Advertisement

ಕಾಡ್ಗಿಚ್ಚು ತಡೆಗೆ ತೀವ್ರ ಮುಂಜಾಗರೂಕತೆ

10:03 PM Jan 17, 2020 | Lakshmi GovindaRaj |

ಚಾಮರಾಜನಗರ: ಬೇಸಿಗೆ ಸಮೀಪಿಸುತ್ತಿದ್ದು ಜಿಲ್ಲೆಯ ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ (ಬಿಆರ್‌ಟಿ) ಹುಲಿ ರಕ್ಷಿತ ಅರಣ್ಯಗಳಲ್ಲಿ ಕಾಡ್ಗಿಚ್ಚು ತಡೆಗಾಗಿ ತೀವ್ರ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಬಂಡೀಪುರ ಅರಣ್ಯದಲ್ಲಿ 2250 ಕಿ.ಮೀ. ಹಾಗೂ ಬಿಆರ್‌ಟಿ ಅರಣ್ಯದಲ್ಲಿ 1551 ಕಿ.ಮೀ.ನಷ್ಟು ಬೆಂಕಿ ರೇಖೆ ಮಾಡಲಾಗಿದೆ.

Advertisement

ಪ್ರಮುಖವಾಗಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳೆದ ಬೇಸಿಗೆಯಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯ ಇಲಾಖೆಯ ಅಧಿಕೃತ ಅಂದಾಜಿನಂತೆ 3100 ಹೆಕ್ಟೇರ್‌ ಅರಣ್ಯ ಭಸ್ಮವಾಗಿತ್ತು. ಈ ಬೆಂಕಿಯನ್ನು ಹತೋಟಿಗೆ ತರಲು ಸುಮಾರು ಒಂದು ವಾರ ಅರಣ್ಯ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸಿದ್ದರು.

ಕಳೆದ ವರ್ಷದ ಭಾರಿ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಬಾರಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಬಾರದಂತೆ ತಡೆಯಲು ತೀವ್ರ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

2550 ಕಿ.ಮೀ. ಉದ್ದ ಬೆಂಕಿ ರೇಖೆ: ಬಂಡೀಪುರ ಅರಣ್ಯ ಒಂದು ಸಾವಿರ ಚದರ ಕಿ.ಮೀ.ನಷ್ಟು ವಿಸ್ತಾರ ಹೊಂದಿದ್ದು, 13 ಅರಣ್ಯ ವಲಯಗಳನ್ನು ಹೊಂದಿದೆ. ಆಕಸ್ಮಿಕ ಬೆಂಕಿ ತಗುಲಿದರೆ ಅದು ಅರಣ್ಯದ ಇನ್ನೊಂದು ಕಡೆಗೆ ವ್ಯಾಪಿಸದಂತೆ ಬೆಂಕಿ ರೇಖೆಗಳನ್ನು ಮಾಡಲಾಗುತ್ತದೆ. ಅಂತೆಯೇ ಈ ಬಾರಿ 2550 ಕಿ.ಮೀ.ನಷ್ಟು ದೂರದ ಬೆಂಕಿ ರೇಖೆಗಳನ್ನು ಈಗಾಗಲೇ ಮಾಡಲಾಗಿದೆ.

ತಲಾ 5 ಸಾವಿರ ಲೀಟರ್‌ ಸಾಮರ್ಥ್ಯದ 12 ನೀರಿನ ಟ್ಯಾಂಕರ್‌ಗಳನ್ನು ಇರಿಸಲಾಗಿದೆ. ಪ್ರತಿ ಅರಣ್ಯ ವಲಯದಲ್ಲಿಯೂ 2 ಜೀಪ್‌ಗ್ಳನ್ನು ಸನ್ನದ್ಧವಾಗಿರಿಸಲಾಗಿದೆ. ಸಂದರ್ಭ ಬಂದರೆ ಸಫಾರಿ ವಾಹನಗಳನ್ನೂ ಸಹ ಬಳಸಲಾಗುತ್ತದೆ. ಕಾಡ್ಗಿಚ್ಚನ್ನು ಸಮರ್ಥವಾಗಿ ಎದುರಿಸಲು 440 ಬೆಂಕಿ ವಾಚರ್‌ಗಳನ್ನು ಜ. 1ರಿಂದಲೇ ನೇಮಕ ಮಾಡಿಕೊಳ್ಳಲಾಗಿದೆ. ಇವರು ಬೇಸಿಗೆ ಮುಗಿಯುವವರೆಗೂ ಕರ್ತವ್ಯ ನಿರ್ವಹಿಸಲಿದ್ದಾರೆ.

