Advertisement

ಶಕ್ತಿ ಸೌಧದಲ್ಲಿ ರಾಜೀನಾಮೆ “ಹೈ ಡ್ರಾಮಾ’

11:32 PM Jul 10, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಶಕ್ತಿಸೌಧ ಬುಧವಾರ ಅಕ್ಷರಶ: “ಶಕ್ತಿ ಪ್ರದರ್ಶನ’ದ ಅಖಾಡವಾಗಿ ಬಿಟ್ಟಿತ್ತು. ಸರ್ಕಾರ ಉಳಿಸಬೇಕೆನ್ನುವ ಟೀಮ್‌ ಹಾಗೂ ಉರುಳಿಸಬೇಕೆನ್ನುವ ಟೀಮ್‌ಗಳ ನಡುವೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಹಿರಂಗ ಕಿತ್ತಾಟವೇ ನಡೆದು ಬಿಟ್ಟಿತ್ತು. ಇದೆಲ್ಲ ನಡೆದದ್ದು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌ ರಾಜೀನಾಮೆ ನೀಡಿ ಹೊರ ಬರುವ ಸಂದರ್ಭದಲ್ಲಿ.

Advertisement

ಮಧ್ಯಾಹ್ನ ನಾಲ್ಕು ಗಂಟೆ ಹೊತ್ತಿಗೆ ಎಂ.ಟಿ.ಬಿ.ನಾಗರಾಜ್‌ ಹಾಗೂ ಡಾ.ಸುಧಾಕರ್‌ ರಾಜೀನಾಮೆ ಸಲ್ಲಿಸಿ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಸ್ಪೀಕರ್‌ ಕಚೇರಿಯಿಂದ ಹೊರಗಡೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಾ.ಸುಧಾಕರ್‌ ಅವರನ್ನು ಕೊರಳಿಗೆ ಕೈ ಹಾಕಿ ಹಿಡಿದುಕೊಂಡು, ಲಿಫ್ಟ್ ಮೂಲಕ ಮೂರನೇ ಮಹಡಿಯಲ್ಲಿರುವ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಅವರ ಕೊಠಡಿಗೆ ಕರೆದುಕೊಂಡು ಹೋದರು.

ಈ ಸಂದರ್ಭದಲ್ಲಿ ಶಾಸಕ ಸುಧಾಕರ್‌ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ತಳ್ಳಾಟ ಉಂಟಾಯಿತು. ಡಾ.ಸುಧಾಕರ್‌ ಅವರನ್ನು ಕಾಂಗ್ರೆಸ್‌ ನಾಯಕರು “ಎತ್ತಿಕೊಂಡು ಹೋಗಿದ್ದಾರೆ’ ಎಂಬ ಮಾಹಿತಿ ದೊರೆತ ತಕ್ಷಣ ಅಲ್ಲಿಯೇ ಸ್ಪೀಕರ್‌ ಕಚೇರಿಗೆ ಆಗಮಿಸಿದ್ದ ಬಿಜೆಪಿ ಶಾಸಕರಾದ ಬಸವರಾಜ್‌ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ಅವರು ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಡಾ.ಸುಧಾಕರ್‌ ಮೇಲೆ ಹಲ್ಲೆ ನಡೆಸಲಾಗಿದೆ. ವಿಧಾನಸೌಧದಲ್ಲಿ ಶಾಸಕರಿಗೆ ಭದ್ರತೆಯಿಲ್ಲ ಎಂದು ದೂರು ಸಲ್ಲಿಸಿದರು.

ನಂತರ, ವಿಧಾನಸೌಧದ ಮೂರನೇ ಮಹಡಿಗೆ ಬಿಜೆಪಿ ಶಾಸಕರು ಸುಧಾಕರ್‌ ಭೇಟಿಗೆ ತೆರಳಿದರು. ಈ ಸಂದರ್ಭದಲ್ಲಿ ಪೊಲೀಸರು ಮೂರನೇ ಮಹಡಿಗೆ ಯಾರನ್ನೂ ಒಳಗೆ ಬಿಡುವುದಿಲ್ಲ ಎಂದು ಮೂರನೇ ಮಹಡಿಯ ಗೇಟ್‌ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿಯ ಸಹ ವಕ್ತಾರ ಆನಂದ್‌ ಹಾಗೂ ಶಾಸಕ ಜೆ.ಸಿ.ಮಾಧುಸ್ವಾಮಿ ಹಾಗೂ ಪೊಲೀಸ್‌ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿ, ಡಾ.ಸುಧಾಕರ್‌ ಅವರನ್ನು ಮನವೊಲಿಸುವ ಯತ್ನ ನಡೆಸಿದರು.

