Advertisement

‘ರಾಹುಲ್‌ ಭಾರತ ಕ್ರಿಕೆಟ್‌ ತಂಡದ ನಾಯಕರಾಗಲಿದ್ದಾರೆ’

10:05 AM Jul 09, 2018 | |

ಭಾರತ ಕ್ರಿಕೆಟ್‌ ತಂಡದಲ್ಲಿ ಒಮ್ಮೆ ಮಿಂಚಿದ ಕೇರಳದ ಕ್ರಿಕೆಟಿಗ ಎಸ್‌. ಶ್ರೀಶಾಂತ್‌ ಇದೀಗ ಸಿನೆಮಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್‌ನ‌ ಕದ ತಟ್ಟಿರುವ ಇವರು, ಕಿಚ್ಚ ಸುದೀಪ್‌ ಅಭಿನಯದ ‘ಕೆಂಪೇಗೌಡ-2’ರಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಚಿತ್ರೀಕರಣ ನಗರದಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆ ಕದ್ರಿಯ ಜಿಮ್‌ಗೆ ಬಂದ ಅವರು ‘ಉದಯವಾಣಿ ಸುದಿನ’ ಜತೆ ತನ್ನ ಅನಿಸಿಕೆ ಹಂಚಿಕೊಂಡರು.

Advertisement

.ಭಾರತ ಕ್ರಿಕೆಟ್‌ ತಂಡದಲ್ಲಿ ಮಿಂಚಿದ ನೀವು ಚಿತ್ರರಂಗದಲ್ಲಿ ಬ್ಯುಸಿಯಾಗಿರುವಂತಿದೆ ?
ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ ಬಗ್ಗೆ ಅತೀವ ಸಂತಸವಿದೆ. ಇದೊಂದು ಹೊಸ ಅನುಭವ. ಕನ್ನಡ ಚಿತ್ರವನ್ನು ವೀಕ್ಷಿಸುವ ಜನತೆ ನನ್ನನ್ನು ಓರ್ವ ನಟನಾಗಿಯೂ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ.

 .ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ?
ವಿಚಾರಣೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದು, ಇದೇ ಆಗಸ್ಟ್‌ 27ಕ್ಕೆ ತೀರ್ಪು ಹೊರಬರುವ ನಿರೀಕ್ಷೆ ಇದೆ. ಒಂದು ವೇಳೆ ಎಲ್ಲವೂ ಸರಿಯಾಗಿ ತೀರ್ಪು ನನ್ನ ಪರವಾಗಿ ಬಂದರೆ ಮುಂದಿನ ಅಕ್ಟೋಬರ್‌ನಿಂದ ಮತ್ತೆ ಕ್ರಿಕೆಟ್‌ ಆಡಲಿದ್ದೇನೆ. ಈಗಾಗಲೇ ಎರಡು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದೇನೆ. ಮತ್ತೊಂದು ಮಲಯಾಳ ಚಿತ್ರದಲ್ಲೂ ನಟಿಸುತ್ತಿದ್ದೇನೆ.

. ಈಗಿನ ಭಾರತ ತಂಡದ ಬಗ್ಗೆ ಏನು ಹೇಳುತ್ತೀರಿ?
ಭಾರತವೀಗ ಈಗ ಚೆನ್ನಾಗಿ ಆಡುತ್ತಿದೆ. ಈಗಿನ ತಂಡದ ಸದಸ್ಯರು ಆಡುತ್ತಿರುವುದನ್ನು ನೋಡಿದರೆ, ಬಹುಶಃ ತಂಡಕ್ಕೆ ನನ್ನ ಅಗತ್ಯವಿಲ್ಲವೆಂದು ತೋರುತ್ತದೆ. ನಾನೀಗಾಗಲೇ ಕ್ರಿಕೆಟ್‌ ಬಿಟ್ಟು ಟಿವಿ ಶೋ, ಬಾಡಿ ಬಿಲ್ಡಿಂಗ್‌ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದು, ಮುಂದಿನ ಸೆಪ್ಟಂಬರ್‌ನಲ್ಲಿ ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ನಡೆಯುವ ‘ಮಿಸ್ಟರ್‌ ಆಲ್‌ ಇಂಡಿಯಾ ಫಿಸಿಕ್‌’ ಸ್ಫರ್ಧೆಯಲ್ಲಿ ಭಾಗವಹಿಸಲು ತೆರಳಲಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ.

