Advertisement

ಅಂತರಗಂಗೆ ಕಳೆ ತೆಗೆಯೋದ್ಯಾರು? 

06:00 AM Aug 12, 2018 | |

ಸಾಲಿಗ್ರಾಮ ಪ.ಪಂ.ಯ ಮಾರಿಗುಡಿ ವಾರ್ಡ್‌ನಲ್ಲಿ ಈ ಬಾರಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ ಕ್ಷೇತ್ರದಲ್ಲಿ ಒಂದಷ್ಟು  ಕೆಲಸಗಳಾಗಿದ್ದು, ಮುಂದೆ ಆಯ್ಕೆಯಾಗುವ ಸದಸ್ಯರಿಗೂ ಒಂದಷ್ಟು ಕೆಲಸ ಬಾಕಿ ಇದೆ.

Advertisement

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಮಾರಿಗುಡಿ ವಾರ್ಡ್‌ 5ನೇ ಅತೀ ದೊಡ್ಡ ವಾರ್ಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃಷಿ ಭೂಮಿ ಇಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಒಂದು ಕಡೆ ಕೋಟತಟ್ಟು, ಮತ್ತೂಂದು ಕಡೆ ವಡ್ಡರ್ಸೆ ಗ್ರಾ.ಪಂ.ಗೆ ತಾಗಿಕೊಂಡು ಈ ಪ್ರದೇಶವಿದೆ. ಪೂರ್ವಕ್ಕೆ  ಬನ್ನಾಡಿ ಹೊಳೆಯಿಂದ ದೇಶಿಕೆರೆ ತಿಮ್ಮ ಪೂಜಾರಿ ಮನೆ ತನಕ ಹಾಗೂ ಪಶ್ಚಿಮಕ್ಕೆ ಎಲ್ಲಪ್ಪ ನಾಯಕನ ರಸ್ತೆಯಿಂದ ಚಿತ್ರಪಾಡಿ ಸ.ಹಿ.ಪ್ರಾ.ಶಾಲೆ ತನಕ, ದಕ್ಷಿಣಕ್ಕೆ ಚಿತ್ರಪಾಡಿ ಶಾಲೆಯಿಂದ ತಿಮ್ಮಪ್ಪ ಪೂಜಾರಿ ಮನೆ ಬನ್ನಾಡಿ ಹೊಳೆಯ ತನಕ ವ್ಯಾಪ್ತಿಯನ್ನು ಹೊಂದಿದೆ.

ಅಭ್ಯರ್ಥಿ ಯಾರು?
ಮಾರಿಗುಡಿ ವಾರ್ಡ್‌ ಹಿಂದೆ ಬಿಜೆಪಿಯ ಭದ್ರಕೋಟೆಯಾಗಿದ್ದು, ಕಾಂಗ್ರೆಸ್‌ ಪಕ್ಷ 2012ರವರೆಗೆ ಇಲ್ಲಿ ಗೆದ್ದ ಇತಿಹಾಸವಿಲ್ಲ ಎನ್ನಲಾಗುತ್ತಿದೆ.  2003ರಲ್ಲಿ ಶ್ಯಾಮ್‌ಸುಂದರ್‌ ನಾೖರಿ, 2008ರಲ್ಲಿ  ಸಂಧ್ಯಾ ಗಾಣಿಗ ಬಿಜೆಪಿಯಿಂದ  ಇಲ್ಲಿನ ಸದಸ್ಯರಾಗಿ ಆಯ್ಕೆಯಾಗಿದ್ದರು. 2013ರ ಚುನಾವಣೆ ಯಲ್ಲಿ ಮೊದಲ ಬಾರಿ ಕಾಂಗ್ರೆಸ್‌ನ ರತ್ನಾ ನಾಗರಾಜ್‌ ಗಾಣಿಗ ಬಿಜೆಪಿ ಸಂಧ್ಯಾ ಗಾಣಿಗರ ವಿರುದ್ಧ ಜಯಗಳಿಸಿದ್ದರು. 

