ಮುಂಬೈ: ಇದೊಂದು ಕಿರು ಪ್ರವಾಸ. ಲಂಕಾ ವಿರುದ್ಧ 3 ಪ್ಲಸ್ 3 ಪಂದ್ಯಗಳಿವೆ. ಅವಕಾಶಕ್ಕಾಗಿ ಬಹಳಷ್ಟು ಮಂದಿ ಯುವ ಆಟಗಾರರು ಕಾದು ಕುಳಿತಿದ್ದಾರೆ. ಆದರೆ ಇವರೆಲ್ಲರಿಗೂ ಆಡುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಬಹುಶಃ ಅವಾಸ್ತವಿಕವೆನಿಸಲಿದೆ ಎಂದು ಲಂಕಾ ಪ್ರವಾಸಕ್ಕೆ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹೇಳಿದರು.
ಲಂಕಾಗೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ಲಂಕಾ ಸರಣಿಯಲ್ಲಿ ಕೆಲ ಆಟಗಾರರಿಗೆ ಅಕಸ್ಮಾತ್ ಆಡುವ ಚಾನ್ಸ್ ಸಿಗದೇ ಹೋದರೂ ಈ ಸರಣಿಯಿಂದ ಕಲಿಕೆಯ ಸಾಕಷ್ಟು ಅನುಭವವಂತೂ ಸಿಗಲಿದೆ’ ಎಂದರು. ಆಯ್ಕೆಗಾರರೂ ಜತೆಯಲ್ಲಿರುವುದರಿಂದ ಆಡುವ ಬಳಗದ ಆಯ್ಕೆ ಸುಗಮಗೊಳ್ಳಲಿದೆ ಎಂದು ಅವರು ಆಶಿಸಿದರು.
“ತಂಡದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಎದುರು ನೋಡುತ್ತಿರುವ ಸಾಕಷ್ಟು ಮಂದಿ ಆಟಗಾರರಿದ್ದಾರೆ. ಆದರೆ ಖಾಲಿ ಉಳಿದಿರುವುದು ಒಂದೆರಡು ಸ್ಥಾನ ಮಾತ್ರ. ಹೀಗಾಗಿ ಸರಣಿ ಗೆಲುವೇ ಮೊದಲ ಹಾಗೂ ಎಲ್ಲರ ಗುರಿ’ ಎಂಬುದಾಗಿ ದ್ರಾವಿಡ್ ಹೇಳಿದರು.
ಇದನ್ನೂ ಓದಿ:ಪ್ಯಾರಿಸ್ ಆರ್ಚರಿ ವರ್ಲ್ಡ್ ಕಪ್ : ಮಿನುಗಿದ ದೀಪಿಕಾ; ಭಾರತಕ್ಕೆ ಹ್ಯಾಟ್ರಿಕ್ ಬಂಗಾರ
ಪ್ರತಿಭಾನ್ವಿತ ಆಟಗಾರರಾದ ಪಡಿಕ್ಕಲ್, ಸೂರ್ಯಕುಮಾರ್ ಯಾದವ್ ಅವರಿಗೆ, ಹಾಗೆಯೇ ಪುನರಾಗಮನದ ನಿರೀಕ್ಷೆಯಲ್ಲಿರುವ ಪೃಥ್ವಿ ಶಾ ಮೊದಲಾದವರಿಗೆ ಇದು ಅತ್ಯಂತ ಮಹತ್ವದ ಸರಣಿ ಎಂದು ದ್ರಾವಿಡ್ ಅಭಿಪ್ರಾಯ ಪಟ್ಟರು.
ಲಂಕಾ ವಿರುದ್ಧ ಶಿಖರ್ ಧವನ್ ನೇತೃತ್ವದ ತಂಡ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ. ಜುಲೈ 13ರಿಂದ ಸರಣಿ ಆರಂಭವಾಗಲಿದೆ.