅಲ್ಲೊಂದು ಬದುಕು ಕಟ್ಟಿಕೊಳ್ಳಲು ಅನುವಾಗಿ ಹೊಸ ಅನುಭವಗಳಿಗೆ ನನ್ನನ್ನು ಒಡ್ಡಿಕೊಂಡಿದ್ದೆ. ಸಾಗರವೆಂಬ ಪುಟ್ಟ ಊರನ್ನೇ ಜಗತ್ತು ಎಂದುಕೊಂಡವನಿಗೆ ಅಲ್ಲಿದ್ದಷ್ಟು ಕಾಲ ಜಗತ್ತು ಬಹಳ ದೊಡ್ಡದಿದೆ ಎಂದು ಅನಿಸಿತು. ಆ ದೇಶದಲ್ಲಿ ನಾನಿದ್ದ ನಾಲ್ಕು ವರುಷಗಳ ಕಾಲ ಅಲ್ಲಿದ್ದವರಿಗೆ ನಾನು ಬೆಂಗಳೂರಿನವನಾಗಿದ್ದೆ.
ದಿನಗಳು ಕಳೆದಂತೆ ಬದುಕು ಕಟ್ಟಿಕೊಳ್ಳುವ ಹಂತಕ್ಕೆ ಬಂದಾಗ ಊರುಗಳು ಬದಲಾಗುತ್ತವೆ ಎಂಬ ಅನುಭವ ಬದಲಾಗಿ ದೇಶಗಳು ಕೂಡ ಬದಲಾಗುತ್ತದೆ ಎಂಬ ಸತ್ಯ ಅರಿವಿಗೆ ಬಂದಿತ್ತು.

ಬದುಕಿನಲ್ಲಿ ಸಿಕ್ಕ ಮತ್ತೂಂದು ತಿರುವಿನಲ್ಲಿ ಹೊರಟ ನಾನು ತಲುಪಿದ್ದು ಸಪ್ತ ಸಾಗರದಾಚೆ ಇರುವ ನೆದರ್‌ಲ್ಯಾಂಡ್ಸ್‌ ಎಂಬ ದೇಶದಲ್ಲಿ. ದೇಶಗಳನ್ನು ಸುತ್ತತೊಡಗಿದ ಮೇಲೆ, ಹೊಸ ಆಲೋಚನೆಗಳು, ಹೊಸ ವಿಚಾರಧಾರೆಗಳು ಕಲಿಯುತ್ತ ಹೋದಂತೆ, ಎಲ್ಲೋ ಎಂದೋ ಭೇಟಿ ಮಾಡಿದ ಜನರು ಯಾವುದೋ ದೇಶದಲ್ಲಿ ಭೇಟಿಯಾಗತೊಡಗಿದಾಗ ಜಗತ್ತು ಬಹಳ ಸಣ್ಣದು ಎಂದು ಅನಿಸತೊಡಗಿತು.

ದೇಶಗಳು ಬದಲಾದರಾದರೇನು ಅಯಸ್ಕಾಂತದ ಸೆಳೆತದಂತೆ ನನ್ನ ಊರಿನ ಸೆಳೆತ ಸದಾ ಇದ್ದೆ ಇತ್ತು. ಆ ಸೆಳೆತದ ಪ್ರಭಾವವೇನೋ ಬೆಂಗಳೂರು ಬಿಟ್ಟು ದೇಶಗಳನ್ನೇ ಬದಲಾಯಿಸಿದ ಮೇಲೆ ಇಲ್ಲಿರುವವರಿಗೆ ನಾನು ಮತ್ತೆ ಸಾಗರದವನೇ ಆಗಿದ್ದೇನೆ. ಯಾವ ಊರು ಎಂದು ಕೇಳುವವರಿಗೆ ಗುರುತು ಹಿಡಿಯಲು ಅನೂಕೂಲವಾಗಲಿ ಎಂದು ಬೆಂಗಳೂರು ಅಂತ ಹೇಳುವುದನ್ನು ಬಿಟ್ಟಿದ್ದೇನೆ. ನನ್ನ ಊರು ಎಲ್ಲಿದೆ, ಹೇಗಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಹಾಗೆ ವಿವರಿಸುವಾಗೆಲ್ಲ ಬದುಕಿನ ಒಂದು ವೃತ್ತ ಪೂರ್ತಿಯಾಗಿದೆ ಎಂದೆನಿಸುತ್ತದೆ.

ಇಂದಿಗೂ ನನ್ನ ಹೆಸರಿನೊಡನೆ ಸದಾ ಉಳಿದುಕೊಂಡಿರುವುದು ವಾಸ್ತವವಾಗಿ ಅಸ್ತಿತ್ವವೇ ಇಲ್ಲದೆ ಇರುವ, ನಾ ಕಾಣದ ನನ್ನ ಅಪ್ಪ ಹುಟ್ಟಿದ ಊರು ಹರದೂರು. ಎಲ್ಲಿದೆ ಅಂತ ಯಾರಾದರೂ ಕೇಳಿದರೆ ಒಂದೇ ಪದದಲ್ಲಿ ಉತ್ತರ ನೀಡಲು ಸಾಧ್ಯವಾಗದೆ ಸಣ್ಣ ಕಥೆಯನ್ನು ನನ್ನಿಂದ ಹೇಳಿಸುತ್ತದೆ ಈ ಹರದೂರು, ನನ್ನ ಅಪ್ಪನೂರು.
ಯಾವ ದೇಶದಲ್ಲಿದ್ದರೇನು ? ನನ್ನ ಊರು ಅಲ್ಲಿದೆ….ಸಪ್ತ ಸಾಗರದಾಚೆ ಎಲ್ಲೋ….

*ಶ್ರೀನಾಥ್‌ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್‌

Advertisement

Udayavani is now on Telegram. Click here to join our channel and stay updated with the latest news.

Next