Advertisement

ಸಾಣೇಹಳ್ಳಿಯ ಮಕ್ಕಳ ಯಕ್ಷಗಾನ ಕಲಿಕೆ-ಪ್ರಸ್ತುತಿ

01:18 PM Sep 23, 2017 | Team Udayavani |

ಕಲೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುತ್ತದೆ. ಯಾಕೆಂದರೆ ಅದು ಆ ಪ್ರದೇಶದ ಜನಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ. ಅದರ ಪ್ರಭಾವ ಎಷ್ಟೆಂದರೆ ಜನರ ಆಡುಭಾಷೆಯಲ್ಲಿಯೂ ಅದರ ಪಲುಕುಗಳು ಸಿಂಪಡನೆಗೊಂಡಿರುವುದನ್ನು ನಾವು ನೋಡುತ್ತೇವೆ. ನಮ್ಮ ಅನುಭವದ ವ್ಯಾಪ್ತಿಯೊಳಗೆ ಚಲಿಸಿ ಒಂದು ಆಯ್ದ ಉದಾಹರಣೆ ನೀಡುವುದಾದರೆ ಅದು ನಮ್ಮ ಕರಾವಳಿ ಕರ್ನಾಟಕದ ಯಕ್ಷಗಾನ. ಈ ಪ್ರದೇಶದ ಅನಕ್ಷರಸ್ಥರು ಕೂಡ ತಮ್ಮ ವ್ಯಾವಹಾರಿಕ ಜೀವನದಲ್ಲೂ ಯಕ್ಷಗಾನದ ಸಂದರ್ಭಗಳನ್ನು ಉಲ್ಲೇಖೀಸುವುದು ಸರ್ವೇ ಸಾಮಾನ್ಯ. ಇದು ಈ ಭಾಗದ ಜನರ ನಿಜ ಜೀವನದಲ್ಲಿ ಯಕ್ಷಗಾನದ ಪ್ರಭಾವ ಗಾಢವಾಗಿರುವುದನ್ನು ಸೂಚಿಸುತ್ತದೆ. 


ಇಂಥ ಪರಿಸರದಲ್ಲಿ ಬೆಳೆದವರಿಗೆ ಯಕ್ಷಗಾನದ ಕಲಿಕೆ ಅಷ್ಟು ಕಷ್ಟವಾಗಲಾರದು. ಹಾಗೆ ಕಲಿಸುವವರಿಗೂ ಶ್ರಮ ಭರಿತ ಕಾಯಕವಾಗದು. ಆದರೆ ಭಿನ್ನ ಪರಿಸರದಿಂದ ಬಂದವರಿಗೆ ಯಕ್ಷಗಾನದ ಕಲಿಕೆ ಸುಲಭವೂ, ಸುಲಿತವೂ ಆಗಲಾರದು. ನಿಜವಾಗಿಯೂ ಯಕ್ಷಗಾನ ಸರಳ ಮಾಧ್ಯಮವಲ್ಲ. ತಾಳ, ಲಯ, ಸಂಗೀತ, ನೃತ್ಯ, ಅಭಿನಯ, ವಾಚಿಕ ಹಾಗೂ ವಿಶಿಷ್ಟ ವೇಷ ಭೂಷಣಗಳ ಸಂಯೋಗ. ಹಾಗಾಗಿ ಯಕ್ಷಗಾನ ಸುಲಭ ಗ್ರಾಹ್ಯವಲ್ಲದ ಹಾಗೂ ದೀರ್ಘ‌ಕಾಲದ ತರಬೇತಿ ಅಪೇಕ್ಷಿಸುವಂತ ಕಲೆ ಎಂದೇ ಹೇಳಬಹುದು. ಹಾಗಾದರೆ ಕಿರು ಅವಧಿಯಲ್ಲಿ ಯಕ್ಷಗಾನ ಕಲಿಯಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಅದಕ್ಕೆ ಎರಡು ಅಂಶಗಳು ಮುಖ್ಯ. ಒಂದು ಕಲಿಸುವಾತನ ಸಂಕಲ್ಪ ಹಾಗೂ ನಿರಂತರ ಪರಿಶ್ರಮ, ಇನ್ನೊಂದು ಕಲಿಯುವಾತನ ಅದಮ್ಯ ಆಸಕ್ತಿ ಮತ್ತು ಉತ್ಸಾಹ. ಇಂತಹ ಒಂದು ಸಾಧ್ಯತೆಯನ್ನು ಕಾಯ ರೂಪಕ್ಕೆ ತಂದ ಶ್ರೇಯಸ್ಸು ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಸಲ್ಲುತ್ತದೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರು ಈಗಾಗಲೇ ಯಕ್ಷಗಾನಕ್ಕೆ ‘ಅನ್ಯದೇಶೀಯ’ರಾದ ಯುವಕ-ಯುವತಿಯರಿಗೆ ಹೀಗೆಯೇ ಅಲ್ಪಾವಧಿಯಲ್ಲಿ ತರಬೇತಿ ನೀಡಿ, ಯಶಸ್ವೀ ಪ್ರದರ್ಶನ ನೀಡಿದ್ದಾರೆ.

