Advertisement

ನೋಡ ನೋಡುತಾ ಕಾಡುವ “ಡಿಂಗ’

10:09 AM Feb 02, 2020 | Lakshmi GovindaRaj |

“ನಾನು ಸತ್ತ ಮೇಲೆ ನನ್ನ “ಡಿಂಗ’ನನ್ನು, ನನ್ನಷ್ಟೇ ಚೆನ್ನಾಗಿ ನೋಡಿಕೊಳ್ಳುವವರಿಗೆ ಕೊಡಬೇಕು. ದೇವರು ಇರೋದು ನಿಜವಾಗಿದ್ದರೆ, ಖಂಡಿತ ಅಂಥವರೊಬ್ಬರು ಸಿಕ್ಕೇ ಸಿಗುತ್ತಾರೆ…’ – ಹೀಗೆ ಬಂಟಿ ಹೇಳುವ ಹೊತ್ತಿಗೆ ಅಲ್ಲೊಂದು ಕ್ಷಣ ಮೌನ ಆವರಿಸುತ್ತದೆ. ಅಲ್ಲಿಯವರೆಗೆ ಹುಡುಗಾಟ ಮಾಡುತ್ತ, ಪ್ರೇಕ್ಷಕರನ್ನು ನಗಿಸಿಕೊಂಡು ಹೋಗುತ್ತಿದ್ದ “ಡಿಂಗ’, ಒಂದು ಕ್ಷಣ ನೋಡುಗರ ನಗುವಿಗೆ ಬ್ರೇಕ್‌ ಹಾಕುತ್ತಾನೆ. ಕ್ಷಣ ಕಾಲ ಎಲ್ಲವೂ ನಿಶ್ಯಬ್ಧವಾಗುತ್ತದೆ.

Advertisement

ಹಾಗಾದರೆ, ಬಂಟಿ ಅನ್ನೋ ಹುಡುಗ ಈ ಮಾತನಾಡಿದ್ದು ಯಾಕೆ? “ಡಿಂಗ’ನನ್ನು ತಾನು ಸಾಯುವ ಮೊದಲು ತನ್ನಷ್ಟೇ ಚೆನ್ನಾಗಿ ನೋಡಿಕೊಳ್ಳುವವರ ಮಡಿಲಿಗೆ ಹಾಕುವ ಮನಸ್ಸು ಮಾಡಿದ್ದಾದರೂ ಯಾಕೆ? ಅಷ್ಟಕ್ಕೂ ಈ “ಡಿಂಗ’ ಅಂದ್ರೆ ಯಾರು? “ಡಿಂಗ’ ಸಂಗಡ ಯಾರ್ಯಾರು ಇರುತ್ತಾರೆ? ಅವರ ನೋವು-ನಲಿವಿನ ಕಥೆಗೆ ಪ್ರೇಕ್ಷಕನಾಗುವ ಮನಸ್ಸು, ಸಮಯ ಮತ್ತು ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ಡಿಂಗ’ ಚಿತ್ರವನ್ನು ನೋಡಬಹುದು.

ಅಂದಹಾಗೆ, ನೀವು ಐ-ಫೋನ್‌ ಅಥವಾ ಸ್ಮಾರ್ಟ್‌ ಫೋನ್‌ಗಳಲ್ಲಿ ಸಿನಿಮಾ ಮಾಡುವುದರ ಬಗ್ಗೆ ನೀವು ಕೇಳಿರಬಹುದು. ಹಾಗೆ ಮಾಡಿದ ಸಿನಿಮಾ ಬಿಗ್‌ ಸ್ಕ್ರೀನ್‌ ಮೇಲೆ ಬಂದರೆ ಹೇಗೆ ಕಾಣಬಹುದು. ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸಿ ಮಾಡುವ ಸಿನಿಮಾಗಳಿಗೂ, ಸ್ಮಾರ್ಟ್‌ ಫೋನ್‌ಗಳಲ್ಲಿ ಮಾಡುವ ಸಿನಿಮಾಗಳಿಗೂ ಏನಾದ್ರು ವ್ಯತ್ಯಾಸ ಇರುತ್ತದೆಯಾ ಅನ್ನೋ ಪ್ರೇಕ್ಷಕರ ಹಲವು ಪ್ರಶ್ನೆಗಳಿಗೆ “ಡಿಂಗ’ ತೆರೆಮೇಲೆ ಉತ್ತರಿಸುತ್ತಾನೆ.

