Advertisement

ಬೆಳುವಾಯಿಂದ ಅಮೆರಿಕಕ್ಕೆ ಯಕ್ಷಗಾನ‌ ರಿಂಗಣ 

05:47 PM Aug 24, 2018 | Team Udayavani |

 ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ ಸ್ಥಾಪಕ ಎಮ್ ದೇವಾನಂದ್‌ ಭಟ್‌ ಯಕ್ಷಗಾನ ಕಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂಬ ಆಶಯದಿಂದ ಪೂರ್ಣ ಪ್ರಮಾಣದ ಯಕ್ಷಗಾನ ತಂಡವನ್ನು ಕಟ್ಟಿಕೊಂಡು ಅಮೆರಿಕದ ಹಲವೆಡೆ ಪ್ರದರ್ಶನ ನೀಡಿ ವಿದೇಶದ ಮಣ್ಣಿನಲ್ಲಿ ಕರುನಾಡ ಕಲೆಯ ಕಂಪು ಹರಡಿದ್ದಾರೆ. 

Advertisement

 ಮೊದಲು ನ್ಯೂಯಾರ್ಕ್‌ ಎಡಿಸನ್‌ನಲ್ಲಿರುವ ಪುತ್ತಿಗೆ ಮಠಕ್ಕೆ ಆಗಮಿಸಿದ ತಂಡ ಪ್ರದರ್ಶಿಸಿದ “ಮಹಿಷ ವಧೆ’ ಪ್ರಸಂಗ ಪ್ರಶಂಸೆಗೆ ಪಾತ್ರವಾಯಿತು. ಅಲ್ಲಿಂದ ಮುಂದೆ ಪೆನ್ಸಿಲ್ವೆನಿಯ ಶೃಂಗೇರಿ ಮಠದಲ್ಲಿ ಭಗವತಾರಾಧನೆ ಪಟ್ಲ ಭಾಗವತ ಬಳಗದಿಂದ ಸೇವಾರೂಪವಾಗಿ ಗೈದು ಮುಂದೆ ಬೋಸ್ಟನ್‌ನಲ್ಲಿ “ಮಹಿಷ ವಧೆ’ ಪ್ರದರ್ಶಿಸಿತು. ರಾಲೆಯಲ್ಲಿ “ಕೃಷ್ಣಲೀಲೆ – ಕಂಸವಧೆ’ಯಾದ ಬಳಿಕ ತಂಡವನ್ನು ಅಮೆರಿಕಕ್ಕೆ ಬರಿಸುವಲ್ಲಿ ಪ್ರಯತ್ನ ಪಟ್ಟ ಬಾಲಕೃಷ್ಣ ಭಟ್‌ ಅವರ ಮೇರಿಲ್ಯಾಂಡ್‌ ಭಕ್ತಾಂಜನೇಯ ದೇವಸ್ಥಾನದಲ್ಲಿ ಸ್ಥಳೀಯ ಕಲಾವಿದರನ್ನೊಳಗೊಂಡ “ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟು ಜನಮನತಟ್ಟಿತು. 

ಅಲ್ಲಿಂದ ಡಲ್ಲಾಸ್‌ಗೆ ಬಂದು “ಸುಧನ್ವಾರ್ಜುನ’ ಯಕ್ಷ ರಸದೌತಣವನ್ನು ಉಣಬಡಿಸಿತು. ಮುಂದೆ ಹೂಸ್ಟನ್‌ ಕಡೆ ಸಾಗಿ ಕೃಷ್ಣ ವೃಂದಾವನದ ಬಯಲು ಪ್ರದೇಶದಲ್ಲಿ ಪಣಂಬೂರಿನ ವಾಸು ಐತಾಳ್‌ ಬಳಗದ ಸಾರಥ್ಯದಲ್ಲಿ ಆಮೆರಿಕದಲ್ಲಿ ಮೊದಲ ಬಾರಿಗೆ ಎಂಬಂತೆ ಊರಿನ ರಂಗಸ್ಥಳವನ್ನೇ ತಯಾರಿಸಿ “ಮಹಿಷ ವಧೆ’ ಪ್ರದರ್ಶಿಸಿದರು. ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲಾರ್ಹ ವಿಷಯವಾಗಿತ್ತು. ಕನ್ನಡಿಗರು ಮಾತ್ರವಲ್ಲದೆ ಅನ್ಯರಾಜ್ಯಗಳ ಜನರು ಮತ್ತು ವಿದೇಶಿಯರು ಯಕ್ಷಗಾನವನ್ನು ಆಸ್ವಾದಿಸಿದ್ದು ವಿಶೇಷವಾಗಿತ್ತು. 

 ಭಾಗವತರಾಗಿ ಪಟ್ಲ ಸತೀಶ ಶೆಟ್ಟಿ, ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯ, ಚೆಂಡೆಯಲ್ಲಿ ಎಮ್‌. ದೇವಾನಂದ ಭಟ್‌ ಮೆಚ್ಚುಗೆಗೆ ಪಾತ್ರರಾದರು. ಮುಮ್ಮೇಳದಲ್ಲಿ ಮಲ್ಪೆ ಲಕ್ಷ್ಮೀನಾರಾಯಣ ಸಾಮಗ, ಚಂದ್ರಶೇಖರ ಧರ್ಮಸ್ಥಳ, ಮಹೇಶ್‌ ಮಣಿಯಾಣಿ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮೋಹನ ಬೆಳ್ಳಿಪ್ಪಾಡಿ ಹೀಗೆ ಮತ್ತಿತರರು ಹೊರನಾಡ ಕನ್ನಡಿಗರನ್ನು ರಂಜಿಸಿದರು.ಆಮೆರಿಕದಂತಹ ದೇಶದಲ್ಲಿ ಯಕ್ಷಗಾನದ ಕಂಪು ಹರಡಿದ ತಂಡ ಅಭಿನಂದನೀಯ. 

ಸುಬ್ರಮಣ್ಯ ಶಾನುಭಾಗ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next