Advertisement

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಸುಮಾರು ಇಪ್ಪತ್ತು ಮಂದಿ ವಿದ್ಯಾರ್ಥಿಗಳ ತಂಡ ಯಕ್ಷಗಾನ ತರಬೇತಿಗಾಗಿ ಐರೋಡಿ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರಕ್ಕೆ ಬಂದಿದೆ. ಕಲಾಕೇಂದ್ರದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರ ನೇತೃತ್ವದಲ್ಲಿ ತರಬೇತಿ ಪಡೆದು, ಮೊನ್ನೆ ಸೆ.11ರಂದು ‘ಅಂಬಾ ಪ್ರಕರಣ’ವೆಂಬ ಪ್ರಸಂಗವನ್ನು ಕೇಂದ್ರದಲ್ಲಿ ಆಡಿ ತೋರಿಸಿದ್ದಾರೆ. ತಂಡದಲ್ಲಿ ಕೆಲವು ವಿದ್ಯಾರ್ಥಿನಿಯರೂ ಇದ್ದರು. ಇವರೆಲ್ಲರೂ ಉತ್ತರ ಕರ್ನಾಟಕದ ಕಡೆಯವರಾಗಿದ್ದು, ಯಕ್ಷಗಾನವನ್ನು ಕಂಡವರೂ ಅಲ್ಲ. ಹಾಗಾಗಿ ದಾಖಲೆಯ ಕಿರು ಅವಧಿಯ ತರಬೇತಿ ಪಡೆದು ನೀಡಿದ, ಪ್ರಥಮ ಪ್ರದರ್ಶನ ಇದಾಗಿದ್ದು ಕೇವಲ ಗುಣವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ವಿಹಿತ.

