Advertisement

ರೆಕಾರ್ಡ್‌ ಮೇಲೆ ರೆಕಾರ್ಡು

03:50 AM Mar 03, 2017 | |

ರೆಕ್ಕೆ ಬಡಿಯದೇ ಇದ್ದರೆ, ಎಷ್ಟು ದೂರ ಹಾರಬಹುದು ಎಂಬ ಅಂದಾಜು, ಕಲ್ಪನೆಯೇ ಇರುವುದಿಲ್ಲ …  ಹಾಗೊಂದು ನಾಣ್ಣುಡಿಯೇ ಇದೆ. ಈ ಮಾತಿಗೆ ಕಾರಣವೂ ಇದೆ. ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ಚಿತ್ರಮಂದಿರಗಳಲ್ಲಿ, ಊರುಗಳಲ್ಲಿ, ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ಚಿತ್ರಮಂದಿರಗಳು, ಊರುಗಳು, ರಾಜ್ಯಗಳು, ದೇಶಗಳು ಮತ್ತು ಪ್ರೇಕ್ಷಕರು ಆಗಲೂ ಇದ್ದರು. ಈಗಲೂ ಇದ್ದಾರೆ. ಆದರೆ, ಅವರನ್ನು ತಲುಪುವ ಪ್ರಯತ್ನ ಸ್ವಲ್ಪ ತಡವಾಗಿಯೇ ಕನ್ನಡದಲ್ಲಿ ಪ್ರಾರಂಭವಾಗಿದೆ. ಯಾಕೆ ತಡವಾಯ್ತು, ಯಾಕೆ ಇಷ್ಟು ದಿನ ಸಾಧ್ಯವಾಗಲಿಲ್ಲ ಎಂದರೆ, ಅದಕ್ಕೆ ಅದೇ ಉತ್ತರ.  ರೆಕ್ಕೆ ಬಡಿಯದೇ ಇದ್ದರೆ, ಎಷ್ಟು ದೂರ ಹಾರಬಹುದು ಎಂಬ ಅಂದಾಜು, ಕಲ್ಪನೆಯೇ ಇರುವುದಿಲ್ಲ … 

Advertisement

ಕನ್ನಡ ಚಿತ್ರರಂಗಕ್ಕೆ ಇಷ್ಟೊಂದು ದೊಡ್ಡ ಮಾರುಕಟ್ಟೆ ಇದೆಯಾ?
ಬಹುಶಃ ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಪ್ರಶ್ನೆಯೊಂದನ್ನು ಕೇಳಿದ್ದರೆ, ಇಲ್ಲ ಎಂಬ ಉತ್ತರವೇ ಬರುತಿತ್ತು. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು, ಅದರಲ್ಲೂ ಕಳೆದೊಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಬದಲಾವಣೆಗಳನ್ನು ನೋಡಿದರೆ, ಖಂಡಿತಾ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ದೊಡ್ಡ ಮಾರುಕಟ್ಟೆ ಇದೆ ಮತ್ತು ಅದನ್ನು ಸರಿಯಾಗಿ ಅವಲೋಕಿಸದ ಮತ್ತು ಅದನ್ನು ವಿಸ್ತಿರಿಸದ ಗೋಜಿಗೆ ಕನ್ನಡ ಚಿತ್ರರಂಗವೇ ಹೋಗಲಿಲ್ಲ ಎನ್ನಬಹುದು. ಆ ಮಟ್ಟಿಗಿನ ವಿಸ್ತಾರವು ಕನ್ನಡ ಚಿತ್ರರಂಗಕ್ಕೆ ಇದೆ.

