Advertisement

Puttige: ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯೋತ್ಸವ; ಇವರ ಸರ್ವಬಲ ತಪಃಶಕ್ತಿಯಲ್ಲಿ…

01:08 PM Jan 18, 2024 | Team Udayavani |

ಶ್ರೀಕೃಷ್ಣಮಠದಲ್ಲಿ ಪರ್ಯಾಯೋತ್ಸವದ ಸಡಗರದಲ್ಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಪರಮಗುರು
ಶ್ರೀಸುಧೀಂದ್ರತೀರ್ಥರು (1856-1957) ಧಾರ್ಮಿಕ, ಆಧ್ಯಾತ್ಮಿಕವೆಂದರೆ ಅದು ಬೇರೆಲ್ಲದ್ದಕ್ಕಿಂತ ದುಬಾರಿ ಎನಿಸುವ ಈ ಕಾಲ ಘಟ್ಟದಲ್ಲಿ ಕಡಿಮೆ ಖರ್ಚಿನಲ್ಲಿ, ಸರಳ, ನಿರಾಡಂಬರವಾಗಿ ಪರಿಹಾರ ಒದಗಿಸುತ್ತಿದ್ದವರು. ದೇವರು ದುಬಾರಿಯಲ್ಲ ಎಂಬ ಸಂದೇಶ ಅವರ ಜೀವನ ಧರ್ಮದಲ್ಲಿ ಹಾಸುಹೊಕ್ಕಾಗಿತ್ತು. ದೇವರಿಗೆ ಪಾಂಡಿತ್ಯವೂ ಮುಖ್ಯವಲ್ಲ, ಶುದ್ಧ ನಿಷ್ಕಪಟ ಮನಸ್ಸು ಮುಖ್ಯ ಎಂಬ ಸಂದೇಶವೂ ಅಂತರ್ಗತವೇ.

Advertisement

ಶ್ರೀಸುಧೀಂದ್ರತೀರ್ಥರ ಸಂಪತ್ತೆಂದರೆ ಕೇವಲ ದೇವರ ಸ್ಮರಣೆ. ಮಠಮಠದವರಿಗೆ ಸಮಸ್ಯೆ ಬಂದರೂ, ತಮ್ಮ ಮಠಕ್ಕೇ ಆರ್ಥಿಕ ಸಂಕಷ್ಟ ಬಂದರೂ, ಭಕ್ತರಿಗೆ ಸಂಕಷ್ಟ ಬಂದರೂ ಇವರು ಮಾಡಿದ್ದು, ಕೊಟ್ಟದ್ದು ನಾಮಸ್ಮರಣೆ ಔಷಧಿ ಮಾತ್ರ. ಉಡುಪಿಯ ಬಡಗುಪೇಟೆಯಲ್ಲಿ ನಾನಾಲಾಲ್‌ ಪಂಡ್ಯಾ ಜವುಳಿ ಮಳಿಗೆ ಇದ್ದಿತ್ತು. ನಾನಾಲಾಲ್‌ ಗೋವಿಂದಜೀ ಪಂಡ್ಯಾ ಮೂಲತಃ ಬ್ರಿಟಿಷ್‌ ಭಾರತದ ಜುನಾಗಢ ಪ್ರಾಂತ್ಯದವರು (ಈಗ ಗುಜರಾತ್‌). ಅವರು ಮಂಗಳೂರಿನ ವ್ಯಾಪಾರಿಯೊಬ್ಬರ ಬಳಿ ಕೆಲಸಕ್ಕಿದ್ದು ಹಣ ವಸೂಲಾತಿಗಾಗಿ ಉಡುಪಿಗೆ ಬರುತ್ತಿದ್ದರು. ಒಂದು ಮಕರಸಂಕ್ರಾಂತಿ ರಥೋತ್ಸವದ ವೇಳೆ ಶ್ರೀಸುಧೀಂದ್ರತೀರ್ಥರನ್ನು ಕಂಡು
ಆಕರ್ಷಿತರಾಗಿ ಜವುಳಿ ಮಳಿಗೆಯನ್ನು ತೆರೆಯುವ ಇಂಗಿತವನ್ನು ವ್ಯಕ್ತಪಡಿಸಿದರು.

