Advertisement

Rain water harvesting system: ಹಳ್ಳ ಹಿಡಿದ ಮಳೆ ನೀರು ಕೊಯ್ಲು ಪದ್ಧತಿ

11:38 AM Oct 08, 2023 | Team Udayavani |

ಬೆಂಗಳೂರು: ಅಂತರ್ಜಲ ವೃದ್ಧಿ ಹಾಗೂ ಮಳೆ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶ ದಿಂದ ರಾಜಧಾನಿಯಲ್ಲಿ ಕಡ್ಡಾಯಗೊಳಿಸಿದ್ದ ಮಳೆ ನೀರು ಕೊಯ್ಲು ಪದ್ಧತಿ ಸಂಪೂರ್ಣ ಹಳ್ಳ ಹಿಡಿದಿದೆ. ಇಲ್ಲಿನ ಇಂಗು ಗುಂಡಿಗಳ ಸ್ಥಿತಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.

Advertisement

ನಗರದ ಬಹುತೇಕ ಮನೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೇ ಮಳೆ ನೀರು ಕೊಯ್ಲು ಪದ್ಧತಿ ವೈಫ‌ಲ್ಯ ಕಂಡಿದೆ. 15 ವರ್ಷ ನಂತರ ಉಂಟಾಗಿರುವ ಬರದ ಬಿಸಿ ಸಿಲಿಕಾನ್‌ ಸಿಟಿಗೂ ತಟ್ಟಿದ್ದು, ಕುಡಿಯುವ ನೀರಿನ ಅಭಾವ ಶುರುವಾಗಿದೆ. ಮಳೆ ನೀರು ಕೊಯ್ಲಿನ ಬಗ್ಗೆ ಹಲವು ವರ್ಷಗಳಿಂದ ಸಾರ್ವಜನಿ ಕರಲ್ಲಿ ಅರಿವು ಮೂಡಿಸುತ್ತಿದ್ದರೂ, ಕಾಲ ಕಾಲಕ್ಕೆ ಮಳೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಇದರ ಮಹತ್ವ ತಿಳಿದಿರಲಿಲ್ಲ. 60ಗಿ40 ಅಡಿ ಮನೆಗಳಲ್ಲಿ ಕಡ್ಡಾಯ ಇಂಗು ಗುಂಡಿ ನಿರ್ಮಾಣಕ್ಕೆ ಜಲಮಂಡಳಿ ನಿಯಮ ರೂಪಿಸಿದೆ.

ಹೀಗಾಗಿ ಬೆಂಗಳೂರಿನಲ್ಲಿರುವ ಶೇ.74 ಮನೆಗಳಲ್ಲಿ ಇಂಗುಗುಂಡಿಗಳು ದಾಖಲೆಗಷ್ಟೇ ಸೀಮಿತವಾಗಿದೆ. ಕೇವಲ ಶೇ.5 ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿದೆ. ಪರಿಣಾಮ ಅಂತರ್ಜಲ ಮಟ್ಟ ಭಾರೀ ಕುಸಿತ ಕಂಡಿದ್ದು, ಬೋರ್‌ವೆಲ್‌ ಗಳಲ್ಲೂ ನೀರು ಬತ್ತುತ್ತಿದೆ ಎಂದು ಜಲ ತಜ್ಞರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಇಂಗು ಗುಂಡಿ ಬಗ್ಗೆ ನಿರ್ಲಕ್ಷ್ಯ: 1250 ಚದರ ಕಿ.ಮೀ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕ ಬೀಳುವ ಸರಾಸರಿ 750 ಮಿ.ಮೀ. ಮಳೆಯಿಂದಾಗಿ ನಮಗೆ 33 ಟಿ.ಎಂ.ಸಿ ನೀರು ದೊರೆಯುತ್ತಿತ್ತು. ಇಂಗುಗುಂಡಿ ಮೂಲಕ ಇದನ್ನು ಸಂಗ್ರಹಿಸಿಟ್ಟಿದ್ದರೆ ಈ ವರ್ಷ ನೀರಿನ ಅಭಾವ ತಟ್ಟುತ್ತಿರಲಿಲ್ಲ. ಬೆಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ಖಾಲಿ ಪೈಪ್‌ ಅನ್ನು ಮಣ್ಣಿನಡಿ ಹೂತಿಟ್ಟು ಇಂಗು ಗುಂಡಿಯಂತೆ ಬಿಂಬಿಸಲಾಗಿದೆ. ಶೇ.34 ಇಂಗುಗುಂಡಿಗಳು ಹಾನಿಯಾಗಿವೆ.

