Advertisement

ಕವಿವಿ ಪರೀಕ್ಷೆ ವೇಳಾಪಟ್ಟಿ ಹಿಂಪಡೆಯಲು ಆಗ್ರಹ

05:29 PM Jun 29, 2021 | Team Udayavani |

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಅವೈಜ್ಞಾನಿಕ ಪರೀಕ್ಷಾ ವೇಳಾಪಟ್ಟಿ ಹಿಂಪಡೆಯುವುದರ ಜತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಎರಡು ಡೋಸ್‌ ಕೋವಿಡ್‌ ಲಸಿಕೆ ಹಾಕುವವರೆಗೂ ಯಾವುದೇ ರೀತಿಯ ಆಫ್‌ಲೈನ್‌ ಪರೀಕ್ಷೆ-ತರಗತಿಗಳನ್ನು ಆರಂಭಿಸದಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಎಐಡಿಎಸ್‌ಒ (ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟುಡೆಂಟ್ಸ್‌ ಆರ್ಗನೈಸೇಷನ್‌) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ, ಲಾಕ್‌ ಡೌನ್‌ ಆಗಿದ್ದ ಸಮಯದಲ್ಲಿ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸದೆಯೇ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಕಳುಹಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಸೆಮಿಸ್ಟರ್‌ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲವೆಂದು ಹಾಗೂ ಈಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆದ್ಯತೆ ಎಂದು ಹೇಳಿದ್ದಾಗಲೂ ಕವಿವಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ ಎಂದು ದೂರಲಾಯಿತು.

ಪ್ರಸ್ತುತ ಸೆಮಿಸ್ಟರಿನ ಪರೀಕ್ಷೆಯನ್ನು ಆಗಸ್ಟ್‌ ಕೊನೆಯ ವಾರದಿಂದ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮುಗಿಸಿ ನಂತರ ಅಕ್ಟೋಬರ್‌ ಮೊದಲ ವಾರದ ಒಳಗೆ ಹಿಂದಿನ ಸೆಮಿಸ್ಟರ್‌ ಪರೀಕ್ಷೆಯನ್ನು ಮುಗಿಸುವುದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದಂತಾಗುತ್ತದೆ. ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್‌ ಪರೀಕ್ಷೆ ನಡೆಸುವುದು ಅವೈಜ್ಞಾನಿಕ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ರಣಜೀತ್‌ ಧೂಪದ, ಉಪಾಧ್ಯಕ್ಷೆ ಶಶಿಕಲಾ ಮೇಟಿ, ಚೈತನ್ಯಾ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next