Advertisement

ಶನಿ ಕ್ರೂರಿಯೋ, ದಯಾಮಯನೋ?

12:38 PM Jun 16, 2018 | |

ಯಾಕಯ್ಯ ಶನಿರಾಯ ಕೋಪ ಮಾಡಲು ಬೇಡ ಆಕಳಾ ತುಪ್ಪದಲಿ ದೀಪಹಚ್ಚುವೆ. ಮಕ್ಕಳನು ಮರಿಗಳನು ಕಷ್ಟಪಡಿಸಲು ಬೇಡ ಹಿಟ್ಟುಕುಟ್ಟಿ ತಂಬಿಟ್ಟು ದೀಪ ಹಚ್ಚುವೆ. ನಿನ್ನಯಾ ಹೆಸರೇಳಿ ಒಳ್ಳೆಯಾ ಬ್ರಾಹ್ಮಣಗೆ ಎಣ್ಣೆಯಾನೊತ್ತಿ ಬಿಸಿನೀರನೆರೆವೆ.  ಬಿಳಿಯೆಲೆ ಕರಿಯಡಿಕೆ ಕರ್ಪೂರ ವೀಳ್ಯವನು ಉಡುಗೊರೆ ಸಹಿತ ನಿನಗೆ ಕೊಡುವೆ. ಏಳ್ನಾಡು ಶನಿರಾಯನನು ಊರಿಗೇ ಕಳಿಸುವಾಗ ಭಾಗ್ಯಲಕ್ಷ್ಮೀ  ಬರುವುದನು ನಾ ಕಂಡೆ. ಸಾಲಾಗಿ ಮನೆಕಟ್ಟಿ ಸಾಲು ದೀಪವ ಹಚ್ಚಿ ಕಾಪಾಡು ಬಾ ನಮ್ಮ ಶ್ರೀವೆಂಕಟೇಶ್ವರಾ…

Advertisement

ಯಾರಿಗಾದರೂ ಕೋಪ ಬಂದಾಗ “ಶನಿ’ ಎಂದು ಬೈಯುವುದನ್ನು ಕೇಳಿದ್ದೇವೆ. ಅಯ್ಯೋ, ಅವನೊಬ್ಬ ಶನಿಯಂಥವನು, ಇವನದೊಂದು ಶನಿಕಾಟದ ಥರಾ  ಎನ್ನುವುದನ್ನೂ ಕೇಳುತ್ತಿರುತ್ತೇವೆ. ಈ ಶನಿ ಅಷ್ಟು ಕೆಟ್ಟವನೇ? ಶನಿ, ಬರೀ ಕಷ್ಟಗಳನ್ನೇ ಕೊಡುತ್ತಾನೆಯೇ? ಅವನಲ್ಲಿ ಕರುಣೆಯೇ ಇಲ್ಲವೆ? ಅವನು ಕ್ರೂರಿಯೇ ಎಂಬೆಲ್ಲ ಸಂಶಯಗಳು ಎಲ್ಲರ ಮನದಲ್ಲೂ ಇರುತ್ತದೆ. ಶನಿಯ ಬಗ್ಗೆ ಕೊಂಚ ತಿಳಿಯೋಣ.

ನೀಲಾಂಜನ ಸಮಾಭಾಸಂ
ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ
ತಂ ನಮಾಮಿ ಶನೈಶ್ಚರಂ

ಎಂದು ಶನಿಯನ್ನು ಸ್ತುತಿಸುತ್ತಾರೆ. ಶನಿ ನೀಲವರ್ಣದವನು. ಸೂರ್ಯ ಪುತ್ರ. 
ಯಮನಿಗೆ ಅಣ್ಣ. ಸೂರ್ಯನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಸಂಜಾnದೇವಿ. ಮತ್ತೂಬ್ಬಳು ಛಾಯಾದೇವಿ. ಈ ಛಾಯಾದೇವಿಯ ಮಗನೇ ಶನಿ.  ಸೂರ್ಯನು ತಂದೆಯೇ ಆದರೂ ಶನಿಗೂ ಸೂರ್ಯನಿಗೂ ಬದ್ಧವೈರತ್ವ. 