ವಾರ್ಡ್‌ ಈ ಬಾರಿ ಹಿಂದುಳಿದ ವರ್ಗ ಬಿ. ಗೆ ಮೀಸಲಾಗಿದೆ. ಆದರೆ ವಾರ್ಡ್‌ನಲ್ಲಿ ಈ ವರ್ಗದವರ ಕೇವಲ  ನಾಲ್ಕೈದು ಮನೆಗಳಿವೆ.  ಹೀಗಾಗಿ ಅಭ್ಯರ್ಥಿಯ ಆಯ್ಕೆ  ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿದೆ.

ಆಗಬೇಕಾದ ಅಗತ್ಯ ಕೆಲಸಗಳು
ಕೋಟ ಮೂರುಕೈಯಲ್ಲಿ ಶೌಚಾಲಯ ಅಗತ್ಯವಿದ್ದು, ಇಲ್ಲಿ ಜಾಗದ ಸಮಸ್ಯೆ ಇದ್ದರೂ ಹೆದ್ದಾರಿ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಜಾಗದಲ್ಲಿ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದು ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದ್ದು ಈ ಕೆಲಸವೂ ಆಗಬೇಕಿದೆ. ಕುಂದಾಪುರ-ಉಡುಪಿ ರಸ್ತೆಯಲ್ಲಿ ಬಸ್‌ ನಿಲ್ದಾಣ, ರಿಕ್ಷಾ ನಿಲ್ದಾಣ ಅಗತ್ಯವಿದೆ. 

Advertisement

ಆದ ಕೆಲಸ
ನೀರಿನ ವ್ಯವಸ್ಥೆ

ಇಲ್ಲಿನ ಬೆಟ್ಲಕ್ಕಿ, ಹೊಳೆಕೆರೆ ಮುಂತಾದ ಕಡೆ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಬೇಸಿಗೆಯಲ್ಲಿ ಲಕ್ಷಾಂತರ ರೂ. ವ್ಯಯಿಸಿ ಟ್ಯಾಂಕರ್‌ ಮೂಲಕ ಇಲ್ಲಿಗೆ ನೀರು ಸರಬರಾಜು ಮಾಡಲಾಗುತಿತ್ತು. ಈ ಬಾರಿ 19 ಲಕ್ಷ ರೂ.ವೆಚ್ಚದಲ್ಲಿ ಪೈಪ್‌ಲೈನ್‌ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 

ಕಾಂಕ್ರೀಟೀಕರಣ
ವಾರ್ಡ್‌ನಲ್ಲಿ ಸಂಪರ್ಕಕ್ಕೆ  ಈ ಬಾರಿಯ ಆಡಳಿತದ‌ಲ್ಲಿ ಒತ್ತು ನೀಡಲಾಗಿತ್ತು. ಅದರಂತೆ ಚಿತ್ರಪಾಡಿ ಗಿರಿಮುತ್ತ ಕೋಳಿ ಫಾರ್ಮ್ನಿಂದ ರಘುರಾಮ್‌ ಐತಾಳರ ಮನೆ ತನಕ  ಹೊಸ ರಸ್ತೆ ರಚಿಸಬೇಕು  ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಾರಿ 11ಲಕ್ಷ ವೆಚ್ಚದಲ್ಲಿ ಹೊಸ ರಸ್ತೆ ರಚಿಸಲಾಗಿದ್ದು ಈ ಭಾಗದ ಸಂಪರ್ಕಕ್ಕೆ ಅನುಕೂಲವಾಗಿದೆ. ಇಲ್ಲಿ ಕಾಂಕ್ರೀಟ್‌ ಹಾಕಿದ ರಸ್ತೆ ನಿರ್ಮಿಸಲಾಗಿದೆ. 

ದಾರಿ ದೀಪ
ಬೆಟ್ಲಕ್ಕಿ ರಸ್ತೆ, ಗಿರಿಮುತ್ತು ರಸ್ತೆ, ನಾೖರಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿ ದಾರಿ ದೀಪ ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಾರಿ ಇಲ್ಲಿಗೆ  ದಾರಿದೀಪ ವ್ಯವಸ್ಥೆ ಮಾಡಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗಿದೆ.