“ಡಿಂಗ’ ಚಿತ್ರದಲ್ಲಿ ಪ್ರಮುಖವಾಗಿ ಎರಡು ಸಂಗತಿಗಳು ಗಮನ ಸೆಳೆಯುತ್ತದೆ. ಮೊದಲನೆಯದು ಸರಳವಾದ ಕಥೆಯೊಂದಕ್ಕೆ ಕಾಮಿಡಿ, ಎಮೋಶನ್‌ ಟಚ್‌ ಕೊಟ್ಟಿರುವುದು. ಎರಡನೆಯದು ಆ ಕಥೆಯನ್ನು ಸ್ಮಾರ್ಟ್‌ಫೋನ್‌ ಮೂಲಕ ಕೈಲಾದಷ್ಟು ಮಟ್ಟಿಗೆ ಪರಿಣಾಮಕಾರಿಯಾಗಿ ಸೆರೆಹಿಡಿದು ತೆರೆಮೇಲೆ ತರುವ ಪ್ರಯತ್ನ ಮಾಡಿರುವುದು. ಚಿತ್ರದಲ್ಲಿ ಬರುವ ಬೆರಳೆಣಿಕೆಷ್ಟು ಪಾತ್ರಗಳು ಮತ್ತು ಸನ್ನಿವೇಶಗಳು ಪ್ರೇಕ್ಷಕರನ್ನು ಸಾಕಷ್ಟು ಸಾವಧಾನದಿಂದ ನೋಡಿಸಿಕೊಂಡು ಹೋಗುತ್ತವೆ. ಚಿತ್ರದ ಸಂಭಾಷಣೆ, ಒಂದೆರಡು ಹಾಡುಗಳು ಕೇಳುವಂತಿವೆ.

ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ, “ಡಿಂಗ’ನಿಗೆ ಇನ್ನಷ್ಟು ವೇಗ ಸಿಗುತ್ತಿತ್ತು. ಮುಖ್ಯ ಪಾತ್ರದಲ್ಲಿ ಬರುವ ಆರವ್‌ ಗೌಡ, ಅಭಿಷೇಕ್‌ ತಮ್ಮ ಪಾತ್ರದ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ಇತರೆ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಇನ್ನು ತಾಂತ್ರಿಕವಾಗಿ ಲೈಟಿಂಗ್ಸ್‌, ಹಿನ್ನೆಲೆ ಸಂಗೀತ, ಮೇಕಪ್‌ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ ಕೆಲವೊಂದು ಸಣ್ಣಪುಟ್ಟ ಲೋಪಗಳ ಹೊರತಾಗಿಯೂ “ಡಿಂಗ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ.

Advertisement

ಚಿತ್ರ: ಡಿಂಗ
ನಿರ್ಮಾಣ: ಶ್ರೀಮಾಯಕಾರ ಪ್ರೊಡಕ್ಷನ್ಸ್‌
ನಿರ್ದೇಶನ: ಅಭಿಷೇಕ್‌ ಜೈನ್‌
ತಾರಾಗಣ: ಆರವ್‌ ಗೌಡ, ಅಭಿಷೇಕ್‌ ಜೈನ್‌, ಅನೂಷಾ, ನಾಗೇಂದ್ರ ಶಾ, ರಘು ರಮಣಕೊಪ್ಪ, ಗಣೇಶರಾವ್‌ ಕೇಸರ್ಕರ್‌ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next