Advertisement

ಸಮಾತನೆ ಬರುವವರೆಗೂ ಮೀಸಲು ಅಗತ್ಯ

09:25 PM Sep 25, 2019 | Team Udayavani |

ಮೈಸೂರು: ನಮ್ಮ ವ್ಯವಸ್ಥೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಬರುವವರೆಗೂ ಮೀಸಲಾತಿ ಅಗತ್ಯವಿದೆ ಎಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಎಸ್‌. ಸೋಮಶೇಖರ್‌ ಅಭಿಪ್ರಾಯಪಟ್ಟರು. ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಬುಧವಾರ ಅರ್ಥಶಾಸ್ತ್ರ ಹಾಗೂ ಸಹಕಾರ ಅಧ್ಯಯನ ವಿಭಾಗದ ಯೋಜನಾ ವೇದಿಕೆ ಪ್ರಾರಂಭೋತ್ಸವದ ಪ್ರಯುಕ್ತ ಎರ್ಪಡಿಸಿದ್ದ “ದಿ ಜರ್ನಿ ಆಫ್ ರಿಸರ್ವೇಷನ್‌ ಪಾಲಿಸಿ ಇನ್‌ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮೀಸಲಾತಿ ಅನುಕೂಲ ಪಡೆಯುತ್ತಿರುವ ಎಲ್ಲರಿಗೂ ಇದು ಇದ್ದಕ್ಕಿದ್ದಂತೆ ಬಂದ ಉಡುಗೋರೆಯಲ್ಲ ಎನ್ನುವುದು ಅರಿವಾಗಬೇಕಿದೆ. ಇದಕ್ಕೆ ನೂರಾರು ವರ್ಷಗಳ ಹೋರಾಟದ ಹಿನ್ನೆಲೆ ಇದ್ದು, ದೇಶದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಇದ್ದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಕೆಳವರ್ಗದ ಜನರಿಗೆ ಶಿಕ್ಷಣ ನೀಡದ ಪದ್ಧತಿಗಳು ಹಾಗೂ ಜಾತಿ, ಧರ್ಮಗಳ ವಿಂಗಡಣೆ ಕಾರಣದಿಂದ ದುರ್ಬಲ ವರ್ಗ ಹೈರಾಣವಾಗಿತ್ತು. ಇದನ್ನು ಆಳವಾಗಿ ಅಭ್ಯಸಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದುರ್ಬಲ ವರ್ಗದವರಿಗೆ ಸಂವಿಧಾನದಲ್ಲಿ ಮೀಸಲು ಒದಗಿಸಿದರು ಎಂದು ಹೇಳಿದರು.

ಮೀಸಲಾತಿ ಹಿನ್ನೆಲೆ: ಅಂಬೇಡ್ಕರ್‌ಗೂ ಮುನ್ನಾ ಶಾಹುಮಾಜರು ತಮ್ಮ ಸಂಸ್ಥಾನದಲ್ಲಿ ಮೀಸಲು ಪದ್ಧತಿ ಜಾರಿಗೆ ತಂದಿದ್ದರು. ಅದು ಅವರ ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಇದರೊಂದಿಗೆ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೀಸಲು ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು ಎಂದು ಮೀಸಲು ಪದ್ಧತಿ ಬೆಳೆದು ಬಂದ ಹಾದಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಸೌಲಭ್ಯ: ಸಂವಿಧಾನದಲ್ಲಿ ದುರ್ಬಲ ವರ್ಗದವರಿಗೆ ಮೀಸಲು ಇರುವ ಕಾರಣ, ಅನೇಕ ಕಲ್ಯಾಣ ಇಲಾಖೆಗಳನ್ನು ಪ್ರಾರಂಭಿಸಲಾಗಿದೆ. ಜತೆಗೆ ಸರ್ಕಾರ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿದೆ. ಪ್ರಮುಖವಾಗಿ ಉನ್ನತ ಶಿಕ್ಷಣ ನೀಡುವುದು, ಅದಕ್ಕೆ ಪೂರಕವಾಗಿ ವಿದ್ಯಾರ್ಥಿ ವೇತನಗಳು, ಶುಲ್ಕ ರಿಯಾಯಿತಿ. ಸಾಲ ಸೌಲಭ್ಯ, ಪದವಿ ಪಡೆದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ವಿವಿಧ ಸಂಸ್ಥೆಗಳ ಮೂಲಕ ತರಬೇತಿ ಕೊಡಿಸುವುದು. ಅದಕ್ಕೆ ತಗಲುವ ವೆಚ್ಚವನ್ನು ಭರಿಸುವುದು ಸೇರಿದಂತೆ ಅನೇಕ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರು.

ಅಸಮಾನತೆ ಪಿಡುಗು: ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಎಂ. ಇಂದಿರಾ ಮಾತನಾಡಿ, ಸಾಮಾಜಿಕ ಅಸಮಾನತೆ ಎನ್ನುವುದು ದೇಶದಲ್ಲಿ ಒಂದು ಪಿಡುಗಾಗಿ ಪರಿಣಮಿಸಿದೆ. ಇದನ್ನು ಬದಲಾವಣೆ ಮಾಡಲು ಯಾರೂ ಬರುವುದಿಲ್ಲ. ಅಥವಾ ಯಾರಾದರೂ ಬರುತ್ತಾರೆ ಎಂದು ನಿರೀಕ್ಷಿಸಲೂ ಬಾರದು. ಇಂದಿನ ಯುವ ಜನಾಂಗದ ದಿಟ್ಟ ನಿರ್ಧಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯೋಜನಾ ವೇದಿಕೆಯ ಸಂಚಾಲಕಿ ನವಿತಾ ತಿಮ್ಮಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next