Advertisement

ರಕ್ಷಿತಾರಣ್ಯ ಪ್ರದೇಶಗಳ ಬೆಂಕಿ ಪತ್ತೆಗೆ ಡ್ರೊಣ್‌ ಕಣ್ಗಾವಲು, ತಡೆಗೆ ಕಾಪ್ಟರ್‌ ಬಳಕೆ

03:04 PM Jan 07, 2021 | Team Udayavani |

ಮೈಸೂರು: ಬೇಸಿಗೆಯಲ್ಲಿ ಬೆಂಕಿ ಅವಘಡ ತಡೆಗೆ ದೇಶದ ಪ್ರಮುಖ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಾದ ನಾಗರಹೊಳೆ
ಮತ್ತು ಬಂಡೀಪುರದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಬೆಂಕಿ ನಿಯಂತ್ರಣಕ್ಕೆ ಸರ್ವಸನ್ನದ್ಧವಾಗಿವೆ.

Advertisement

ಇತ್ತೀಚೆಗೆ ಕಾಡಿಗೆ ಬೆಂಕಿ ಬೀಳುವುದು ಸಾಮಾನ್ಯವಾಗಿದ್ದು, ಉದ್ದೇಶಪೂರ್ವಕವಾಗಿಯೋ, ಆಕಸ್ಮಿಕವಾಗಿಯೋ ಸಣ್ಣದಾಗಿ
ಬೀಳುವ ಬೆಂಕಿಯ ಕಿಡಿ ಭಾರೀ ಪ್ರಮಾಣದ ಅನಾಹುತಕ್ಕೆ ಕಾರಣವಾಗಲಿದೆ. ಇದನ್ನು ತಪ್ಪಿಸುವ ಸಲುವಾಗಿ ಮೈಸೂರು
ಮತ್ತು ಕೊಡುಗು ಜಿಲ್ಲೆಗೆ ಹೊಂದಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಫೈರ್‌ಲೈನ್‌ (ಬೆಂಕಿ ರೇಖೆ) ನಿರ್ಮಿಸುವುದರೊಂದಿಗೆ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಅಗ್ನಿಶಾಮಕ ವಾಹನ ಬಳಕೆ ಮತ್ತು ಸೇನಾ ಹೆಲಿಕಾಪ್ಟರ್‌ ಕಾರ್ಯಾಚರಣೆ ನಡೆಸಲು ಸೇನಾ
ಅಧಿಕಾರಿಗಳು ಸಮ್ಮತಿಸಿದ್ದಾರೆ. ಕಳೆದ 3 ವರ್ಷಗಳಿಂದ ಯಥೇತ್ಛವಾಗಿ ಮಳೆಯಾದ ಹಿನ್ನೆಲೆ ಎರಡೂ ಕಾಡುಗಳಲ್ಲಿ ಹಸಿರು ನಳನಳಿಸುತ್ತಿದ್ದು, ಎಲ್ಲ ಕೆರೆ- ಕಟ್ಟೆಗಳು ತುಂಬಿವೆ. ಇದರಿಂದ ಕಾಡ್ಗಿಚ್ಚಿನ ಭೀತಿ ಅಷ್ಟಾಗಿ ಭೀತಿ ಇಲ್ಲವಾದರೂ ಬೇಸಿಗೆ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅದನ್ನು ನಂದಿಸಲು ಪೂರಕವಾದ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪೈರ್‌ಲೈನ್‌, ವೀಕ್ಷಣಾ ಗೋಪುರ, ಅಟ್ಟಣೆಮೇಲೆ ತಾತ್ಕಾಲಿಕ ಕಣ್ಗಾವಲು ಹಾಗೂ ಅರಣ್ಯದಂಚಿನಲ್ಲಿ ಕ್ಯಾಮರಾ ಅಳವಡಿಸಲಾಗಿದೆ.

ಫೈರ್‌ಲೈನ್‌ ಪೂರ್ಣ: ಬಂಡೀಪುರದಲ್ಲಿ 435 ಸಿಬ್ಬಂದಿಯೊಂದಿಗೆ ಫೈರ್‌ಲೈನ್‌ ರಚನೆ ಕಾರ್ಯ ಪೂರ್ಣಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಾಚರ್‌ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ನಾಗರ ಹೊಳೆಯಲ್ಲಿ ಫೈರ್‌ಲೈನ್‌ ಕಾರ್ಯ ಸದ್ಯಕ್ಕೆ ಶೇ.80 ಪೂರ್ಣವಾಗಿದ್ದು, 400 ಮಂದಿ ಈ ಕೆಲಸದಲ್ಲಿ ನಿರತರಾಗಿದ್ದಾರೆ. ತಿಂಗಳಾಂತ್ಯಕ್ಕೆ
ಮುಗಿಯುವ ಸಾಧ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾಚ್‌ ಟವರ್‌- ಕ್ಯಾಮರಾ ಕಣ್ಗಾವಲು: ಎರಡೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ವಾಚ್‌ಟವರ್‌ ಮತ್ತು ಅಟ್ಟಣೆ ನಿರ್ಮಿಸಲಾಗಿದ್ದು, ಇಲಾಖೆ ಸಿಬ್ಬಂದಿ ದಿನವಿಡಿ ಕಣ್ಗಾವಲಿರಿಸಿದ್ದಾರೆ. ಬಂಡೀಪುರದಲ್ಲಿ 17, ನಾಗರಹೊಳೆಯಲ್ಲಿ 15 ವಾಚ್ ‌ಟವರ್‌ಗಳಿದ್ದು, ದಿನದ 24 ಗಂಟೆಯೂ ಇಲಾಖೆ ಸಿಬ್ಬಂದಿ ಪಾಳಿಯಂತೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಜೊತೆಗೆ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರಾ ಅಳವಡಿಸಲಾಗಿದೆ.

