Advertisement

ಶೆಟ್ಟರ ಪ್ರಕಾಶನ 108 ನಾಟೌಟ್‌

05:10 PM Dec 28, 2018 | |

ನೀವು ಆಸ್ತಿಕರಾಗಿದ್ದರೆ, ಮನೆಯಲ್ಲಿ ಪೂಜೆ-ಪುನಸ್ಕಾರ ಮಾಡುವಂಥವರಾಗಿದ್ದರೆ, ಒಂದು ಸಲ ದೇವರ ಕೋಣೆಯ ಪೂಜಾ ಪುಸ್ತಕಗಳನ್ನು ತಡವಿ ನೋಡಿ. ಅವುಗಳ ಮೇಲೆ ಪ್ರಕಾಶಕರು- ಟಿ.ಎನ್‌. ಕೃಷ್ಣಯ್ಯ ಶೆಟ್ಟಿ ಅಂಡ್‌ ಸನ್ಸ್‌ ಎಂಬ ಹೆಸರಿರುತ್ತದೆ. ಆ ಮಟ್ಟಿಗೆ ಇವರು ಹೆಸರುವಾಸಿ. ಈ ಪ್ರಕಾಶನಕ್ಕೆ ಈಗ ಬರೋಬ್ಬರಿ 108 ವರ್ಷ. ನಾಲ್ಕು ತಲೆಮಾರುಗಳಿಂದಲೂ  ಚಾಲ್ತಿಯಲ್ಲಿರುವ ನಾಡಿನ ಏಕೈಕ ಹಿರಿಯ ಧಾರ್ಮಿಕ ಸಾಹಿತ್ಯ ಪ್ರಕಾಶನ ಮತ್ತು ಮಾರಾಟ ಸಂಸ್ಥೆ ಇದು. 

Advertisement

  ಸಾಹಿತ್ಯ ಎಂದರೆ ಕತೆ, ಕವನಗಳ ಮಾತ್ರವಲ್ಲ. ಇದರಲ್ಲಿ ಧಾರ್ಮಿಕ ಸಾಹಿತ್ಯ ಅನ್ನೋ ಪ್ರಕಾರವೂ ಇದೆ. ಪೂಜೆ, ಹೋಮ, ವ್ರತಗಳು, ಮಂತ್ರಪಠಣಗಳು, ವೈದಿಕ ಬರಹಗಳು… ಹೀಗೆ ನಾನಾ ನಮೂನೆಗಳು ಸೇರಿವೆ. ಒಂದರ್ಥದಲ್ಲಿ ಕಥನ ಸಾಹಿತ್ಯ ಪುಸ್ತಕಗಳಿಗಿಂತ ಈ ದೈವಸಾಹಿತ್ಯಕ್ಕೆ ಹೆಚ್ಚೆಚ್ಚು ಡಿಮ್ಯಾಂಡ್‌ ಇದೆ ಅನ್ನೋದು ಪುಸ್ತಕ ಮಾರಾಟಗಳಿಂದಲೇ ತಿಳಿಯುತ್ತದೆ. 

  ಕರ್ನಾಟಕದಲ್ಲಿ ಜ್ಯೋತಿಷ್ಯ, ವೇದಾಂತ, ಪುರಾಣ, ವೈದಿಕ, ಸಹಸ್ರನಾಮ ಹೀಗೆ ಅನೇಕ ಧಾರ್ಮಿಕ ಪುಸ್ತಕಗಳನ್ನು ಪ್ರಚುರಪಡಿಸಿದ ಕೀರ್ತಿ  ಟಿ.ಎನ್‌. ಕೃಷ್ಣಯ್ಯಶೆಟ್ಟಿ ಸನ್ಸ್‌ ಅನ್ನೋ ಪ್ರಕಾಶನ ಸಂಸ್ಥೆಯದ್ದು.  ಈಗ ಇದಕ್ಕೆ ಭರ್ತಿ 108 ವರ್ಷ. 

