ಶಿವಮೊಗ್ಗ: ಸ್ಮಾರ್ಟ್ಸಿಟಿ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಶಿವಮೊಗ್ಗ ನಗರದ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಶಿವಮೊಗ್ಗ ನಗರವನ್ನು ಗ್ರೀನ್ ಸಿಟಿಯಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ಜೀವ ವೈವಿಧ್ಯ ಕುರಿತ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್ ಸಿಟಿ ಕಾಮಗಾರಿ ಕೇವಲ ರಸ್ತೆ ಒಳಚರಂಡಿಯಂತ ಕಾಂಕ್ರೀಟಿಕರಣ ಗೊಳಿಸುವ ಯೋಜನೆಯಲ್ಲ. ಶಿವಮೊಗ್ಗದ ಸುತ್ತಮುತ್ತಲೂ ಹಸಿರು ವಲಯದ ಅಭಿವೃದ್ಧಿ, ಸರ್ಕಾರಿ ಕಚೇರಿಗಳು, ಶಾಲೆ, ಹಾಸ್ಟೆಲ್ ಛತ್ರಗಳ ಆವರಣದಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡುವ ಮೂಲಕ ನಗರದ ಹಸಿರೀಕರಣವನ್ನು ಹೆಚ್ಚಿಸಲು ಒತ್ತು ನೀಡಬೇಕು ಎಂದರು.
ಸ್ಮಾರ್ಟ್ಸಿಟಿ ಕಾಮಗಾರಿ ಅನುಷ್ಠಾನದಲ್ಲಿ ನಗರದ ಹಸಿರೀಕರಣಕ್ಕೆ ಒತ್ತು ನೀಡಿ. ಉದ್ಯಾನಗಳ ಅಭಿವೃದ್ಧಿ ಸಂದರ್ಭದಲ್ಲಿ ಸಿಮೆಂಟ್ ಬಳಕೆಗಿಂತ ಗಿಡಮರಗಳನ್ನು ಹೆಚ್ಚು ನೀಡಲು ಆದ್ಯತೆ ನೀಡಿ. ನಗರದ ಗಾಂ ಧಿ ಪಾರ್ಕಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಇಂಟರ್ಪ್ರಿಟೇಶನ್ ಕೇಂದ್ರದಲ್ಲಿ ಮಕ್ಕಳಿಗೆ ಅರಣ್ಯ, ಪಶ್ಚಿಮಘಟ್ಟ ವೈವಿಧ್ಯತೆಯ ಸಂರಕ್ಷಣೆ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು ಅವಕಾಶ ಕಲ್ಪಿಸಿ. ತುಂಗಾ ನದಿಗೆ ತ್ಯಾಜ್ಯ ಸೇರಿದಂತೆ ಕ್ರಮ ಕೈಗೊಳ್ಳಲು ಸ್ಮಾಟ್ಸಿಟಿ ಯೋಜನೆಯಲ್ಲಿ ಯೋಜನೆ ರೂಪಿಸಿ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅರಣ್ಯೀಕರಣಕ್ಕಾಗಿ ಎರಡು ಕೋಟಿ ರೂಪಾಯಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಮುಜರಾಯಿ ದೇವಾಲಯಗಳ ಲಭ್ಯವಿರುವ ಸ್ಥಳಗಳಲ್ಲಿ ಗಿಡ ನೆಡಲು ಅನುದಾನ ಒದಗಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ತಿಳಿಸಿದರು.