ಜಾತಕದಲ್ಲಿ ಶನಿಯೊಂದಿಗೆ ಸೂರ್ಯ ಯುತಿಯೋಗದಲ್ಲಿದ್ದರೆ ಅಥವಾ ಸೂರ್ಯನು ಶನಿಯ ದೃಷ್ಟಿಗೆ ಪಾತ್ರನಾಗಿದ್ದರೆ ಅಂಥಹವರಿಗೆ ತಂದೆಯ ಭಾಗ್ಯ ಕಡಿಮೆ. ತಂದೆಯಿಂದ ದೂರ ಇರುವ ಯೋಗ ಅಥವಾ ತಂದೆಯನ್ನೇ ಕಳೆದುಕೊಳ್ಳುವ ಯೋಗ ಅಥವಾ ತಂದೆಯೊಡನಿದ್ದರೂ ಪರಸ್ಪರ ಸಂಬಂಧ ಸೌಹಾರ್ದತೆಯಿಂದ ಕೂಡಿರುವುದಿಲ್ಲ. ಏತಿ ಎಂದರೆ ಪ್ರೇತಿ ಎನ್ನುವಂಥ ಒಡಕು ಮನಸ್ಸು. ಯಾವಾಗಲೂ ಹಣಾಹಣಿ ಜಗಳ. ತಂದೆ ಹೇಳಿದ್ದು ಮಗನಿಗೆ ರುಚಿಸುವುದಿಲ್ಲ. ಮಗ ಹೇಳಿದ್ದು ತಂದೆಗೆ ಪಥ್ಯವಾಗುವುದಿಲ್ಲ. 

Advertisement

ಶನಿಗೆ ಮಿತ್ರರು ಬುಧ, ಶುಕ್ರ ಮತ್ತು ರಾಹು. ಶತೃಗಳು ಕುಜ, ಕೇತು ಹಾಗೂ ಸೂರ್ಯ. ಗುರು, ಚಂದ್ರ ಸಮಬಲರು. ಆದರೂ ಶನಿಯ ದೃಷ್ಟಿ ಬಿದ್ದರೆ ಚಂದ್ರ ಮಂಕಾಗುತ್ತಾನೆ. ಶನಿಯ ರಾಶಿಗಳು ಮಕರ ಹಾಗೂ ಕುಂಭ, ಇದರಲ್ಲಿ ಕುಂಭ ಶನಿಗೆ ತ್ರಿಕೋನ ಸ್ಥಾನಕೂಡ. ಕುಂಭದಲ್ಲಿ ಶನಿ ಬಲಿಷ್ಠ. ಶನಿಗೆ ಉತ್ಛರಾಶಿ ತುಲಾ ಹಾಗೂ ನೀಚ ರಾಶಿ ಮೇಷ. ಶನಿ, ಸೂರ್ಯನ ರಾಶಿಯಾದ ಸಿಂಹದಲ್ಲಿ, ಕುಜನ ರಾಶಿಯಾದ ಮೇಷ ಮತ್ತು ವೃಶ್ಚಿಕದಲ್ಲಿ ಇದ್ದರೆ ಬಲು ಕ್ರೂರಿಯಾಗಿರುತ್ತಾನೆ. ಶತೃವಿನ ಮನೆಯಲ್ಲಿ ನಾವು ಅನಿವಾರ್ಯವಾಗಿ ಉಳಿಯಬೇಕಾಗಿ ಬಂದಾಗ ಹೇಗೆ ಚಡಪಡಿಸುತ್ತೇವೋ ಹಾಗೆಯೇ, ಶನಿಯೂ ಚಡಪಡಿಸುತ್ತಾನೆ. ಶನಿಗೆ ಯೋಗಕಾರಕ ಶುಕ್ರ. ಆಪ್ತಮಿತ್ರ ಬುಧ. ಹೀಗಾಗಿ ಶನಿಯು ವೃಷಭ, ತುಲಾ ಹಾಗೂ ಮಿಥುನ ಕನ್ಯಾದಲ್ಲಿ ನೆಮ್ಮದಿಯಾಗಿ ನಿರಾತಂಕವಾಗಿ ಇರುತ್ತಾನೆ. ಧನುಸ್ಸು, ಮೀನ ಹಾಗೂ ಕಟಕದಲ್ಲಿ ಮುಗುಮ್ಮಾಗಿ ಇರುತ್ತಾನೆ. ಶನಿಯ ಸಂಚಾರ ಒಂದು ರಾಶಿಯಿಂದ ಮತ್ತೂಂದು ರಾಶಿಗೆ ತೆಗೆದುಕೊಳ್ಳುವ ಸಮಯ ಎರಡೂವರೆ ವರ್ಷಗಳು. ಹೀಗಾಗಿ ಗೋಚಾರದಲ್ಲಿ ಗುರುಬಲವನ್ನು ಹೇಗೆ ನೋಡುತ್ತಾರೋ ಹಾಗೆಯೇ ಶನಿಯ ಸಂಚಾರಕ್ಕೂ ಅಷ್ಟೇ ಮಹತ್ವವಿದೆ. 

