ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದಂತೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರ ವಿರುದ್ಧ ಹೋರಾಟ ಕೈಗೊಂಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು. ಸಂಗೊಳ್ಳಿ ರಾಯಣ್ಣನ 186ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ಘಟಕ ಗುರುವಾರ ಚನ್ನಮ್ಮ ವೃತ್ತದಲ್ಲಿಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣನ ಹೋರಾಟ, ತ್ಯಾಗ, ಬಲಿದಾನ ನಮ್ಮ ಯುವಕರಿಗೆ ಮಾದರಿಯಾಗಬೇಕು. ರಾಯಣ್ಣ ಯುವಕರಿಗೆ ಸದಾಸ್ಫೂರ್ತಿಯಾಗಬೇಕು ಎಂದರು. ನರೇಂದ್ರ ಮೋದಿ ದೇಶದಲ್ಲಿನ ಭ್ರಷ್ಟರ ವಿರುದ್ಧ ಅಭಿಯಾನ ಕೈಗೊಂಡಿದ್ದು, ದೇಶವಾಸಿಗಳ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲಾಗಿದೆ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದೆಹಲಿಯ 400 ಮೈದಾನಗಳು, ವೃತ್ತಗಳಿಗೆ ಒಂದೇ ಕುಟುಂಬದ ಸದಸ್ಯರ ಹೆಸರನ್ನಿಡಲಾಗಿದ್ದು, ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಮಹನಿಯರನ್ನು ಕಡೆಗಣಿಸಲಾಗಿದೆ. ರಾಣಿ ಚನ್ನಮ್ಮ, ಭಗತ್ಸಿಂಗ್, ಸುಭಾಸಚಂದ್ರಭೋಸ್, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ ಮೊದಲಾದವರ ಹೆಸರನ್ನಿಡಬೇಕುಎಂದರು.
ರಾಜ್ಯವ್ಯಾಪಿ ಹೋರಾಟ: ಶಿವಾನಂದ ಮುತ್ತಣ್ಣವರ ಮಾತನಾಡಿ, ಹುಬ್ಬಳ್ಳಿವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕೆಂದು ಹಲವು ಬಾರಿ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ. ಆಗಸ್ಟ್ 15ರೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸಿ.ಎಂ. ನಿಂಬಣ್ಣವರ, ಚಿತ್ರನಟ ಧನಂಜಯ ಮಾತನಾಡಿದರು. ಶಾಂತಣ್ಣ ಕಡಿವಾಲ, ಷಣ್ಮುಖ ಗುರಿಕಾರ, ಅಶೋಕ ಸುರೇಬಾನ, ದ್ಯಾಮಣ್ಣ ಕೊಡ್ಲಿ ಇದ್ದರು. ಅಣ್ಣಿಗೇರಿ ದಾಸೋಹಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನಕುಂದಗೋಳ ತಾಲೂಕಿನ ಕಮಡೊಳ್ಳಿಯ ಯುವಕರಿಂದ ಮಲ್ಲಕಂಬ ಪ್ರದರ್ಶನ ನಡೆಯಿತು.