Advertisement

ರಂಗಾಯಣದ ವಾರ್ಷಿಕ ರಂಗಹಬ್ಬಕ್ಕೆ ಚಾಲನೆ 

12:11 PM Jan 14, 2017 | |

ಮೈಸೂರು: ಮೈಸೂರು ರಂಗಾಯಣದ ವಾರ್ಷಿಕ ರಂಗ ಹಬ್ಬ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಶುಕ್ರವಾರ ಸಂಜೆ ವಿದ್ಯುಕ್ತ ಚಾಲನೆ ದೊರೆಯಿತು. ರಂಗಾಯಣದ ವನರಂಗದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪರದೆ ಎತ್ತುವ ಮೂಲಕ ಶ್ರೀಲಂಕಾದ ರಂಗ ನಿರ್ದೇಶಕ ಪರಾಕ್ರಮ ನಿರಿಯೆಲ್ಲ ಆರು ದಿನಗಳ ರಂಗ ಹಬ್ಬಕ್ಕೆ ಚಾಲನೆ ನೀಡಿದರು.

Advertisement

ಜ.18ರವರೆಗೆ ಕಲಾಮಂದಿರದ ಆವರಣದ ವಿವಿಧ ಸಭಾಂಗಣದಲ್ಲಿ ದೇಶ-ವಿದೇಶ ಹಾಗೂ ಸ್ಥಳೀಯ ನಾಟಕಗಳ ಪ್ರದರ್ಶನ, ರಂಗಭೂಮಿ ಸಂಬಂಧಿಸಿದ ವಿಚಾರಗೋಷ್ಠಿಗಳು, ರಂಗ ಸಂಗೀತ, ನಾಲಗೆ ರುಚಿ ತಣಿಸಲು ಆಹಾರ ಮೇಳ, ಸಾಕ್ಷಚಿತ್ರ ಪ್ರದರ್ಶನ, ಪುಸ್ತಕ, ವಸ್ತು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ. ಜಗತ್ತಿನಾದ್ಯಂತ ಹೆಚ್ಚುತ್ತಿರುವ ಸಮುದಾಯ ಸಂಘರ್ಷವನ್ನು ಕೊನೆಗಾಣಿಸುವಲ್ಲಿ ನಾಟಕಗಳು ಬಹು ಮುಖ್ಯಪಾತ್ರವಹಿಸುತ್ತವೆ ಎಂದು ಶ್ರೀಲಂಕಾದ ರಂಗ ನಿರ್ದೇಶಕ ಪರಾಕ್ರಮ ನಿರಿಯೆಲ್ಲ ಹೇಳಿದರು.

ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ರಂಗಭೂಮಿಯ ಪಾತ್ರ ಹಿರಿದು, 30 ವರ್ಷಗಳಿಂದ ಭಾಷಾ ಸಂಘರ್ಷ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತಮ್ಮ ಜನಕರಾಲಿಯ ರಂಗಸಂಸ್ಥೆ, ಮಾನವೀಯತೆ ಮತ್ತು ಸಮಾಜದಲ್ಲಿ ಸಮಾನತೆ ಬೆಳೆಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ವಿವಿಧ ಪ್ರದೇಶ, ಭಾಷೆ, ಧರ್ಮದ ಯುವಜನರನ್ನು ಒಗ್ಗೂಡಿಸಿ ಶ್ರೀಲಂಕಾದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕಗಳನ್ನು ಆಯೋಜಿಸುವ ಮೂಲಕ ಅವರನ್ನು ಮಾನವೀಯತೆಯ ರಾಯಭಾರಿಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಕಾಣಲು ರಂಗಭೂಮಿ ಪ್ರಬಲ ಮಾಧ್ಯಮ. ಸಂಸ್ಕೃತಿಗಳ ವಿನಿಮಯದ ಮೂಲಕ ಸಾಂಸ್ಕೃತಿಕ ನಾಯಕತ್ವ ಬೆಳೆಸಲು ಪೂರಕವಾದ ಇಂತಹ ಚಟುವಟಿಕೆಗಳಿಗೆ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ನಾಟಕ ಪ್ರದರ್ಶನದಿಂದ ಸಂಸ್ಕೃತಿ, ಜನ ಜೀವನ, ಪ್ರಜಾಪ್ರಭುತ್ವವಾದಿ ಸಂಸ್ಥೆಗಳ ಬಲವರ್ಧನೆ ಸಾಧ್ಯ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ಬಿ.ವಿ.ಕಾರಂತರು ರಂಗಾಯಣದಂತಹ ದೊಡ್ಡ ಆಸ್ತಿ ಬಿಟ್ಟು ಹೋಗಿದ್ದಾರೆ. ಭಾಷೆ, ಧರ್ಮ, ಭೂಮಿಯ ಸೀಮೆ ಮೀರಿದ ವಿಸ್ತಾರತೆ ಪಡೆದುಕೊಳ್ಳುವಲ್ಲಿ ರಂಗಾಯಣ ಸಾಕಷ್ಟು ಶ್ರಮಿಸಿದೆ. ಒಡಲೊಳಗೆ ಎಷ್ಟೇ ಸಮಸ್ಯೆ ಇದ್ದರೂ ರಂಗಾಯಣದ ಕಲಾವಿದರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ರಂಗಾಯಣ ಕಲಾವಿದರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉತ್ಸುಕತೆ ತೋರಿದ್ದು, ಕಲಾವಿದರಿಗೆ ಇಡುಗಂಟು ಕೊಡುವ ಸಲುವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

