Advertisement

BJP: ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು

01:58 AM Oct 04, 2024 | Team Udayavani |

ಬೆಂಗಳೂರು: ಲೊಟ್ಟೆಗೊಲ್ಲ ಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದಿ ದ್ದರೂ ನೈತಿಕತೆ ಪ್ರಶ್ನೆ ಎತ್ತಿರುವುದರಿಂದ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. 24 ಗಂಟೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ? ಅಥವಾ ನನ್ನ ವಿರುದ್ಧ ಆರೋಪಿಸಿದ ನಾಲ್ವರು ಸಚಿವರು ರಾಜೀನಾಮೆ ಕೊಡುತ್ತಾರಾ? ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

Advertisement

ಗುರುವಾರ ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ಸಮೇತ ಉತ್ತರಿಸಿದ ಅವರು, ಲೊಟ್ಟೆಗೊಲ್ಲಹಳ್ಳಿ ಪ್ರಕರಣದಲ್ಲಿ ಜನಪ್ರ ತಿನಿಧಿಗಳ ನ್ಯಾಯಾಲಯವಾಗಲಿ ಹೈಕೋರ್ಟ್‌ ಆಗಲಿ ನನ್ನ ಮೇಲಿನ ಆರೋಪಗಳನ್ನು ಎತ್ತಿ ಹಿಡಿದಿಲ್ಲ. ನಿರ್ದೋಷಿ ಎಂದು ಸಾಬೀತಾಗಿದೆ. 2010ರಲ್ಲಿ ನನ್ನ ವಿರುದ್ಧ ಸಿರಾಜುದ್ದೀನ್‌ ಪಾಷಾ ಸಲ್ಲಿಸಿದ್ದ ಅಭಿಯೋಜನೆ ಅರ್ಜಿಗೆ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಕೂಡ ಒಪ್ಪಿಗೆ ಕೊಟ್ಟಿರಲಿಲ್ಲ. ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸಿಗರು ಇಂದು ಪ್ರಶ್ನಿಸುತ್ತಿ ದ್ದಾರೆಂದರೆ ಇದು ನನಗೆ ಕಳಂಕ ತರಲು ಮಾಡಿರುವ ಷಡ್ಯಂತ್ರ ಎಂದು ವಿಶ್ಲೇಷಿಸಿದರು.

ಕೃಷ್ಣ ಬೈರೇಗೌಡರ ಆಸ್ತಿ ಬೇನಾಮಿಯೇ?
ಮುನಿವೆಂಕಟಪ್ಪ ಎಂಬವರು ವಿಲ್‌ ಮೂಲಕ 20 ಜನರಿಗೆ ಹಂಚಿಕೆ ಮಾಡಿದ್ದ ಆಸ್ತಿಯ ಪೈಕಿ ಪುತ್ರ ರಾಮಸ್ವಾಮಿ ಅವರೂ ಒಬ್ಬರು. ಅವರಿಂದ ನಾನು ಜಮೀನು ಖರೀದಿಸಿದ್ದೇನೆಯೇ ಹೊರತು, ಅರಿಶಿನ-ಕುಂಕುಮಕ್ಕೆ ಕೊಟ್ಟಿದ್ದಲ್ಲ. ಅದಕ್ಕೆ ಅವರ ಕುಟುಂಬದ 20 ಜನರೂ ಸಹಿ ಮಾಡಿದ್ದರು. ಹೀಗಾಗಿ ಅದು ಬೇನಾಮಿ ಅಂತೂ ಅಲ್ಲ. ಬೈರೇಗೌಡರಿಂದ ಕೃಷ್ಣ ಬೈರೇಗೌಡರಿಗೆ ಬಂದ ಕೋಲಾರದ ಆಸ್ತಿ ಬೇನಾಮಿಯೇ ಎಂದು ಅಶೋ ಕ್‌ ಪ್ರಶ್ನಿಸಿದರು.

ನಾನು ನಿರ್ದೋಷಿ,ಸಿದ್ದರಾಮಯ್ಯ ಅಲ್ಲ
ನನ್ನ ಪ್ರಕರಣದಲ್ಲಿ ಯಾವ ನ್ಯಾಯಾಲಯವೂ ನನ್ನ ವಿರುದ್ಧ ತನಿಖೆಗೆ ಆದೇಶಿಸಿಲ್ಲ. ಅಂದಿನ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಕೂಡ ಅಭಿಯೋಜನೆಗೆ ಅನುಮತಿಸಿರಲಿಲ್ಲ. ನ್ಯಾಯಾಲಯದ ಆದೇಶಕ್ಕೂ ಮೊದಲೇ ಜಾಗವನ್ನು ಹಿಂದಿರುಗಿಸಿದ್ದೆ. ನ್ಯಾಯಾಲಯಗಳ ಆದೇಶದ ಪ್ರಕಾರವೇ ನಾನು ನಿರ್ದೋಷಿ. ಆದರೆ ಸಿಎಂ ಸಿದ್ದರಾಮಯ್ಯ ಅಲ್ಲ. ಅವರ ಮೇಲೆ ತನಿಖೆಗೆ ನ್ಯಾಯಾಲಯವೇ ಆದೇಶಿಸಿದೆ. ನ್ಯಾಯಾಲಯಕ್ಕಿಂತ ಕಾಂಗ್ರೆಸಿಗರು ದೊಡ್ಡವರಲ್ಲ ಎಂದು ತಿರುಗೇಟು ನೀಡಿದರು.

