Advertisement

ಶಿವರಾತ್ರಿ ಜಾತ್ರೆ, ಉತ್ಸವ, ಕೊಂಡೋತ್ಸವ ಸಂಭ್ರಮ

09:08 PM Feb 22, 2020 | Lakshmi GovindaRaj |

ಹುಣಸೂರು: ಮಹಾ ಶಿವರಾತ್ರಿ ಪ್ರಯುಕ್ತ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿಯಿಡೀ ಜಾಗರಣೆ, ವಿಶೇಷ ಪೂಜೆ ಹಾಗೂ ಶನಿವಾರ ಹಲವೆಡೆ ರಥೋತ್ಸವ, ಕೊಂಡೋತ್ಸವ, ಉತ್ಸವಗಳು ವಿಜೃಂಭಣೆಯಿಂದ ಜರುಗಿದವು.

Advertisement

ಹನಗೋಡು ರಸ್ತೆಯ ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರದೇವರ ರಥೋತ್ಸವ, ಕಲ್ಲೂರಪ್ಪನಗುಡ್ಡ ಮತ್ತು ಚಿಕ್ಕಹುಣಸೂರಿನ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಕೊಂಡೋತ್ಸವ, ಕೊಳುವಿಗೆ ರಾಮಲಿಂಗೇಶ್ವರ ದೇವಾಲಯದಲ್ಲಿ ಉತ್ಸವ ನೆರವೇರಿತು.

ಓಂಕಾರೇಶ್ವರ ರಥೋತ್ಸವ: ಹನಗೋಡು-ಹುಣಸೂರು ರಸ್ತೆಯ ರಾಮೇನಹಳ್ಳಿಬೆಟ್ಟದ ಮೇಲಿನ ಓಂಕಾರೇಶ್ವರಸ್ವಾಮಿ ರಥೋತ್ಸವವು ಬೆಟ್ಟದ ಬುಡದಲ್ಲಿ ಶನಿವಾರ ಬೆಳಿಗ್ಗೆ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಶುಕ್ರವಾರರಾತ್ರಿ ಬೆಟ್ಟದ ಮೇಲಿನ ದೇವಾಲಯದಲ್ಲಿ ವಿಶೇಷ ಹೋಮ, ಹವನ, ಭಜನೆಯೊಂದಿಗೆ ಭಕ್ತರು ಜಾಗರಣೆ ನಡೆಸಿದರು.

ಬಾಯಿ ಬೀಗ, ಮುಡಿ ಹರಕೆ: ಬೆಟ್ಟದ ಮೇಲಿನ ದೇವಾಲಯಕ್ಕೆ ಬೆಟ್ಟ ಹತ್ತಿ, ಸರದಿಯಲ್ಲಿ ನಿಂತು ಭಕ್ತರು ದೇವರದರ್ಶನ ಮಾಡಿ, ಭಕ್ತಿಭಾವ ಮೆರೆದರು. ಇದಕ್ಕೂ ಮುನ್ನ ಹರಕೆ ಹೊತ್ತ ಭಕ್ತರು ಗ್ರಾಮದ ಬಳಿ ಇರುವ ಲಕ್ಷ್ಮಣತೀರ್ಥನದಿ ತಟದಲ್ಲಿ ತಲೆ ಮುಡಿಕೊಟ್ಟು, ಬಾಯಿಗೆ ಬೀಗ ಹಾಕಿಕೊಂಡು ಬೆಟ್ಟ ಹತ್ತಿ ಉರುಳುಸೇವೆ ಮಾಡಿ ಧನ್ಯತಾಭಾವ ಮೆರೆದರು. ಸೋಮವಾರ ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.

ಅನ್ನಸಂತರ್ಪಣೆ: ಜಾತ್ರಾಸಮಿತಿಯಿಂದ ಭಕ್ತರಿಗೆ ದಾನಿಗಳ ನೆರವಿನಿಂದ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡಿದರು. ಜಾತ್ರೆಯಲ್ಲಿ ಹುಣಸೂರಿನ ಗಾಡಿಕಾರ್ಖಾನೆ ದಿ.ನಾರಾಯಣಸ್ವಾಮಿಯವರ ಸ್ಮರಣಾರ್ಥಎಂದಿನಂತೆ ಅವರ ಕುಟುಂಬದವರು ಭಕ್ತರಿಗೆ ಮಜ್ಜಿಗೆ, ಪಾನಕ ನೀಡಿ ದಣಿವಾರಿಸಿದರು.