ಸೂಕ್ತ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸದಿದ್ದರೆ ಮಳೆ ನೀರು ಶೇಖರಣೆಯಾಗುವುದಿಲ್ಲ. ದಿನದಿಂದ ದಿನಕ್ಕೆ ಕಾವೇರಿ ಒಡಲು ಬರಿದಾಗುತ್ತಿದ್ದು, ಸದ್ಯ 10.15 ಲಕ್ಷ ಮನೆಗಳಲ್ಲಿ 12.9 ದಶಲಕ್ಷ ಜನರಿಗೆ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಪ್ರತಿ ತಿಂಗಳು 42,200 ಮಿಲಿಯನ್‌ ಲೀಟರ್‌ ನೀರು ಪೂರೈಸಲಾಗುತ್ತಿದೆ. ಇಷ್ಟಾದರೂ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಮುಂದಿನ ಡಿಸೆಂಬರ್‌ ಬಳಿಕ ಇದು ನಗರದ ವಿವಿಧೆಡೆಗೆ ವಿಸ್ತರಿಸಲಿದೆ. ಹೀಗಾಗಿ ಬೋರ್‌ವೆಲ್‌ ಸಂಪರ್ಕ ಇರುವವರು ಮುಂಜಾಗ್ರತಾ ಕ್ರಮವಾಗಿ ನೀರನ್ನು ಸಂಗ್ರಹಿಸಿಡುವುದೇ ಲೇಸು ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

Advertisement

ಏನಿದು ಇಂಗು ಗುಂಡಿ, ನಿರ್ಮಿಸುವುದು ಹೇಗೆ?: ನಗರಗಳಲ್ಲಿ ಮಳೆ ನೀರು ಕೊಯ್ಲು ಎಂದರೆ ಮಹಡಿಯ ಮೇಲಿನ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸುವುದು, ಶೋಧಿಸುವುದು ಮತ್ತು ಅದನ್ನು ಉಪಯೋಗಿಸುವ ಪ್ರಕ್ರಿಯೆಯಾಗಿದೆ. ಮನೆ ಹೊರಾಂಗಣದ ಖಾಲಿ ಆವರಣದಲ್ಲಿ ಕೇಸಿಂಗ್‌ ಪೈಪಿನ ಸುತ್ತ ಒಂದು ಗುಂಡಿ ತೋಡಬೇಕು. ಅದರೊಳಗೆ ಸಿಮೆಂಟ್‌ ರಿಂಗ್‌ ಅಳವಡಿಸಬೇಕು. ಗುಂಡಿ ಸುತ್ತಳತೆ ಒಂದು ಮೀಟರ್‌ನಷ್ಟಿದ್ದು 10 ಅಡಿ ಆಳವಾಗಿರಬೇಕು. ಹಳ್ಳದ ತಳದಲ್ಲಿ ಫಿಲ್ಟರ್‌ ತೂತು ಮಾಡಿ, ಸ್ಟೀಲ್‌ ಮೆಶ್‌ನ ಕೇಸಿಂಗ್‌ ಪೈಪ್‌ಅನ್ನು ಕೊಳವೆ ಬಾವಿಯ ಪೈಪಿಗೆ ಗಟ್ಟಿಯಾಗಿ ಅಳವಡಿಸಬೇಕು. ಗುಂಡಿ ತಳದವರೆಗೆ ಕೊಳವೆ ಬಾವಿಯ ವ್ಯಾಸದ ಅಳತೆಗೆ ಸರಿಹೊಂದುವ ಸಿಮೆಂಟ್‌ ರಿಂಗ್‌ಗಳನ್ನು ಅಳವಡಿಸಬೇಕು. 2 ಅಡಿ ಎತ್ತರದವರೆಗೆ ಗುಂಡಿಯನ್ನು ದೊಡ್ಡ ಕಲ್ಲುಗಳಿಂದ ತುಂಬಬೇಕು. 2 ಅಡಿಯ ಮತ್ತೂಂದು ಪದರವನ್ನು 40 ಎಂಎಂ ಜೆಲ್ಲಿ ಕಲ್ಲುಗಳಿಂದ ತುಂಬಬೇಕು. ಮೂರನೇಯ ಪದರವನ್ನು 20 ಎಂಎಂ ಅಳತೆಯ ಜೆಲ್ಲಿ ಕಲ್ಲುಗಳಿಂದ ತುಂಬಬೇಕು. ನಾಲ್ಕನೇ ಪದರವನ್ನು ಇದ್ದಲಿನಿಂದ ತುಂಬಬೇಕು. ನೆಲಮಟ್ಟದಿಂದ 3 ಅಡಿ ಜಾಗ ಇರುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಈ ಪದರಗಳ ಮೇಲೆ ನೈಲಾನ್‌ ತೆರೆಯೊಂದನ್ನು ಹಾಸಬೇಕು. ಗುಂಡಿಯ ಮಿಕ್ಕ ಭಾಗವನ್ನು ನೆಲಮಟ್ಟದಿಂದ ಒಂದಡಿ ಇರುವವರೆಗೆ ಮರಳಿನಿಂದ ತುಂಬಬೇಕು. ತಾರಸಿಯಿಂದ ಬೀಳುವ ಮಳೆ ನೀರನ್ನು ತುಂಬಲು ಒಂದು ಪೈಪ್‌ ಅಳವಡಿಸಿ ಈ ಪೈಪ್‌ ಗುಂಡಿಗೆ ಸಂಪರ್ಕ ಹೊಂದುವಂತೆ ಮಾಡಬೇಕು.