 ಶನಿ ಏನನ್ನು ಕೊಟ್ಟರೂ ಸುಮ್ಮನೆ ಕೊಡುವುದಿಲ್ಲ. ಕಷ್ಟದ ಪರಂಪರೆಯನ್ನೇ ಮೊದಲು ಕೊಟ್ಟು ಅದರಲ್ಲಿ ನಮ್ಮನ್ನು ಬೇಯಿಸಿ, ಬಸವಳಿಸಿ ನಂತರ ಸಿರಿಸಂಪತ್ತನ್ನು ಕೊಡುತ್ತಾನೆ. ಜೀವನದ ಕಠೊರತೆಯನ್ನು ಅರ್ಥಮಾಡಿಸಿ, ಆಮೇಲೆ ಅನುಕೂಲಗಳನ್ನು ಕೊಡುತ್ತಾನೆ. ಆಗ ನಾವು ಹಣವನ್ನು ವಿತರಣೆಯಾಗಿ ಖರ್ಚುಮಾಡುತ್ತೇವೆ. ಪೋಲು ಮಾಡುವುದಿಲ್ಲ. ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ ದಾನಿ. ಶನಿ ಸಿರಿಯನ್ನು ಕೊಟ್ಟರೂ, ಅಧಿಕಾರವನ್ನು ಕೊಟ್ಟರೂ ನಮಗೆ 30 ವರ್ಷ ಆದ ನಂತರವೇ ಕೊಡುತ್ತಾನೆ. ಶನಿ, ಯಾವಾಗಲೂ ನಿಧಾನ. ಅವನು ಮೇಷಾದಿ ಹನ್ನೆರಡು ರಾಶಿಗಳಲ್ಲಿ ಸಂಚರಿಸಲು 30 ವರ್ಷ ತೆಗೆದುಕೊಳ್ಳುತ್ತಾನೆ. ಅಂದರೆ ಒಂದು ಸುತ್ತಿಗೆ 30 ವರ್ಷ.

ನವಗ್ರಹಗಳಲ್ಲಿ ಸೂರ್ಯ ರಾಜನಾದರೆ ಶನಿ ಪೊಲೀಸಿನಂಥವನು. ಬೇರೆ ಯಾವ ಗ್ರಹಗಳಿಗೂ ಶಿಕ್ಷಿಸುವ ಅಧಿಕಾರ ಇಲ್ಲ. ಶನಿಗೆ ಮಾತ್ರವೇ ಶಿಕ್ಷಿಸುವ ಅಧಿಕಾರ ವಿರುವುದು.  ಹೀಗಾಗಿ, ಶನಿಯ ಸರದಿ ಬಂದಾಗ ಹಿಂದೆ ಮಾಡಿದ್ದ ತಪ್ಪುಗಳು ಕರ್ಮಗಳೆಲ್ಲ ಎದ್ದು ನಿಲ್ಲುತ್ತವೆ. ನಾವು ಮಾಡಿದ್ದ ತಪ್ಪುಗಳಿಗೆಲ್ಲ ಯೋಗ್ಯತಾನುಸಾರ ಶಿಕ್ಷೆ ವಿಧಿಸುತ್ತಾನೆ. ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ಆದರೆ ನಮ್ಮನ್ನು ಬಿಟ್ಟು ಹೋಗುವಾಗ ಬದುಕಿಗೆ ಏನಾದರೂ ಒಳ್ಳೆಯದು ಮಾಡಿಯೇ ಹೋಗುತ್ತಾನೆ. ಶನಿ ಎಂದೂ ನಮ್ಮನ್ನು ಬರಿದು ಮಾಡಿ ಹೋಗುವುದಿಲ್ಲ. 

