Advertisement

ಬರ ನಿರ್ವಹಣೆಗೆ 2,600 ಕೋಟಿ ರೂ. ಅನುದಾನ

09:59 AM Jan 27, 2019 | Team Udayavani |

ಕೋಲಾರ: ರಾಜ್ಯದಲ್ಲಿ ಉಂಟಾಗಿರುವ ಬರ ನಿರ್ವಹಣೆಗೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ 2,600 ಕೋಟಿ ರೂ. ಅನುದಾನವನ್ನು ಜಿಪಂಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ಪೀಕರಿಸಿ ಅವರು ಮಾತನಾಡಿದರು.

ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ 1600 ರಿಂದ 1800 ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ 29 ಸಾವಿರ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡಿದ್ದು, ಈಗಾಗಲೇ 27 ಸಾವಿರ ಕಾಮಗಾರಿಗಳು ಪೂರ್ಣಗೊಂಡಿವೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದ 2 ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಮಸ್ಯೆ ಕಂಡುಬಂದಲ್ಲಿ ಖಾಸಗಿ ಬೋರ್‌ವೆಲ್‌ಗ‌ಳು ಅಥವಾ ಟ್ಯಾಂಕರ್‌ ಮೂಲಕ ನೀರನ್ನು ಒದಗಿಸಬೇಕು. ರಾಜ್ಯದಲ್ಲಿ 644 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಇದರಲ್ಲಿ 280 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 364 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗ‌ಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

8.5 ಕೋಟಿ ಮಾನವ ದಿನ: ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ 8.5 ಕೋಟಿ ಮಾನವ ದಿನಗಳ ಗುರಿಯಿತ್ತು. ಈಗಾಗಲೇ ಈ ಗುರಿಯನ್ನು ಮೀರಿ 7.88 ಕೋಟಿ ಮಾನವ ದಿನಗಳ ಸೃಷ್ಟಿಸಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ 10.5 ಕೋಟಿ ಮಾನವ ದಿನಗಳ ಸೃಜಿಸುವ ಗುರಿಯಿದೆ. ಕೋಲಾರ ಜಿಲ್ಲೆಯಲ್ಲಿ 22.88 ಲಕ್ಷ ಮಾನವ ದಿನಗಳ ಗುರಿಯಿತ್ತು. ಈಗಾಗಲೇ 30.81 ಲಕ್ಷ ಮಾನವ ದಿನಗಳ ಸೃಜಿಸಿ, ಕೋಲಾರ ಜಿಲ್ಲೆ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕೇಂದ್ರದ ಅನುದಾನ ಬಾಕಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 1800 ಕೋಟಿ ರೂ.ಅನುದಾನ ಬಾಕಿ ಬರಬೇಕಿದ್ದು, ಈ ಸಂಬಂಧ ರಾಜ್ಯದ ಸಂಸದರು, ಸಚಿವರು ಒಳಗೊಂಡಂತೆ 25 ಜನರ ತಂಡ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