1910ರಲ್ಲಿ  ಕೃಷ್ಣಯ್ಯಶೆಟ್ಟರು  ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪುಸ್ತಕದ ಅಂಗಡಿ ಮತ್ತು ಪ್ರಕಾಶನ ಸಂಸ್ಥೆ ಶುರು ಮಾಡಿದರು. ಇದಕ್ಕೂ ಮೊದಲು ಸಹೋದರನ ಜೊತೆ ಸೇರಿ ಅವಿನ್ಯೂರಸ್ತೆಯಲ್ಲಿ ಸರಸ್ವತಿ ರತ್ನಾಕರ ಅನ್ನೋ ಪ್ರಪ್ರಥಮ ಧಾರ್ಮಿಕ ಪುಸ್ತಕ ಮಳಿಗೆ ಆರಂಭಿಸಿದ್ದರು. ಸಹೋದರನಿಂದ ದೂರವಾದಾಗ ಕರೆದದ್ದು ಇದೇ ಪುಸ್ತಕ ಮಾರಾಟದ ಉದ್ಯೋಗ.  ಚಿಕ್ಕಪೇಟೆಯ ಬಿ.ಕೆ. ಗರುಡಾಚಾರ್‌ ಚಾರಿಟಬಲ್‌ ಟ್ರಸ್ಟ್‌, ಅಯ್ಯಂಗಾರರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕಾಗಿ ಕಟ್ಟಿಸಿದ ಕಟ್ಟಡದ ಕೈಸಾಲೆಯಲ್ಲಿ ಕೃಷ್ಣಯ್ಯ ಶೆಟ್ಟರು ಪುಸ್ತಕ ಮಾರಲು ಕೂತರು. ಇದನ್ನು ನೋಡಿದ ಗರುಡಾಚಾರ್‌ ಅವರು ಅಲ್ಲೇ ಪುಟ್ಟ ಅಂಗಡಿಯನ್ನು ತೆರೆದುಕೊಟ್ಟರು. ಈಗಲೂ ಕೂಡ ಕೃಷ್ಣಯ್ಯಶೆಟ್ಟಿ ಅಂಡ್‌ ಸನ್ಸ್‌ ಮಳಿಗೆ – ಅದೇ ಜಾಗದಲ್ಲಿದೆ. ಆಗ ಶೆಡ್‌ನ‌ಲ್ಲಿ ಶುರುವಾಗಿತ್ತು. ಈಗ ಸಿಮೆಂಟ್‌ ಕಟ್ಟಡದಲ್ಲಿದೆ ಅಷ್ಟೇ. 

 ಶೆಟ್ಟರ ನಿಧನದ ನಂತರ ಅವರ ಮಗ ಟಿ.ಕೆ ಸಂಪಂಗಿರಾಮಯ್ಯ ಶೆಟ್ಟರು ಪ್ರಕಾಶನ ಸಂಸ್ಥೆಗೆ ಹೆಗಲು ಕೊಟ್ಟರು, ಇವರ ನಿಧನದ ನಂತರ ಮಗ ಟಿ.ಎಸ್‌. ಸುರೇಶ್‌, ನಾಗರಾಜ್‌, ಶ್ರೀನಿವಾಸರು ಪಾಲಾಯಿತು. ಈಗ ಸಂಪಂಗಿ ರಾಮಯ್ಯನವರ ಮೊದಲು ಮಗ ಟಿ.ಎಸ್‌. ಸುರೇಶ್‌ ಕಾಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಮಗ ದೀಪಕ್‌ ಕೂಡ ಕೈ ಗೂಡಿಸಿರುವುದರಿಂದ ನಾಲ್ಕು ತಲೆಮಾರುಗಳ ಪ್ರಕಾಶನ ಸಂಸ್ಥೆ ಅನ್ನೋ ಹೆಗ್ಗಳಿಕೆ ಸೇರಿಕೊಂಡಿದೆ. 

Advertisement

 ತಾತ- ಅಪ್ಪನ ಕಾಲದಲ್ಲಿ ಹೆಚ್ಚುಕಮ್ಮಿ 1, 200 ಧಾರ್ಮಿಕ ಪುಸ್ತಕಗಳು ಇವರ ಒಡತನದಲ್ಲಿದ್ದವು. ಈಗ 350 ಪುಸ್ತಕಗಳಿವೆ. ದಕ್ಷಿಣ ಭಾರತದಲ್ಲೇ ಹಿರಿಯ ಪ್ರಕಾಶನ ಸಂಸ್ಥೆ ಅನ್ನೋದು ಟಿಎನ್‌ಕೆ ಅಗ್ಗಳಿಕೆ.  ಆರೂ ರೂ.ನಿಂದ  750ರೂ. ಮುಖ ಬೆಲೆ ಪುಸ್ತಕಗಳು ಇಲ್ಲಿ ದೊರೆಯುವುದರಿಂದ ಮಧ್ಯಮವರ್ಗಕ್ಕೆ ಹೆಚ್ಚು ಹತ್ತಿರವಾಗಿದೆ.  ಅಂಗೈಯಲ್ಲಿ ಇಟ್ಟುಕೊಳ್ಳುವ ಪುಸ್ತಕದ ಗಾತ್ರದಲ್ಲಿ 36, 52,108 ಅಷ್ಟೋತ್ತರಗಳ ಪುಸ್ತಕಗಳನ್ನು ಪರಿಚಯ ಮಾಡಿದ್ದು ಇದೇ ಟಿಎನ್‌ಕೆ ಪ್ರಕಾಶನ ಸಂಸ್ಥೆ. 