ಯಾರಾದರೂ ತುಂಬಾ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಜೋತಿಷಿಗಳ ಬಳಿ ಹೋದಾಗ  ಜೋತಿಷಿಗಳು ಕುಂಡಲಿ ನೋಡಿದ ಕೂಡಲೇ ನಿನಗೆ ಸಾಡೆ ಸಾತಿ ಶನಿ ನಡೀತಿದೆ, ಅದಕ್ಕೇ. ಹೀಗೆ ಕಷ್ಟಗಳು, ಅಪವಾದಗಳು,  ಹಣಕ್ಕೆ ತಾಪತ್ರಯ ಮುಂತಾದ ಸಮಸ್ಯೆಗಳೆಲ್ಲಾ ಜೊತೆಯಾಗಿವೆ ಅನ್ನುತ್ತಾರೆ. 

ಸಾಡೆಸಾತಿ ಎಂದರೆ ಏನು? ಇದು ಎಷ್ಟು ವರ್ಷಗಳಿರುತ್ತದೆ? 
ಸಾಡೆಸಾತಿ ಶನಿ ಎಂದರೆ, ಶನಿ ನಮ್ಮ ರಾಶಿಯ ಹಿಂದಿನ ರಾಶಿ, ನಮ್ಮ ರಾಶಿ ಹಾಗೂ ನಮ್ಮ ಮುಂದಿನ ರಾಶಿಯಲ್ಲಿ ಸಂಚಾರ ಮಾಡುವ ಸಮಯವನ್ನು ಸಾಡೆಸಾತಿ ಶನಿ ಎನ್ನುತ್ತಾರೆ. ಸಾಡಸಾತಿ ಎಂದರೆ ಏಳೂವರೆ ವರ್ಷ. ಈಗಾಗಲೇ ಹೇಳಿದಂತೆ ಶನಿ ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತಾನೆ. ಉದಾ: ರವಿ ಎಂಬುವರ ರಾಶಿ ತುಲಾ ಎಂದಿಟ್ಟುಕೊಳ್ಳೋಣ. ಶನಿ, ಕನ್ಯಾರಾಶಿ ಪ್ರವೇಶ ಮಾಡಿದಾಗ ಅವರಿಗೆ ಸಾಡೆಸಾತಿ ಶನಿ ಪ್ರಾರಂಭ ಎಂದು ಅರ್ಥ. ಶನಿಯು ಕನ್ಯಾ ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುವ ಸಮಯವನ್ನು ಸಾಡೆ ಸಾತಿ ಸಮಯ ಎನ್ನುತ್ತಾರೆ.  ಈ ಸಮಯದಲ್ಲಿ ನಾವು ಏನೇ ಕೆಲಸ ಮಾಡಿದರೂ ಫ‌ಲ ನಿಧಾನವಾಗುತ್ತದೆ. ಸಾಡೆಸಾತಿ ಸಮಯದಲ್ಲಿ ಶನಿ ನಮ್ಮನ್ನು ಒರೆಗೆ ಹಚ್ಚಿ, ತಿದ್ದಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ನಮ್ಮ ದೌರ್ಬಲ್ಯ ಏನಿದೆಯೋ ಅದನ್ನೇ ಹಿಡಿದು ಕಷ್ಟ ಕೊಡುತ್ತಾನೆ.  ಎಂದೋ ಯಾವಾಗಲೋ ಮಾಡಿರುವ ತಪ್ಪು ಸಾಡೆಸಾತಿ ಸಮಯದಲ್ಲಿ ಧುತ್ತನೆ ನಮ್ಮ ಮುಂದೆ ನಿಲ್ಲುತ್ತದೆ. 