ಸಿಲಿಕಾನ್‌ ಛೇಂಬರ್‌
ಚಿತ್ರಪಾಡಿ ಹಿಂದೂ ರುದ್ರಭೂಮಿಗೆ ಸಿಲಿಕಾನ್‌ ಛೇಂಬರ್‌ ಅಳವಡಿಕೆ ಮುಂತಾದ ಮೂಲ ಸೌಕರ್ಯಗಳು ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಾರಿ ಸಿಲಿಕಾನ್‌ ಛೇಂಬರ್‌ ಅಳವಡಿಕೆ, ಶೌಚಾಲಯ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಶವ ಸಂಸ್ಕಾರಕ್ಕೆ ಅನುಕೂಲವಾಗಿದೆ.

ರಸ್ತೆ ಅಭಿವೃದ್ಧಿ
13 ಲಕ್ಷ ರೂ. ವೆಚ್ಚದಲ್ಲಿ ಅಘೋರೇಶ್ವರ ರಸ್ತೆ, 17 ಲಕ್ಷ ರೂ. ವೆಚ್ಚದಲ್ಲಿ ಬೆಟ್ಲಕ್ಕಿ ರಸ್ತೆ, 8ಲಕ್ಷ ವೆಚ್ಚದಲ್ಲಿ ನಾೖರಿಕೇರಿ ರಸ್ತೆ, 12 ಲಕ್ಷ ರೂ. ವೆಚ್ಚದಲ್ಲಿ ದೇಶಿಕೆರೆ ರಸ್ತೆ, ಎಸ್‌.ಸಿ.ಕಾಲೋನಿ ರಸ್ತೆ, 7  ಲಕ್ಷ ರೂ. ಮಾರಿಗುಡಿ ರಸ್ತೆ, 6 ಲಕ್ಷ ರೂ. ವೆಚ್ಚದಲ್ಲಿ ರಮ್ಯ ಪ್ರಿಂಟಿಂಗ್ಸ್‌ ರಸ್ತೆ ಕಾಂಕ್ರೇಟೀಕರಣ ಕೈಗೊಳ್ಳಲಾಗಿದ್ದು  ಹತ್ತಾರು ಮನೆಗಳ ಸಂಪರ್ಕಕ್ಕೆ ಅನುಕೂಲವಾಗಿದೆ.

ಆಗದೆ ಇರುವ ಕೆಲಸ
ಇಲ್ಲಿನ ಅಂತರಗಂಗೆ ಸಮಸ್ಯೆಗೆ ರೈತ ಕಂಗಾಲಾಗಿದ್ದಾನೆ. ಇದರ ಹತೋಟಿಗೆ ಹೊಳೆಯ ಹೂಳೆತ್ತುವುದು ಪ್ರಮುಖ ಪರಿಹಾರವಾಗಿರುತ್ತದೆ. ಈ ಕುರಿತು ಪ್ರಸ್ತುತ ಸದಸ್ಯರಲ್ಲಿ ವಿಚಾರಿಸಿದರೆ,  ಇದು ಪ.ಪಂ. ಅನುದಾನದಲ್ಲಿ ಆಗುವ ಕೆಲಸವಲ್ಲ.  ಅಂತರಗಂಗೆ ನಿವಾರಣೆಗಾಗಿ ಮಡಿಸಾಲು ಹೊಳೆಯ ಹೂಳೆತ್ತಬೇಕು. ಇದಕ್ಕಾಗಿ 1.22 ಕೋಟಿ ರೂ. ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಣ್ಣ ನೀರಾವರಿ ಇಲಾಖೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ನಾೖರಿಬೆಟ್ಟಿನ ಅಂಗನವಾಡಿ ಕೇಂದ್ರ ಮನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ.  ಈ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಅಗತ್ಯವಿದೆ. ಸರಕಾರಿ ಜಾಗ ಲಭ್ಯವಿಲ್ಲದಿರುವುದು ಕಟ್ಟಡ ನಿರ್ಮಾಣಕ್ಕೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. ಪ.ಪಂ. ವ್ಯಾಪ್ತಿಯಲ್ಲಿ ಹಲವು ಸರಕಾರಿ ಜಾಗಗಳಿದ್ದು ಇವುಗಳನ್ನು ಗುರುತಿಸುವ ಕಾರ್ಯವಾಗಬೇಕು ಹಾಗೂ ಅಂಗನವಾಡಿಯಂತಹ ಅಗತ್ಯತೆಗೆ ಅದನ್ನು ಉಪಯೋಗಿಸಬೇಕು ಎನ್ನುವ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next