Advertisement

ಹೊಸ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಧುನಿಕ ತಂತ್ರಜಾnನ ಅಳವಡಿಸಿಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜಾÂದ್ಯಂತ ಕಲಾಮಂದಿರಗಳ ಬಾಡಿಗೆ ದರ ಕಡಿತಗೊಳಿಸಿರುವುದಲ್ಲದೆ, ಗ್ರಾಮೀಣ ಮಟ್ಟದಲ್ಲಿ ನಾಟಕಗಳನ್ನು ಉತ್ತೇಜಿಸಲು ಗ್ರಾಮೀಣ ನಾಟಕಗಳಿಗೆ 10 ಸಾವಿರ ರೂ. ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ವಾಸು ಮಾತನಾಡಿದರು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ಮೇಯರ್‌ ಎಂ.ಜೆ.ರವಿಕುಮಾರ್‌, ರಾಜ್ಯಸಭೆ ಮಾಜಿ ಸದಸ್ಯೆ ಬಿ.ಜಯಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ, ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್‌, ರಂಗಾಯಣ ಉಪ ನಿರ್ದೇಶಕಿ ನಿರ್ಮಲ ಮಠಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ನಂತರ ರಂಗಾಯಣದ ದುಂಡುಕಣದಲ್ಲಿ ಬಿ.ಜಯಶ್ರೀ ರಂಗ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮುನ್ನ ಬಹುರೂಪಿ ನಾಟಕೋತ್ಸವ ಅಂಗವಾಗಿ ಕಲಾಮಂದಿರ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಹಾಗೂ ವಸ್ತು ಪ್ರದರ್ಶನವನ್ನು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಿದರು. ರಂಗಾಯಣ ಹೊರತಂದಿರುವ ರಂಗ ಸಂಚಿಕೆಯನ್ನು ಸಚಿವೆ ಉಮಾಶ್ರೀ, ದಿನ ಸಂಚಿಕೆಯನ್ನು ಮೇಯರ್‌ ಎಂ.ಜೆ.