Advertisement

ಮಲೆ ತಪ್ಪಲಲ್ಲಿ ತಲ್ಲಣ: ತೆರೆದ ಅಯ್ಯಪ್ಪ ದೇಗುಲ; ಪೊಲೀಸರ ಜತೆ ಸಂಘರ್ಷ

06:00 AM Oct 18, 2018 | Team Udayavani |

ತಿರುವನಂತಪುರಂ/ನಿಳಕ್ಕಲ್‌: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಮುಕ್ತ ಪ್ರವೇಶ ವಿಚಾರ ಕೇರಳದಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಸಿದ್ದು, ಕೇರಳ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷವೇಪಟ್ಟಿದೆ. ನಿಳಕ್ಕಲ್‌, ಪಂಪಾ ನದಿ ತೀರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ. ತಿಂಗಳ ಪೂಜೆಗಾಗಿ ಬುಧವಾರ ಸಂಜೆ 5 ಗಂಟೆಗೆ ದೇಗುಲದ ಬಾಗಿಲು ತೆರೆಯಿತಾದರೂ, ಸುಪ್ರೀಂ ತೀರ್ಪಿನಂತೆ “ನಿಷೇಧಿತ ಗುಂಪಿನ’ ಯಾವ ಮಹಿಳೆಯರೂ ಪ್ರವೇಶಕ್ಕೆ ಆಸ್ಪದ ಸಿಗಲೇ ಇಲ್ಲ. ಬೆಳಗ್ಗೆಯಿಂದಲೂ ಮಹಿಳೆಯರ ಪ್ರವೇಶಕ್ಕೆ ತಡೆಯಾಗಿ
ನಿಂತಿದ್ದ ಪ್ರತಿಭಟನಾಕಾರರು ಈ ವಿಚಾರದಲ್ಲಿ ಯಶಸ್ಸು ಸಾಧಿಸಿದರು. ಬಿಗುವಿನ ಪರಿಸ್ಥಿತಿ ನಡುವೆಯೂ ಧೈರ್ಯ ವಹಿಸಿ ದೇಗುಲ ಪ್ರವೇಶಕ್ಕೆ ಬಂದ ಮಹಿಳೆಯರನ್ನು ತಡೆದ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಅಲ್ಲಲ್ಲಿ ಹಿಂಸಾಚಾರವೂ ಸಂಭವಿಸಿದೆ. ಪತ್ರಕರ್ತರೂ ಸೇರಿ 10 ಮಂದಿಗೆ ಈ ಘರ್ಷಣೆಯಲ್ಲಿ ಗಾಯಗಳಾಗಿವೆ. 

Advertisement

ಹಿಂಸಾಚಾರ: ಶಬರಿಮಲೆ ದೇಗುಲದ ಪ್ರಮುಖ ಬೇಸ್‌ ಪಾಯಿಂಟ್‌ ಆಗಿರುವ ನಿಳಕ್ಕಲ್‌ನಲ್ಲಿ ಹೆಚ್ಚು ಹಿಂಸಾಚಾರ ನಡೆದಿದೆ. ದೇಗುಲದತ್ತ ಮಹಿಳೆಯರು ಹೋಗದಂತೆ ತಡೆಯುವ ಸಲುವಾಗಿ ಮಂಗಳವಾರವೇ ಇಲ್ಲಿ ಪ್ರತಿಭಟನಾನಿರತರ ದಂಡೇ ನೆರೆದಿತ್ತು. ಬುಧವಾರ ಬೆಳಗ್ಗೆಯಿಂದಲೂ ಈ ದಂಡು ಪ್ರತಿಯೊಂದು ವಾಹನವ ನ್ನು ಪರೀಕ್ಷಿಸಿ ಮುಂದಕ್ಕೆ ಬಿಡುತ್ತಿತ್ತು. ವಾಹನದಲ್ಲಿ
ಮಹಿಳೆಯರು ಕಂಡ ಕೂಡಲೇ ಅವರನ್ನು ಇಳಿಸುತ್ತಿತ್ತು, ಇಲ್ಲವೇ ಮುಂದಕ್ಕೆ ಹೋಗಲು ಬಿಡುತ್ತಲೇ ಇರಲಿಲ್ಲ. ಈ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ ಪೊಲೀಸರು ದೇಗುಲ ಪ್ರವೇಶಕ್ಕೆ ಬಂದಿದ್ದ ಮಹಿಳೆಯರಿಗೆ ಭದ್ರತೆ ಕೊಡಲು ಮುಂದಾಗಿದ್ದರು. ಈ ವೇಳೆ  ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಹಲವು ಪತ್ರಕರ್ತರು
ಗಾಯಗೊಂಡಿದ್ದಾರೆ. ಇದರ ಜತೆಗೆ ಈ ಪ್ರದೇಶದಲ್ಲಿ ಪ್ರತಿಭಟನಾಕಾರರು ಹಾಕಿಕೊಂಡಿದ್ದ ಟೆಂಟ್‌ಗಳನ್ನೂ ಪೊಲೀಸರು ಕಿತ್ತುಹಾಕಿ ದರು. ಪ್ರತಿಭಟನಾಕಾರರೂ ಸಿಕ್ಕ ಸಿಕ್ಕ ವಾಹನಗಳನ್ನು ನಾಶ ಮಾಡಿದರು.

