Advertisement

ಅಭಿವೃದ್ಧಿ ನಿರೀಕ್ಷೆಯಲ್ಲಿ ಪಂಜಿಕಲ್ಲು- ಮೂಡನಡುಗೋಡು-ಕಡಂಬಳಿಕೆ ರಸ್ತೆ

12:51 PM Aug 22, 2018 | |

ಬಂಟ್ವಾಳ: ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ಮೂಡನಡುಗೋಡು ಸೇರುವ ಹನುಮಾನ್‌ ಕ್ರಾಸ್‌ ಕಡಂಬಳಿಕೆ ರಸ್ತೆ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ. ಮಣಿಹಳ್ಳ ಕ್ರಾಸ್‌ನಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಈ ರಸ್ತೆ ಅಗಲ ಕಿರಿದಾದ ಕಾರಣ ರಿಕ್ಷಾ ಚಾಲಕರು ಸಂಚರಿಸಲು ಹಿಂದೇಟು ಹಾಕುವಂತಾಗಿದೆ.

Advertisement

ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲವಾದ್ದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಈ ರಸ್ತೆಯ ಮೂಲಕ ಹೆಚ್ಚಿನ ಜನರು ತಮ್ಮ ನಿತ್ಯ ಕಾರ್ಯಗಳಿಗೆ ತೆರಳುತ್ತಾರೆ. ರಸ್ತೆಯು ತೀರಾ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರ ತೀರಾ ಕಷ್ಟಕರವಾಗಿದೆ. ವಾಹನಗಳಿಗೆ ಸೈಡ್‌ ಕೊಡುವಾಗ ರಸ್ತೆಯಿಂದ ಕೆಳಗಿಳಿದ ವಾಹನಗಳು ಹೂತು ಹೋಗುವ ಸಂದರ್ಭಗಳು ಎದುರಾಗುತ್ತಿವೆ.

ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಸ್ಪಂದನೆ ದೊರಕಿಲ್ಲ. ಕೆಲವು ದಿನಗಳ  ಹಿಂದೆ ಇದೇ ರಸ್ತೆಯನ್ನು ಸ್ಥಳೀಯ ರಿಕ್ಷಾ ಮಾಲಕ-ಚಾಲಕರ ಸಂಘದವರು ಶ್ರಮದಾನದ ಮೂಲಕ ದುರಸ್ಥಿ ಮಾಡಿದ್ದರು. ಸರಕಾರದ ಮಟ್ಟದಿಂದ ಇದರ ಅಭಿವೃದ್ದಿ ಕೆಲಸ ನಡೆಯಬೇಕು ಎಂಬುದು ಸಾರ್ವಜನಿಕ ಆಶಯವಾಗಿದೆ.

ಶಾಸಕರಿಂದ ಭರವಸೆ
ಪಂಜಿಕಲ್ಲು ಗ್ರಾಮ ಸಂಪರ್ಕದ ಮೂಡನಡುಗೋಡು -ಹನುಮಾನ್‌ ಕ್ರಾಸ್‌ -ಕಡಂಬಳಿಕೆ ರಸ್ತೆಗೆ ಕಳೆದ ಅವಧಿಯಲ್ಲಿ ಯಾವುದೇ ಅನುದಾನವಿಲ್ಲದೆ ಅಭಿವೃದ್ದಿ ಕೆಲಸ ಸ್ಥಗಿತವಾಗಿತ್ತು. ಕಡಂಬಳಿಕೆ ಸಂಪರ್ಕ ರಸ್ತೆಯು ಪುರಸಭೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಅಭಿವೃದ್ಧಿ ಮಾಡಿ ಗ್ರಾ.ಪಂ. ರಸ್ತೆಯನ್ನು ಹಾಗೇ ಬಿಡಲಾಗಿತ್ತು. ಕಳೆದ ಅವಧಿಯಲ್ಲಿ ಸಚಿವರಲ್ಲಿ ಈ ಬಗ್ಗೆ ಕೇಳಲಾಗಿತ್ತು. ಆದರೆ ಎಂಜಿನಿಯರ್‌ಗೆ ಒಪ್ಪಿಗೆ ಸಿಗದೆ ಡಾಮರು ಹಾಕಿಲ್ಲ. ಪ್ರಸ್ತುತ ಶಾಸಕರಲ್ಲಿ ಮನವಿ ಮಾಡಿದೆ. ಬೇಸಗೆಯಲ್ಲಿ ರಸ್ತೆ ದುರಸ್ತಿಯ ಬಗ್ಗೆ ತಿಳಿಸಿದ್ದಾರೆ.
-ಪೂವಪ್ಪ ಮೆಂಡನ್‌
ಪಂಜಿಕಲ್ಲು ಗ್ರಾ.ಪಂ. ಸ್ಥಳೀಯ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next