1110 ಶುದ್ಧ ಕುಡಿವ ನೀರು ಘಟಕ: ಕೋಲಾರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ 2018-19ನೇ ಸಾಲಿನಲ್ಲಿ 40.25 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಪ್ರಸಕ್ತ ಸಾಲಿಗೆ ಪ್ರಾರಂಭಿಕ ಶುಲ್ಕ ಒಳಗೊಂಡಂತೆ 38.40 ಕೋಟಿ ರೂ. ಬಿಡುಗಡೆಯಾಗಿದೆ. 33.02 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಒಟ್ಟು 1110 ಶುದ್ಧ ಕುಡಿಯುವ ನೀರಿನ ಘಟಕಗಳು ಮುಂಜೂರಾಗಿದ್ದು, ಒಟ್ಟಾರೆ, 1073 ಘಟಕಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಬರ ಘೋಷಣೆಯಾಗಿರುವ ತಾಲೂಕುಗಳಿಗೆ ತಲಾ 1 ಕೋಟಿ ರೂ., ಎರಡನೇ ಹಂತದಲ್ಲಿ ಬರ ಘೋಷಣೆಯಾಗಿರುವ ತಾಲೂಕುಗಳಿಗೆ ತಲಾ 50 ಲಕ್ಷ ರೂ. ಹಾಗೂ ಬರ ಘೋಷಣೆಯಾಗದಿರುವ ತಾಲೂಕುಗಳಿಗೆ 25 ಲಕ್ಷ ರೂ. ಅನುದಾನವನ್ನು ಕುಡಿಯುವ ನೀರಿನ ಬಳಕೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್‌ ರಚಿಸಿ ಬಳಸಲು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಶೀಘ್ರ ಕೇಂದ್ರಕ್ಕೆ ಪ್ರಸ್ತಾವನೆ: ರಾಜ್ಯದ ಬರ ನಿರ್ವಹಣೆಗೆ ಕೇಂದ್ರದಿಂದ 2,434 ಕೋಟಿ ರೂ. ಪರಿಹಾರವನ್ನು ನೀಡುವಂತೆ ಕೇಳಲಾಗಿದೆ. ಹಿಂಗಾರಿನಲ್ಲಿ 62 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದು, ಬರ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಸರ್ಕಾರವು ರಾಜ್ಯದ ರೈತರ ನೆರವಿಗೆ ಧಾವಿಸಲು 2 ಲಕ್ಷ ರೂ.ವರೆಗಿನ ಬೆಳೆ ಸಾಲಮನ್ನಾ ಮಾಡಿದ್ದು, ಕೋಲಾರ ಜಿಲ್ಲೆಯ ಸಹಕಾರಿ ಬ್ಯಾಂಕ್‌ನ 10,503 ರೈತರು ಹಾಗೂ ವಾಣಿಜ್ಯ ಬ್ಯಾಂಕುಗಳ 28,797 ರೈತರು ಇದರ ಪ್ರಯೋಜನ ಪಡೆಯಲಿದ್ದು, ಒಟ್ಟಾರೆ 400 ಕೋಟಿ ರೂ.ಗೂ ಹೆಚ್ಚು ಸಾಲಮನ್ನಾ ಪ್ರಯೋಜನವನ್ನು ಜಿಲ್ಲೆಯ ರೈತರು ಪಡೆಯಲಿದ್ದಾರೆ. ಮುಂದಿನ ಒಂದು ತಿಂಗಳೊಳಗೆ 8 ಸಾವಿರ ಕೋಟಿ ರೂ. ಸಾಲಮನ್ನಾಕ್ಕೆ ಸರ್ಕಾರದಿಂದ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ಬಾಕಿ ಬಿಡುಗಡೆಯಾಗಿಲ್ಲ: ಹಿಂದಿನ ಸರ್ಕಾರ ಜಾರಿಗೊಳಿಸಿರುವ ಅನ್ನ ಭಾಗ್ಯ, ವಿದ್ಯಾಸಿರಿ, ಕ್ಷೀರ ಭಾಗ್ಯ ಯೋಜನೆಗಳನ್ನು ಈಗಿನ ಸಮ್ಮಿಶ್ರ ಸರ್ಕಾರವೂ ಮುಂದುವರಿಕೊಂಡು ಹೋಗಿದೆ. ರಾಜ್ಯದಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಕೇಂದ್ರದಿಂದ ಬರಬೇಕಿದ್ದ ಪಾಲು ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್‌, ಗೃಹರಕ್ಷಕದಳ, ಎನ್‌ಸಿಸಿ, ಭಾರತ ಸೇವಾದಳ ಮತ್ತು ಸ್ಕೌಟ್ಸ್‌ ಗೈಡ್ಸ್‌ ಅಂತರಗಂಗೆ ವಿದ್ಯಾಸಂಸ್ಥೆಯ ವಿಕಲಚೇತನರ ತಂಡವು ಸೇರಿದಂತೆ 21 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಇದೇ ಮೊದಲ ಬಾರಿಗೆ ಪ್ರೊಬೆಷನರಿ ಡಿವೈಎಸ್ಪಿ ಅನೂಷಾ ಗಣರಾಜ್ಯೋತ್ಸವ ಪಥಸಂಚಲನದ ನೇತೃತ್ವವಹಿಸಿದ್ದು ಗಮನ ಸೆಳೆಯಿತು.

ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಪಥ ಸಂಚಲನದಲ್ಲಿ ಕಾಲೇಜು ವಿಭಾಗದಲ್ಲಿ ಸುಭಾಷ್‌ ಶಾಲೆಯ ಭಾರತ ಸೇವಾದಳ ತಂಡ ಪ್ರಥಮ, ಎನ್‌ಸಿಸಿ ಬಾಲಕರ ತಂಡ ದ್ವಿತೀಯ, ಎಇಎಸ್‌ ಸ್ಕೌಟ್ಸ್‌ ತಂಡ ತೃತೀಯ ಹಾಗೂ ಶಾಲಾ ವಿಭಾಗದಲ್ಲಿ ಆರ್‌.ವಿ.ಇಂಟರ್‌ ನ್ಯಾಷನಲ್‌ ಶಾಲೆ ಪ್ರಥಮ, ಮಹಿಳಾ ಸಮಾಜ ಶಾಲೆ ದ್ವಿತೀಯ, ಸುವರ್ಣ ಸೆಂಟ್ರಲ್‌ ಶಾಲೆ ತೃತೀಯ ಹಾಗೂ ವಿಶೇಷ ಸ್ಥಾನವನ್ನು ಅಂತರಗಂಗಾ ಶಾಲಾ ತಂಡ ಪಡೆದುಕೊಂಡಿತು.

ಜಿಲ್ಲಾಡಳಿತ, ಜಿಪಂ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ 15 ಪ್ರವಾಸಿ ಟ್ಯಾಕ್ಸಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ತಿಂಗಳ ಅಂತ್ಯಕ್ಕೆ 130 ಪ್ರವಾಸಿ ಟ್ಯಾಕ್ಸಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಕೆ.ಎಚ್.ಮುನಿಯಪ್ಪ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಗೀತಮ್ಮ ಆನಂದರೆಡ್ಡಿ, ಉಪಾಧ್ಯಕ್ಷ ಯಶೋದಾ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ನಗರಸಭಾಧ್ಯಕ್ಷೆ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಪಂ ಸಿಇಒ ಜಿ.ಜಗದೀಶ್‌, ಎಸ್ಪಿ ಡಾ.ರೋಹಿಣಿ ಕಟೋಚ್ ಸಫೆಟ್, ಅಪರ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಸುಭಾ ಕಲ್ಯಾಣ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಮೂಹಿಕ ಕವಾಯತು ಹಾಗೂ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Advertisement

Udayavani is now on Telegram. Click here to join our channel and stay updated with the latest news.

Next