ನಾನು ಸಿದ್ಧ; ನೀವು…?
ಲೋಕಾಯುಕ್ತ ನಿವೃತ್ತ ನ್ಯಾ| ಸಂತೋಷ್‌ ಹೆಗ್ಡೆ, ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಸೇರಿದಂತೆ ಅನೇಕರು ಸಿದ್ದರಾಮಯ್ಯರ ರಾಜೀನಾಮೆ ಕೇಳಿದ್ದಾರೆ. ನ್ಯಾಯಾಲಯ ಕೂಡ ತನಿಖೆಗೆ ಆದೇಶಿಸಿದೆ. ನನ್ನ ಮೇಲಿನ ಯಾವ ಆರೋಪಗಳೂ ಸಾಬೀತಾಗಿಲ್ಲ. ಆದರೂ ನನ್ನ ಬಂಧುಗಳಾದ ಕೃಷ್ಣ ಬೈರೇಗೌಡರು, ಹಿರಿಯ ಮಾರ್ಗದರ್ಶಕರಾದ ಎಚ್‌.ಕೆ. ಪಾಟೀಲ್‌, ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ನನ್ನ ನೈತಿಕತೆ ಪ್ರಶ್ನಿಸಿದ್ದಾರೆ. ವಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ. ನನಗೆ ಇಂಗ್ಲಿಷ್‌ ಬಾರ ದೇ ಇರುವುದರಿಂದ ಸ್ಪೀಕರ್‌, ರಾಜ್ಯಪಾಲರಿಗೆ ನನ್ನ ರಾಜೀನಾಮೆ ಪತ್ರವನ್ನು ವಿದೇಶದಲ್ಲಿ ಓದಿ ಬಂದಿರುವ ಸಚಿವ ಕೃಷ್ಣ ಬೈರೇಗೌಡರೇ ಸಿದ್ಧಪಡಿಸಿ ಕೊಡಲಿ. ಆದರೆ ನಾನು ರಾಜೀನಾಮೆ ನೀಡಿದ 24 ಗಂಟೆಯಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಾರಾ? ಎಂದು ಪ್ರಶ್ನಿಸಿದರಲ್ಲದೆ, ನನ್ನ ವಿರುದ್ಧ ಆರೋಪ ಮಾಡಿರುವ ನಾಲ್ವರು ಸಚಿವರು ರಾಜೀನಾಮೆ ಕೊಡಲು ಸಿದ್ಧರಿದ್ದಾರಾ? ಆ ಮೂಲಕ ಅವರ ಹೃದಯದಲ್ಲಿ ಸಿದ್ದರಾಮಯ್ಯ ಇದ್ದಾರೋ? ಡಿ.ಕೆ. ಶಿವಕುಮಾರ್‌ ಇದ್ದಾರೋ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದರು.

Advertisement

ನಾನು ಎಂದಿಗೂ ವೈಯಕ್ತಿಕ ದ್ವೇಷದ ರಾಜಕೀಯ ಮಾಡಿದವನಲ್ಲ. ನನ್ನ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದವರ ಕುಟುಂಬಕ್ಕೆ ಸಂಬಂಧಿಸಿದ ಕಡತಗಳು ಬಂದಿದ್ದವು. ಕುಟುಂಬವನ್ನು ರಾಜಕೀಯಕ್ಕೆ ತರಬಾರದೆಂದು ಸುಮ್ಮನಾದೆ. ವಿಪಕ್ಷ ನಾಯಕನಾಗಿ ಸರಕಾರದ ವಿರುದ್ಧ ನನ್ನ ಕರ್ತವ್ಯ ಮಾತ್ರ ಮಾಡುತ್ತಿದ್ದೇನೆ. ನನಗೆ ಯಾರ ಮೇಲೂ ದ್ವೇಷದ ಭಾವನೆ ಇಲ್ಲ. ಯಾರಿಗೂ ಸವಾಲು ಹಾಕುವುದಿಲ್ಲ.
– ಆರ್‌. ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಮುಡಾ ನಿವೇಶನ ವಾಪಸ್‌ ನೀಡಿದ ಅನಂತರವೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರು ಲೊಟ್ಟೆಗೊಲ್ಲಹಳ್ಳಿ ಪ್ರಕರಣದಲ್ಲಿ ಡಿನೋಟಿಫೈ ವಿವಾದದ ಅನಂತರ ಬಿಡಿಎಗೆ ಜಾಗ ಮರಳಿಸಿದ ಅಶೋಕ್‌ ಅವರಿಂದಲೂ ರಾಜೀನಾಮೆ ಪಡೆಯಬೇಕಲ್ಲವೇ? ಅವರಿಗೊಂದು ಕಾನೂನು, ನಮಗೊಂದು ಕಾನೂನಾ? ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯ ತನಿಖೆಗೆ ಆದೇಶಿಸಿದೆಯೇ ಹೊರತು ರಾಜೀನಾಮೆ ಕೇಳಿಲ್ಲ.
– ಜಮೀರ್‌ ಅಹ್ಮದ್‌ ಖಾನ್‌, ವಸತಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next