Advertisement

ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಬದ್ಧ

03:02 PM Nov 24, 2019 | Naveen |

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಹಾಗೂ ಶರಣರ ಕಲ್ಪನೆಯಂತೆ ಆಧುನಿಕ ಅನುಭವ ಮಂಟಪ ನಿರ್ಮಿಸಿ ವಿಶ್ವದ ಜನರು ಮತ್ತೆ ಕಲ್ಯಾಣ ನಾಡಿನ ಕಡೆ ಬರುವಂತೆ ಬಿಜೆಪಿ ಸರ್ಕಾರ ಮಾಡಲಿದೆ ಎಂದು ಬೀದರ ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಅನುಭವ ಮಂಟಪ ಪರಿಸರದಲ್ಲಿ ಶನಿವಾರ ವಿಶ್ವ ಬಸವ ಧರ್ಮ ಟ್ರಸ್ಟ್‌ ಹಾಗೂ ಅನುಭವ ಮಂಟಪದಿಂದ ಹಮ್ಮಿಕೊಂಡಿರುವ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ಹಾಗೂ ಬಸವಾಭಿಮಾನಿಗಳ ಆಶಯದಂತೆ ಈಗಾಗಲೇ ಬಿಜೆಪಿ ಸರ್ಕಾರ ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ. ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಿ, 20 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಅನುಭವ ಮಂಟಪಕ್ಕಾಗಿ ಸಾಹಿತಿ ಗೋ.ರು. ಚನ್ನಬಸವಪ್ಪ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯು ಹಲವು ವರ್ಷಗಳಿಂದ ಅನುಭವ ಮಂಟಪ ನಿರ್ಮಾಣಕ್ಕಾಗಿ ಪಟ್ಟ ಶ್ರಮವನ್ನು ನಾವು ವಿಫಲವಾಗಲು ಬಿಡುವುದಿಲ್ಲ. ಮೂರು ತಿಂಗಳೊಳಗೆ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಿ, ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು ಸಮಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಲಬುರಗಿಯಿಂದ ಬೆಂಗಳೂರಿಗೆ ಹೋಗಲು ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೀದರ್‌ ನಿಂದ ಬೆಂಗಳೂರಿಗೆ ವಿಮಾನ ಹಾರುವಂತೆ ಮಾಡುವ ಜವಾಬ್ದಾರಿ ಸಂಸದರಾದ ಭಗವಂತ ಖೂಬಾ, ಡಾ| ಉಮೇಶ ಜಾಧವ ಹಾಗೂ ನನ್ನ ಮೇಲಿದೆ. ಅದನ್ನು ಆದಷ್ಟು ಬೇಗ ಮಾಡುತ್ತೇವೆ ಎಂದು ಹೇಳಿದರು.

Advertisement

ಕಲಬುರಗಿಯ ಸಂಸದ ಡಾ| ಉಮೇಶ ಜಾಧವ ಮಾತನಾಡಿ, ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಶಾಸಕ ಬಿ.ನಾರಾಯಣರಾವ್‌ ಸಾಕಷ್ಟು ಪ್ರಯತ್ನ ಮಾಡಿದ್ದರು. ವಿಧಾನಸಭೆಯಲ್ಲಿ ಸುಮಾರು 30 ನಿಮಿಷ ಅನುಭವ ಮಂಟಪದ ಮಹತ್ವದ ಕುರಿತು ತಿಳಿಸಿದ್ದರು. ಆದರೂ ಅದಕ್ಕೆ ಸ್ಪಂದಿಸಿಲ್ಲ. ಆದರೆಸಿಎಂ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲಿಯೇ ಅನುದಾನ ಬಿಡುಗಡೆ ಮಾಡಿದರು.

