Advertisement

ಮಕ್ಕಳಿಗೆ ಕೆರೆಯಿಂದ ಶಾಲೆಗೆ ನೀರು ತರುವ ಕಾಯಕ

06:08 PM Oct 03, 2021 | Team Udayavani |

ಗದಗ: ಶಾಲೆಯ ಮುಖ್ಯ ಗುರುಗಳು, ಎಸ್‌ಡಿಎಂಸಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ತಾಲೂಕಿನ ಹೊಂಬಳ ಗ್ರಾಮದ ಸರಕಾರಿ ಶಾಲಾ ಮಕ್ಕಳು ಪ್ರತಿನಿತ್ಯ ಅಪಾಯದ ಕದ ತಟ್ಟುತ್ತಿದ್ದಾರೆ. ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಶಾಲಾ ಕೆಲಸ ಕಾರ್ಯಗಳಿಗೆ ಮಕ್ಕಳನ್ನು ಬಳಕೆ ಮಾಡಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ, ತಾಲೂಕಿನ ಹೊಂಬಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಅಡುಗೆ ಸಹಾಯಕಿಯರು, ಸಿಬ್ಬಂದಿ ಇದ್ದರೂ, ಮಕ್ಕಳಿಂದ ನೀರು ತರಿಸಲಾಗುತ್ತಿದೆ. ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳಿಗೆ ತಳ್ಳುಗಾಡಿ ಕೊಟ್ಟು ಹೊಂಡಕ್ಕೆ ಕಳಿಸಲಾಗುತ್ತಿದೆ. ಅಡುಗೆ ಮಾಡಲು ಪಾತ್ರೆ ತೊಳೆಯಲು ಹಾಗೂ ಕುಡಿಯಲು ಸಾಕಾಗುವಷ್ಟು ಹತ್ತಾರು ಕೊಡ ನೀರು ತರುತ್ತಿದ್ದಾರೆ ಎಂಬುದು ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.

ಕೋವಿಡ್‌ ನಿಯಮಗಳ ಸಡಿಲಿಕೆ ಬಳಿಕ 6 ರಿಂದ ಉನ್ನತ ತರಗತಿಗಳ ಪುನಾರಂಭಗೊಂಡಿವೆ. ಆ ಪೈಕಿ ಹೊಂಬಳ ಶಾಲೆಯ 6 ಮತ್ತು 7ನೇ ತರಗತಿ ಸೇರಿದಂತೆ ಸುಮಾರು 80 ಮಕ್ಕಳಿದ್ದು, ಆ ಪೈಕಿ ಭಾಗಶಃ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಅವರಲ್ಲಿ ಪ್ರತಿನಿತ್ಯ ನಾಲ್ಕೈದು ಜನರ ಒಂದು ಗುಂಪು ಮಾಡಿ ನೀರಿಗೆ ಕಳಿಸಲಾಗುತ್ತಿದೆ. ಹೊಂಡ ಸುಮಾರು ಒಂದಾಳಷ್ಟು ಆಳ ಇದೆ. ಚಿಕ್ಕ ಮಕ್ಕಳಿದ್ದು, ಈಜು ಬರುವುದಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದರೆ, ಹುಡುಗಾಟದಲ್ಲಿ ನೀರಿಗೆ ಬಿದ್ದು ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ? ಸದ್ಯಕ್ಕೆ ಶಾಲೆಯಲ್ಲಿ ಬಿಸಿಯೂಟವೂ ನೀಡುತ್ತಿಲ್ಲ. ಆದರೂ, ಹತ್ತಾರು ಕೊಡ ನೀರು ಯಾಕೆ ಹೊರಿಸುತ್ತಿದ್ದಾರೆ ಎಂಬುದು ಪೋಷಕರ ಪ್ರಶ್ನೆ.

ನಮಗೆ ಗೊತ್ತೇ ಇಲ್ಲ-ನಾವು ಹೇಳಿಲ್ಲ:ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳಿಗೆ ನೀರು ತರಲು ಹೇಳುವುದಿಲ್ಲ. ಆದರೆ, ಇಂದು ನಮ್ಮ ಶಾಲೆ ಯಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಯಿಂದ ಗ್ರಾಮೀಣ ಕ್ರೀಡಾಕೂಟ ಆಯೋಜಿಸ ಲಾಗಿದೆ. ಅವರು ಹೇಳಿದ್ದರೋ ಗೊತ್ತಿಲ್ಲ. ಈ ಬಗ್ಗೆ ವಿಚಾರಿಸುತ್ತೇವೆ ಎಂದು ಜಾರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next