.ಕರ್ನಾಟಕದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಹುಲ್‌ ಪ್ರತಿಭಾನ್ವಿತ ಕ್ರಿಕೆಟಿಗ. ನನ್ನ ಮೊದಲ ಕ್ರಿಕೆಟ್‌ ಕೋಚ್‌ ಆಗಿರುವ ಶಶಿಕಾಂತ್‌ ಅವರಲ್ಲೇ ರಾಹುಲ್‌ ಕೂಡ ತರಬೇತಿ ಪಡೆದುಕೊಳ್ಳುತ್ತಿದ್ದರು. ಭಾರತ ಕ್ರಿಕೆಟ್‌ ತಂಡದಿಂದ ರಾಹುಲ್‌ ದ್ರಾವಿಡ್‌ ನಿವೃತ್ತಿ ಹೊಂದಿದರೂ ಮತ್ತೊಬ್ಬ ರಾಹುಲ್‌ ನನ್ನು ಪಡೆದಿರುವುದು ನಮ್ಮ ಅದೃಷ್ಟ. ರಾಹುಲ್‌ ದ್ರಾವಿಡ್‌ ಅವರೊಂದಿಗೆ ಕೆ.ಎಲ್‌. ರಾಹುಲ್‌ನ್ನು ಹೋಲಿಕೆ ಮಾಡುವುದು ಸರಿಯಲ್ಲದಿದ್ದರೂ ಕೆ.ಎಲ್‌. ರಾಹುಲ್‌ ಕ್ರಿಕೆಟಿನ ಎಲ್ಲ ಮಾದರಿಗಳಿಗೂ ಹೊಂದಿಕೊಂಡು ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದಾರೆ. ಒಂದಲ್ಲ ಒಂದು ದಿನ ರಾಹುಲ್‌ ಭಾರತ ಕ್ರಿಕೆಟ್‌ ತಂಡದ ನಾಯಕನಾದರೂ ಆಶ್ಚರ್ಯವಿಲ್ಲ. ಆ ಸಾಮರ್ಥ್ಯ ಅವರಲ್ಲಿದೆ.

Advertisement

.ಮಂಗಳೂರಿನ ಜತೆ ನಿಮ್ಮ ಸಂಬಂಧ ಹೇಗಿದೆ?
ನಾನು ನನ್ನ ಜೀವನದ ಮೊದಲ ಕ್ರಿಕೆಟ್‌ ಟೂರ್ನಮೆಂಟ್‌ ಆಡಿರುವುದು ಮಂಗಳೂರಿನಲ್ಲೇ. 12 ವರ್ಷದವನಾಗಿದ್ದ ವೇಳೆ ಇಲ್ಲಿನ ಮುನ್ಸಿಪಲ್‌ ಸ್ಟೇಡಿಯಂನಲ್ಲಿ ಕರಾವಳಿ ಕ್ರಿಕೆಟ್‌ ಕ್ಲಬ್‌ ಆಯೋಜಿಸಿದ ಕ್ರಿಕೆಟ್‌ ಕೂಟಲ್ಲಿ ಭಾಗವಹಿಸಿದ್ದೆ. ಸಮಯ ಸಿಕ್ಕಾಗೆಲ್ಲ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವಾಗ ಮಂಗಳೂರಿಗೂ ಬರುತ್ತೇನೆ. ಇಲ್ಲಿಯ ಜನರು ತಮ್ಮ ಹೃದಯಾಂತರಾಳದಿಂದ ಹೊರಗಿನ ವರನ್ನು ಸ್ವಾಗತಿಸುತ್ತಾರೆ. ಮಂಗಳೂರಿಗರು ಮಾತನಾಡುವ ಕನ್ನಡದ ಸೊಬಗೇ ಬೇರೆ. ಅದನ್ನು ನಾನು ತುಂಬಾ ಇಷ್ಟಪಡುತ್ತೇನೆ.

.ಈಗಿನ ಯುವ ಜನತೆಗೆ ನಿಮ್ಮ ಸಂದೇಶವೇನು?
ನೀವು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಅತೀ ಹೆಚ್ಚು ನಿರ್ವಹಣೆ ತೋರಲು ಪ್ರಯತ್ನಪಡಿ. ಆದೇ ನಿಮ್ಮನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next