ಸಂತಾನಗೋಪಾಲಕೃಷ್ಣ ಸಾಲಿಗ್ರಾಮವನ್ನು ಕೊಟ್ಟು ನಿತ್ಯ ಪೂಜೆ ಮಾಡಿ ಕಾರ್ಯಪ್ರವೃತ್ತರಾಗಲು ಮಂತ್ರಾಕ್ಷತೆ ನೀಡಿದರು. 1910ರಲ್ಲಿ ಉಡುಪಿಯಲ್ಲಿ ಮೊತ್ತ ಮೊದಲ ಬಾರಿ ಗುಜರಾತಿನವರೊಬ್ಬರ ಜವುಳಿ ಅಂಗಡಿ ಆರಂಭಗೊಂಡದ್ದು ಹೀಗೆ. 1914ರಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗಲೂ ಮುಷ್ಟಿ ನಾಣ್ಯಗಳನ್ನು ನೀಡಿ ಪರಿಹರಿಸಿದ್ದರು. ಈ ನಾಣ್ಯಗಳನ್ನು ದೀಪಾವಳಿಯ ಅಂಗಡಿ ಪೂಜೆಯಲ್ಲಿರಿಸಿ ಪೂಜಿಸುವ ಕ್ರಮವಿತ್ತು. ಸಂಸ್ಥೆ ನಾಲ್ಕನೆಯ ಪೀಳಿಗೆಯವರೆಗೆ 2010ರ ವರೆಗೆ ಮುಂದುವರಿದು ಮರಿಮಕ್ಕಳು ಉನ್ನತ ಶಿಕ್ಷಣ ಪಡೆದು ಬೇರೆ ಬೇರೆ ಕಡೆ ನೆಲೆಸಿದ್ದರಿಂದ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬೇರೆ ಬೇರೆ ಕಡೆ ನೆಲೆಸಿದ್ದಾರೆ.

ಶ್ರೀಸುಧೀಂದ್ರತೀರ್ಥರ ಇಚ್ಛೆಯಂತೆ ನಾನಾಲಾಲಾರು ಮಧ್ವಸರೋವರಕ್ಕೆ ಕಲ್ಲುಚಪ್ಪಡಿಗಳನ್ನು ಹಾಕಿದ್ದರು. ಇವರ ಒಬ್ಬ ಮರಿಮಗ ದಂತವೈದ್ಯ ಡಾ|ರಾಜೇಶ್‌ ಪಂಡ್ಯಾ ಅಲ್ಲೇ ಪಕ್ಕದಲ್ಲಿ ಇದ್ದಾರೆ. ಮೊಮ್ಮಗ ಅರವಿಂದ ಪಂಡ್ಯಾ ಬೆಂಗಳೂರಿನಲ್ಲಿದ್ದಾರೆ. “ನಮ್ಮ ಚಿಕ್ಕ ಪ್ರಾಯದಲ್ಲಿ ಶ್ರೀಕೃಷ್ಣಮಠದ ಪರಿಸರದಲ್ಲಿರುವ ಸ್ವಾಮೀಜಿಯವರ ವೃಂದಾವನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದುದು ಸ್ಮರಣೆಗೆ ಬರುತ್ತಿದೆ’ ಎಂದು ಹೇಳುತ್ತಾರೆ ಡಾ|ರಾಜೇಶ್‌ ಪಂಡ್ಯಾ. ಅಂಗಡಿಯಲ್ಲಿ ಪೂಜಿಸುತ್ತಿದ್ದನಾಣ್ಯಗಳನ್ನು ಮೊಮ್ಮಕ್ಕಳು, ಮರಿಮಕ್ಕಳು ಹಂಚಿಕೊಂಡಿದ್ದಾರೆ.