Advertisement

ಈ ಬೆಂಕಿ ವಾಚರ್‌ಗಳಿಗೆ ಮುಂಚೆ ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿತ್ತು. ಈ ಬಾರಿ ವಾರಕ್ಕೊಮ್ಮೆ ವೇತನ ನೀಡಲಾಗುತ್ತಿದೆ. ಇದಲ್ಲದೇ, ಕಳ್ಳ ಬೇಟೆ ತಡೆ ಶಿಬಿರದ 200 ವಾಚರ್‌ಗಳು ಹಾಗೂ ಇಲಾಖೆಯ 250 ಮಂದಿ ಸಿಬ್ಬಂದಿ ಕಾಡ್ಗಿಚ್ಚು ತಡೆಯಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 900 ಮಂದಿ ಅರಣ್ಯ ಸಿಬ್ಬಂದಿ ಈ ಬಾರಿ ಕಾಡಿನ ಬೆಂಕಿ ತಡೆಯಲು ಸಜ್ಜಾಗಿದ್ದಾರೆ.

ಬೀದಿ ನಾಟಕ, ರೇಡಿಯೋ ಕಾರ್ಯಕ್ರಮ: ಕಾಡಿನ ಬೆಂಕಿ ಬಗ್ಗೆ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಅರಿವು ಮೂಡಿಸಲು 30ಕ್ಕೂ ಅಧಿಕ ಬೀದಿ ನಾಟಕಗಳನ್ನು ಅರಣ್ಯ ಪ್ರಾಯೋಜಿಸುತ್ತಿದೆ. ಜೊತೆಗೆ ಮೈಸೂರು ಆಕಾಶವಾಣಿಯಲ್ಲಿ ಪ್ರತಿದಿನ ಕಾಡ್ಗಿಚ್ಚು ತಡೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾಡ್ಗಿಚ್ಚು ತಡೆಯಲು ಅರಣ್ಯದಂಚಿನ ಜನರ ಸಹಕಾರ ಅತ್ಯಗತ್ಯ. ಹಾಗಾಗಿ ಅರಣ್ಯ ದಂಚಿನ ಗ್ರಾಮಗಳಲ್ಲಿ ಅರಣ್ಯಾಧಿಕಾರಿಗಳು ಗ್ರಾಮ ಸಭೆಗಳನ್ನು ನಡೆಸುತ್ತಿದ್ದಾರೆ.

ಅಗ್ನಿಶಾಮಕದಳದ ನೆರವು ಈ ಬಾರಿಯ ವಿಶೇಷ: ಬೇಸಿಗೆಯಲ್ಲಿ ಕಾಡ್ಗಿಚ್ಚನ್ನು ಎದುರಿಸಲು ಈ ಬಾರಿ ಜಿಲ್ಲೆಯ ಅರಣ್ಯಗಳಲ್ಲಿ ಅಗ್ನಿಶಾಮಕ ದಳದ ನೆರವು ಪಡೆಯುತ್ತಿರುವುದು ವಿಶೇಷ. ಜಿಲ್ಲೆಯ ಬಂಡೀಪುರ ಹಾಗೂ ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯಗಳು ಒಂದಕ್ಕೊಂದು ಹೊಂದಿಕೊಂಡಿ ರುವುದರಿಂದ ಎರಡೂ ಅರಣ್ಯಗಳಲ್ಲಿ ಕಾರ್ಯಾಚರಣೆ ಸಲುವಾಗಿ ಅಗ್ನಿಶಾಮಕ ಸಿಬ್ಬಂದಿ ನೆರವು ಪಡೆಯಲು ಅನುದಾನ ಮೀಸಲಿಡಲಾಗಿದೆ. ಇದಕ್ಕಾಗಿ ಅಗ್ನಿಶಾಮಕ ಇಲಾಖೆಗೆ 50 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಇದೇ ಮಾದರಿ, ಬಿಳಿಗಿರಿರಂಗನಾಥ ಅರಣ್ಯದಲ್ಲೂ ಅಗ್ನಿಶಾಮಕ ದಳದ ನೆರವು ಪಡೆಯಲಾಗುತ್ತಿದೆ. ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಅಗ್ನಿಶಾಮಕದಳದ ವಾಹನಗಳು ಅರಣ್ಯ ಪ್ರದೇಶದಲ್ಲಿ ಸನ್ನದ್ಧವಾಗಿರುತ್ತವೆ.

