Advertisement

ಮಠಾಧೀಶರು ಅಜ್ಞಾನಿಗಳಾದರೆ ಉದ್ಧಾರವಾಗದು ಮಠ 

04:59 PM Dec 26, 2018 | Team Udayavani |

ಬಂಕಾಪುರ: ಜ್ಞಾನಿ ಸ್ವಾಮೀಜಿ, ನಿಸ್ವಾರ್ಥ ಸೇವೆ ಸಲ್ಲಿಸುವ ಭಕ್ತರಿದ್ದಾಗ ಮಾತ್ರ ಮಠ ಮಾನ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸುಂಕದಕೇರಿಯಲ್ಲಿರುವ ಶ್ರೀ ಗುರು ಬಸವೇಶ್ವರ ತಪೋವನ ದೇಸಾಯಿಮಠದ ಆವರಣದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮ, ಬಸವೇಶ್ವರರ ನೂತನ ಮೂರ್ತಿ ಅನಾವರಣದ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು, ಮಠದ ಸ್ವಾಮೀಜಿಗಳು ಅಜ್ಞಾನಿಗಳಾಗುತ್ತಿರುವುದರಿಂದ ಸ್ವಾರ್ಥಿ ಭಕ್ತರು ಹುಟ್ಟಿ ಮಠ ಮಾನ್ಯಗಳ ಹೆಸರು ಹಾಳುಮಾಡುತ್ತಿದ್ದಾರೆ. ಮಠಾಧೀಶರು ಜಾತಿ, ರಾಜಕೀಯ ಮೆಟ್ಟಿ ನಿಂತು ಮಾನವ ಧರ್ಮ ಪರಿಪಾಲನೆಗೆ ನಿಂತಾಗ ಮಾತ್ರ ಸರ್ವ ಜನಾಂಗದವರ ಹೃದಯ ಭಕ್ತಿ ಭಾವ ನೆಲೆಯೂರಲಿದೆ ಎಂದು ಹೇಳಿದರು.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ತ್ರೀ, ಪುರುಷರಲ್ಲಿ ಸಮಾನತೆ ತರಲು ಶ್ರಮಿಸಿದವರಾಗಿದ್ದರು. ಅಂತರ್‌ಜಾತಿ ವಿವಾಹ ಮಾಡಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಚಿಂತನಾಶೀಲ ಮಹಾನ ವ್ಯಕ್ತಿಗಳಾಗಿದ್ದರು. ಇತ್ತೀಚಿನ ದಿನಗಳಲ್ಲಿ ಶರಣರ, ಕವಿ, ಸಾಹಿತಿ, ಸಂತರು ರಚಿಸಿದ ವಚನ ಸಾಹಿತ್ಯವನ್ನು ತಮಗೆ ಬೇಕಾದಹಾಗೆ ಬದಲಿಸಿಕೊಳ್ಳುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಸತ್ಯ ಭಕ್ತಿಯ ಸಂಕೇತವೇ ಬಸವಣ್ಣನವರಾಗಿದ್ದರು. ಉತ್ಕೃಷ್ಠ ಪ್ರೀತಿಯೆ ಭಕ್ತಿ ಎಂದು ತೊರಿಸಿಕೊಟ್ಟ ಮಹಾ ಚೇತನರಾಗಿದ್ದರು. ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು. ಶ್ರೀಮಠದ ಎದುರಿಗೆ ಇರುವ ಪುರಾತನ ಅಯ್ಯನ ಹೊಂಡವನ್ನು ಅಭಿವೃದ್ಧಿ ಪಡೆಸಿ ವರದಾ ನದಿ ನೀರು ತುಂಬಿಸಲಾಗುವುದು ಈ ಮೂಲಕ ಸಾರ್ವಜನಿಕರಿಗೆ ಅನಕೂಲ ಕಲ್ಪಿಸುವೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ತೋಟಪ್ಪ ಉತ್ತಂಗಿ ಸಂಗಡಿಗರಿಂದ ಸಂಗೀತ ಸೇವೆ ನಡೆಯಿತು. ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ದೇಸಾಯಿಮಠದ ಮಹಾಂತ ಶ್ರೀಗಳು, ಮೋಹನ ಮೇಣಸಿನಕಾಯಿ ಮಾತನಾಡಿದರು.

ಸದಾಶಿವಪೇಟೆ ಗದಿಗೇಶ್ವರ ಶ್ರೀಗಳು, ಪ್ರಭು ಅರಗೋಳ,  ರಾಮಣ್ಣ ರಾನೋಜಿ, ಹೊನ್ನಪ್ಪ ಹೂಗಾರ, ಬಸವರಾಜ ದೇಸಾಯಿ, ಹುಚ್ಚಯ್ಯ ಹುಚ್ಚಯ್ಯನಮಠ, ಸುರೇಸಪ್ಪ ಹಂಡೆ, ಸಂಗಪ್ಪ ಹರವಿ, ಸಂಗಯ್ಯ ದೇಸಾಯಿಮಠ, ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಸಕ್ರಿ, ಚಂದ್ರಶೇಖರ ಅಂಕಲಕೋಟಿ, ರಾಘವೇಂದ್ರ ಮೇಲಗಿರಿ, ದುರಗಪ್ಪ ಗಿಡ್ಡಣ್ಣವರ ಇದ್ದರು. 

Advertisement

ಶರಣರು, ಮಹಾತ್ಮರನ್ನು ಸಮತಾ ದೃಷ್ಟಿಯಿಂದ ನೋಡುವಂತ ಮನೋಭಾವ ವೀರಶೈವ, ಲಿಂಗಾಯತ ಅನುಯಾಯಿಗಳಿಗೆ ಬರಬೇಕಿದೆ.  
ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು

Advertisement

Udayavani is now on Telegram. Click here to join our channel and stay updated with the latest news.

Next