ಸಾಲಿಗ್ರಾಮವು ಮೊಮ್ಮಗ ಕೈಲಾಸ್‌ ಪಂಡ್ಯಾ ಅವರ ಬಳಿ ಇದೆ. “2016ರ ಬಳಿಕ ನಾನು ಆರೋಗ್ಯದ ಕಾರಣದಿಂದ ಉಡುಪಿಬಿಟ್ಟು ಮಗಳ ಜತೆ ಗುಜರಾತಿನ ರಾಜಕೋಟ್‌ನಲ್ಲಿದ್ದೇನೆ. ಸಾಲಿಗ್ರಾಮಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದೇನೆ’ ಎನ್ನುತ್ತಾರೆ ಕೈಲಾಸ್‌
ಪಂಡ್ಯಾ. ಮಂಗಳೂರಿನ ವ್ಯಾಪಾರಿ ಕಾಂತಿಲಾಲ್‌ ರುಗನಾಥ್‌ ವಸಾನಿಯವರ ಪತ್ನಿಗೆ ಆರೋಗ್ಯದ ಸಮಸ್ಯೆ, ಸಂತಾನದ ಸಮಸ್ಯೆ ಬಂದಾಗಲೂ ನಾನಾಲಾಲ್‌ಜಿಯವರ ಮೂಲಕ ಸ್ವಾಮೀಜಿಯವರನ್ನು ಭೇಟಿ ಮಾಡಿದಾಗ ಒಂದು ಲಕ್ಷ ಗೋಪಾಲಕೃಷ್ಣ ಮಂತ್ರವನ್ನು ಜಪಿಸಲು ತಿಳಿಸಿ ಮಂತ್ರೋಪದೇಶ ನೀಡಿದರು. ಇವರ ಪುತ್ರಿ ಕೃಷ್ಣಾಬಾಯಿ ಮುಂಬಯಿಯಲ್ಲಿದ್ದು,
ಪುತ್ರರಾದ ವಿಜಯ್‌, ದೀಪಕ್‌ ಅವರು ಈಗಲೂ ಬಟ್ಟೆಯ ವ್ಯಾಪಾರವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

Advertisement

ಉಡುಪಿ ರಥಬೀದಿಯ ಸುಧೀಂದ್ರತೀರ್ಥ ಔಷಧ ಭಂಡಾರದ ಸ್ಥಾಪಕ ಲಕ್ಷ್ಮೀನಾರಾಯಣ ಭಟ್‌ ಅವರು ಶ್ರೀಸುಧೀಂದ್ರತೀರ್ಥರ
ಇಳಿವಯಸ್ಸಿನಲ್ಲಿ ಸೇವೆ ಸಲ್ಲಿಸಿದವರು. ನಿತ್ಯವೂ ರಾತ್ರಿ ಭಗವನ್ನಾಮ ಸ್ಮರಣೆ ಮಾಡುವ ತಂಡದಲ್ಲಿ ಇವರೂ ಇದ್ದರು. ಶ್ರೀಸುಧೀಂದ್ರತೀರ್ಥರು ಕಾಲವಾದ ಕೆಲವೇ ಸಮಯದಲ್ಲಿ ಆರಂಭ ಮಾಡಿದ ಔಷಧ ಭಂಡಾರಕ್ಕೆ ಅವರದೇ ಹೆಸರು ಇರಿಸಿದರು.

ಈಗ ಲಕ್ಷ್ಮೀನಾರಾಯಣ ಭಟ್ಟರ ಪುತ್ರ ನಾಗರಾಜ ಭಟ್‌ ಅವರು ಔಷಧ ಭಂಡಾರ ನಡೆಸುತ್ತಿದ್ದಾರೆ. 97ರ ಇಳಿವಯಸ್ಸಿನ ಲಕ್ಷ್ಮೀನಾರಾಯಣ  ಭಟ್ಟರಿಗೆ ಶ್ರೀಸುಧೀಂದ್ರತೀರ್ಥರ ದೈನಂದಿನ ಚಟುವಟಿಕೆಗಳಲ್ಲಿ ತಾವು ಭಾಗಿಯಾದದ್ದು ಇನ್ನೂ ಹಸುರಾಗಿದೆ.