Advertisement

ಕೊಳುವಿಗೆ ಶ್ರೀರಾಮಲಿಂಗೇಶ್ವರ ಉತ್ಸವ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೊಳುವಿಗೆಯ ಲಕ್ಷಣತೀರ್ಥ ನದಿ ದಂಡೆಯಲ್ಲಿರುವ ಚೋಳರ ಕಾಲದ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಬೆಳಗ್ಗೆ ದೇವರ ಉತ್ಸವ ನಡೆಯಿತು. ಮಧ್ಯಾಹ್ನ ಅನ್ನದಾಸೋಹ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮಗಳು ಹಾಗೂ ಹಾಡಿಗಳಿಂದ ಸಾವಿರಾರು ಮಂದಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಹನಗೋಡಿಗೆ ಸಮೀಪದ ಹೆಬ್ಟಾಳದ ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷಪೂಜೆ, ಅನ್ನದಾಸೋಹ ನಡೆಯಿತು.

ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ:  ಹನಗೋಡಿಗೆ ಸಮೀಪದ ಮಾದಳ್ಳಿಯ ಕಲ್ಲೂರಪ್ಪನಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ಶನಿವಾರ ಮುಂಜಾನೆ ದೀವಟಿಕೆ ಉತ್ಸವ, ಕೊಂಡೊತ್ಸವ ನಡೆಯಿತು. ಜಾಗರಣೆಯ ಪ್ರಯುಕ್ತ ಪ್ರಸಾದ ವಿನಿಯೋಗ ನಡೆಸಿಕೊಟ್ಟರು. ನಗರಕ್ಕೆ ಸಮೀಪದ ಮಹದೇಶ್ವರದೇವಸ್ಥಾನದಲ್ಲಿ ರಾತ್ರಿ ಭಜನೆ, ಹರಿಕತೆ ಹಾಗೂ ಬೆಳಗ್ಗೆ ಕೊಂಡೋತ್ಸವ, ಜಾತ್ರೆ ನಡೆಯಿತು.

ವಿವಿಧೆಡೆ ಜಾಗರಣೆ, ಪೂಜೆ: ಹುಣಸೂರು ನಗರದ ಮೈಸೂರು ರಸ್ತೆಯ ಮಂಜುನಾಥ ಶಿವ, ಸುಬ್ರಹ್ಮಣ್ಯ, ಕೃಷ್ಣ, ಗಣೇಶ, ಆಂಜನೇಯ, ಶಿರಡಿ ಸಾಯಿಬಾಬ ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಜೈನ ಸಮುದಾಯದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಲಕ್ಷ್ಮಣತೀರ್ಥ ನದಿ ದಂಡೆಯ ಮೇಲಿರುವ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ರಾತ್ರಿಯಿಡೀನಡೆದ ರುದ್ರಹೋಮಕ್ಕೆ ಮಧ್ಯರಾತ್ರಿ ಪೂರ್ಣಾಹುತಿ ನೀಡಲಾಯಿತು.

ಅಯ್ಯಪ್ಪಸ್ವಾಮಿಬೆಟ್ಟ, ಮುನೇಶ್ವರಸ್ವಾಮಿ, ಶನೇಶ್ವರ, ಕನ್ಯಕಾಪರಮೇಶ್ವರಿ ದೇವಾಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಜಾಗರಣೆ ದಿನ ಶನೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಮೈಸೂರು ರಸ್ತೆಯ ಬಿಳಿಕೆರೆಯ ಕೋಡಿ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಜನೆ ಆಯೋಜಿಸಲಾಗಿತ್ತು.

ಎನ್‌ಎಸ್‌ಎಸ್ ವಿದ್ಯಾರ್ಥಿನಿಯರ ಸೇವೆ: ಇದೇ ಪ್ರಥಮ ಬಾರಿಗೆ ನಗರದ ಮಹಿಳಾ ಸರಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ 15 ಮಂದಿ ವಿದ್ಯಾರ್ಥಿನಿಯರು, ಪೊಲೀಸರೊಂದಿಗೆ ರಾಮೇನಹಳ್ಳಿಯ ಓಂಕಾರೇಶ್ವರ ಜಾತ್ರೆಯಲ್ಲಿ ವಿವಿಧ ಸೇವಾ ಕೈಂಕರ್ಯಗಳಿಗೆ ಸಹಕರಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next