ಬೆಲೆ ಕಡಿಮೆ ಇದೆ ಅಂತ ಗುಣಮಟ್ಟದಲ್ಲಿ ರಾಜಿ ಇಲ್ಲ.  ಶುದ್ದ ಮುದ್ರಣ, ಉತ್ತಮ ಕಾಗದ, ಗಟ್ಟಿಬೈಂಡ್‌ ಹೊಂದಿರುವ ಪುಸ್ತಕಗಳನ್ನು ಈಗಲೂ ಮುದ್ರಿಸಲಾಗುತ್ತಿದೆ.  ಇವರ ಬೆಲೆ ನಿಗದಿ ಮಾನದಂಡ ಚೆನ್ನಾಗಿದೆ. “ಪುಸ್ತಕ ಎಷ್ಟು ಖರ್ಚಾಗುತ್ತದೆ, ಎಷ್ಟು ಬೇಗ ಖರ್ಚಾಗುತ್ತದೆ ಎನ್ನುವುದರ ಮೇಲೆ ಬೆಲೆ ನಿಗಧಿ ಮಾಡುತ್ತೇವೆ. ಹೆಚ್ಚೆಚ್ಚು ಮಾರಾಟವಾದರೆ ಅಂಥ ಪುಸ್ತಕಗಳ ಬೆಲೆಯನ್ನು ಅತಿಹೆಚ್ಚಾಗಿಡುವುದಿಲ್ಲ. ಗ್ರಾಹಕರಿಗೆ ಇದರಿಂದ ಹೊರೆಯಾಗುವುದಿಲ್ಲ’ ಅನ್ನುತ್ತಾರೆ ಮಾಲೀಕ ಸುರೇಶ್‌. 

“ಬೃಹತ್‌ ಜ್ಜಾತಕ ಕಾಖ್ಯ ಹೋರಾಶಾಸ್ತ್ರಮ್‌’ ಎನ್ನುವ ಪುಸ್ತಕ 1920 ಇಸವಿಯಿಂದ ಮರು ಮುದ್ರಣವಾಗುತ್ತಲೇ ಇದೆಯಂತೆ. “ಸ್ಪಟಿಕವ್ರತರತ್ನಂ’  25 ಸಲ ಮರುಮುದ್ರಣ, ನಿತ್ಯಪ್ರಾರ್ಥನೆ ಪುಸ್ತಕ 35 ವರ್ಷದಲ್ಲಿ 150 ಸಲ ಮರು ಮುದ್ರಣವಾಗಿ ಮೂರು ಲಕ್ಷ ಪ್ರತಿ ಮಾರಾಟವಾಗಿದೆ.  ಇದಲ್ಲದೇ ನಳಚರಿತೆ, ಜೈಮಿನಿ ಕಾಂಡ, ಅಮರಕೋಶ, ಶಬ್ದಮಂಜರಿ, ಹರಿಭಕ್ತಿಸಾರ ಹೀಗೆ ಹಲವಾರು ಪುಸ್ತಕಗಳಿವೆ. ವೈದಿಕರಿಗೆ, ವೇದ ಅಧ್ಯಯನ ಮಾಡುವವರಿಗೆ ಬೇಕಾದ ಹೋಮ, ಹವನ, ಮಂತ್ರ ಪುಸ್ತಕಗಳು ಇವರಲ್ಲಿ ದೊರೆಯುತ್ತದೆ. 