ಯಾವುದೋ ಪಾಪಕಾರ್ಯಗಳನ್ನು ಮಾಡಿದ್ದರೂ, ಅದು ಅಷ್ಟು ಸಮಯ ತೊಂದರೆ ಕೊಡದೆ ಇದ್ದದ್ದು ಸಾಡೆಸಾತಿ ಸಮಯದಲ್ಲಿ ಬಂದು ಅಟಕಾಯಿಸಿಕೊಳ್ಳುತ್ತದೆ. ಶನಿ ತೀವ್ರನಾಗಿದ್ದರೆ ಯಾವ ರೀತಿಯ ವಶೀಲಿಬಾಜಿಯೂ ನಡೆಯುವುದಿಲ್ಲ. ಯಾರ ಬೆಂಬಲ ನಮಗಿದ್ದರೂ ಅದು ಕೆಲಸಕ್ಕೆ ಬರುವುದಿಲ್ಲ. ಯಾರು ನಂಬಲಿ ಬಿಡಲಿ, ಶನಿ ತನ್ನ ಆಟ ತೋರಿಸಿಯೇ ತೋರಿಸುತ್ತಾನೆ. ನಮಗೆ ಯಾರೇ ವಿಐಪಿ ಗೊತ್ತಿದೆ ಎಂದರೂ, ನಾವು ಎಷ್ಟೇ ಹಣ ಖರ್ಚುಮಾಡಲು ತಯಾರಾಗಿದ್ದೇವೆ ಅದ್ಯಾವುದೂ ಶನಿಯ ಮುಂದೆ ನಡೆಯುವುದಿಲ್ಲ. ಒಂದು ಸಣ್ಣ ತಪ್ಪೇ ದೊಡ್ಡ ಅಪರಾಧವಾಗಿ ಪರಿಣಮಿಸಬಹುದು. ಸೆರೆಮನೆಗೂ ತಳ್ಳಬಹುದು. ಕೋರ್ಟ್‌ ಕಚೇರಿ ಅಲೆಯುವಂತೆ ಮಾಡುತ್ತಾನೆ. ನಮ್ಮದಲ್ಲದ ತಪ್ಪಿಗೂ ತಲೆತಗ್ಗಿಸಿ ನಿಲ್ಲುವಂತೆ ಮಾಡುತ್ತಾನೆ. ಮಾನಹಾನಿ ಮಾಡುತ್ತಾನೆ. ಆರೋಗ್ಯ ಕೆಡಿಸುತ್ತಾನೆ. ಆಕಸ್ಮಿಕ ಅಪಘಾತಗಳನ್ನು ಮಾಡಿಸಿ ಆಸ್ಪತ್ರೆವಾಸ ಅನುಭವಿಸುವಂತೆ ಮಾಡುತ್ತಾನೆ. ಕಚೇರಿಯಲ್ಲಿ ಕಿರಿಕಿರಿ, ಮೇಲಧಿಕಾರಿಗಳ ಅವಗಣನೆಗೆ ತುತ್ತಾಗುವುದು, ಬಡ್ತಿ ವಿಳಂಬವಾಗುವುದು.  ಅಪರಾಧದ ಹಿನ್ನೆಲೆಯಲ್ಲಿ ನಮ್ಮ ಹೆಸರು ಸಿಕ್ಕಿಕೊಂಡು ಕೆಲಸ ಕಳೆದುಕೊಳ್ಳುವಂತ ಪರಿಸ್ಥಿತಿ ಉಂಟಾಗುತ್ತದೆ. ಕೋಪಿಷ್ಠನೋ, ಸಿಡುಕನೋ, ದುಬುìದ್ಧಿಯವನೇ ಆದ ಮೇಲಧಿಕಾರಿ ಸಿಗುವುದು, ಅವನ ಕೈಕೆಳಗೆ ನೋಯುತ್ತ, ನವೆಯುತ್ತ ಕೆಲಸ ಮಾಡಬೇಕಾಗಿ ಬರುವುದು, ಚಾಡಿ ಹೇಳುವ ಸಹೋದ್ಯೋಗಿಗಳು ಸಿಗುವುದು, ಆಪ್ತ ಸ್ನೇಹಿತರೇ ಬೆನ್ನ ಹಿಂದೆ ಇರಿಯುವುದು, ಮನೆಯಲ್ಲಿ ಗಂಡ ಹೆಂಡತಿ ವಿನಾ ಕಾರಣ ಕಿತ್ತಾಡುವುದು, ಪರಸ್ಪರ ಒಮ್ಮತವಿಲ್ಲದೆ ಬಡಿದಾಡುವುದು.. ಇಂಥವೇ ಹಲವು ಬಗೆಯ ತೊಂದರೆಗಳು ಸಾಮಾನ್ಯವಾಗಿ…