ಮಂತ್ರಾಲಯಕ್ಕೆ ತೆರಳಿ ಗುರುರಾಘವೇಂದ್ರರನ್ನು ಸೇವಿಸುವುದು ಲೋಕಪ್ರಸಿದ್ಧ. ಆ ಕಾಲದಲ್ಲಿ ಅಂತಹವರಿಗೆ ಉಡುಪಿಗೆ ಹೋಗಿ
ಶ್ರೀಸುಧೀಂದ್ರತೀರ್ಥರ ಸೇವೆ ಮಾಡಿ ಎಂದು ಸ್ವಪ್ನ ಸಂದೇಶ ಬಂದದ್ದೂ, ಅದರಂತೆ ನಡೆದದ್ದೂ ಇತ್ತು. ನೂರು ವರ್ಷ ತುಂಬುವಾಗ ಹಣೆಯ ಮೇಲ್ಭಾಗದಲ್ಲಿ ಎರಡು ಕೋಡಿನಂತಹ ಗುಳ್ಳೆಗಳು ಮೂಡಿದ್ದವು. ಇದನ್ನು ಕಂಡ ಹಲವು
ಸ್ವಾಮೀಜಿಯವರು “ಋಷ್ಯಶೃಂಗ’ರ ಅವತಾರವೆಂದು ಬಣ್ಣಿಸಿದ್ದೂ ಇದೆ. ಇವರು ಕೊಡುತ್ತಿದ್ದ ಮಂತ್ರೋಪದೇಶವೆಂದರೆ
ಕೇವಲ “ಕೃಷ್ಣಾಯ ನಮಃ’. ಇದನ್ನೇ ಜಪಿಸಲು ಹೇಳುತ್ತಿದ್ದರು.

ಇದಕ್ಕೆ ಸಾವಿರಾರು, ಲಕ್ಷಾಂತರ ರೂಪಾಯಿ ಖರ್ಚಿದೆಯೆ? “ಬಹುಮಂದಿಗೆ ಕ್ಲೇಶಗಳು ಬಂದಾಗ “ಈಶ ನಿನ್ನ ಚರಣ ಭಜನೆ
ಆಶೆಯಿಂದ ಮಾಡುವೆನು| ದೋಷರಾಶಿ ನಾಶ ಮಾಡೋ ಶ್ರೀಶಕೇಶವ’ ಎಂಬ ಕನಕದಾಸರ ಹಾಡನ್ನು ಹಾಡಲು ಹೇಳುತ್ತಿದ್ದರು. “ವೃಂದಾರಕಮುನಿ ವಂದಿತ ಕೃಷ್ಣ’ ಹಾಡನ್ನು ಹೇಳಲು, ಕೃಷ್ಣಮಂತ್ರವನ್ನು ಸದಾಕಾಲ ಮನಸ್ಸಿನಲ್ಲಿ ಸ್ಮರಿಸುತ್ತಲೇ  ಇರಬೇಕು ಎಂದು ನಮ್ಮ ಹಿರಿಯರಿಗೆ ಹೇಳಿದ್ದರು’ ಎಂಬುದನ್ನು ಮುಂದಿನ ತಲೆಮಾರಿನವರಾದ ಬಡಗುಪೇಟೆ ನಿವಾಸಿ ವಾದಿರಾಜ ರಾವ್‌, ಕೆನರಾ ಬ್ಯಾಂಕ್‌ ಉದ್ಯೋಗಿ ಪ್ರಕಾಶ್‌ ಆಚಾರ್ಯ ಹೀಗೆ ಅನೇಕರು ಹೇಳುತ್ತಾರೆ.