ಬಿಆರ್‌ಟಿಯಲ್ಲಿ 1551 ಕಿ.ಮೀ. ಬೆಂಕಿ ರೇಖೆ: ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯನ್ನು ಹೊಂದಿರುವ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತ ಅರಣ್ಯ (ಬಿಆರ್‌ಟಿ) ಪ್ರದೇಶದಲ್ಲಿ 1551 ಕಿ.ಮೀ. ಉದ್ದದ ಬೆಂಕಿ ರೇಖೆಗಳನ್ನು ನಿರ್ಮಿಸಲಾಗಿದೆ. ಬಿಆರ್‌ಟಿ ಅರಣ್ಯ 610 ಚದರ ಕಿ.ಮೀ. ವಿಸ್ತಾರ ಹೊಂದಿದ್ದು, 6 ವಲಯಗಳನ್ನು ಒಳಗೊಂಡಿದೆ. ಕೆ.ಗುಡಿ, ಪುಣಜನೂರು, ಬೈಲೂರು, ಯಳಂದೂರು, ಕೊಳ್ಳೇಗಾಲ ವನ್ಯಜೀವಿ ವಲಯಗಳನ್ನೂ, ಚಾಮರಾಜನಗರ ಪ್ರಾದೇಶಿಕ ಅರಣ್ಯ ವಲಯವನ್ನೂ ಹೊಂದಿದೆ.

ಪ್ರತಿ ವಲಯಕ್ಕೆ ತಲಾ 50 ಬೆಂಕಿ ವಾಚರ್‌ಗಳನ್ನು ನೇಮಿಸಿಕೊಳ್ಳಲಾಗಿದೆ.ಬೇಸಿಗೆ ಬಂದಾಗ ಮತ್ತಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಇದಲ್ಲದೇ, 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಇಲ್ಲಿ ತಲಾ 5 ಮಂದಿ ವಾಚರ್‌ಗಳಿದ್ದಾರೆ. ಇವರನ್ನೂ ಸಹ ಬೆಂಕಿ ತಡೆಗೆ ನಿಯೋಜಿಸಲಾಗಿದೆ. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 200 ಮಂದಿ ಸಿಬ್ಬಂದಿಯಿದ್ದು, ಇವರು ಸಹ ಕಾಡ್ಗಿಚ್ಚು ತಡೆಯ ಹೊಣೆ ಹೊತ್ತಿದ್ದಾರೆ.

ಈ ಬಾರಿ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ತಡೆಯಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 2550 ಕಿ.ಮೀ.ದೂರ ಬೆಂಕಿ ರೇಖೆ ನಿರ್ಮಿಸಲಾಗಿದೆ. ಬೆಂಕಿ ರೇಖೆ ರಚಿಸಲು 440 ಬೆಂಕಿ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅರಣ್ಯದಿಂದ 50 ಲಕ್ಷ ರೂ.ಗಳನ್ನು ಕಟ್ಟಿ ಅಗ್ನಿಶಾಮಕದಳ ವಾಹನ ಮತ್ತು ಸಿಬ್ಬಂದಿಯ ನೆರವನ್ನು ಪಡೆಯಲಾಗುತ್ತಿದೆ.
-ಬಾಲಚಂದ್ರ, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ

ಬಿಳಿಗಿರಿರಂಗನಾಥಸ್ವಾಮಿ ಅರಣ್ಯ ಪ್ರದೇಶ 610 ಚದರ ಕಿ.ಮೀ. ವ್ಯಾಪ್ತಿ ಹೊಂದಿದೆ. ಕಾಡ್ಗಿಚ್ಚು ತಡೆಯುವ ಸಲುವಾಗಿ 1551 ಕಿ.ಮೀ. ಉದ್ದದ ಬೆಂಕಿ ರೇಖೆಯನ್ನು ರಚಿಸಲಾಗಿದೆ. ಬೆಂಕಿ ಕಾಣಿಸಿಕೊಂಡರೆ ಅದನ್ನು ನಂದಿಸಲು 6 ವಲಯಗಳಿಂದ ಪ್ರತಿ ವಲಯಕ್ಕೂ 50 ಬೆಂಕಿ ವಾಚರ್‌ಗಳನ್ನು ನೇಮಿಸಿಕೊಳ್ಳಲಾಗಿದೆ.
-ಎಸ್‌. ಸಂತೋಷ್‌ಕುಮಾರ್‌, ಡಿಸಿಎಫ್. ಬಿಆರ್‌ಟಿ

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next