Advertisement

Magadi:ಜಿಟಿ, ಜಿಟಿ ಮಳೆಗೆ ಹಸಿರಾದ ರಾಗಿ ಬೆಳೆ!

01:09 PM Sep 14, 2023 | Team Udayavani |

ಮಾಗಡಿ: ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಮಳೆಗೆ ರಾಗಿ ಬೆಳೆ ಹಸಿರಿನಿಂದ ಕಂಗೊಳಿಸುತ್ತಿದ್ದು, ನಾಡಪ್ರಭು ಕೆಂಪೇಗೌಡ ತವರೂರು ಮಾಗಡಿಗೆ ಅರೆ ಮಲೆನಾಡಿನಂತೆ ಜೀವ ಕಳೆ ಬಂದಿದೆ. ಹೀಗಾಗಿ, ರೈತರಲ್ಲಿ ಮಂದಹಾಸ ಮೂಡಿದೆ.

Advertisement

ಮಾಗಡಿ ತಾಲೂಕಿನ ಕಸಬಾ, ಮಾಡಬಾಳ್‌, ಕುದೂರು, ತಿಪ್ಪಸಂದ್ರ, ಸೋಲೂರು, ಹೋಬಳಿ ವ್ಯಾಪ್ತಿಯಲ್ಲಿ ಜಿಟಿ, ಜಿಟಿ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಮಾಡಿದ್ದ ರಾಗಿ, ಭತ್ತ, ತೊಗರಿ, ಅಲಸಂಧೆ, ಅವರೆ ಕಾಯಿ ಗಿಡಗಳು ಹಸಿರಿನಿಂದ ಕೂಡಿದ್ದು ನಳನಳಿಸುತ್ತಿವೆ. ಉಬ್ಬೆ ಮಳೆಗೆ ರಾಗಿ ಹೊಲದ ಪೈರು ಹಚ್ಚ ಹಸುರಿನಿಂದ ಕಣ್ಣಿಗೆ ಮುದ ನೀಡಿದೆ. ಹೀಗೆ ಮಳೆ ಮುಂದುವರಿದರೆ ಉತ್ತಮ ರಾಗಿ ಫ‌ಸಲು ಬೆಳೆ ನಿರೀಕ್ಷಿಸಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಸುಗಳ ಮೇವು ಕೊರತೆ: ಅದರಲ್ಲೂ ಪ್ರಮುಖ ರಾಗಿ ಬೆಳೆ ಹೊಲದಲ್ಲಿ ಅವರೆ, ಅಲಸಂಧೆ, ಜೋಳ, ಸಾಸಿವೆ ತೊಗರಿ ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ತಾಲೂಕಿನಲ್ಲಿ ಸಾಮಾನ್ಯವಾಗಿದೆ. ಕಳೆದ ತಿಂಗಳು ಮಳೆ ಬೀಳದೆ ಬಿತ್ತಿದ್ದ ರಾಗಿ ಬೆಳೆ ಬಹುತೇಕ ಒಣಗಿದ್ದು, ಬಹುತೇಕ ರೈತರು ಅಕ್ಷರಸಃ ನಷ್ಟದಲ್ಲಿದ್ದರು. ಹಸುಗಳ ಮೇವಿಗೂ ಕೊರತೆ ಉಂಟಾಗಿತ್ತು.