ರವಿಕುಮಾರ್‌ ಬಿಡುಗಡೆ ಮಾಡಿದರು. ನಾಟಕೋತ್ಸವದ ನಿಮಿತ್ತ ಏರ್ಪಡಿಸಿರುವ ಆಹಾರ ಮೇಳ, ಪುಸ್ತಕ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ, ಭಿತ್ತಿಚಿತ್ರ ಪ್ರದರ್ಶನ, ಜನಪದೋತ್ಸವ, ಕರಕುಶಲ ವಸ್ತು ಪ್ರದರ್ಶನಗಳು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಬಹುರೂಪಿ ಚಲನ ಚಿತ್ರ ಪ್ರದರ್ಶನ
ಚಲನ ಚಿತ್ರಪ್ರದರ್ಶನ(ದಿನಾಂಕ: 14.01.2017): ಬೆಳಗ್ಗೆ 10.30 ಥಿಯೇಟರ್‌ ಆಫ್ ವಾರ್‌ (95 ನಿ, ಇಂಗ್ಲಿಷ್‌) ನಿರ್ದೇಶನ: ಜಾನ್‌ ವಾಲ್ಟರ್‌ ಈ ಸಾಕ್ಷ್ಯಾಚಿತ್ರವು 20ನೇ ಶತಮಾನದ ಅತ್ಯಂತ ಶ್ರೇಷ್ಠ ನಾಟಕಗಳಲ್ಲಿ ಒಂದೆನಿಸಿಕೊಂಡಿದ್ದ “ಮದರ್‌ ಕರೇಜ್‌ ಆ್ಯಂಡ್‌ ಹರ್‌ ಚಿಲ್ಡ್ರನ್‌’ನ ತಾಲೀಮಿನ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತ ನಾಟಕಕಾರ ಬ್ರೆಕ್ಟ್‌ನ ರಂಗಭೂಮಿ, ರಾಜಕೀಯ ಮತ್ತು ಯದ್ಧಗಳ ಬಗೆಗಿನ ಪರಿಕಲ್ಪನೆಗಳನ್ನು ಅವಲೋಕಿಸುತ್ತದೆ. ನ್ಯೂಯಾರ್ಕಿನ ಸೆಂಟ್ರಲ್‌ ಪಾರ್ಕ್‌ ನಲ್ಲಿರುವ ಪಬ್ಲಿಕ್‌ ಥಿಯೇಟರ್‌ ಕೈಗೊಂಡ 2006ರ ಈ ನೂತನ ಪ್ರಯೋಗದಲ್ಲಿ ಹಾಲಿವುಡ್‌ ತಾರೆಗಳಾದ ಮೆರಿಲ್‌ ಸ್ಟ್ರೀಪ್‌ ಹಾಗೂ ಕೆವಿನ್‌ ಕ್ಲೇನ್‌ ಪಾತ್ರವಹಿಸಿದ್ದಾರೆ. ಮೇಟರ್‌ ಆಫ್ ವಾರ್‌ ಜಗತ್ತಿನ ಅತಿ ಶ್ರೇಷ್ಠ ನಟ ನಿರ್ದೇಶಕರ ಕಾರ್ಯಶೈಲಿಯನ್ನು ತೆರೆದಿಡಲಿದೆ. ಅಲ್ಲದೆ ಬ್ರೆಕ್ಟ್ ಕಂಡ ಮೂರು ದಶಕದ ಯುದ್ಧಗಳ ಸನ್ನಿವೇಶಗಳನ್ನು ಹಾಗೂ ಆತನ ರಾಜಕೀಯದ ನಿರೂಪಣೆ ಹಾಗು ಕಲಾತ್ಮಕ ನೈಪುಣ್ಯಗಳನ್ನು ಪರಿಚಯಿಸುತ್ತದೆ.