ಇಂದು ಬಂದ್‌: ಹಲವಾರು ಹಿಂದೂ ಸಂಘಟನೆಗಳನ್ನೊಳಗೊಂಡ ಶಬರಿಮಲಾ ಸಂರಕ್ಷಣಾ ಸಮಿತಿ ಮತ್ತು ಪ್ರವೀಣ್‌ ತೋಗಾಡಿಯಾ ನೇತೃತ್ವದ ಅಂತಾರಾಷ್ಟ್ರೀಯ ಹಿಂದೂ ಪರಿಷದ್‌ ಗುರುವಾರ ಕೇರಳ ಬಂದ್‌ಗೆ ಕರೆ ನೀಡಿದೆ. 24 ಗಂಟೆಗಳ ಕಾಲ ಬಂದ್‌ ಆಚರಿಸಲಾಗುತ್ತದೆ ಎಂದು ಈ ಸಮಿತಿ ಹೇಳಿದೆ. ಈ ನಡುವೆ ಶಬರಿಮಲೆ ದೇಗುಲದ ಬಳಿ ಇರುವ ಎರಡು ಬೇಸ್‌ ಕ್ಯಾಂಪ್‌ಗ್ಳು
ಸೇರಿದಂತೆ ನಾಲ್ಕು ಪ್ರದೇಶಗಳಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ. 100 ಮಂದಿ ಮಹಿಳಾ ಭದ್ರತಾ ಸಿಬ್ಬಂದಿಯೂ ಸೇರಿ 700 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಂದ್‌ಗೆ ಬಿಜೆಪಿ ಕೂಡ ಬೆಂಬಲ ನೀಡಿದೆ. ಸಂಜೆ 5ಕ್ಕೆ ತೆಗೆದ ಬಾಗಿಲು
ಬಿಗಿವಿನ ವಾತಾವರಣ ನಡುವೆಯೂ ತಿಂಗಳ ಪೂಜೆಯ ಸಲುವಾಗಿ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಸರಿಯಾಗಿ ಸಂಜೆ 5 ಗಂಟೆಗೆ ತೆರೆಯಿತು. ಈ ಸಂದರ್ಭದಲ್ಲಿ ದೇಗುಲ ಪ್ರವೇಶ ಮಾಡಿದ್ದು ಕೇವಲ ಪುರುಷ ಭಕ್ತರು ಮಾತ್ರ. ಯಾವುದೇ ಮಹಿಳಾ ಭಕ್ತರಿಗೆ ಬರಲು ಅವಕಾಶ ಮಾಡಿಕೊಡದ ಕಾರಣ, ದೇಗುಲದ ಹತ್ತಿರಕ್ಕೆ ಯಾರೊಬ್ಬರೂ ಬರಲಿಲ್ಲ. ಇದಷ್ಟೇ ಅಲ್ಲ, ಬುಧವಾರ ರಾತ್ರಿ 10.30ರ ವರೆಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು. ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ ಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು 10 ರಿಂದ 50 ವರ್ಷದೊಳಗಿನ ಯಾವುದೇ ಮಹಿಳೆ ದೇಗುಲ ಪ್ರವೇಶಿಸಲಿಲ್ಲ ಎಂದಿದ್ದಾರೆ.