ಸಾಡೆಸಾತಿ ಶನಿ ನಡೆಯುವಾಗ ಕಂಡು ಬರುತ್ತವೆ. ಇನ್ನೂ ಬೇರೆ ರೀತಿಯೂ ಕಷ್ಟನಷ್ಟಗಳೂ ಉಂಟಾಗಬಹುದು. ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ನಾವು ಏನೇ ಪೂಜೆ, ಪುನಸ್ಕಾರ ಶಾಂತಿ, ಹೋಮ ಮಾಡಿಸಿದರೂ ಮಾಡಿಸದೆ ಇದ್ದರೂ ಶನಿ ತಾನು ಮಾಡುವುದನ್ನು ಮಾಡಿಯೇ ಮಾಡುತ್ತಾನೆ. 

ಸಾಡೆಸಾತಿ ಶನಿಯ ಮೊದಲ ಐದು ವರ್ಷಗಳು ಅತಿ ಕಠಿಣವಾದ ಸಮಯ. ಕೊನೆಯ ಎರಡೂವರೆ ವರ್ಷಗಳು ಕೊಂಚ ಉಸಿರಾಡಲು ಅವಕಾಶ ಕೊಡುತ್ತಾನೆ. ಈ ಏಳೂವರೆ ವರ್ಷದಲ್ಲಿ ಮಧ್ಯೆ ಮಧ್ಯೆ ಗುರುಬಲ ಇದ್ದರೆ ಆ ಸಮಯದಲ್ಲಿ ಕಷ್ಟಗಳ ತೀವ್ರತೆ ಇರುವುದಿಲ್ಲ. ಆದರೆ ಒಮ್ಮೆ ಶನಿ ಸಾಡೆಸಾತಿ ಸಮಯ ಮುಗಿಸಿ ಹೊರಟಾಗ ನಮಗೆ ಜೀವನಕ್ಕೆ ಭದ್ರತೆಯನ್ನು ಮಾಡಿಕೊಟ್ಟೇ ಹೊರಡುತ್ತಾನೆ. ನಮ್ಮ ಕೈ ಖಾಲಿ ಮಾಡಿ ಖಂಡಿತಾ ಹೋಗುವುದಿಲ್ಲ.  