ಗುರು ಸದಾನಂದ ಐತಾಳರು ಸವಾಲಾಗಿಯೇ ಈ ಕಾರ್ಯವನ್ನು ಸ್ವೀಕರಿಸಿದ್ದಾರೆಂದರೆ ಉತ್ಪ್ರೇಕ್ಷೆಯಾಗಲಾರದು. ದೇಹಾಯಾಸವನ್ನು ಲೆಕ್ಕಿಸದೆ ತಾವೇ ಕುಣಿದು ಅಭಿನಯಿಸಿ ತೋರಿಸುತ್ತಾ ತರಬೇತಿಯಲ್ಲಿ ತಲ್ಲೀನರಾಗಿದ್ದರು ಎಂದು ಬೇರೆ ಹೇಳಬೇಕಾಗಿಲ್ಲ. ವಿದ್ಯಾರ್ಥಿಗಳೂ ಉತ್ಸಾಹದಿಂದ ಹಾಗೂ ಅತಿ ಶ್ರದ್ಧೆಯಿಂದ ಕಲಿತಿದ್ದಾರೆ ಎಂಬುದಕ್ಕೆ ಅವರು ನೀಡಿದ ಪ್ರದರ್ಶನದಲ್ಲಿ ತೋರಿದ ನಿರ್ವಹಣೆಯೇ ಸಾಕ್ಷಿ. ಅವರ ಹೆಜ್ಜೆ, ಅಂಗನ್ಯಾಸ -ಕರನ್ಯಾಸ, ನಿಲುವು ಹಾಗೂ ವಾಚಿಕದ ಶ್ರುತಿ ಗಮನಿಸುವಾಗ ಅವರ ಉದ್ದೇಶದ ಯಕ್ಷಗಾನ ಕಲಿಕೆ ಫ‌ಲಪ್ರದವಾಗಿದೆ ಎಂದರೆ ಅವಸರದ ಹೇಳಿಕೆಯಾಗಲಾರದು. ಎಲ್ಲ ವಿದ್ಯಾರ್ಥಿಗಳೂ ರಂಗದ ಮೇಲೆ ಒಂದಲ್ಲ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಭೀಷ್ಮನಾಗಿ ಮಧು ಎಂ., ಅಂಬೆಯಾಗಿ ಕು| ಅಕ್ಷತಾ, ಸಾಲ್ವನಾಗಿ ವಿಶ್ವನಾಥಸ್ವಾಮಿ, ಪರಶುರಾಮನಾಗಿ ಪ್ರಶಾಂತ್‌, ಪ್ರತಾಪಸೇನನಾಗಿ ಶ್ರೇಯಸ್‌ ಹಾಗೂ ಕಿರಾತನಾಗಿ ಸಂತೋಷ್‌- ಇವರುಗಳ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಇಲ್ಲಿ ಉಲ್ಲೇಖೀಸಲೇಬೇಕಾದ ಪಾತ್ರ ಅಂಬೆ. ಇದೊಂದು ವಿಶಿಷ್ಟ ಪಾತ್ರ. ಏಕಕಾಲದಲ್ಲಿ ದುಖ, ದುಮ್ಮಾನ, ಹತಾಶೆ, ರೋಷ, ಛಲ ಹೀಗೆ ಬಹುಭಾವನೆಗಳನ್ನು ಪ್ರಕಟಿಸಬೇಕಾದ ಪಾತ್ರ. ಅಕ್ಷತಾ ಅವರ  ನಿರ್ವಹಣೆ ಚೆನ್ನಾಗಿತ್ತು. ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ತರಬೇತುದಾರರ ಶ್ರಮ ಸಾರ್ಥಕ.

ಭಾಗವತರಾಗಿ ಕೇಶವ ಆಚಾರ್‌, ಶಶಿಕಲಾ ಪ್ರಭು ಮತ್ತು ಗಣೇಶ್‌ ಆಚಾರ್‌ ಸಹಕರಿಸಿದರೆ, ಮದ್ದಳೆವಾದಕರಾಗಿ  ರವಿಶಂಕರಲಿಂಗ ಹಾಗೂ ಚೆಂಡೆಯಲ್ಲಿ ಮಾಧವ ಮಣೂರು ಸಹಕರಿಸಿರುತ್ತಾರೆ. ಇಲ್ಲಿ ಹೇಳಲೇಬೇಕಾದ ಇನ್ನೊಂದು ವಿಚಾರವೆಂದರೆ, ಈ ಕಾರ್ಯಕ್ರಮದ ಹಿಂದಿನ ಚೇತನಶಕ್ತಿಯ ಮೂಲ ಕಲಾಕೇಂದ್ರದ ಕಾರ್ಯದರ್ಶಿಯವರಾದ ಎ. ರಾಜಶೇಖರ ಹೆಬ್ಟಾರ್‌. ಕೇಂದ್ರದಲ್ಲಿ ಭಾಗವತಿಕೆಯ ತರಬೇತಿ ನೀಡುವ ಜತೆಗೆ ಸದಾನಂದ ಮಂಟಪದಲ್ಲಿ ಯಕ್ಷಗಾನದ ಪ್ರದರ್ಶನ, ಕಮ್ಮಟ, ಗೋಷ್ಠಿ ಇತ್ಯಾದಿಗಳನ್ನು ಯಾವತ್ತೂ ಹಮ್ಮಿಕೊಳ್ಳಲಾಗುತ್ತಿದೆ. ಯಕ್ಷಗಾನ ಕುರಿತಾದ ಹೆಬ್ಟಾರರ ಕಳಕಳಿ ನಿಜವಾಗಿಯೂ ಶ್ಲಾಘನೀಯ. 

Advertisement

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next