ಜಾರ್ಜ್‌ ಕಚೇರಿ ಎದುರು ಪ್ರತಿಭಟನೆ: ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಕಚೇರಿ ಎದುರು ಸುಧಾಕರ್‌ ಭೇಟಿಗೆ ಅವಕಾಶ ನೀಡುವಂತೆ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಿಜೆಪಿ ಶಾಸಕರನ್ನು ಎಳೆದು ಹೊರ ನಡೆಯುವಂತೆ ತಳ್ಳಿದರು.

Advertisement

ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕ ಬಸವರಾಜ್‌ ಬೊಮ್ಮಾಯಿ ಅವರು ಜಾರ್ಜ್‌ ಕಚೇರಿಯ ಬಾಗಿಲಿಗೆ ಜೋರಾಗಿ ಗುದ್ದಿ ಕಾಲಿನಿಂದ ಒದ್ದರು. ಕೆ.ಜೆ.ಜಾರ್ಜ್‌ ಕಚೇರಿಯಲ್ಲಿ ಹೈ ಡ್ರಾಮಾ ಶುರುವಾಗುತ್ತಿರುವಂತೆ ಬಿಜೆಪಿ ಶಾಸಕರು ವಿಧಾನಸೌಧಕ್ಕೆ ದೌಡಾಯಿಸಿದರು. ಈ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಯುವ ಕಾಂಗ್ರೆಸ್‌ ಪತ್ರಿಭಟನೆ: ಬಿಜೆಪಿ ಶಾಸಕರು ಸಚಿವ ಜಾರ್ಜ್‌ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವಂತೆ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ವಿಧಾನಸೌಧಕ್ಕೆ ಆಗಮಿಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತು.

ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೊರ ನಡೆಯುವಂತೆ ತಳ್ಳಿದರು. ಬಿಜೆಪಿಯವರನ್ನೂ ಹೊರ ಹಾಕುವಂತೆ ಅವರು ಆಗ್ರಹಿಸಿದ್ದರಿಂದ ಪೊಲೀಸರು ಅಸಹಾಯಕರಾಗಿ ನಿಲ್ಲುವಂತಾಯಿತು.

ಸುಧಾಕರ್‌ರನ್ನು ಕರೆದೊಯ್ಯಲು ಕಮಿಷನರ್‌: ಡಾ.ಸುಧಾಕರ್‌ ಮೇಲೆ ಹಲ್ಲೆಯಾಗಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ಮೌಖೀಕ ದೂರು ಸಲ್ಲಿಸಿದ ಬೆನ್ನಲ್ಲೇ ರಾಜ್ಯಪಾಲ ವಜುಬಾಯಿ ವಾಲಾ ಅವರು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ಗೆ ಸೂಚನೆ ನೀಡಿ, ಡಾ.ಸುಧಾಕರ್‌ ಅವರನ್ನು ರಾಜಭವನಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವಂತೆ ನಿರ್ದೇಶನ ನೀಡಿದರು. ಅವರ ನಿರ್ದೇಶನದಂತೆ ಪೊಲೀಸರು ಡಾ.ಸುಧಾಕರ್‌ ಅವರನ್ನು ರಾಜಭವನಕ್ಕೆ ಕರೆದುಕೊಂಡು ಹೋದರು.

ಈ ಮಧ್ಯೆ, ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದ ಎಂಟಿಬಿ ನಾಗರಾಜ್‌ ರಾಜ್ಯಪಾಲರ ಭೇಟಿಗೆ ತೆರಳಿದ್ದರು. ನಂತರ, ಡಾ.ಸುಧಾಕರ್‌ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ, ತಾವೂ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಸುಧಾಕರ್‌ ಅವರು ನಮ್ಮ ಪಕ್ಷದವರು. ಅವರ ಬಗ್ಗೆ ನಾವು ಎಮೋಷನಲ್‌ ಆಗದೇ ಮತ್ಯಾರು ಆಗುತ್ತಾರೆ? ಅವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕರೆದುಕೊಂಡು ಹೋಗುವಾಗ ಸ್ವಲ್ಪ ತಳ್ಳಾಟವಾಗಿದೆ. ಬಿಜೆಪಿಯವರಿಗೆ ನಮ್ಮ ಶಾಸಕರ ಬಳಿ ಏನು ಕೆಲಸ. ಅವರು ರಾಜೀನಾಮೆ ನೀಡಿದಾಗ ಮನವೊಲಿಸುವ ಕೆಲಸ ಮಾಡುವುದರಲ್ಲಿ ತಪ್ಪೇನಿದೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ನಾವು ಯಾವುದೇ ಶಾಸಕರ ಮೇಲೆ ಹಲ್ಲೆ ಮಾಡಿಲ್ಲ. ಬಿಜೆಪಿಯವರು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ನಮ್ಮ ಶಾಸಕರ ಜೊತೆ ನಾವು ಮಾತನಾಡುತ್ತಿದ್ದರೆ ಅಲ್ಲಿಗೆ ಬಂದು ಪ್ರತಿಭಟನೆ ನಡೆಸಲು ಅವರಿಗೇನು ಕೆಲಸ?.
-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next