ಇಷ್ಟೇ ಅಲ್ಲದೆ ಅಷ್ಟಮ ಶನಿ ಹಾಗೂ ಪಂಚಮ ಶನಿ ಎಂಬ ಇನ್ನೆರಡು ಗಂಡಾಂತರಗಳಿವೆ. ನಮ್ಮ ಅರಾಶಿಯಿಂದ ಐದನೇ ರಾಶಿಯಲ್ಲಿ ಶನಿಯ ಸಂಚಾರ ಇದ್ದಾಗ ಅದು ಪಂಚಮ ಶನಿ ಎಂತಲೂ ನಮ್ಮ  ರಾಶಿಯಿಂದ ಎಂಟನೇ ರಾಶಿಯಲ್ಲಿ ಶನಿಯ ಸಂಚಾರ ಇದ್ದಾಗ ಅದದು ಅಷ್ಠಮ ಶನಿಯೆಂತಲೂ ಕರೆಯುತ್ತಾರೆ. ಈ ಪಂಚಮ ಶನಿ, ಖರ್ಚುಗಳನ್ನು ಸೃಷ್ಟಿ ಮಾಡುತ್ತಾನೆ. ಅಷ್ಠಮ ಶನಿಯಲ್ಲಿ ಆರೋಗ್ಯ ಕೆಡಬಹುದು. ಅವಮಾನಗಳಾಗಬಹುದು, ಕೆಲಸ ಹೋಗಬಹುದು ಇನ್ನೂ ತೀವ್ರ ಸ್ವರೂಪವಾದರೆ ಸೆರೆವಾಸವನ್ನೂ ಅನುಭವಿಸಬೇಕಾಗುವುದು. ಆದರೆ ಅಷ್ಠಮ ಹಾಗೂ ಪಂಚಮ ಶನಿಗಳ ಅವಧಿ ಎರಡೂವರೆ ವರ್ಷ ಮಾತ್ರ. ಆದರೆ ಶನಿಯ ಕಾಟವೆಂದರೆ ಭಯ ಪಡುವ ಅವಶ್ಯಕತೆ ಇಲ್ಲ. ಅವನ ಸಂಚಾರದಲ್ಲಿ ನಮ್ಮನ್ನು ತಿದ್ದಿ ತೀಡಿ ಸ್ವತ್ಛಗೊಳಿಸುತ್ತಾನೆ. ನಮ್ಮ ಮಿತ್ರರು ಯಾರು ಶತೃಗಳು ಯಾರು ಎಂಬುದನ್ನು ತಿಳಿಸಿಕೊಡುತ್ತಾನೆ. ನಾವು ಮಾಡಿದ ಪಾಪ ಕರ್ಮಫ‌ಲಗಳಿಂದ ನಮ್ಮನ್ನು ಶಿಕ್ಷಿಸುವ ಮೂಲಕ ನಮ್ಮ ಜೀವನವನ್ನು ಸ್ವತ್ಛಗೊಳಿಸುತ್ತಾನೆ. ಶಶಯೋಗದಲ್ಲಿ ಹುಟ್ಟಿದವರಿಗೆ ದೊಡ್ಡ ಅಧಿಕಾರವನ್ನೂ, ವಿಪುಲವಾದ ಸಂಪತ್ತನ್ನೂ ಕರುಣಿಸುತ್ತಾನೆ. 

ಮೊದಲು ಕಷ್ಟ ಆದ ಮೇಲೆ ನೆಮ್ಮದಿ
ಶನಿ ವೇದಾಂತ ಗ್ರಹ. ನಮಗೆ ಎಷ್ಟೇ ಕಷ್ಟ ಕೊಟ್ಟರೂ ಅದರಿಂದ ನಮಗೆ ಒಳಿತೇ ಆಗುತ್ತದೆ. ಕಷ್ಟಗಳ ಮೂಲಕ ನಮ್ಮ ಜೀವನವನ್ನು ತೊಳೆದು ಪವಿತ್ರಗೊಳಿಸುತ್ತಾನೆ. ನಮ್ಮ ಆತ್ಮಬಲವನ್ನು ವೃದ್ಧಿಮಾಡುತ್ತಾನೆ. ಈ ಕಷ್ಟಗಳು ಕ್ರೂರ ಎನಿಸಿದಾಗ ದೇವರ ಧ್ಯಾನ, ಜಪ-ತಪ ನಮ್ಮ ನೆರವಿಗೆ ಬಂದು ನಮಗೆ ಎದುರಿಸುವ ಚೈತನ್ಯವನ್ನು ಕೊಡುತ್ತದೆ. 

ಶನಿಯ ಅಧಿದೇವತೆ: ಹನುಮಂತ. ಶನಿಯ ಬಣ್ಣ: ನೀಲಿ. ಶನಿಯ ಲೋಹ: ಕಬ್ಬಿಣ. ಶನಿಯ ರತ್ನ: ನೀಲ ಅಥವಾ ಬ್ಲೂ ಸಫೈರ್‌. ವಾರ:ಶನಿವಾರ. ಸಂಖ್ಯೆ: 8

ವೀಣಾ ಚಿಂತಾಮಣಿ

Advertisement

Udayavani is now on Telegram. Click here to join our channel and stay updated with the latest news.

Next