ಪ್ರಮುಖವಾಗಿ ಇಲ್ಲಿ ಎರಡು ವಿಷಯಗಳನ್ನು ಗಮನಿಸಬೇಕು. ಒಂದು ಕನ್ನಡ ಚಿತ್ರಗಳು ಕರ್ನಾಟಕದಲ್ಲೇ ಹೆಚ್ಚು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜೊತೆಗೆ, ಪರರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತು ಎರಡನೆಯದು ಅಮೇರಿಕಾ, ಆಸ್ಟ್ರೇಲಿಯಾಗಳಲ್ಲದೆ ಇತರೆ ದೇಶ ಮತ್ತು ಖಂಡಗಳಲ್ಲೂ ಕನ್ನಡ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಬಿಡುಗಡೆಯಾಗುತ್ತಿರುವುದು. ಮೊದಲು ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಬಿಡುಗಡೆಯ ಬಗ್ಗೆ ಹೇಳುವುದಾದರೆ, ತೀರಾ ಇತ್ತೀಚೆಗೂ ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಹೆಚ್ಚೆಂದರೆ 200 ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗುತ್ತಿದ್ದುದು. ಆ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಸುದೀಪ್‌ ಅಭಿನಯದ “ಹೆಬ್ಬುಲಿ’. ಆ ಚಿತ್ರ ದಾಖಲೆಯ 425 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಇನ್ನು ಹೊರರಾಜ್ಯಗಳಲ್ಲಿ ಬಿಡುಗಡೆಯಾದ ಚಿತ್ರಮಂದಿರಗಳ ಸಂಖ್ಯೆ ತೆಗೆದುಕೊಂಡರೆ, ಆ ಸಂಖ್ಯೆ 500 ಆಗುತ್ತದೆ. ಇನ್ನು ಹೊರದೇಶಗಳಲ್ಲಿ ಕನ್ನಡ ಚಿತ್ರಗಳ ಬಿಡುಗಡೆ ಎಂದರೆ, ಅದು ಅಮೇರಿಕಾ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾಗೆ ಸೀಮಿತವಾಗಿತ್ತು. ಆದರೆ, ಈಗ ಇಟಲಿ, ಜಪಾನ್‌, ಸಿಂಗಾಪೂರ್‌, ದುಬೈ, ಸ್ಪೇನ್‌ ಮುಂತಾದ ಕಡೆಗಳಲ್ಲೂ ಕೆಲವು ಚಿತ್ರಗಳು ಬಿಡುಗಡೆಯಾಗಿವೆ. ಈ ಮೂಲಕ ಅಲ್ಲಿನ ಕನ್ನಡಿಗರನ್ನು ತಲುಪಲಾಗುತ್ತಿದೆ. ಕನ್ನಡದ ನಟ-ನಟಿಯರು ಮತ್ತು ತಂತ್ರಜ್ಞರು ಬೇರೆಬೇರೆ ದೇಶಗಳಿಗೆ ಹೋಗುತ್ತಿದ್ದಾರೆ, ಅಲ್ಲಿಯ ಜನರೊಂದಿಗೆ ಸಿನಿಮಾ ತೋರಿಸುತ್ತಿದ್ದಾರೆ, ಅವರ ಜೊತೆಗೆ ಸಂವಾದ ಮಾಡುತ್ತಲೇ ಅವರ ಬೇಕು-ಬೇಡಗಳಿಗೆ ಸ್ಪಂದಿಸುತ್ತಿದ್ದಾರೆ.