ಹೀಗಾಗಿ ಬರುವ ಬಸವ ಜಯಂತಿ ಒಳಗೆ ಅಡಿಗಲ್ಲು ಸಮಾರಂಭ ನೆರವೇರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಬೀದರ ಸಂಸದ ಭಗವಂತ ಖೂಬಾ ಮಾತನಾಡಿ, ದೇಶದಲ್ಲಿ ಸಮಸ್ಯೆಗಳು ಉದ್ಭವವಾದಾಗ ಸರ್ಕಾರ ಅದನ್ನು ಬಗೆಹರಿಸುತ್ತಾ ಬರುತ್ತಿದೆ. ಆದರೆ ಸಮಸ್ಯೆಗಳು ಉದ್ಭವಿಸುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮನುಷ್ಯನಲ್ಲಿ ವ್ಯಕ್ತಿತ್ವ ವಿಕಸನವಾಗುವುದು ಅವಶ್ಯಕವಾಗಿದೆ. ಇದು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.

ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಮಾನತೆ ಹಾಗೂ ಪ್ರಜಾಭುತ್ವಕ್ಕಾಗಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಪ್ರಚಾರವನ್ನು ನಾವು ಕರ್ನಾಟಕದ ಗಡಿಭಾಗದಿಂದ ಬೇರೆ ಕಡೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಮುದೊಂದು ದಿನ ದೇಶದಲ್ಲಿ ಬಸವತತ್ವಗಳು ಆಚರಣೆಗೆ ಬರುತ್ತವೆ ಎಂದರು.

ವಿಶ್ವಗುರು ಬಸವಣ್ಣನವರ ತತ್ವಗಳಲ್ಲಿ ಬಹಳಷ್ಟು ಶಕ್ತಿಯಿದೆ. ಇದನ್ನು ನಾವು ವಿಶ್ವಕ್ಕೆ ಪರಿಚಯಿಸಬೇಕಾಗಿದೆ. ಮೊಟ್ಟ ಮೊದಲು ವಯಸ್ಕರ ಶಿಕ್ಷಣ ಆರಂಭಿಸಿರುವುದು ಸರ್ಕಾರವಲ್ಲ ಬಸವಣ್ಣನವರು. ಹೀಗಾಗಿ ಅವರ ತತ್ವಾರ್ಶಗಳನ್ನು ಬೆಳೆಕಿಗೆ ತರುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಡಾ| ಚೆನ್ನಬಸಲಿಂಗ ಪಟ್ಟದ್ದೇವರ ಆಶಯದಂತೆ ನೂತನ ಅನುಭವ ಮಂಟಪ ನಿರ್ಮಿಸಿ ವಿಶ್ವದ ಜನರು ಇಲ್ಲಿಗೆ ಬರುವಂತೆ ಮಾಡುವುದೇ ನಮ್ಮ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಒಂದೊಂದು ಸಿದ್ಧತೆ ಮಾಡಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು. ಬೆಂಗಳೂರು ಶ್ರೀ ಬೇಲಿಮಠ ಮಹಾ ಸಂಸ್ಥಾನದ ಶ್ರೀ ಶಿವರುದ್ರ ಮಹಾ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸುಕ್ಷೇತ್ರ ಹಾರಕೂಡದ ಹಿರೇಮಠ ಸಂಸ್ಥಾನದ ಡಾ| ಚೆನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಸೇಡಂ ಶಾಸಕ ರಾಜಕುಮಾರ ತೇಲ್ಕೂರ, ಧಾರವಾಡದ ಸ್ವರ ಸಾಮ್ರಾಟ್‌ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಬಾಬು ವಾಲಿ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಶಾಲಿನಿ ಸಂಜಯ ವಾಡೇಕರ್‌, ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಅನೀಲ ರಗಟೆ, ಬಸವರಾಜ ಬಾಲಕಿಲೆ, ಡಾ| ಎಸ್‌.ಬಿ. ದುರ್ಗೆ, ಅನೀಲ ಭೂಸಾರೆ, ಪ್ರದೀಪ ವಾತಡೆ, ನೀಲಕಂಠ ರಾಠೊಡ, ಶಿವರಾಜ ನರಶೆಟ್ಟಿ, ಬಸವರಾಜ ಧನ್ನೂರ ಮತ್ತಿತರರು ಇದ್ದರು.

ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು, ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next