ಮಹಿಳೆಯರಿಗೆ ರಕ್ಷಣೆ ಕೊಡಿ 
ಶಬರಿಮಲೆ ದೇಗುಲಕ್ಕೆ ತೆರಳಲು ಇಚ್ಚಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಕೇರಳ ಡಿಜಿಪಿ ಮತ್ತು ಕೇರಳ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಿದೆ. ಮಹಿಳೆಯರಿಗೆ ಹೆಚ್ಚಿನ ಭದ್ರತೆ ನೀಡಬೇಕು, ದೇಗುಲ ಪ್ರವೇಶಕ್ಕೆ ಅಡ್ಡಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಪೊಲೀಸರಿಗೆ ಸೂಚಿಸಿದೆ.

ಜಯಮಾಲಾ ನಕಾರ
 ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆ ಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವೆ ಜಯಮಾಲ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ನಿಮಗೆ ನಮಸ್ಕಾರ ಎಂದು ಜಯಮಾಲಾ ತೆರಳಿದರು.

Advertisement

ಪತ್ರಕರ್ತರ ಮೇಲೆ ಹಲ್ಲೆ
ದೇಗುಲದ ಬಳಿಗೆ ವರದಿಗಾರಿಕೆಗೆಂದು ತೆರಳುತ್ತಿದ್ದ ನಾನಾ ಸುದ್ದಿವಾಹಿನಿಗಳ ಪತ್ರಕರ್ತರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅವರ ವಾಹನಗಳ ಜಖಂಗೊಳಿಸಿದ್ದಾರೆ. ಪೊಲೀಸರ ಭದ್ರತೆ ನಡುವೆ ತೆರಳಿದರೂ ಪ್ರತಿಭಟನಾಕಾರರು ಮುಂದಕ್ಕೆ ಹೋಗಲು ಬಿಡಲಿಲ್ಲ ಎಂದು ಪತ್ರಕರ್ತರೇ ಹೇಳಿದ್ದಾರೆ. ಸುದ್ದಿಸಂಸ್ಥೆಯೊಂದರ ಪತ್ರಕರ್ತರೊಬ್ಬರು ಪ್ರತಿಭಟನೆಯ ಫೋಟೋ ತೆಗೆಯುವ ವೇಳೆ ಅವರ ಮೊಬೈಲ್‌ ಕಸಿದ ಪ್ರತಿಭಟನಾಕಾರರು ಪುಡಿಪುಡಿ ಮಾಡಿದ್ದಾರೆ. ಜತೆಗೆ ಅವರನ್ನೂ ಥಳಿಸಿ ಕ್ಷಮೆ ಕೋರುವಂತೆ ಮಾಡಿದ್ದಾರೆ. ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.

“ಕಿಡಿ’ ನೋಡಿ ಮಹಿಳೆ ವಾಪಸ್‌
ದೇಗುಲ ಪ್ರವೇಶಿಸಬೇಕು ಎಂದು ಆಂಧ್ರ ಪ್ರದೇಶದಿಂದ ಬಂದಿದ್ದ ಮಹಿಳೆ ಪ್ರತಿಭಟನೆ ನೋಡಿ ವಾಪಸ್‌ ತೆರಳಿದ್ದಾರೆ. ಇಡೀ ಕುಟುಂಬದೊಂದಿಗೆ ಬಂದಿದ್ದ 40 ವರ್ಷದ ಮಹಾ ದೇವಿ ಎಂಬುವರು ಅಯ್ಯಪ್ಪನ ದೇಗುಲದ ರಸ್ತೆಯಲ್ಲಿ 10 ನಿಮಿಷಗಳ ಕಾಲ ತೆರಳಿದ್ದಾರೆ. ಬಳಿಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್‌ ಹೋಗಿದ್ದಾರೆ.

ಮಹಿಳಾ ಪೊಲೀಸರು ಏಕೆ?
ದೇಗುಲದ ಬಳಿ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿರುವುದಕ್ಕೂ ಪ್ರತಿಭಟನಾಕಾರರು ಆಕ್ಷೇಪವೆತ್ತಿದ್ದಾರೆ. ಮೂವರು ಮಹಿಳಾ ಪೊಲೀಸರನ್ನು ದೇಗುಲದ ಬಳಿಯಿಂದ ವಾಪಸ್‌ ಕಳುಹಿಸಿದ್ದಾರೆ. ಈಶ್ವರ್‌ ನೇತೃತ್ವದ ಪ್ರತಿಭಟನಾಕಾರ
ರು ಮಹಿಳಾ ಪೊಲೀಸರ ನಿಯೋಜನೆಗೆ ಆಕ್ಷೇಪ ಎತ್ತಿದ್ದಾರೆ. 