ಮಾರುಕಟ್ಟೆ  ಇತ್ತು, ವಿಸ್ತರಿಸುವ ಪ್ರಯತ್ನವಾಗಿರಲಿಲ್ಲ: ಇಂಥದ್ದೊಂದು ಮಾರುಕಟ್ಟೆ ಸೃಷ್ಟಿಯಾಗಿದ್ದು ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆ ಬರೋದು ಸಹ. ಒಂದು ವಿಷಯ ಗೊತ್ತಿರಲಿ. ಮಾರುಕಟ್ಟೆ ಸೃಷ್ಟಿಯಾಗಲಿಲ್ಲ, ಅದು ಯಾವತ್ತಿಂದಲೋ ಇತ್ತು, ಅದನ್ನು ವಿಸ್ತರಿಸುವ ಪ್ರಯತ್ನಕ್ಕೆ ಯಾಕೋ ಚಿತ್ರರಂಗದವರು ಮನಸ್ಸು ಮಾಡಲಿಲ್ಲ ಎಂದರೆ ತಪ್ಪಿಲ್ಲ. ಸುಮ್ಮನೆ ನೋಡಿ, ಕನ್ನಡ ಚಿತ್ರಗಳು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದೇ ಕಷ್ಟ ಮತ್ತು ಪರಭಾಷಾ ಚಿತ್ರಗಳಿಗೆ ಸಲೀಸಾಗಿ ಚಿತ್ರಮಂದಿರಗಳು ಸಿಗುತ್ತವೆ ಎಂಬ ಮಾತುಗಳು ಪದೇಪದೇ ಕೇಳಿಬರುತ್ತಲೇ ಇತ್ತು. ಆದರೆ, ಕನ್ನಡ ಚಿತ್ರರಂಗ ಯಾಕೆ 100 ಚಿತ್ರಮಂದಿರಗಳಿಂದ 400 ಚಿತ್ರಮಂದಿರಗಳಿಗೆ ವಿಸ್ತರಿಸುವ ಪ್ರಯತ್ನ ಮಾಡಲಿಲ್ಲ ಮತ್ತು ಬೇರೆ ಭಾಷೆಗಳು ಹೇಗೆ ಅದನ್ನು ಮಾಡಿದವು ಎಂಬುದು ನಮಗೆ ನಾವೇ ಕೇಳಿಕೊಳ್ಳಬೇಕು. ಚಿತ್ರಮಂದಿರಗಳು ಆವತ್ತೂ ಇತ್ತು. ಈಗಲೂ ಇದೆ. ಸಂಖ್ಯೆ ಸ್ವಲ್ಪ ಜಾಸ್ತಿಯಾಗಿರಬಹುದು ಅಷ್ಟೇ. ಮಿಕ್ಕಂತೆ ಬದಲಾವಣೆಯಾಗಿಲ್ಲ. ಆದರೆ, ಪರಭಾಷೆಯ ಚಿತ್ರಗಳು ಬಜೆಟ್‌ನಲ್ಲಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿರೀಕ್ಷೆಯಲ್ಲಿ ದೊಡ್ಡದಾಗಿದ್ದವು. ಕನ್ನಡ ಚಿತ್ರಗಳು ಒಂದು ಹೆಜ್ಜೆ ಹಿಂದೆ ಇತ್ತು. ಈಗ ಕನ್ನಡ ಚಿತ್ರಗಳು ಸಹ ಬಜೆಟ್‌ ಮತ್ತು ನಿರೀಕ್ಷೆ ವಿಷಯದಲ್ಲಿ ದೊಡ್ಡದಾಗುತ್ತಿದೆ.
ಪ್ರಯತ್ನ ಮತ್ತು ಪ್ರಯತ್ನದ ಕೊರತೆ: ಇವೆಲ್ಲಾ ಹೇಗೆ ಸಾಧ್ಯವಾಗುತ್ತದೆ ಎಂದರೆ ಅದಕ್ಕೆ ಉತ್ತರ ಪ್ರಯತ್ನ ಮತ್ತು ಇಷ್ಟರವರೆಗೂ ಯಾಕೆ ಸಾಧ್ಯವಾಗಿರಲಿಲ್ಲ ಎಂದರೆ ಆ ಪ್ರಯತ್ನದ ಕೊರತೆ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದಲ್ಲಿ ಯಾವ ಸಮಯದಲ್ಲಿ ತೆಗೆದುಕೊಂಡರೂ ಹೊಸ ಹೊಸ ಪ್ರಯತ್ನ ಮತ್ತು ಪ್ರಯೋಗಗಳು ನಡೆಯುತ್ತಲೇ ಇದೆ. ಇದೆಲ್ಲಾ ಸಿನಿಮಾದಲ್ಲಿ ಮತ್ತು ಪ್ರೇಕ್ಷಕರನ್ನು ತಲುಪುವುದಕ್ಕೆ ಮಾಡುತ್ತಿದ್ದ ಪ್ರಯತ್ನ ಮತ್ತು ಪ್ರಯೋಗಗಳಾಗಿತ್ತೇ ಹೊರತು, ಅದನ್ನು ಜನರಿಗೆ ತೋರಿಸಬೇಕು ಮತ್ತು ಹೆಚ್ಚುಹೆಚ್ಚು ಜನರಿಗೆ ತಲುಪಿಸಬೇಕು ಎಂಬ ಪ್ರಯತ್ನ ಬಹಳಷ್ಟು ಜನ ಮಾಡಿರಲಿಲ್ಲ. ಈ ತರಹದ ಪ್ರಯತ್ನಗಳು ಒಮ್ಮೆ ಮಾಡಿದರೆ ಆಗುವುದಿಲ್ಲ, ಯಾವಾಗಲೋ ಒಮ್ಮೆ ಮಾಡಿದರೂ ಆಗುವುದಿಲ್ಲ. ಪದೇಪದೇ ಆಗುತ್ತಿರಬೇಕು. ಆಗಷ್ಟೇ ವಿಸ್ತರಣೆ ಸಾಧ್ಯ ಎನ್ನುವುದನ್ನು ಇತ್ತೀಚಿನ ಕೆಲವು ಚಿತ್ರಗಳು ತೋರಿಸಿಕೊಟ್ಟಿವೆ. ಮೊದಲ್ಯಾರೋ ತಮ್ಮ ಚಿತ್ರವನ್ನು 100 ಚಿತ್ರಮಂದಿರಗಳವರೆಗೂ ತಂದರು. ಅದು ಇನ್ನೂರಾಯಿತು. ಈಗ ನಾನೂರಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ 600 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಇನ್ನು ಹೊರರಾಜ್ಯಗಳ ವಿಷಯ ತೆಗೆದುಕೊಂಡರೆ, ಕರ್ನಾಟಕ ಬಿಟ್ಟರೆ ಪಕ್ಕದ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗುವುದು ಕಷ್ಟ ಎನ್ನುವಂತಿತ್ತು ಪರಿಸ್ಥಿತಿ. ಒಬ್ಬರು ಪ್ರಯತ್ನ ಮಾಡಿದರು ನೋಡಿ, ಅದನ್ನು ಇನ್ನೊಬ್ಬರು ಮುಂದುವರೆಸಿ, ಮತ್ತೂಬ್ಬರು ಮತ್ತಷ್ಟು ವಿಸ್ತರಿಸಿ … ಈಗ ಏಕಕಾಲಕ್ಕೆ ಕನ್ನಡ ಚಿತ್ರಗಳು ಚೆನ್ನೈ, ಹೈದರಾಬಾದುಗಳಲ್ಲದೆ ಮುಂಬೈ, ದೆಹಲಿಯಲ್ಲೂ ಬಿಡುಗಡೆಯಾಗುತ್ತಿವೆ. ಬಹುಶಃ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿದ್ದು ಇದೇ ರೀತಿ. ಆದರೆ, ಯಾಕೋ ಕನ್ನಡ ಚಿತ್ರಗಳು ಮಾತ್ರ ಆ ತರಹ ಲಗ್ಗೆ ಇಡುವ ಪ್ರಯತ್ನವನ್ನೇ ಮಾಡಿರಲಿಲ್ಲ.

