Advertisement

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

01:02 AM Sep 25, 2024 | Team Udayavani |

ಮಂಗಳೂರು: ನೈಋತ್ಯ ಮುಂಗಾರು ಕರಾವಳಿಯಲ್ಲಿ ಮತ್ತೆ ಚುರುಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಬಿಟ್ಟ ಬಿಟ್ಟು ಉತ್ತಮ ಮಳೆಯಾಗಿದೆ.

Advertisement

ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಹಿನ್ನೆಲೆಯಲ್ಲಿ ದಿನವಿಡೀ ಮಳೆ ವಾತಾವರಣ ಕಂಡು ಬಂದಿತ್ತು. ಜಿಲ್ಲೆಯ ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಬೆಳಗ್ಗೆಉತ್ತಮ ಮಳೆಯಾಗಿದ್ದು, ಬಳಿಕ ಆಗಾಗ್ಗೆ ಮಳೆಯಾಗಿದೆ. ಸಂಜೆ ವೇಳೆ ಮತ್ತೆ ಮಳೆ ಬಿರುಸಾಗಿದೆ.

ಭಾರತೀಯ ಹವಾಮಾನ ಇಲಾಖೆ ಬುಧವಾರ ಕರಾವಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸದ್ಯ ಗುರುವಾರದಿಂದ ಯಾವುದೇ ಅಲರ್ಟ್‌ ಇಲ್ಲ. ಕರ್ನಾಟಕ ಕರಾವಳಿಯ ಸಮುದ್ರ ತೀರ ಪ್ರದೇಶದಲ್ಲಿ ಗಂಟೆಗೆ 35-45 ಕಿ.ಮೀ. ನಿಂದ ಗರಿಷ್ಠ 55 ಕಿ.ಮೀ. ವೇಗದ ವರೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮಂಗಳವಾರ ಬೆಳಗ್ಗೆ 8.30ರಿಂದ ಸಂಜೆ ವರೆಗಿನ ಅಂಕಿ ಅಂಶದ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 28.4 ಮಿ.ಮೀ. ಪಣಂಬೂರಿನಲ್ಲಿ 26 ಮಿ.ಮೀ, ಮಂಗಳೂರಿನಲ್ಲಿ 11 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 26.8 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 23.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Advertisement

ಬಂಟ್ವಾಳ: ಉತ್ತಮ ಮಳೆ
ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಆರಂಭಗೊಂಡ ಮಳೆ ಮಂಗಳವಾರವೂ ಮುಂದುವರಿದಿತ್ತು. ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರಿಗೆ ತೊಂದರೆ ಉಂಟಾಯಿತು. ದಿನವಿಡೀ ಮಳೆ ಸುರಿದಿದ್ದು, ಇದು ಜನಜೀವನದ ಮೇಲೂ ಹೊಡೆದ ನೀಡಿದೆ. ಜೋರು ಮಳೆಯಿಂದ ಕೃಷಿ ಚಟುವಟಿಕೆಯ ಮೇಲೂ ಹೊಡೆದ ನೀಡಿದೆ.

ನಿರಂತರ ಮಳೆಯ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ಕೂಡ ಹೆಚ್ಚಾಗಿದ್ದು, ಶಂಭೂರು ಎಎಂಆರ್‌ ಡ್ಯಾಮ್‌ನಿಂದ ನೀರು ಹೊರ ಬಿಟ್ಟ ಕಾರಣದಿಂದ ಬಂಟ್ವಾಳ, ಪಾಣೆಮಂಗಳೂರು ಭಾಗದಲ್ಲಿ ನದಿಯ ನೀರಿನ ಹರಿವು ಹೆಚ್ಚಾಗಿತ್ತು.

ಮನೆಯ ಆವರಣ ಗೋಡೆ ಕುಸಿತ
ಉಳ್ಳಾಲ: ಸೋಮವಾರ ರಾತ್ರಿ ಸುರಿದ ಮಳೆಗೆ ಉಳ್ಳಾಲದ ಟಿ.ಸಿ. ರೋಡ್‌ ಬಳಿ ಮನೆಯ ಆವರಣ ಗೋಡೆ ಕುಸಿದು ಮನೆಯೊಂದು ಕುಸಿಯುವ ಭೀತಿಯಲ್ಲಿದೆ. ಮುಂಜಾಗೃತ ಕ್ರಮವಾಗಿ ಮನೆಯ ಕುಟುಂಬದ ಸದಸ್ಯರು ಸ್ಥಳಾಂತರಗೊಂಡಿದ್ದಾರೆ. ಉಳ್ಳಾಲದಾದ್ಯಂತ ಸೋಮವಾರ ತಡರಾತ್ರಿ ಭಾರೀ ಮಳೆ ಸುರಿದಿದ್ದು ಸುಮಾರು ಎರಡು ಗಂಟೆಯ ವೇಳೆಗೆ ಮನೆಯ ಆವರಣ ಗೋಡೆ ಕುಸಿದಿದೆ. ಸ್ಥಳಕ್ಕೆ ಉಳ್ಳಾಲ ನಗರಸಭಾ ಪೌರಾಯುಕ್ತ ಮತ್ತಡಿ, ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಉಡುಪಿ: ಮತ್ತೆ ಮಳೆ ಬಿರುಸು
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಮತ್ತೆ ಬಿರುಸುಗೊಂಡಿದ್ದು, ಮಂಗಳವಾರ ಹಲವೆಡೆ ಉತ್ತಮ ಮಳೆಯಾಗಿದೆ. ಕಾರ್ಕಳ, ಉಡುಪಿ, ಹೆಬ್ರಿ, ಕುಂದಾಪುರ, ಬೈಂದೂರು, ಬ್ರಹ್ಮಾವರ ಭಾಗದಲ್ಲಿ ಹಲವೆಡೆ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಸೋಮವಾರ ತಡರಾತ್ರಿ, ಮಂಗಳವಾರ ಮುಂಜಾನೆ ಕೆಲಕಾಲ ಉತ್ತಮ ಮಳೆಯಾಗಿದೆ.

ಹೆಬ್ರಿ ಸುತ್ತಮುತ್ತ ಭಾರೀ ಮಳೆ
ಹೆಬ್ರಿ: ಕಳೆದ ಎರಡು ದಿನಗಳಿಂದ ಹೆಬ್ರಿ ಸುತ್ತ ಮುತ್ತ ಭಾರೀ ಮಳೆ ಸುರಿದಿದ್ದು ಜನರು ಸಮಸ್ಯೆಗೆ ಸಿಲುಕಿದರು. ಹೆದ್ದಾರಿ ಕಾಮಗಾರಿ ಸಹಿತ ಕೆಲವಡೆ ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

ಮೆಸ್ಕಾಂ ವಿರುದ್ಧ ಆಕ್ರೋಶ
ಭಾರೀ ಮಳೆಯಿಂದ ಹೆಬ್ರಿ ಸುತ್ತ ಮುತ್ತ ಸೆ. 24ರಂದು ಬೆಳಗ್ಗೆಯಿಂದ ವಿದ್ಯುತ್‌ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು ಜನರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವ ಕಾರಣ ವಿದ್ಯುತ್‌ ಇಲ್ಲದೇ ಓದಲು ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next