Advertisement

ರಸ್ತೆ ಬದಿಯಲ್ಲೇ ಒಣಗಿ ನಿಂತಿವೆ ಸಾಲು-ಸಾಲು ಮರಗಳು..!

09:00 AM Jul 23, 2017 | Harsha Rao |

ಕೆಯ್ಯೂರು : ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕೈಕಂಬದಿಂದ ಕೆಯ್ಯೂರು ಶಾಲೆ ತನಕ ಸಂಚರಿಸುವುದೆಂದರೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಪ್ರಾಣ ಭೀತಿ ಕಾಡದೇ ಇರದು. ಕಾರಣ ರಸ್ತೆಯ ಒಂದು ಬದಿಯಲ್ಲಿ ಆಳೆತ್ತರದ ಅಕೇಶಿಯಾ ಮರಗಳು ಒಣಗಿ ರಸ್ತೆಗೆ ಬಾಗಿ ನಿಂತಿವೆ..!

Advertisement

ಇಂತಹ ಅಪಾಯ ಆಹ್ವಾನಿಸುತ್ತಿರುವುದು ಪುತ್ತೂರು ತಾ.ಪಂ. ಹಾಲಿ ಅಧ್ಯಕ್ಷರ ಸ್ವ ಕ್ಷೇತ್ರ ಹಾಗೂ ಊರಿನಲ್ಲೇ ಹಾದು ಹೋದ ರಸ್ತೆಯ ಇಕ್ಕಲೆಯಲ್ಲಿ ಅನ್ನುವುದು ಅಚ್ಚರಿಯ ಸಂಗತಿ. ಇನ್ನೂ ಸ್ಥಳೀಯ ಗ್ರಾ.ಪಂ.ಸಾಮಾನ್ಯ ಸಭೆಯ ನಿರ್ಣಯ ಮೇರೆಗೆ ಸ್ಥಳಕ್ಕೆ ಬಂದ ಇಲಾಖೆಯ ಸಿಬಂದಿಗಳು, ಎರಡು ಮರ ಕಡಿದು ತೆರಳಿದ್ದು, ಉಳಿದ ಮರಗಳನ್ನು ಮುಟ್ಟಿಲ್ಲ..!
ಒಣಗಿ ನಿಂತ ಮರಗಳು

ಪುತ್ತೂರು-ಕುಂಬ್ರ-ಕೆಯ್ಯೂರು- ಬೆಳ್ಳಾರೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಲು ಅವಕಾಶ ಇರುವುದರಿಂದ ಇಲ್ಲಿ ವಾಹನ ಓಡಾಟವೂ ಅಧಿಕ. ಕೆಎಸ್‌ಆರ್‌ಟಿಸಿ ಬಸ್‌ಗಳು, ಟೂರಿಸ್ಟ್‌ ಕಾರುಗಳು ದಿನಂಪ್ರತಿ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತವೆ. ದೇರ್ಲ, ಅರಿಕ್ಕಿಲ, ಕಣಿಯಾರು ಮೊದಲಾದ ಭಾಗದಿಂದ ನೂರಾರು ಮಕ್ಕಳು ಅಂಗನವಾಡಿ, ಪ್ರಾಥಮಿಕ, ಹೈಸ್ಕೂಲು, ಪಿಯುಸಿಗಳಿಗೆ ಈ ರಸ್ತೆ ಬದಿಯಲ್ಲೇ ನಡೆದುಕೊಂಡು ಸಂಚರಿಸುತ್ತಾರೆ.
ಬೀಸುಗಾಳಿಯ ಪರಿಣಾಮ ಒಣಗಿದ ಅಕೇಶಿಯಾ ಜಾತಿಗೆ ಸೇರಿದ ಮರಗಳು ರಸ್ತೆಯ ಅಂಚಿಗೆ ವಾಲುತ್ತಿದ್ದು, ಅರ್ಧ ಕಿ.ಮೀ ದೂರಕ್ಕೂ ಅಧಿಕ ಪ್ರದೇಶದಲ್ಲಿ ಇಂತಹ ಮರಗಳು ಇವೆ. ಹಸಿರಾಗಿ ಇರುವ ಮರಗಳು ರಸ್ತೆ ಅಂಚಿಗೆ ರೆಂಬೆ-ಕೊಂಬೆ ಹರಡಿದ್ದು, ಮುರಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಯಾರು ಹೊಣೆ
ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯೊಳಗಿನ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆ ಇಲ್ಲಿ ಅಕೇಶಿಯಾ ಜಾತಿಯ ಗಿಡಗಳನ್ನು ನೆಟ್ಟಿದೆ. ರಸ್ತೆ ಬದಿಯಿಂದ ಐದಾರು ಮೀಟರ್‌ ಒಳಗಿನ ತನಕ ಗಿಡ ನೆಟ್ಟು ಅನಂತರ ಕಟಾವು ಮಾಡಲಾಗುತ್ತದೆ. ಅರಿಕ್ಕಿಲ ತಿರುವಿನಿಂದ ಕೈಕಂಬ-ಕೆಯ್ಯೂರು ಪ್ರಾಥಮಿಕ ಶಾಲೆ ಮುಂಭಾಗದ ತನಕ ಅಕೇಶಿಯಾ ಮರಗಳು ಹಬ್ಬಿವೆ. ನೆಟ್ಟು ಆಳೆತ್ತರಕ್ಕೆ ಬೆಳೆದು, ಒಣಗಿ ನಿಂತರೂ ಕಡಿಯುವವರು ಇಲ್ಲ. ಹಾಗಾಗಿ ರಸ್ತೆಯಲ್ಲಿ ಸಾಗುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನುತ್ತದೆ ಇಲ್ಲಿನ ಚಿತ್ರಣ.