ಕ್ವಿಕ್‌ ಆ್ಯಕ್ಷನ್‌ ಫೋರ್ಸ್‌ ನಿಯೋಜನೆ: ಬಂಡೀಪುರ ಮತ್ತು ನಾಗರ ಹೊಳೆಯ ಪ್ರತಿ ವಲಯದಲ್ಲೂ ಕ್ವಿಕ್‌ ಆ್ಯಕ್ಷನ್‌ ಫೋರ್ಸ್‌
ನಿಯೋಜಿಸಲಾಗಿದ್ದು, ತಂಡದಲ್ಲಿ ಸಣ್ಣ ನೀರಿನ ಟ್ಯಾಂಕ್‌, ವಾಟರ್‌ ಸ್ಪ್ರೇ ಯಂತ್ರದೊಂದಿಗೆ ಬೆಂಕಿ ಬಿದ್ದ ಸ್ಥಳಕ್ಕೆ ಶೀಘ್ರವಾಗಿ
ತೆರಳು ಮತ್ತು ವಾಹನಗಳಲ್ಲಿ ಟ್ಯಾಂಕ್‌ ಮೂಲಕ ನೀರು ಕೊಂಡೊ ಯ್ಯಲು ವಾಹನಗಳನ್ನು ಸಿದ್ಧತೆಯಲ್ಲಿಡಲಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಅರಿವು: ಉದ್ಯಾನವನದಂಚಿನ ಗ್ರಾಮಗಳಲ್ಲಿ ನುರಿತ ಕಲಾತಂಡಗಳಿಂದ ಅರಣ್ಯದ ಮಹತ್ವ,
ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ನಮ್ಮದೆನ್ನುವ ಮನೋಭಾವವನ್ನು ಜನರಲ್ಲಿ
ಮೂಡಿ ಸಲು ಬೀದಿ ನಾಟಕ ಮಾಡಲಾಗಿದೆ. ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗಿದೆ.

ಹೆದ್ದಾರಿ ಗಸ್ತಿಗೆ ಒತ್ತು: ಹುಲಿ ಯೋಜನೆ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಹೆದ್ದಾರಿಗಳು
ಹಾದು ಹೋಗಿರುವುದರಿಂದ ಬೇಸಿಗೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ,
ವಾಹನ ಚಾಲಕರಿಗೆ ತಿಳಿವಳಿಕೆ ನೀಡುವ ಸಲುವಾಗಿ ಚೆಕ್‌ ಪೋಸ್ಟ್‌ಗಳಲ್ಲಿ ಕರಪತ್ರ ಹಂಚಲಾಗುತ್ತಿದೆ. ಜೊತೆಗೆ ಉದ್ಯಾನದೊಳಗೆ ಹಾದು ಹೋಗಿರುವ ಪ್ರಮುಖ ರಸ್ತೆ ಮತ್ತು ಹೆದ್ದಾರಿಗಳಲ್ಲಿ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿಗೆ ಹೆಚ್ಚು ಒತ್ತು ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸೈಕಲ್‌ನಲ್ಲಿ ಗಸ್ತು ಹಾಕುವ ಮೂಲಕ ಬೆಂಕಿ ಬೀಳದಂತೆ ಎಚ್ಚರ ವಹಿಸಲಿದ್ದಾರೆ.

ಅಗ್ನಿಶಾಮಕ ವಾಹನ, ಸಿಬ್ಬಂದಿಗೆ ಬೇಡಿಕೆ: ಉದ್ಯಾನದೊಳಗೆ ಬೆಂಕಿ ಅವಘಡ ಸಂಭವಿಸಿದಲ್ಲಿ ತಕ್ಷಣಕ್ಕೆ ಕ್ರಮವಹಿಸಲು
ನಾಗರಹೊಳೆ ಉದ್ಯಾನವನದಿಂದ 8 ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ, ಬಂಡೀಪುರದಿಂದ 7 ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ನೀಡುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಜೊತೆಗೆ ಬಿಂಕಿ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ವಾಯು ಸೇನೆಯಿಂದ ಹೆಲಿಕಾಪ್ಟರ್‌ ಒದಗಿಸುವಂತೆ ಪತ್ರ ಬರೆಯಲಾಗಿದೆ.

ಬೆಂಕಿ ಪತ್ತೆಗೆ ಡ್ರೊಣ್‌ ಕಣ್ಗಾವಲು
ಬಂಡೀಪುರ ಮತ್ತು ನಾಗರಹೊಳೆ ಎರಡು ರಾಷ್ಟ್ರೀಯ ಉದ್ಯಾನವನಗಳಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋಣ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಬೆಂಕಿ ಅಥವಾ ಹೊಗೆ ಕಾಣಿಸಿಕೊಂಡ ಪ್ರದೇಶವನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗಲಿದೆ. ಜೊತೆಗೆ ತುರ್ತಾಗಿ ಕಾರ್ಯಾಚರಣೆಗಿಳಿಯಲು ಸಹಕಾರಿಯಾಗಲಿದೆ. ಈಗಾಗಲೇ ಬಂಡೀಪುರ ಉದ್ಯಾನವನದ ಸೂಕ್ಷ್ಮ ಪ್ರದೇಶದಲ್ಲಿ 8 ಡ್ರೋಣ್‌ಗಳು ಕಾರ್ಯನಿರ್ವಹಿಸಿದರೆ, ನಾಗರಹೊಳೆಯಲ್ಲಿ 2 ಡ್ರೋಣ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

– ಸತೀಶ್ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next