ಯಾರೂ ಉಪದೇಶ ಕೊಡದೆ ನಮ್ಮ ಹಿರಿಯರು ಮನೆಯಲ್ಲಿ ನಡೆಸಿಕೊಂಡು ಬಂದ ನಿತ್ಯದ ಭಜನೆಯೇ ಕಾಣೆಯಾಗಿರುವಾಗ ದಾಸರ ಹಾಡೂ, ಕೃಷ್ಣ ಕೃಷ್ಣ ಎನ್ನುವುದೂ ನಮ್ಮ ಸಮಸ್ಯೆಗಳಿಗೆ ಒಂದು ಪರಿಹಾರ ಮಾರ್ಗ ಎನ್ನುವ ಸರಳ್ಳೋಪಾಯವನ್ನೂ ಆರ್ಥಿಕ ಸಂಪತ್ತಿನ ಸುಪ್ಪತ್ತಿಗೆಯಲ್ಲಿದ್ದವರಿಗೂ, ಕಡುಬಡವರಿಗೂ, ಮಧ್ಯಮವರ್ಗದವರಿಗೂ ತಿಳಿಸಬೇಕಾದ ಸನ್ನಿವೇಶದಲ್ಲಿದ್ದೇವೆ.

ಉಭಯ ಶ್ರೀಸುಧೀಂದ್ರತೀರ್ಥರ ಸಮಾಗಮ
ಶ್ರೀಕೃಷ್ಣಮಠದಲ್ಲಿ 1956ರಲ್ಲಿ ಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಕಾಲದಲ್ಲಿ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಸುಧೀಂದ್ರತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಆ ಕಾಲದಲ್ಲಿ ಪುತ್ತಿಗೆ ಮಠದ ಶ್ರೀಸುಧೀಂದ್ರತೀರ್ಥರಿಗೆ ಶತಮಾನದ ವಯಸ್ಸು. ಅವರು ಇಳಿವಯಸ್ಸಿನಲ್ಲಿ ಯಾರ ಮಠದ ಪರ್ಯಾಯವಾದರೂ ಶ್ರೀಕೃಷ್ಣಮಠದಲ್ಲಿಯೇ ಇರುತ್ತಿದ್ದರು. ಅವರು ಇರುತ್ತಿದ್ದ ಸ್ಥಳ ಒಳಕೊಟ್ಟಾರ (ಭೋಜನಶಾಲೆಗೆ ತಾಗಿರುವ ಕೋಣೆ). ಕಾಶೀ ಮಠದ ಶ್ರೀಸುಧೀಂದ್ರತೀರ್ಥರನ್ನು ಪುತ್ತಿಗೆ ಮಠದ ಶ್ರೀಸುಧೀಂದ್ರತೀರ್ಥರು ಅಂದು ಸಮಾಗಮವಾದರು. ಚಿತ್ರದಲ್ಲಿ ಶ್ರೀವಿಬುಧೇಶತೀರ್ಥರು ಕಾಶೀ ಮಠಾಧೀಶರನ್ನು ಪುತ್ತಿಗೆ ಮಠಾಧೀಶರಿಗೆ ಪರಿಚಯಿಸುವುದನ್ನು ನೋಡಬಹುದು.

ಪುತ್ತಿಗೆ ಮಠದ ಶ್ರೀಸುಧೀಂದ್ರತೀರ್ಥರು 1957ರಲ್ಲಿ ನಿರ್ಯಾಣಗೊಂಡರೆ, ಕಾಶೀ ಮಠದ ಶ್ರೀಸುಧೀಂದ್ರತೀರ್ಥರು 2016ರಲ್ಲಿ ನಿರ್ಯಾಣಗೊಂಡರು. ಜ. 18ರಂದು ಪುತ್ತಿಗೆ ಮಠದ ಪರ್ಯಾಯೋತ್ಸವವಾದರೆ ಕಾಶೀ ಮಠದ ಶ್ರೀಸುಧೀಂದ್ರತೀರ್ಥರ ಆರಾಧನೋತ್ಸವ ಜ. 18ರಂದೇ ಹರಿದ್ವಾರದ ವ್ಯಾಸಾಶ್ರಮದಲ್ಲಿ ನಡೆಯುತ್ತಿದೆ.

*ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next