ಗೊಂದಲದ ಗೂಡು
ತಾಲೂಕಿನ ರಸ್ತೆ ಬದಿಗಳಲ್ಲಿ ಇರುವ ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಮಧ್ಯೆ ಗೊಂದಲ ಇದೆ. ಕಡಿಯುವುದು ನಮ್ಮ ಕರ್ತವ್ಯ ಅಲ್ಲ, ನೆಡುವುದು ಮಾತ್ರ ಎಂದು ಅರಣ್ಯ ಇಲಾಖೆ ಹೇಳಿದರೆ, ಮರ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಪಿಡಬ್ಯುÉಡಿ ಇಲಾಖೆ ರಸ್ತೆ ಬದಿಗಳಲ್ಲಿನ ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತದೆ. ಆಗ ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ಮಾತ್ರ ನಮಗೆ ತೆರವು ಮಾಡಲು ಅಧಿಕಾರ ಇರುವುದು. ಅದೇ ತರಹ ಮರ ಬಿದ್ದ ಮೇಲೆ ಅದನ್ನು ತೆರವು ಮಾಡಬೇಕಾದದ್ದು ಇಲಾಖೆಯ ಜವಾಬ್ದಾರಿ. ಅದಕ್ಕೆ ಲೋಕೋಪಯೋಗಿ ಇಲಾಖೆ ಹೊಣೆ ಅಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.  ಹಾಗಾಗಿ ಈ ಜಂಜಾಟದ ಮಧ್ಯೆ ಇಂತಹ ಅಪಾಯಕಾರಿ ಮರಗಳು ಜನರ ಪ್ರಾಣಕ್ಕೆ ಆಪತ್ತು ತರುವುದು ನಿಶ್ಚಿತ ಅನ್ನುವುದು ಸಾರ್ವಜನಿಕರ ದೂರು.

Advertisement

ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್‌ ತಂತಿಗಳು
ಮರದ ಕೆಳಭಾಗದಲ್ಲಿ ವಿದ್ಯುತ್‌ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ  ನೂರಾರು ಮನೆಯ ವಿದ್ಯುತ್‌ ಪರಿಕರಗಳು ಹಾನಿಗೀಡಾಗುವ ಸಾಧ್ಯತೆ ಇದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕಿದ್ದರೂ, ಆ ಕೆಲಸ ಆಗಿಲ್ಲ. ಮಳೆಗಾಲದ ಅಪಾಯ ಎದುರಿಸಲು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದರೂ, ಇಲಾಖೆಗಳು ಕ್ಯಾರೆ ಅಂದಿಲ್ಲ ಅನ್ನುವುದಕ್ಕೆ ಇಲ್ಲಿನ ಚಿತ್ರಣ ಉದಾಹರಣೆ.

ಗಮನಕ್ಕೆ ತರಲಾಗಿದೆ
ಅಪಾಯಕಾರಿ ಮರ ತೆರವಿನ ಬಗ್ಗೆ ಗ್ರಾ.ಪಂ. ಸಭೆಗಳಲ್ಲಿಯೂ ಪ್ರಸ್ತಾಪವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
– ಭವಾನಿ ಚಿದಾನಂದ, ಅಧ್ಯಕ್ಷರು, ತಾ.ಪಂ. ಪುತ್ತೂರು.

ಸಭೆಯಲ್ಲಿ  ನಿರ್ಣಯ 
ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಎರಡು ದಿನಗಳ ಹಿಂದೆ ಬಂದು ಎರಡು ಮರ ತೆರವು ಮಾಡಿದ್ದಾರೆ. ಉಳಿದವು ಹಾಗೆಯೇ ಇವೆೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು.
– ಬಾಬು ಬಿ. ಅಧ್ಯಕ್ಷರು, ಕೆಯ್ಯೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next