Advertisement

ಸಿದ್ಧತೆ-ಬದ್ಧತೆ-ಶುದ್ಧತೆ ಪ್ರೊ|ಎಂ.ಆರ್‌. ವಿಶೇಷತೆ: ವಿವೇಕ್‌ ರೈ

01:06 AM Jan 02, 2020 | Team Udayavani |

ಕಾರ್ಕಳ: ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಪ್ರೊ| ಎಂ. ರಾಮಚಂದ್ರ ಅವರ ಕೊಡುಗೆ ಅಪಾರವಾದುದು. ಕಾರ್ಕಳ ಸಾಹಿತ್ಯ ಸಂಘವನ್ನು ಕಟ್ಟಿ ಆ ಮೂಲಕ ಕಾರ್ಕಳಕ್ಕೆ ಗಣ್ಯಾತೀಗಣ್ಯ ಸಾಹಿತಿಗಳು, ವಿದ್ವಾಂಸರು, ಸ್ವಾಮೀಜಿಗಳನ್ನು ಕರೆಸಿ ಉಪನ್ಯಾಸ ನೀಡಿದ ಹೆಗ್ಗಳಿಕೆ ಅವರದ್ದು ಎಂದು ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ್‌ ರೈ ಹೇಳಿದರು.

Advertisement

ಡಿ. 31ರಂದು ತೆಳ್ಳಾರು ರಸ್ತೆಯ ಶ್ರೀ ರಾಘವೇಂದ್ರ ಮಠದ ಗೋವಿಂದ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಿಧನಹೊಂದಿದ ಸಾಹಿತಿ, ಕನ್ನಡ ಪರಿಚಾರಕ ಪ್ರೊ| ಎಂ. ರಾಮಚಂದ್ರ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು.

ಹತ್ತಾರು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದ ಎಂ. ರಾಮಚಂದ್ರ ಅವರು ಸಾಹಿತ್ಯ ಪರಿಚಾರಕರಾಗಿಯೇ ಗುರುತಿಸಿಕೊಂಡವರು. ಹೀಗಾಗಿ ಅರ್ಹವಾಗಿಯೇ ಡಾ| ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿದ್ದರು. ಅದ್ದೂರಿಗಿಂತಲೂ ಅಚ್ಚುಕಟ್ಟುತನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಅವರು ತನ್ನ ಸಿದ್ಧತೆ, ಬದ್ಧತೆ, ಶುದ್ಧತೆ, ಸೊಗಸಾದ ನಿರೂಪಣೆಯಿಂದಲೇ ಸಾಹಿತ್ಯ ಲೋಕದಲ್ಲಿ ಜನಜನಿತರಾದವರು ಎಂದು ಡಾ| ವಿವೇಕ್‌ ರೈ ಬಣ್ಣಿಸಿದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ತಾಳ್ತಜೆ ವಸಂತ ಕುಮಾರ್‌, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಎ.ಎಸ್‌.ಎನ್‌. ಹೆಬ್ಟಾರ್‌, ಕೆ.ಪಿ. ಶೆಣೈ, ಪಾದೆಕಲ್ಲು ವಿಷ್ಣುಭಟ್‌, ಪಾಂಡುರಂಗ ನಾಯಕ್‌, ಆತ್ಮೀಯ ಕಡಂಬ, ಜಾರ್ಜ್‌ ಕ್ಯಾಸ್ತಲಿನೋ, ಜ್ಯೋತಿ ಶೆಟ್ಟಿ, ಡಾ| ವರದರಾಜ ಚಂದ್ರಗಿರಿ, ಬಾಲಕೃಷ್ಣ ಪೈ ಅವರು ಪ್ರೊ| ಎಂ. ರಾಮಚಂದ್ರ ಅವರೊಂದಿಗಿನ ತಮ್ಮ ಸ್ನೇಹ, ಒಡನಾಟವನ್ನು ಸ್ಮರಿಸಿದರು.

ಸಾಹಿತಿಗಳು, ಪ್ರೊ| ಎಂ.ಆರ್‌. ಅವರ ಅಭಿಮಾನಿಗಳು, ಹಿತೈಷಿಗಳು ದೂರದೂರಿನಿಂದ ಆಗಮಿಸಿ ಪುಷ್ಪನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಡಾ| ಪ್ರಭಾಕರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next