ಮಧ್ಯಾಹ್ನ 12.30 ಪಿನ (90 ನಿ, ಜರ್ಮನಿ) ನಿರ್ದೇಶನ: ವಿಮ್‌ ವೆಂಡರ್ಸ್‌; ಇದೊಂದು ನೃತ್ಯ ಪ್ರಧಾನ ಚಿತ್ರವಾಗಿದ್ದು ಪಿನ ಬಾಷ್‌ ಎಂಬ ಜರ್ಮನಿಯ ಜಗತøಸಿದ್ಧ ನೃತ್ಯ ಸಂಯೋಜಕಿಗೆ ವಂದಿಸಲೋ ಎಂಬಂತೆ ತಯಾರಿಸಲಾಗಿದೆ. ಅಧುನಿಕ ನೃತ್ಯ ಸಂಯೋಜನೆಗಳಲ್ಲಿ ಸಮಕಾಲೀನತೆಯ ಪರಕಾಷ್ಠೆಯನ್ನು ಕಂಡುಕೊಳ್ಳುತ್ತ ಬಂದ ಈಕೆಯ ಶಿಷ್ಯವೃಂದದೊಂದಿಗೆ ಕೈಗೊಂಡ ಪ್ರಯೋಗಗಳನ್ನೇ ಆಧರಿಸಿ ಕಟ್ಟಿದ ಪಿನವನ್ನು 3ಡಿಯಲ್ಲಿ ನಿರ್ಮಿಸಲಾಗಿದೆ. ವಿಮ್‌ ವಂಡರ್ಸ್‌ ನೋಡುಗರಿಗೆ ಪಿನಳ ಜೀವಿತ ಪ್ರಪಂಚವನ್ನು ಪರಿಚಯಿಸಲು ಒಳಾಂಗಣ ರಂಗದಲ್ಲಿ ನಡೆವ ಸಮೂಹ ನೃತ್ಯವನ್ನು ಲೀಲಾಜಾಲವಾಗಿ ಬಯಲಿಗೆ ಕೊಂಡು ಹೋಗಿ ಪಿನಾಳ ಭಾಷೆಯೇ ನೃತ್ಯವಾಗಿತ್ತೆಂದು ಸಾಬೀತು ಮಾಡುತ್ತಾನೆ. ಇನ್ನು ಉಪ್ಪರ್ಟಲ್‌ ನಗರದ ಟಾನ್ಸ್‌ ಥಿಯೇಟರ್‌ ನ ಕಲಾವಿದರ ಪಳಗಿದ ಜಿಮ್ನಾ$Âಸ್ಟಿಕ್‌ ದೇಹದಾಡ್ಯì ಯಾರನ್ನೂ ನಿಬ್ಬೆರಗಾಗಿಸದೇ ಇರದು.

ಮಧ್ಯಾಹ್ನ: 2 ನಟ ಸಾಮ್ರಾಟ್‌ (166 ನಿ, ಮರಾಠಿ) ನಿರ್ದೇಶನ: ಮಹೇಶ್‌ ಮಂಜರೇಕರ್‌; ನಟ ಸಾಮ್ರಾಟನ ಪಟ್ಟಕೇರಿ ನಿವೃತ್ತನಾದ ವಯೋವೃದ್ಧನು ಹೇಗೆ ತಾನು ನಟಿಸಿದ ಪಾತ್ರಗಳ ವಶೀಕರಣಕ್ಕೆ ಒಳಗಾಗಿರುತ್ತಾನೆ ಎಂಬುದು ಈ ಚಿತ್ರದಲ್ಲಿ ನಿರೂಪಣೆಯಾಗುತ್ತದೆ. ಆತನ ನಿವೃತ್ತ ಜೀವನದಿಂದ ತೆರೆದುಕೊಳ್ಳುವ ತನ್ನ ಮಡದಿ, ಮೊಮ್ಮೊಕ್ಕಳ ಸಾಂಸಾರಿಕ ಕಥೆಯಲ್ಲಿ ವಿಶೇಷವೇನು ಇಲ್ಲದಿದ್ದರು ನಾನಾ ಪಾಟೇಕರ್‌ ನಟನೆ ಕಲಾವಿದನೊಬ್ಬನಲ್ಲಿ ಇರಬಹುದಾದ ವೈವಿಧ್ಯತೆ ಎದ್ದು ಆವರಿಸಿಕೊಳ್ಳುತ್ತದೆ. ಅದನ್ನು ಚೆನ್ನಾಗಿ ಬಳಸಿಕೊಂಡೀರುವ ನಿರ್ದೇಶಕ ಸೊಗಾಸಾಗಿ ಚಿತ್ರವನ್ನು ನಿರೂಪಿಸಿದ್ದಾರೆ.|

ತಮ್ಮ ಸಂಕಷ್ಟದಲ್ಲಿಯೂ ಕಲಾವಿದರು ನಾಟಕಗಳನ್ನು ಕಟ್ಟುವ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದು ಮೆಚ್ಚುಗೆಯ ವಿಷಯ. ರಂಗಾಯಣ ಆಯೋಜಿಸಿರುವ ಈ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ಸಮಾಜದಲ್ಲಿ ಸಾಮುದಾಯಿಕ ಬದಲಾವಣೆಗೆ ಪ್ರೇರಣೆಯಾಗುವ ಮೂಲಕ ಸಹೋದರತ್ವ ಎತ್ತಿ ಮೆರೆಯಲಿ.
-ಡಾ.ಎಚ್‌.ಸಿ.ಮಹದೇವಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next