Advertisement

ಹತ್ತು ದಿನಗಳ ಬೆಳಗಾವಿ ಅಧಿವೇಶನಕ್ಕೆ ತೆರೆ

06:00 AM Nov 25, 2017 | |

ಬೆಳಗಾವಿ: ಕುಂದಾನಗರಿಯಲ್ಲಿ ಹತ್ತು ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಅಧಿವೇಶನ ಕೆಲವು ಮಹತ್ವದ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಯಾಯಿತಲ್ಲದೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್‌ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಲು ವೇದಿಕೆಯಾಯಿತು.

Advertisement

ರಾಜಕೀಯವಾಗಿ ಜಟಾಪಟಿಗೆ ಕಾರಣವಾಗ ಬಹುದು ಎಂಬ ನಿರೀಕ್ಷೆ ಇದ್ದ ವಿದ್ಯುತ್‌ ಖರೀದಿ ಹಗರಣ ಕುರಿತು ವರದಿ ಮಂಡನೆಯಾಯಿತಾದರೂ ಚರ್ಚೆಗೆ ಅವಕಾಶ ಸಿಗದ ಕಾರಣ ಠುಸ್‌ ಆದಂತಾಯಿತು. ಇನ್ನು  ಹತ್ತು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ನಿರೀಕ್ಷೆಯಂತೆ ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣದಲ್ಲಿ ಸಚಿವ ಜಾರ್ಜ್‌ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿರುವುದು, ನೈಸ್‌ ಹಗರಣ, ಲ್ಯಾಪ್‌ಟಾಪ್‌ ಹಗರಣ ಸದ್ದು ಮಾಡಿತಾದರೂ ವಿಪಕ್ಷಗಳ ಮನದಾಳದಂತೆ ತಾರ್ಕಿಕ ಅಂತ್ಯ ಕಾಣಲಿಲ್ಲ.

ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ನಡುವೆಯೂ ಸಮನ್ವಯತೆ ಇರಲಿಲ್ಲ. ಬಿಜೆಪಿ ಜಾರ್ಜ್‌ ಪ್ರಕರಣ ಬೆನ್ನತ್ತಿದ್ದರೆ ಜೆಡಿಎಸ್‌ ನೈಸ್‌ ಹಾಗೂ ವಿದ್ಯುತ್‌ ಖರೀದಿ ಹಗರಣದ ಚರ್ಚೆಗೆ ಪಟ್ಟು ಹಿಡಿಯಿತು. ಸರಕಾರದ ವಿರುದ್ಧ ಮುಗಿಬೀಳುವಲ್ಲಿ ಎರಡೂ ಪಕ್ಷಗಳು ಹತ್ತೂ ದಿನ ಒಟ್ಟಾಗಲೇ ಇಲ್ಲ. ಕೆಲವು ವಿಚಾರಗಳಲ್ಲಿ ಜೆಡಿಎಸ್‌ನ ತಟಸ್ಥ ಧೋರಣೆ ಸರಕಾರಕ್ಕೆ ವರವೂ ಆಯಿತು.

ವಿದ್ಯುತ್‌ ಖರೀದಿ ಹಗರಣದಲ್ಲಿ ನೇರವಾಗಿ ಹಿಂದಿನ ಬಿಜೆಪಿ ಸರಕಾರದ ಅವಧಿಯ ಶೋಭಾ ಕರಂದ್ಲಾಜೆ ಅವರ ಹೆಸರು ಪ್ರಸ್ತಾವ ಮಾಡಿದ್ದರೂ ಬಿಜೆಪಿ ಸದಸ್ಯರು ತುಟಿಕ್‌ ಪಿಟಿಕ್‌ ಎನ್ನದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ವಿರುದ್ಧ ಕೊಲೆಗಡುಕ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ವಿರುದ್ಧವೇ ಹಕ್ಕುಚ್ಯುತಿಗೆ ಸಚಿವ ಜಾರ್ಜ್‌ ಮುಂದಾಗಿದ್ದು ಗದ್ದಲಕ್ಕೆ ಕಾರಣವಾಯಿತು.

ಗದ್ದಲ-ಕೋಲಾಹಲ, ಧರಣಿ, ಪ್ರತಿಭಟನೆ ನಡೆವೆಯೂ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ತಡರಾತ್ರಿವರೆಗೂ ಕಲಾಪ ನಡೆಸಿ ಮಹತ್ವದ ಮಸೂದೆಗಳ ಅಂಗೀಕಾರವಾಗುವಂತೆ ನೋಡಿಕೊಂಡು ಜಾಣತನ ತೋರಿದ ಸರಕಾರ, ವಿಪಕ್ಷ  ಇತರ ಬೇಡಿಕೆಗಳ ಬಗ್ಗೆ ಮೌನ ವಹಿಸಿತು.

Advertisement

ವಿಧಾನಸಭೆಯಲ್ಲಿ ಹತ್ತು ದಿನಗಳ ಅಧಿವೇಶನದಲ್ಲಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌ ಹಿನ್ನೆಲೆಯಲ್ಲಿ ಜಾರ್ಜ್‌ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಒಂದು ದಿನದ ಕಲಾಪ ಬಲಿಯಾದರೆ, ಅಂತಿಮ ದಿನ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಬಲಿಯಾಯಿತು. ಹೀಗಾಗಿ ಸದನ ಆರಂಭ ಮತ್ತು ಅಂತ್ಯ ಎರಡೂ ಗದ್ದಲದಲ್ಲೇ ಆಯಿತು.

ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ ಹಾಗೂ ಸರಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಸುಧಾರಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ, ವಾಸಿಸುವವನೇ ನೆಲದೊಡೆಯ ಉದ್ದೇಶದ ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್‌ಗ್ಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಭೂ ಸುಧಾರಣೆ ತಿದ್ದುಪಡಿ ಮಸೂದೆ ಸಹಿತ 11 ಮಸೂದೆಗಳಿಗೆ ಅಂಗೀಕಾರ ಪಡೆಯುವಲ್ಲಿ ಸರಕಾರ ಯಶಸ್ವಿಯಾಯಿತು. ಕಂಬಳಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವ ಮಸೂದೆಗೂ ಅಂಗೀಕಾರ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next