Advertisement

ಶುದ್ಧಗಂಗಾ ಘಟಕಗಳಿಗೆ ಸೆಲ್ಕೊ ಸೋಲಾರ್‌ ಇನ್ವರ್ಟರ್‌

12:20 AM Sep 28, 2021 | Team Udayavani |

ಬೆಳ್ತಂಗಡಿ: ಹಿಂದೆ ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆಯ ಕುರಿತು ಜಾಗೃತಿ ಇರಲಿಲ್ಲ, ಆದರೆ ಇಂದು ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿ ಬಳಕೆಯಡೆಗೆ ಮಹತ್ವದ ತಿರುವು ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಸ್ಥಾಪಿಸಿರುವ “ಶುದ್ಧಗಂಗಾ’ ಯೋಜನೆಯನ್ನು ಗಮನಿಸಿ ಸೆಲ್ಕೋ ಫೌಂಡೇಶನ್‌ ಆಯ್ದ 40 ಘಟಕಗಳಿಗೆ ಉಚಿತ ಸೋಲಾರ್‌ ಇನ್ವರ್ಟರ್‌ಗಳನ್ನು ಅಳವಡಿಸಲು ಇಚ್ಛಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಎಸ್‌ಕೆಡಿಆರ್‌ಡಿಪಿ ಆಶ್ರಯದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳಿಗೆ ಉಚಿತ ಸೋಲಾರ್‌ ಇನ್ವರ್ಟರ್‌ ಅಳವಡಿಸುವ ಕುರಿತು ಸೋಮವಾರ ಧರ್ಮಸ್ಥಳದಲ್ಲಿ ನಡೆದ ವಾರ್ಷಿಕ ನಿರ್ವಹಣಾ ಒಪ್ಪಂದ ಪತ್ರವನ್ನು ಸೆಲ್ಕೋ ಜತೆಗೆ ವಿನಿಮಯಗೊಳಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಕಡುಬಡವರಿಗೂ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಯೋಜನೆ ಇದಾಗಿದೆ. ಪ್ರತೀ ಘಟಕಕ್ಕೆ 6 ಲಕ್ಷದಂತೆ 40 ಘಟಕಗಳಿಗೆ 2.40 ಕೋಟಿ ರೂ. ವೆಚ್ಚ ತಗಲಲಿದೆ. ಈ ವೆಚ್ಚವನ್ನು ಪೂರ್ತಿಯಾಗಿ ಸೆಲ್ಕೋ ಫೌಂಡೇಶನ್‌ ಭರಿಸಲಿದೆ ಹಾಗೂ ಮುಂದಿನ ಒಂದು ವರ್ಷದವರೆಗೆ ನಿರ್ವಹಣೆಯನ್ನು ಉಚಿತ ವಾಗಿ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು

ಸೋಲಾರ್‌ ಯುಗದ ಕ್ರಾಂತಿ
ಸೆಲ್ಕೋ ಫೌಂಡೇಶನ್‌ ಸಿಇಒ ಡಾ| ಹರೀಶ್‌ ಹಂದೆ ಮಾತನಾಡಿ, ಭವಿಷ್ಯದಲ್ಲಿ ಸೋಲಾರ್‌ ಈ ದೇಶದ ಚಿತ್ರಣವನ್ನು ಬದಲಿಸಲಿದೆ. 2030ರ ಅವಧಿಗೆ ಸೋಲಾರ್‌ ಯುಗದ ಕ್ರಾಂತಿಯಾಗಲಿದೆ. ಸೆಲ್ಕೊ ಭವಿಷ್ಯದಲ್ಲಿ ಜೀವನಾಧರಿತ ಸಾಧನಗಳ ಅನ್ವೇಷಣೆಗೆ ಮುಂದಾಗಿದೆ ಎಂದರು.

Advertisement

321 ಶುದ್ಧಗಂಗಾ ಘಟಕ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ಡಾ| ಹೆಗ್ಗಡೆ ಅವರ ಅಪೇಕ್ಷೆಯಂತೆ ಬಡವರಿಗೂ ಅತ್ಯಂತ ಕಡಿಮೆ ದರದಲ್ಲಿ ಶುದ್ಧನೀರು ತಲುಪಬೇಕೆನ್ನುವ ನಿಟ್ಟಿನಲ್ಲಿ 2009ರಿಂದ ಆರಂಭಿಸಿ ಇಂದು ರಾಜ್ಯದಾದ್ಯಂತ 321 ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ 81,000 ಜನ ಪ್ರತೀ ನಿತ್ಯ 16,20,000 ಲೀಟರ್‌ ಶುದ್ಧನೀರನ್ನು ಪಡೆಯು ತ್ತಿದ್ದಾರೆ ಎಂದರು. ಸೋಲಾರ್‌ ಅಳವಡಿಕೆಯಿಂದ ವಾರ್ಷಿಕ ಸುಮಾರು 21 ಲಕ್ಷ ರೂ. ಮೊತ್ತ ಉಳಿತಾಯವಾಗಲಿದೆ ಎಂದರು.

ಯೋಜನೆಯ ಸಿಇಒ ಅನಿಲ್‌ ಕುಮಾರ್‌ ಎಸ್‌.ಎಸ್‌., ಸೆಲ್ಕೋ ಸೋಲಾರ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ್‌ ಪೈ, ಯೋಜನೆಯ ಪ್ರಾದೇಶಿಕ ಹಣಕಾಸು ನಿರ್ದೇಶಕ ಶಾಂತಾರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸೆಲ್ಕೋ ಸೋಲಾರ್‌ನ ಗುರುಪ್ರಕಾಶ್‌ ಶೆಟ್ಟಿ, ಸಸ್ಟೈನ್‌ ಪ್ಲಸ್‌ನ ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕರಾದ ಲಕ್ಷ್ಮಣ್‌ ಎಂ., ಯೋಜನಾಧಿಕಾರಿ ಯುವರಾಜ್‌ ಜೈನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next