ರಾಹುಲ್‌ ಈಶ್ವರ್‌ ಬಂಧನ
ದೇಗುಲದ ಪ್ರಧಾನ ಅರ್ಚಕರ ಮೊಮ್ಮೊಗ ರಾಹುಲ್‌ ಈಶ್ವರ್‌ ಸೇರಿದಂತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಗುಲಕ್ಕೆ ತೆರಳುತ್ತಿದ್ದ ಮಹಿಳೆಯರಿಗೆ ಅಡ್ಡಿ ಮಾಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಅಯ್ಯಪ್ಪ ಧರ್ಮ ಸೇನಾದ ಮುಖ್ಯಸ್ಥರಾಗಿರುವ ಇವರು ತೀರ್ಪು ಬಂದ ದಿನದಿಂದಲೂ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಬಾರದು ಎಂದು
ಪ್ರತಿಪಾದಿಸುತ್ತಿದ್ದಾರೆ. ಕೇರಳ ಹೈಕೋರ್ಟ್‌ನಲ್ಲಿ ಬುಧವಾರ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಜತೆಗೆ
ಸೆ.28ರಂದು ನೀಡಿದ ತೀರ್ಪಿನ ವಿರುದಟಛಿ ಸುಪ್ರೀಂಕೋರ್ಟ್ನಲ್ಲಿ ಪುನರ್‌ಪರಿಶೀಲನಾ ಅರ್ಜಿಯನ್ನೂ ಹಾಕಿದ್ದಾರೆ. ಇವರ ಜತೆಗೆ ಪಂಪಾ ನದಿ ತೀರ ಮತ್ತು ನೀಲಕ್ಕಳ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‌ ಸೇರಿದಂತೆ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಬೆಂಬಲ
ಈ ಎಲ್ಲ ಬೆಳವಣಿಗೆಗಳ ನಡುವೆ ಯೇ ನೀಲಕ್ಕಳ್‌ ಮತ್ತು ಪಂಪಾದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಬೆಂಬಲಿಸಿದ್ದಾರೆ. ಪ್ರತ್ಯೇಕವಾಗಿ ಪ್ರತಿಭಟಿಸಿದ ಎರಡೂ ಪಕ್ಷಗಳ ನಾಯಕರು ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧಿಸಿದ್ದಾರೆ. ಪಂದಳಂ ರಾಜಮನೆತನ, ಮುಖ್ಯತಂತ್ರಿ ಕುಟುಂಬಸ್ಥರನ್ನು ಬಂಧಿಸಿದ ಮೇಲೆ ಇದೇ ಸ್ಥಳಕ್ಕೆ ಬಂದ ಬಿಜೆಪಿ ನಾಯಕರು ಧರಣಿ ನಡೆಸಿದರು. 

10 ಕೇರಳ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಹಾನಿಯಾಗಿವೆ. ಬೇರೆ  ರಾಜ್ಯಗಳಿಂದ ಬಂದ ಭಕ್ತರನ್ನು ಹೊಡೆದು, ಬಡಿದು ವಾಪಸ್‌
ಕಳುಹಿಸಲಾಗಿದೆ. ಈ ಎಲ್ಲ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕುಮ್ಮಕ್ಕಿದೆ. ಏನೇ ಆಗಲಿ, ಸುಪ್ರೀಂ ತೀರ್ಪು ಪಾಲನೆ ಮಾಡುತ್ತೇವೆ. 
ಇ ಪಿ ಜಯರಾಜನ್‌, ಕೇರಳ ಸಚಿವ

ಇಡೀ ಘಟನೆಗೆ ಕೇರಳದ ಎಲ್‌ಡಿಎಫ್ ಸರ್ಕಾರವೇ ಕಾರಣ. ಇದು ಒಂದು ರೀತಿಯಲ್ಲಿ ದುರದೃಷ್ಟಕರ ಘಟನೆ. ನಾವು ಜವಾಬ್ದಾರರಲ್ಲ. ಬಿಜೆಪಿಯ ಯಾವುದೇ ಕಾರ್ಯಕರ್ತ ನಿಲಕ್ಕಳ್‌ ಬೇಸ್‌ ಪಾಯಿಂಟ್‌ನ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ.
ಎಂ.ಎಸ್‌.ಕುಮಾರ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next