 ಟಿ.ವಿ ಕಾರ್ಯಕ್ರಮಗಳಲ್ಲಿ ಜ್ಯೋತಿಷ್ಯ ಪ್ರಸಾರವಾದ ಮೇಲೆ ದೈವಸಾಹಿತ್ಯಕ್ಕೆ ಡಿಮ್ಯಾಂಡ್‌ ಹುಟ್ಟಿರುವುದಂತೂ ಸತ್ಯ. ಆದರೆ, ತಂತ್ರಜ್ಞಾನ ಅಡ್ಡಗಾಲಾಗಿದೆಯಂತೆ.  “ಆ್ಯಪ್‌ಗ್ಳಲ್ಲಿ ಎಲ್ಲವೂ ಸಿಗುವುದರಿಂದ ಕುಂತಲ್ಲಿಯೇ ಓದುತ್ತಾರೆ. ಆಮೇಲೆ, 10-20ರೂ. ಬೆಲೆಯ ಪುಸ್ತಕಗಳಾದರೆ ಕೊಳ್ಳುತ್ತಾರೆ. 50ರೂ. ದಾಟಿದರೆ ಖರೀದಿಸುವುದಿಲ್ಲ. ದುಡ್ಡ ಹಾಕಿ ಖರ್ಚಾಗೋ ತನಕ ಕಾಯಬೇಕು’ ಅನ್ನೋದು ಸುರೇಶ್‌ ಅವರ ಮಾರುಕಟ್ಟೆ ಅನಾಲಿಸಿಸ್‌. ಡಬ್ಬಲ್‌ ಗ್ರಾಜುಯೇಟ್‌ ಆಗಿರುವ ಸುರೇಶ್‌ ಪ್ರಕಾಶನ ಕ್ಷೇತ್ರಕ್ಕೆ ಕಾಲಿಟ್ಟು 52 ವರ್ಷ ಆಗಿದೆ. ಸಂಸ್ಕೃತ, ಅಕ್ಷರಸ್ಕಾಲಿತ್ಯ ಪತ್ತೆ ಹಚ್ಚುವ ವಿಶೇಷ ತರಬೇತಿಯನ್ನು ಆ ಕಾಲದಲ್ಲೇ ಪಡೆದಿದ್ದಾರೆ. ಹೀಗಾಗಿ, ಧಾರ್ಮಿಕ ವಿಚಾರಗಳ ವಿಷಯ ಆಯ್ಕೆ ಇವರಿಗೆ ಸುಲಭವಾಗಿದೆಯಂತೆ.

ವಿಶೇಷ ಎಂದರೆ, ಈ ಟಿಎನ್‌ಕೆ ಪ್ರಕಾಶನದ ಯಾವು ಪುಸ್ತಕಗಳೂ ಲೈಬ್ರರಿಗೆ ಹೋಗುವುದಿಲ್ಲ.  ಸರ್ಕಾರದ ಯಾವುದೇ ದತ್ತಿ, ನೆರವು ಪಡೆಯುವುದಿಲ್ಲ. ಹೀಗಿದ್ದರೂ,ಸಂಸ್ಥೆಯನ್ನು  ನೂರು ವರ್ಷ ಉಳಿಸಿಕೊಂಡದ್ದಾದರೂ  ಹೇಗೆ? ಇದಕ್ಕೆ ಸುರೇಶ್‌ ಹೀಗನ್ನುತ್ತಾರೆ- ತಂತ್ರಜ್ಞಾನ, ಗುಣಮಟ್ಟ ಪ್ರಗತಿಕಂಡಿದೆ. ಹೀಗಾಗಿ, ಮೊದಲಿಗಿಂತಲೂ ಈಗ ಒಳ್ಳೆ ಪುಸ್ತಕಗಳನ್ನು ಮಾಡಬಹುದು. ಹಾಗೇನೇ ಸ್ಪರ್ಧೆ ಇದೆ.  ಇಂಟರ್‌ನೆಟ್‌ ಬಂದ ಮೇಲೆ ಎಲ್ಲರ ಮೊಬೈಲ್‌ನಲ್ಲೂ 
ಪುಸ್ತಕಗಳಿವೆ.  ಹೀಗಾಗಿ, ಕೊಳ್ಳುವವರ ಸಂಖ್ಯೆ ಕಡಿಮೆ. ಇದರ ಜೊತೆಗೆ, ನಮ್ಮ ಪುಸ್ತಕಗಳನ್ನೇ ಕದ್ದು ಮುದ್ರಿಸಿ, ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇವೆಲ್ಲದರ ಮಧ್ಯೆ, ಕಡಿಮೆ ದರದಲ್ಲಿ ಗುಣಮಟ್ಟದ ಪುಸ್ತಕ ನೀಡುವಲ್ಲಿ ನಮ್ಮ ಪ್ರಕಾಶನ ಸಂಸ್ಥೆ ಹಿಂದೆ ಬಿದ್ದಿಲ್ಲ.  ಎಲ್ಲದರ ನಡುವೆಯೂ ನಾವು ಈಜುತ್ತಿದ್ದೇನೆ ಎನ್ನುತ್ತಾರೆ ಸುರೇಶ್‌. 

ಪ್ರಕಾಶನ ಕ್ಷೇತ್ರಕ್ಕೆ  ಟಿಎನ್‌ಕೆಯ ಒಂದು ಶತಮಾನದ ಕೊಡುಗೆಯನ್ನು  ಗುರುತಿಸಿದ ಕನ್ನಡ ಅಭಿವೃದ್ಧಿಪ್ರಾಧಿಕಾರ,  ಇತ್ತೀಚೆಗಷ್ಟೇ ಸನ್ಮಾನಿಸಿದೆ.  

ಕಟ್ಟೆ  

Advertisement

Udayavani is now on Telegram. Click here to join our channel and stay updated with the latest news.

Next