ಉತ್ತಮ ಇಳುವರಿ ನಿರೀಕ್ಷೆ: ಮಾಗಡಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂಬ ಕೂಗು ಸಹ ಕೇಳಿ ಬರುತ್ತಿದೆ. ಸದ್ಯಕ್ಕೀಗ ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸಹ ಬರಲಾರಂಭಿಸಿದೆ. ಆದರೂ, ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಸಹ ಕುಸಿದಿದೆ. ಕೆರೆ-ಕಟ್ಟೆಗಳಗೆ ನೀರು ಬಂದಿಲ್ಲ ಎಂಬ ಮಾತು ರೈತರಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ನೀರು, ಮೇವಿಗೆ ಕೊರತೆಯಿದೆ. ಬೀಳುತ್ತಿರುವ ಮಳೆ ಹೀಗೆ ಮುಂದುವರಿದರೆ ಶೇ.40ರಿಂದ 50ರಷ್ಟು ರಾಗಿ ಬೆಳೆ ರೈತರ ಕೈಸೇರಲಿದೆ ಎಂದು ರೈತರು ನಿರೀಕ್ಷಿಸಿದ್ದಾರೆ. ಮಳೆ ಸಮರ್ಪಕವಾಗಿ ಬೀಳದೆ ರಾಗಿ ಹೊಲದಲ್ಲಿ ಕೀಟಬಾಧೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಇದರಿಂದ ಕೃಷಿ ಇಲಾಖೆ ಸೂಚಿಸುವ ಕೀಟನಾಶಗಳನ್ನು ಸಿಂಪಡಿಸಲು ರೈತರಿಗೆ ಮಾರ್ಗದರ್ಶನ ಅಗತ್ಯವಿದೆ.

ರಸಗೊಬ್ಬರ ಪೂರೈಕೆಯಲ್ಲಿ ಸರ್ಕಾರ ನಿರ್ಲಕ್ಷ್ಯ : ಮಾಗಡಿ ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಎಲ್ಲಿ ಬೆಳೆಯಾಗದಿದ್ದರೂ ಮಾಗಡಿಯಲ್ಲಿ ಕನಿಷ್ಠ ಪಕ್ಷ ಶೇ.50ರಷ್ಟು ರಾಗಿ ಬೆಳೆ ರೈತರ ಕೈಸೇರಿದೆ ಎಂಬ ನಂಬಿಕೆಯಿದೆ. ರಂಗನಾಥಸ್ವಾಮಿ ದಯೆಯಿಂದ ಪೂರ್ಣ ಪ್ರಮಾಣದಲ್ಲಿ ಉತ್ತಮ ಫ‌ಸಲು ಬರಲಿ. ರೈತರ ಬದುಕು ಅಸನಾಗಲೆಂದು ಶ್ರೀರಂಗನಾಥಸ್ವಾಮಿ ದೇವರನ್ನು ಪ್ರಾರ್ಥಿಸುತ್ತೇವೆ. ಆದರೆ ಸರ್ಕಾರ ರೈತರಿಗೆ ಸಕಾಲಕ್ಕೆ ರಸಗೊಬ್ಬರ ಪೂರೈಕೆ ಮಾಡದೇ ರೈತರನ್ನು ಆತಂಕಕ್ಕೆ ದೂಡಿದರುವುದು ಬೇಸರದ ಸಂಗತಿ.

Advertisement

ರಸಗೊಬ್ಬರಕ್ಕಾಗಿ ಊರೂರು ಸುತ್ತಬೇಕಿದೆ ಎಂದು ಪ್ರಗತಿ ಪರ ರೈತ ಎಸ್‌.ವಿ. ರಾಜಣ್ಣ ಆರೋಪಿಸಿದರು ರೈತರಿಗೆ ಯಂತ್ರೋಪಕರಣ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಸಹಾಯಧನದಲ್ಲಿ ಬಿತ್ತನೆ ಬೀಜ, ಔಷಧ, ರಸಗೊಬ್ಬರ ಪೂರೈಕೆ ಮಾಡುತ್ತಿದ್ದೇವೆ. ಆರ್‌ಎಸ್‌ಕೆ ಕೃಷಿ ಅಧಿಕಾರಿಗಳು ಸಹ ರೈತರಿಗೆ ಸರ್ಕಾರದ ವಿವಿಧ ಯೋಜನೆ, ಕೃಷಿ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. -ವಿಜಯ ಸವಣೂರು, ಸಹಾಯಕ ಕೃಷಿ ನಿರ್ದೇಶಕ 

– ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next