ದಾಖಲೆ ಅಂತ ಸುಮ್ಮನಿರುವ ಹಾಗಿಲ್ಲ: ಈ ತರಹ ಲಗ್ಗೆ ಇಡಬೇಕಾದರೆ ಬರೀ ದುಡ್ಡಿದ್ದರಷ್ಟೇ ಅಲ್ಲ, ಪ್ರಮುಖವಾಗಿ ಚಿತ್ರಗಳ ಗುಣಮಟ್ಟ ಹೆಚ್ಚಿರಬೇಕು, ಜನರು ಅಂತಹ ಚಿತ್ರಗಳಿಗೆ ಕಾಯುವಂತಿರಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ಪ್ರಚಾರ ಪಡೆದುಕೊಳ್ಳಬೇಕು. ಬಹುಶಃ ಇವೆಲ್ಲಾ ಈಗ ಒಟ್ಟಿಗೆ ಕೂಡಿಬಂದಿದೆ. ಅದೇ ಕಾರಣಕ್ಕೆ ಕನ್ನಡ ಚಿತ್ರಗಳಿಗೆ ಬೇರೆ ಕಡೆ ಬಾಗಿಲು ತೆಗೆಯಲ್ಪಡುತ್ತಿವೆ. ಅದೇ ಕಾರಣಕ್ಕೆ ಇವತ್ತು ಕನ್ನಡ ಚಿತ್ರಗಳ ಹೆಸರುಗಳು ಎಲ್ಲೆಲ್ಲೂ ಕೇಳಿ ಬರುತ್ತಿವೆ. ಹಾಗಂತ ಜವಾಬ್ದಾರಿ ಮುಗಿದಿಲ್ಲ. ದಾಖಲೆಯಾಗಿದೆ, ಸಾಧನೆಯಾಗಿದೆ ಎಂದು ಸುಮ್ಮನೆ ಕೂರುವಂತಿಲ್ಲ. ಅದನ್ನು ಮುಂದುವರೆಸಬೇಕಿದೆ. ಇದು ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಹಂತಹಂತವಾಗಿ, ಚಿತ್ರದಿಂದ ಚಿತ್ರಕ್ಕೆ ಈ ಲಗ್ಗೆ ಮುಂದುವರೆಯಬೇಕು. ಸಮುದ್ರಕ್ಕೆ ಹಾರಿಯಾಗಿದೆ. ಇನ್ನು ಈಜಬೇಕು, ಈಜುತ್ತಲೇ ಇರಬೇಕು …

Advertisement

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next