ವೈಜ್ಞಾನಿಕವಾಗಿ ಇಂಗುಗುಂಡಿ ನಿರ್ಮಿಸದಿದ್ರೆ ದಂಡ: ನಗರದ ಕೆಲವು ಮನೆ, ಅಪಾರ್ಟ್‌ಮೆಂಟ್‌ ಮಾಲೀಕರು ದಂಡ ತಪ್ಪಿಸಲು ಅವೈಜ್ಞಾನಿಕ ಇಂಗುಗುಂಡಿ ವ್ಯವಸ್ಥೆ ಅಳವಡಿಸಿವೆ. ಇದನ್ನು ಅರಿತಿರುವ ಜಲಮಂಡಳಿಯು ಇಂಗುಗುಂಡಿ ಪರಿಶೀಲಿಸಲೆಂದೇ ಪ್ರತ್ಯೇಕ ತಂಡ ರಚಿಸಿದೆ. ಶೀಘ್ರ ಈ ತಂಡಗಳು ಕಾರ್ಯಾಚರಣೆ ನಡೆಸಿ ನಿಯಮ ಪ್ರಕಾರವಾಗಿ ಇಂಗುಗುಂಡಿ ನಿರ್ಮಿಸದವರಿಂದ 1 ಕೋಟಿ ರೂ.ಗೂ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಉಪಯೋಗವೇನು?:

  • ಅಂತರ್ಜಲದ ಗುಣಮಟ್ಟ, ಪ್ರಮಾಣ ಸುಧಾರಿಸುವುದು.
  • ಮಣ್ಣಿನ ಸವೆತ, ಮಳೆನೀರಿನ ಹರಿವು, ನೀರಿನ ಮಾಲಿನ್ಯ ನಿಯಂತ್ರಣ.
  • ನೀರಿನ ಬೇಡಿಕೆ ಕಡಿಮೆ ಮಾಡುತ್ತದೆ.
  • ನೀರಿನ ಬಿಲ್‌ ಕಡಿಮೆ ಮಾಡಲು ಸಹಕಾರಿ.
  • ರಾಸಾಯನಿಕಗಳು, ಕರಗಿದ ಲವಣ ಹೊಂದಿರದ ಎಲ್ಲ ರೀತಿಯ ಖನಿಜಗಳಿಂದ ಮುಕ್ತವಾಗಿದೆ.
  • ನೀರಿನ ಅಗತ್ಯತೆ ಕಡಿಮೆ ಮಾಡುತ್ತದೆ.

ಸಾರ್ವಜನಿಕರೇ ಮಳೆ ನೀರು ಕೊಯ್ಲಿನ ಮಹತ್ವ ಅರಿತು ಅಳವಡಿಸಿಕೊಂಡರೆ ಉತ್ತಮ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಸಂಪೂರ್ಣ ಯಶಸ್ವಿಯಾಗುತ್ತಿಲ್ಲ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬಿ.ಸುರೇಶ್‌, ಪ್ರಧಾನ ಮುಖ್ಯ ಅಭಿಯಂತರ, ಜಲಮಂಡಳಿ

  • ಅವಿನಾಶ ಮೂಡಂಬಿಕಾನ
Advertisement

Udayavani is now on Telegram. Click here to join our channel and stay updated with the latest news.

Next